Friday, February 17, 2012

'ಶ್ರೀ'ಪಡ್ರೆಯವರಿಗೆ ಸಂದೇಶ ಪ್ರಶಸ್ತಿ



ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆಯವರಿಗೆ ಈ ಸಾಲಿನ ಸಂದೇಶ (sandesha media education award) ಮಾಧ್ಯಮ ಶಿಕ್ಷಣ ಪ್ರಶಸ್ತಿ ಪ್ರಾಪ್ತಿ. ಕನ್ನಾಡಿನಾದ್ಯಂತ 'ಜಲಸಂರಕ್ಷಣೆ ಶಿಕ್ಷಣ' ಸಾಧನೆಗೆ ಪ್ರಶಸ್ತಿ.

ಜಲಕೂಟ ಮತ್ತು ಅಡಿಕೆ ಪತ್ರಿಕೆಯ ಆಶ್ರಯದಲ್ಲಿ ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಮಳೆಕೊಯ್ಲಿನ ಅಧ್ಯಯನ, ಬರವಣಿಗೆ, ದೇಶ-ವಿದೇಶಗಳಲ್ಲಿ ಮಳೆಕೊಯ್ಲಿನ ವಿವರಗಳ ಸಂಗ್ರಹ, ಸ್ಲೈಡ್, ಪವರ್ಪಾಯಿಂಟ್ ಮೂಲಕ ಜನರಿಗೆ ಹಂಚುವ ಕೆಲಸ ಮಾಡಿದ್ದಾರೆ, ಮಾಡುತ್ತಿದ್ದಾರೆ.

ಕೇರಳದ ಎಂಡೋಸಲ್ಪಾನ್ ಹೋರಾಟ ಸಮಿತಿಯ ಮೂಲಕ ಸಮಾನಾಸಕ್ತರೊಂದಿಗೆ 'ಎಂಡೋಸಲ್ಫಾನ್ ನಿಷೇಧ' ಹೋರಾಟ. ಮಾಧ್ಯಮಗಳ ಮೂಲಕ ದುರಂತಗಳನ್ನು ಬಿತ್ತರಿಸುವಲ್ಲಿ ಸದ್ದಿಲ್ಲದ ಕೆಲಸ.

ಕಳೆದ ನಾಲ್ಕು ವರುಷದಿಂದ ನಿರ್ಲಕ್ಷಿತ ಹಲಸಿಗೆ ಮಾನ ಕೊಡುವ ಕೆಲಸ. ಅದರ ಮೌಲ್ಯವರ್ಧಿತ ಉತ್ಪನ್ನಗಳ ಹುಡುಕಾಟ, ಕಾಣದ ಯಶೋಗಾಥೆಗಳಿಗೆ ಬೆಳಕು.

ಈಚೆಗೆ ಹವಾಯಿಯಲ್ಲಿ ಜರುಗಿದ ಹಣ್ಣು ಬೆಳೆಗಾರರ ವಾರ್ಶಿಕ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಪಡ್ರೆಯವರು ಇಲ್ಲಿನ ಹಣ್ಣುಗಳ ಕುರಿತು ಪವರ್ಪಾಯಿಂಟ್ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಅವರ ಹವಾಯ್ ಅನುಭವ ಅಡಿಕೆ ಪತ್ರಿಕೆಯಲ್ಲಿ ಮಾಲಿಕೆಯಾಗಿ ಪ್ರಕಟವಾಗುತ್ತಿದೆ.

ನೆಲ-ಜಲ ಉಳಿಸಿ, ಹನಿಗೂಡಿಸುವ ಹಾದಿಯಲ್ಲಿ, ಮತ್ತೆ ರೂಪಾರೆಲ್ ಬತ್ತಲಿಲ್ಲ, ಬಾನಿಗೊಂದು ಆಲಿಕೆ, ಗುಜರಾತಿನ ನೀರ ತಿಜೋರಿ ಟಾಂಕಾ, ನೀರ ನೆಮ್ಮದಿಗೆ ನೂರಾರು ದಾರಿ ಮತ್ತು ರೈನ್ ವಾಟರ್ ಹಾರ್ವೆಸ್ಟಿಂಗ್".. ಹೀಗೆ.. ಹಲವು ಕೃತಿಗಳು ಪ್ರಕಟಗೊಂಡಿವೆ.
ಗುಡ್ ನ್ಯೂಸ್ ಇಂಡಿಯಾ ಡಾಟ್ ಕಾಂ ಎಂಬ ಜಾಲತಾಣ (ವೆಬ್ಸೈಟ್) ಇವರನ್ನು ದ ರೈನ್ ಮ್ಯಾನ ಆಪ್ ಕೆನರಾ ಕೋಸ್ಟ್ ಎಂದು ಬಣ್ಣಿಸಿದೆ. Canara Rural Award, Public Relations Society Award, Outstanding Youngman, Ashoka Fellow, ಸ್ಟೇಟ್ಸ್ಮ್ಯಾನ್ ಪ್ರಶಸ್ತಿ, ಪಾವನಾ ಪರಿಸರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಪುರುಷೋತ್ತಮ ಪ್ರಶಸ್ತಿ, ವಿಲ್ ಗ್ರೋ ಪ್ರಶಸ್ತಿ.. ಹೀಗೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರು.

ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಡಾ.ಕೆ.ವಿ.ತಿರುಮಲೇಶ್, ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಎಂ.ಮಾಧವ ಪೈ, ತುಳು ಸಾಹಿತ್ಯ ಪ್ರಶಸ್ತಿಗೆ ಕ್ಯಾಥರಿನ್ ರೋಡ್ರಿಗಸ್, ಚಲನಚಿತ್ರ ಪ್ರಶಸ್ತಿಗೆ ಗೀತಪ್ರಿಯ, ಕಲಾ ಪ್ರಶಸ್ತಿಗೆ ಪೀಟರ್ ಲೂಯಿಸ್, ಪತ್ರಿಕೋದ್ಯಮ ಪ್ರಶಸ್ತಿಗೆ ಇಂದೂಧರ ಹೊನ್ನಾಪುರ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮರಿಯ ಜ್ಯೋತಿ, ಕೊಂಕಣಿ ಸಂಗೀತ ಪ್ರಶಸ್ತಿಗೆ ಜೆರೋಮ್ ಡಿ'ಸೋಜ ಮತ್ತು ಸಂದೇಶ ವಿಶೇಷ ಪ್ರಶಸ್ತಿಗೆ ಜೋನ್ ಡಿ'ಸಿಲ್ವ ಭಾಜನರಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಫೆ.26ರಂದು ಸಂಜೆ ಗಂಟೆ 5-30ಕ್ಕೆ ಮಂಗಳೂರಿನ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಜರುಗಲಿದೆ.

ಈಗ ಸಂದೇಶ ಪ್ರಶಸ್ತಿಯ ಗರಿ. ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರಿಗೆ ಅಭಿನಂದನೆಗಳು.

1 comments:

Swarna said...

ಮಳೆಕೊಯ್ಲನ್ನು, ನೀರಿನ ಮೌಲ್ಯವನ್ನು ನಮಗೆ ತಿಳಿಸಿದ ಗುರು
ಪಡ್ರೆಯವರಿಗೆ ಅಭಿನಂದನೆಗಳು.
ತಿಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು
ಸ್ವರ್ಣಾ

Post a Comment