Wednesday, February 22, 2012

ನೀರಿನರಿವಿನ ದಿನದರ್ಶಿನಿ 'ಜಲಸಿರಿ'


ದಶಂಬರ ಕೊನೆ ದಿನಾಂಕಕ್ಕೆ ಹಳೆ ಕ್ಯಾಲೆಂಡರಿನ ದಿನಮಾನದ ಅಂತ್ಯ. ಹೊಸ ಕ್ಯಾಲೆಂಡರಿನ ಆಗಮನವಾಗುತ್ತಿದ್ದಂತೆ ಬದುಕಿನಲ್ಲೂ ಒಂದು ವರುಷ ಕ್ಷೀಣವಾಗಿರುತ್ತದೆ. ಪ್ರತೀವರುಷ ಕ್ಯಾಲೆಂಡರನ್ನು ಬದಲಿಸುತ್ತಾ ಇರುತ್ತೇವೆ. ನಾವು ಮಾತ್ರ 'ಅಭಿವೃದ್ಧಿ, ಔನ್ನತ್ಯ, ಹೊಸ ತಂತ್ರಜ್ಞಾನ'ದ ಗುಂಗಿನಲ್ಲಿ ಮೊಬೈಲನ್ನು ತಿರುಗಿಸುತ್ತಾ ಒಂಚೂರೂ ಬದಲಾಗದೆ ನಿಶ್ಚಲವಾಗಿ ಇರುತ್ತೇವೆ!

ಸಂಸ್ಥೆಗಳು, ಕಂಪೆನಿಗಳು ವರ್ಷಾರಂಭಕ್ಕೆ ಡೈರಿಯನ್ನು, ಕ್ಯಾಲೆಂಡರನ್ನು ಅಚ್ಚು ಹಾಕಿಸುತ್ತವೆ. ಗ್ರಾಹಕರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಕೆಲವು ಕ್ಯಾಲೆಂಡರ್ಗಳು ತಾರೀಕಿಗೆ ಮಾತ್ರ ಸೀಮಿತ. ದಿನಕ್ಕೊಂದು ಪುಟದಂತೆ ಡೈರಿಯ ಪುಸ್ತಕರೂಪ. ಎಷ್ಟು ಮಂದಿ ಡೈರಿ ಬರೆಯುತ್ತಾರೋ..? ಇರಲಿ.

ನಮ್ಮ ನಡುವೆ ಪ್ರಚಾರದಿಂದ ದೂರವಿದ್ದು ಸದ್ದಿಲ್ಲದೆ ಕೆಲಸ ಮಾಡುವ ಸಂಸ್ಥೆಗಳಿವೆ. ಪರಿಸರ, ನೀರು, ಸಾಮಾಜಿಕ, ಮಾನವೀಯ ವಿಚಾರಗಳನ್ನು ಕೈಗೆತ್ತಿಕೊಂಡು ಜನರ ನಡುವೆಯೇ ದುಡಿತ. ಅಂತಹುದರಲ್ಲಿ ತುಮಕೂರಿನ 'ಧಾನ್ಯ ಸಂಸ್ಥೆ'ಯು ವರ್ಷವಿಡೀ ಮಾಹಿತಿಯನ್ನು ನೀಡುವ 'ಜಲಸಿರಿ' ಎಂಬ ಕ್ಯಾಲೆಂಡರನ್ನು ಮೂರು ವರುಷಗಳಿಂದ ಪ್ರಕಾಶಿಸುತ್ತಿದೆ.

ನೀರಿನ ಕುರಿತು ಮಾತುಕತೆಗೆ ತೆರೆದುಕೊಂಡ ಕಿರು ಮಾಸ ಪತ್ರಿಕೆ 'ಜಲಸಿರಿ'. ಧಾನ್ಯ ಸಂಸ್ಥೆಯ ಪ್ರಕಟಣೆ. ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ ಸಂಪಾದಕರು. ಪತ್ರಿಕೆಯ ಹೆಸರಿನಲ್ಲೇ ನೀರಿನ ಮಾಹಿತಿಯುಳ್ಳ ಕ್ಯಾಲೆಂಡರ್ಗೆ ಬೆಂಗಳೂರಿನ 'ಅಘ್ರ್ಯಂ' ಸಂಸ್ಥೆಯು ಹೆಗಲೆಣೆ ನೀಡಿದೆ. 2012ರ ಜಲಸಿರಿಯು ನೈರ್ಮಲ್ಯ, ಹವಾಮಾನ ಬದಲಾವಣೆ, ಅಲ್ಪ ನೀರಿನ ಬೇಸಾಯಕ್ಕೆ ಒತ್ತು ನೀಡಿದೆ.

ಸ್ವಚ್ಛತೆ ಆರೋಗ್ಯದ ಮೊದಲ ಮೆಟ್ಟಿಲು. ಕಲುಷಿತ ನೀರು ಸೇವನೆ ಹಲವಾರು ಕಾಯಿಲೆಗಳಿಗೆ ದಾರಿ. ಹೆಚ್ಚು ತೊಂದರೆಗೆ ಒಳಗಾಗುವವರು ಮಕ್ಕಳು ಮತ್ತು ಮಹಿಳೆಯರು. ನಾಡಿನ ದೊರೆಗಳು ನೈರ್ಮಲ್ಯದ ಪಾಠ ಹೇಳುವುದನ್ನು ಮಾಧ್ಯಮಗಳಲ್ಲಿ ಓದುತ್ತೇವೆ ವಾಹಿನಿಗಳಲ್ಲಿ ಬಿತ್ತರವಾಗುತ್ತದೆ.

ಆದರೆ ವಸ್ತುಸ್ಥಿತಿಯೇ ಬೇರೆ. ಹಳ್ಳಿಗಳಲ್ಲಿ ಒಂದು ಸುತ್ತು ತಿರುಗಾಡಿ ಬಂದರೆ ನೈರ್ಮಲ್ಯದ ನಿಜವಾದ ದರ್ಶನ. ಹಳ್ಳಿಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು 'ಜಲಸಿರಿ' ಮಾಹಿತಿಯನ್ನು ನೀಡಿದೆ. ಮನೆ ಸುತ್ತ ಮುತ್ತ ಹಸಿರು ನೆಡುವ ಕೆಲಸ, ತ್ಯಾಜ್ಯವನ್ನು ಕಡಿತಗೊಳಿಸುವುದು, ಹತ್ತಿರದ ಕೆಲಸಗಳಿಗೆ ಕಾಲ್ನಡಿಗೆ ರೂಢನೆ, ಸೈಕಲ್ ತುಳಿಯುವ ಆಭ್ಯಾಸ, ರೀಸೈಕಲ್ ಮಾಡುವತ್ತ ಗಮನ..

'ಒಂದು ಅಂದಾಜಿನಂತೆ ವಿಶ್ವದಲ್ಲಿ ದಿನಂಪ್ರತಿ ನಾಲ್ಕು ಸಾವಿರ ಮಕ್ಕಳು ಕಲುಷಿತ ನೀರು ಕುಡಿದು ಅಸುನೀಗುತ್ತಿದ್ದಾರೆ. ಪ್ರತಿ ವರುಷ 1.5 ಮಿಲಿಯನ್ ಮಕ್ಕಲು 'ಡಯೇರಿಯಾ' ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ' ಎಂಬ ಮನಕಲಕುವ ವಿಚಾರಗಳನ್ನು ಸಂಪಾದಕ ಮಲ್ಲಿಕಾರ್ಜುನ ಹೊಸಪಾಳ್ಯ ದಾಖಲಿಸುತ್ತಾರೆ.

ಕೆರೆ, ಬಾವಿ, ದೊಣೆ, ನದಿ, ಗೋಕಟ್ಟೆ..ಯಂತಹ ಜಲಮೂಲಗಳನ್ನು ಸುಸ್ಥಿತಿಯಲ್ಲಿಡಬೇಕಾದ ಅನಿವಾರ್ಯತೆಯನ್ನು ಜಲಸಿರಿ ತೆರೆದಿಟ್ಟಿದೆ. ಕೊಳ, ತೀರ್ಥ, ಪುಷ್ಕರಿಣಿ ಎಂಬ ಹೆಸರಿನ ಕಲ್ಯಾಣಿಗಳ ರಕ್ಷಣೆಯ ಹೊಣೆಯೂ ನಮ್ಮದೇ ತಾನೆ.

ಕಡಿಮೆ ನೀರಿನಲ್ಲಿ ಬೆಳೆಯುವ ಭತ್ತದ 'ಶ್ರೀ ಪದ್ಧತಿ'ಯ ವ್ಯಾಪಕತೆ ಕಾಲದ ಅನಿವಾರ್ಯತೆ. ಬರವನ್ನೂ ಎದುರಿಸುವ ಸಾಮಥ್ರ್ಯ ಹೊಂದಿರುವ, ಕಡಿಮೆ ನೀರನ್ನು ಬೇಡುವ ಸಿರಿಧಾನ್ಯಗಳು ಮತ್ತೊಮ್ಮೆ ಬೀಸುಹೆಜ್ಜೆಯಿಂದ ಹೊಲಕ್ಕೆ ಧಾಂಗುಡಿಯಿಡುವ ಪ್ರಯತ್ನವಾಗಬೇಕಾಗಿದೆ. ಋತುಮಾನಗಳ ಏರುಪೇರಿಗೂ, ನೀರು - ಕಾಡುಗಳಿಗೂ ಹತ್ತಿರದ ಸಂಬಂಧಗಳು. ಕೃಷಿ ರಂಗಕ್ಕೆ ಇದರ ನೇರ ಪರಿಣಾಮ. ನಾವೇನು ಮಾಡಬಹುದು? ಓದಿ, ಜಲಸಿರಿ.

ವಿದ್ಯಾರ್ಥಿಗಳಿಂದು ಪುಸ್ತಕದಿಂದ ಉರುಹೊಡೆವ ಯಂತ್ರಗಳಾಗಿದ್ದಾರೆ. ಪರಿಸರ ಅಂದರೆ ಮರ, ಗಿಡ, ಗಾಳಿ, ನೀರು.. ಇಷ್ಟನ್ನು ಮಗುಮ್ಮನೆ ಹೇಳುವ ಕಂದಮ್ಮಗಳಿಗೆ ಅದರಾಚೆಗಿನ ವಿಚಾರಗಳ ಕೊರತೆಯಿದೆ. ಪಾಠಪುಸ್ತಕದಲ್ಲಿಲ್ಲ, ಅಧ್ಯಾಪಕರಿಗೆ ಬೇಕಿಲ್ಲ ಎಂಬಂತಹ ಸ್ಥಿತಿ. ನೀರಿನ ಮಿತ ಬಳಕೆ, ಮರುಬಳಕೆ, ಮರುಪೂರಣದಂತಹ ವಿಚಾರಗಳನ್ನು ಪ್ರಾಯೋಗಿಕವಾಗಿ ಅಳವಡಿಸುವ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಹೇಳುವ ಆವಶ್ಯಕತೆಯಿದೆ.

'ಜನವರಿ, ಫೆಬ್ರವರಿ..' ಮಗು ಉದರದಲ್ಲಿರುವಾಗಲೇ ಪಾಠವಾಗಿರುತ್ತದೆ! ಹಳ್ಳಿಯಲ್ಲಿ ಈ ಕ್ರಮದಲ್ಲಿ ತಿಂಗಳುಗಳನ್ನು ಎಣಿಸುವುದು ಕಡಿಮೆ. ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ.. ಹೀಗೆ ತಿಂಗಳುಗಳ ಎಣಿಕೆ. ಜಲಸಿರಿಯು ಆಂಗ್ಲ ತಿಂಗಳುಗಳ ಜತೆಯಲ್ಲೇ ಪಾರಂಪರಿಕ ಮಾಸಗಳ ಹೆಸರುಗಳು, ಋತುಗಳ ಹೆಸರುಗಳನ್ನು ಆಯಾಯ ಪುಟಗಳಲ್ಲಿ ತಿಳಿಸಿರುವುದು ಅರಿವಿನ ದೃಷ್ಟಿಯಿಂದ ಅನುಕೂಲವಾಗಿದೆ. ಪ್ರತೀ ಪುಟಗಳಲ್ಲಿ ನೀರಿನ ಕುರಿತಾದ ಗಾದೆಗಳಿವೆ.
ನಿತ್ಯ ತಾರೀಕುಗಳನ್ನು ನೋಡುವುದು ನಮಗೆ ದೈನಂದಿನ ಅಭ್ಯಾಸ. ಜಲಸಿರಿ ಕ್ಯಾಲೆಂಡರ್ ನೀರಿನ, ಪರಿಸರದ ಕುರಿತು ಅರಿವನ್ನು ಮೂಡಿಸುತ್ತದೆ. ಕ್ಯಾಲೆಂಡರಿನ ಬೆಲೆ ಮೂವತ್ತು ರೂಪಾಯಿ. ರವಾನೆ ವೆಚ್ಚಕ್ಕಾಗಿ ಇಪ್ಪತ್ತು ರೂಪಾಯಿ ಪ್ರತ್ಯೇಕ. ಆಕರ್ಷಕ ವರ್ಣ ಪುಟಗಳು.

ವಿಳಾಸ : ಧಾನ್ಯ ಸಂಸ್ಥೆ, 'ತೆನೆ', ಮೊದಲ ಮಹಡಿ, 3ನೇ ಮುಖ್ಯ ರಸ್ತೆ, ಸದಾಶಿವನಗರ, ತುಮಕೂರು - 572 101,
ಮೊ: 9686194641

0 comments:

Post a Comment