Saturday, February 9, 2013

ವಿರಳವಾಗುತ್ತಿರುವ 'ನುಚ್ಚಕ್ಕಿ ಹಣ್ಣು'



            ಎರಡು ವರುಷದ ಹಿಂದೆ ಹವಾಯಿಯ ಹಣ್ಣು ಕೃಷಿಕ ಕೆನ್ ಲವ್ ತನ್ನೂರಿನ ಹಣ್ಣುಗಳನ್ನು ಪರಿಚಯಿಸುವ ಸೈನ್ಬೋರ್ಡನ್ನು ಮಿಂಚಂಚೆಯಲ್ಲಿ ಕಳುಹಿಸಿದ್ದರು. ಕರಾವಳಿಗೆ ಬಂದಿದ್ದಾಗ 'ಸಮೃದ್ಧಿ' ಆಯೋಜಿಸಿದ ಕಾರ್ಯಕ್ರಮದಲ್ಲಿ ಪವರ್ ಪಾಯಿಂಟ್ ಮೂಲಕ ಹವಾಯ್ ಹಣ್ಣುಗಳ ಪರಿಚಯವನ್ನು ಪ್ರಸ್ತುತಪಡಿಸಿದ್ದರು. ಅದರಲ್ಲಿ 'ಮೈಸೂರು ರಾಸ್ಬೆರಿ' ಗಮನ ಸೆಳೆಯಿತು.

              ಕೊಡಗಿನ ಇಂಜಿನಿಯರ್, ಕೃಷಿಕ ಶಿವಕುಮಾರ್ ಕಾಡು ಹಣ್ಣುಗಳ ಆಸಕ್ತಿ ಹೊಂದಿದವರು. ಅವರ ಲಾಪ್ಟಾಪಿನಲ್ಲಿ ಹಣ್ಣುಗಳ ದಾಖಲಾತಿ ನಿರಂತರ. ಅದರಲ್ಲಿದ್ದ 'ಮೈಸೂರು ರಾಸ್ಬೆರಿ' ಕುತೂಹಲ ಮೂಡಿಸಿತು. ಇವರಲ್ಲಿದ್ದ ಹಣ್ಣು ಮತ್ತು ಹವಾಯಿಯ ಹಣ್ಣಿನ ಚಿತ್ರಗಳಲ್ಲಿ ವ್ಯತ್ಯಾಸವಿರಲಿಲ್ಲ.

                ಶಿವಕುಮಾರ್ ಹೇಳುತ್ತಾರೆ - ಕೊಡಗಿನಲ್ಲಿ ರಾಸ್ಬೆರಿಯ ಹೆಸರು 'ನುಚ್ಚಕ್ಕಿ ಹಣ್ಣು'. ಇದೊಂದು ಕಾಡುಹಣ್ಣು. ಇದರಲ್ಲಿ ಕಪ್ಪು-ಕೆಂಪು ಮಿಶ್ರ, ಹಳದಿ ಮತ್ತು ಕೆಂಪು ಬಣ್ಣಗಳಿವೆ. ಹುಳಿ-ಸಿಹಿ ರುಚಿ. ಎಲ್ಲದರ ರುಚಿ ಬಹುತೇಕ ಒಂದೇ ತರಹ. ಬಳ್ಳಿ ಹಬ್ಬಲು ಶುರುವಾದರೆ ಜಾಗವಿಡೀ ಆಕ್ರಮಿಸಿಕೊಳ್ಳುವಷ್ಟು ಕ್ಷಿಪ್ರ ಬೆಳವಣಿಗೆ. ಹಣ್ಣಿಗಾಗಿಯೇ ಬೆಳೆಯುವರಿಲ್ಲ.

                ಮೇ ತಿಂಗಳಿನಿಂದ ಹಣ್ಣು ಬಿಡುವ ಸೀಸನ್. ಮಳೆ ಬರುವ ಮುನ್ನ ರುಚಿ ಜಾಸ್ತಿ. ಗಿಡದಲ್ಲಿ ಮುಳ್ಳುಗಳಿವೆ. ಬಿಳಿ ಹೂಗಳು. ದೊರಗು ಎಲೆ. ಕೆಂಪು ವೆರೈಟಿಯ ಎಲೆಯು ದ್ರಾಕ್ಷಿ ಎಲೆಯನ್ನು ಹೋಲುತ್ತದಂತೆ. ಗೊಂಚಲು ಗೊಂಚಲು ಹಣ್ಣುಗಳು. ಹಣ್ಣಾದಾಗ ಹಣ್ಣಿಗೆ ಆವರಿಸಿದ ಪಕಳೆ ಬಿರಿಯುತ್ತದೆ. ಜಗಿಯುವಾಗ ಚಿಕ್ಕ ಚಿಕ್ಕ ಬೀಜಗಳಿರುವುದು ಅನುಭವಕ್ಕೆ ಬರುತ್ತದೆ. ಗಿಡದಿಂದ ಹಣ್ಣನ್ನು ಕೊಯ್ಯುವುದು ಕಷ್ಟ. ಸ್ವಲ್ಪ ಅದುಮಿದರೆ ಸಾಕು, ಹಣ್ಣು ಅಪ್ಪಚ್ಚಿಯಾಗುವಷ್ಟು ಮೃದು. ಕೊಯಿದು 2-3 ದಿವಸ ತಾಳಿಕೆ.

              'ಇದೇನೂ ಹೊಸ ಹುಡುಕಾಟವಲ್ಲ. ಚಿಕ್ಕದಿರುವಾಗಲೇ ಹಣ್ಣನ್ನು ತಿಂದ ಅನುಭವವಿದೆ. ಮಾರುಕಟ್ಟೆ ಮಾಡಲು ಬೇಕಾದಷ್ಟು ಪ್ರಮಾಣದಲ್ಲಿ ಹಣ್ಣುಗಳ ಅಲಭ್ಯತೆಯಿದೆ. ಸಾಕಷ್ಟು ಹಣ್ಣುಗಳು ಸಿಕ್ಕರೆ ಇದರ ನೋಟಕ್ಕೆ ಮಾರುಹೋದವರು ಕೊಳ್ಳುವುದು ಖಚಿತ. ಹಾಗಾಗಿ ಮಾರಾಟ ಸಾಧ್ಯತೆ ಹೆಚ್ಚು' ಎನ್ನುತ್ತಾರೆ ಶಿವಕುಮರ್.

              ನುಚ್ಚಕ್ಕಿ ಹಣ್ಣನ್ನು ಬೆಳೆಸುವ ಪರಿಪಾಠ ಇನ್ನೂ ಬಂದಿಲ್ಲ. 'ನನ್ನ ತೋಟದಲ್ಲಿ ಇದ್ದುದನ್ನು ತೊಂದರೆಯಾದರೂ ಉಳಿಸುತ್ತಿದ್ದೇನೆ. ಸ್ನೇಹಿತರಿಗೂ ಹೇಳುತ್ತೇನೆ. ಕಾಡು ಹಣ್ಣುಗಳು ನಾಶವಾಗಬಾರದು. ಉಳಿಸಬೇಕು' ಎನ್ನುವುದು ಮಾತ್ರವಲ್ಲ, ಆ ದಿಸೆಯಲ್ಲಿ ಹೆಜ್ಜೆಯಿಟ್ಟವರು ಶಿವಕುಮಾರ್.

               ಮಡಿಕೇರಿಯ ರಿಕ್ಷಾ ನಿಲ್ದಾಣವೊಂದರಲ್ಲಿ ಅಮ್ಮೆ ಹಣ್ಣಿನ ಗಿಡವಿದೆ. ಸೀಸನ್ನಿನಲ್ಲಿ ಸಾಕಷ್ಟು ಹಣ್ಣು ಬಿಡುತ್ತದೆ. ಅದರ ಕೆಳಗಡೆ ರಿಕ್ಷಾ ನಿಲ್ದಾಣ ಇದೆ. ನೂರಾರು ಜನ ಓಡಾಡುವ ಜಾಗ. ಆದರೆ ಈ ಹಣ್ಣನ್ನು ತಿನ್ನಲು ಆಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ! - ತನ್ನೂರಿನ ಕಾಡು ಹಣ್ಣಿನ ಅವಜ್ಞೆಯ ಚಿಕ್ಕ ಉದಾಹರಣೆಯನ್ನು ಹೇಳುತ್ತಾರೆ. ಕೊಡಗು ಮಾತ್ರವಲ್ಲ, ಎಲ್ಲಾ ಊರುಗಳಲ್ಲಿಯೂ ಅವಜ್ಞೆಯ ಚಾಳಿ. 

               ಬದಲಾದ ಕಾಲಮಾನದಲ್ಲಿ ಕಾಡು ಹಣ್ಣುಗಳು ನಾಶವಾಗುತ್ತಿವೆ. ಕಾಡುಗಳು ವಿರಳವಾಗುತ್ತಿವೆ. ಮಕ್ಕಳಿಗೆ ಸೇಬು, ದ್ರಾಕ್ಷಿ.. ಹೊರತಾಗಿ ಕಾಡುಹಣ್ಣುಗಳ ಪರಿಚಯವಿಲ್ಲ. ಈ ಕುರಿತಾದ ತಿಳುವಳಿಕೆ ಕಡಿಮೆಯಾಗುತ್ತಿದೆ. ಬಹುಶಃ ಹಣ್ಣು ತಿಂದವರಿಗೂ ಗಿಡಗಳನ್ನು ಗುರುತು ಹಿಡಿಯಲು ಕಷ್ಟವಾಗುವಷ್ಟು ತಿಳಿವಳಿಕೆಯ ಅಭಾವ. ಪಾರಂಪರಿಕವಾಗಿ ಜನಜೀವನದೊಂದಿಗೆ ಹೊಸೆದುಕೊಂಡಿದ್ದ ಕಾಡುಹಣ್ಣುಗಳನ್ನು ಕಂಪ್ಯೂನಲ್ಲಿ ದಾಖಲಿಸಬೇಕಾದ ಪ್ರಮೇಯ ಬಂದಿದೆ!

               ಶಿವಕುಮಾರ್ ಕಾಡು ಹಣ್ಣುಗಳ ದಾಖಲಾತಿ ಮಾಡುತ್ತಾರೆ. ಫೋಟೋ ಕ್ಲಿಕ್ಕಿಸುತ್ತಾರೆ. ಲ್ಯಾಪ್ಟಾಪಿನಲ್ಲಿ ಕಾಪಿಡುತ್ತಾರೆ. ಅವುಗಳನ್ನು ಅಭಿವೃದ್ಧಿ ಪಡಿಸುವತ್ತ ನಿರಂತರ ಯೋಜನೆ, ಯೋಚನೆ. 'ಕಾಡು ಹಣ್ಣುಗಳು ಕೃಷಿ ತೋಟದಲ್ಲಿವೆ. ಅದು ಕಳೆಯಾಗಿ ಕಂಡಂದರಿಂದ ಅವೆಲ್ಲಾ ನಾಶದಂಚಿಗೆ ತಲುಪಿವೆ' ಎಂದು ವಿಷಾದಿಸುತ್ತಾರೆ.

               ಕೊಡಗಿನಲ್ಲಿ ಹಿರಿಯರೊಬ್ಬರು ನೂರೆಂಟು ಕಾಡು ಹಣ್ಣುಗಳನ್ನು ದಾಖಲಿಸಿದ್ದಾರಂತೆ. ಅವರಿಗೆ ಅವೆಲ್ಲಾ ನಾಲಗೆ ತುದಿಯಲ್ಲಿದ್ದುವು. ಅದನ್ನು ಬರೆದಿಟ್ಟಿದ್ದಾರಂತೆ. ಈಗವರು ಮರಣಿಸಿದ್ದಾರೆ. ಅವರ ಪುತ್ರರು ಈ ದಾಖಲೆಯನ್ನು ಹುಡುಕುತ್ತಿದ್ದಾರೆ - ಎನ್ನುವ ಸುಳಿವು ಶಿವಕುಮಾರರಿಗೆ ಸಿಕ್ಕಿದೆ.

                ನೂರರ ಹತ್ತಿರ ಕಾಡುಹಣ್ಣುಗಳ ಜಾತಕ ಕಂಪ್ಯೂನಲ್ಲಿದೆ. ಈ ಸುಳಿವು ಪತ್ತೆಯಾಗಿಬಿಟ್ಟರೆ ಇವರ ಪಟ್ಟಿ ಇನ್ನೂ ಬೆಳೆಯಬಹುದೇನೋ. ಪ್ರಾದೇಶಿಕವಾಗಿ ಹಣ್ಣುಗಳ ಹೆಸರು, ಬಳಕೆಗಳಲ್ಲಿ ವ್ಯತ್ಯಾಸವಿರುವುದರಿಂದ ಶಿವಕುಮಾರ್ ಪ್ರವಾಸ ಹೋದೆಡೆಯಲ್ಲೆಲ್ಲಾ ಕಂಪ್ಯೂ ಹೊತ್ತೊಯ್ಯುತ್ತಾರೆ. ಚಿತ್ರ ತೋರಿಸುತ್ತಾರೆ. ಮಾಹಿತಿ ಕಲೆ ಹಾಕುತ್ತಾರೆ. ಆ ಊರಿನ ಹಣ್ಣುಗಳು ಪತ್ತೆಯಾದರೂ ಅದು ಕಂಪ್ಯೂ ಸೇರುತ್ತದೆ.

               ಬಹಳ ಅಪರೂಪದ ಹವ್ಯಾಸವಿದು. ಕಡ್ಲೆ ಹಣ್ಣು, ನಾರ್ಗಣೆ, ಮಜ್ಜಿಗೆ ಹಣ್ಣು, ಬೀಗರ್ುಳಿ, ಇಪ್ಪಲಿ, ಕರ್ಮಂಜಿ, ಚಳ್ಳಂಗಾಯಿ, ಗೊಣ್ಣೆಹಣ್ಣು, ಹಾಲೆ, ಗೊಟ್ಟೆಹಣ್ಣು.. ಇಂತಹ ಅಪರೂಪದ ಹಣ್ಣುಗಳ ಕುರಿತು ಮಾತನಾಡುವುದೆಂದರೆ ಶಿವಕುಮಾರರಿಗೆ ಖುಷಿ.
9448005614

0 comments:

Post a Comment