Monday, February 4, 2013

ಅಪರೂಪದ ತರಕಾರಿ ನಿತ್ಯ ಬದನೆ




               'ನೋಡಿ, ಇದೊಂದು ಅಪರೂಪದ ತರಕಾರಿ. ಫಕ್ಕನೆ ನೋಡಿದಾಗ ಲವಂಗ ಹಿರಿದಾದಂತೆ ಕಾಣುವ ಕಾಯಿಗಳು. ಈ ಭಾಗಕ್ಕೆ ಅಪರೂಪ' ಎಂದು ಬಂಟ್ವಾಳ (ದ.ಕ.) ತಾಲೂಕಿನ ಪುಣಚದ ಮಲ್ಯ ಶಂಕರ ನಾರಾಯಣ ಭಟ್ಟರು ಪ್ಯಾಕೆಟೊಂದನ್ನು ನೀಡಿದರು. ಕಾಯಿಗಳ ಉತ್ತಮ ನೋಟ, ವಿನ್ಯಾಸ ಆಕರ್ಷಕ.

               ಶಂಕರ ಭಟ್ಟರು ಹೊಸ ಸುದ್ದಿಯೊಂದನ್ನು ತಂದರೆ ಅದರೆ ಹಿಂದೆ ಅವರ ಶ್ರಮಪೂರ್ವಕವಾದ ಓಡಾಟ ಇದೆ ಎಂದರ್ಥ. ಅವರು ಅಪರೂಪದ್ದಾದ ಮತ್ತು ಹೊಸತಾದ ಸಸ್ಯ, ಹಣ್ಣು, ಕಾಯಿ, ಬಳ್ಳಿಗಳನ್ನು ಹುಡುಕುವುದು ಹವ್ಯಾಸ. ಅದನ್ನು ಬೆಳೆಸಿ ಸ್ನೇಹಿತರಿಗೆ ಹಂಚುವುದೆಂದರೆ ಖುಷಿ.

               ಪುತ್ತೂರಿನ ಖ್ಯಾತ ಉರಗ ತಜ್ಞ ಡಾ.ರವೀಂದ್ರನಾಥ ಐತಾಳರಿಂದ ಪಡೆದ ಬೀಜವನ್ನು ಊರಿದರು. ಗೊಬ್ಬರ ಕೊಟ್ಟು ಆರೈಕೆ ಮಾಡಿದರು. ಮೂರೇ ತಿಂಗಳಲ್ಲಿ ಗೊಂಚಲು ಗೊಂಚಲು ಕಾಯಿಗಳು. ಹೇಗೆ ಬಳಸುವುದೆಂದು ಗೊತ್ತಿಲ್ಲ. ಆದರೂ ಹೇಳಿ ಕೇಳಿದ ವಿಚಾರಗಳನ್ನು ಅಡುಗೆ ಮನೆಯಲ್ಲಿ ಪ್ರಯೋಗ ಮಾಡಿದರು. ಸ್ನೇಹಿತರಿಗೆಲ್ಲಾ ಸುದ್ದಿ ಹೇಳಿದರು. 'ಇನ್ನೇನು, ಒಂದೇ ತಿಂಗಳಲ್ಲಿ ಬೀಜ ರೆಡಿ' ಎಂದು ಬೀಜಸ್ನೇಹಿಗಳಿಗೆ ಸಂದೇಶ ಬಿತ್ತರಿಸಿದರು.

                'ಇದು ಕೇರಳದಿಂದ ಬಂದ ತರಕಾರಿ. ಹೆಸರು ನಿತ್ಯ ಬದನೆ. ಸಸ್ಯಶಾಸ್ತ್ರೀಯ ಹೆಸರು Ipomea muricata. ಚಿಕ್ಕ ಚಿಕ್ಕ ಕೋಡುಗಳುಳ್ಳ ಕಾಯಿಗಳನ್ನು ಆಯುವುದು ತನುಶ್ರಮ ಬೇಡುವ ಕೆಲಸವಾದ್ದರಿಂದ ಬದುಕಿನಿಂದ ದೂರವಾಗಿದೆ ಎಂಬ ಹೊಸ ಸುಳಿವನ್ನು ನೀಡಿದರು, ಹಿರಿಯ ಪತ್ರಕರ್ತ ಶ್ರೀ ಪಡ್ರೆ.

                 ಕಾಯಿಯ ತುದಿಯಲ್ಲಿ ಮುದುಡಿದ ಕಮಲವನ್ನು ಹೋಲುವ ಬೀಜದ ಮಾಸು. ಕೋಡು ಬಲಿತಾಗ ಮಾಸು ಕಪ್ಪಾಗುತ್ತದೆ. ಒಡೆದಾಗ ಅದರೊಳಗೆ ಕಂದು ಬಣ್ಣದ ದೊಡ್ಡ ಗಾತ್ರದ ಬೀಜಗಳು. ಬೀಜಕ್ಕೆ ಕಹಿ ರುಚಿ. ಬೀಜ ಮೊಳಕೆಯೊಡೆದು ಎರಡು ತಿಂಗಳಲ್ಲಿ ಇಳುವರಿ ನೀಡಲು ಶುರು. ಬಳ್ಳಿಯಲ್ಲಿ ಚಿಕ್ಕ ಚಿಕ್ಕ ಮುಳ್ಳುಗಳು. ನೇರಳ ವರ್ಣದ ಹೂ. ಗೊಂಚಲು ಗೊಂಚಲಾಗಿ ಕಾಯಿ ಬಿಡುತ್ತದೆ.

                  'ಬದನೆಯ ಪೋಡಿ, ಪಲ್ಯ, ಹುಳಿ ಮಾಡಿದರೆ ಒಳ್ಳೆಯ ರುಚಿ. ಇದರದ್ದೇ ಆದ ಪ್ರತ್ಯೇಕ ಪರಿಮಳವಿಲ್ಲ. ಆದರೆ ಸಂಬಾರ ಪದಾರ್ಥಗಳೊಂದಿಗೆ ಚೆನ್ನಾಗಿ ಒಗ್ಗುತ್ತದೆ. ಗೇರುಬೀಜವನ್ನು ಸೇರಿಸಿದ ಪಲ್ಯ ಸೂಪರ್,' ಎನ್ನುತ್ತಾರೆ ಶಂಕರ ಭಟ್. ಎಳೆಯ ಕಾಯಿ ಬಳಕೆಗೆ ಯೋಗ್ಯ. ಕಾಯಿಯನ್ನು ಕೊಯ್ಯುವಾಗ ಹಾಲು ಒಸರುವ ಗುಣವಿದೆ.

                  ಶಂಕರ ಭಟ್ಟರು ಈ ಹಿಂದೆ ಸೂಪರ್ ಮಾರ್ಕೆಟಿನಿಂದ ತಂದ ಕಾಡು ಪೀರೆಯ ಜಾತಿಯೊಂದನ್ನು ಅಭಿವೃದ್ಧಿಪಡಿಸಿದ್ದರು. ಈಗ ಈ ಸಾಲಿಗೆ ನಿತ್ಯ ಬದನೆ. ಗೊಬ್ಬರ ಕೊಟ್ಟು ಆರೈಕೆ ಮಾಡುತ್ತಿದ್ದರೆ ವರುಷ ಪೂರ್ತಿ ಕಾಯಿ ಪಡೆಯಬಹುದು ಎನ್ನುತ್ತಾರೆ.

9448953700

0 comments:

Post a Comment