Wednesday, April 15, 2015

ವಜ್ರದ ಹೊಳಪಲ್ಲಿ 'ಕಾಜು ರಾಜ್ಯ'ದ ಕನಸು

               'ದಿನಕ್ಕೊಂದು ಸೇಬು ತಿನ್ನಿ, ಆರೋಗ್ಯವಂತರಾಗಿ', ವೈದ್ಯ ಲೋಕದ ಪಾರಂಪರಿಕ ಸ್ಲೋಗನ್. ವಿವಿಧ ರಾಸಾಯನಿಕಗಳಿಂದ ಮಿಂದೆದ್ದು, ಅದರಿಂದ ಚುಚ್ಚಿಸಿಕೊಂಡ ಕೆಂಪುಸುಂದರಿ ಉದರಕ್ಕಿಳಿದಾಗ ಆರೋಗ್ಯ ಭಾಗ್ಯವಾದರೆ ನಂಪುಣ್ಯ! ಪೋಷಕಾಂಶದಲ್ಲಿ ಸೇಬನ್ನು ಮೀರಿಸಿದ ಗೇರುಹಣ್ಣು ಕಿತ್ತಳೆಗಿಂತ ನಾಲ್ಕೈದು ಪಟ್ಟು 'ಸಿ' ವಿಟಮಿನ್ ಹೊಂದಿದೆ. ಗಣನೀಯವಾಗಿ ಪೊಟಾಶಿಯಂ, ಕ್ಯಾಲ್ಸಿಯಂ, ಖನಿಜಗಳಿರುವ ಹಣ್ಣು, ರಸ ಸೇವನೆಯ ಕುರಿತಾದ ಮನಃಸ್ಥಿತಿ ಬದಲಾಗಬೇಕಾಗಿದೆ.
             ಮಂಗಳೂರಿನಲ್ಲಿ ಜರುಗಿದ ಗೇರು ಸಮಾವೇಶದ (ಕಾಜು ಸಮೆಟ್, ಗೇರು ಮೇಳ) ಪ್ರವೇಶದಲ್ಲಿ ನೀಡಿದ ಗೇರುಹಣ್ಣು ಹೊಟ್ಟೆಗಿಳಿಯುತ್ತಿದ್ದಾಗ ಅರೋಗ್ಯ ಪೋಷಕಾಂಶಗಳು ನೆನಪಾದುವು. ಗೇರು ಬೆಳೆಯುವ ಗ್ರಾಮೀಣ ಪ್ರದೇಶಗಳಲ್ಲಿ ತಯಾರಿಸಿದ ಹುಳಿಬರಿಸಿದ ಗೇರು ರಸದ ಸೇವನೆ ಪಾನಪ್ರಿಯರಿಗಂತೂ ಖುಷಿಯೋ ಖುಷಿ! ಬಹುಶಃ ಈ ಬ್ರಾಂಡ್ ತಾಜಾ ಹಣ್ಣಿನ ರಸದ ಸೇವೆನೆಗಿರುವ ದೊಡ್ಡಿ ಅಡ್ಡಿ.
               ಕರ್ನಾಾಟಕ ಗೇರು ಉತ್ಪಾದಕರ ಸಂಘಕ್ಕೆ ವಜ್ರಮಹೋತ್ಸವದ ಸಂಭ್ರಮ. ಎರಡು ದಿವಸದ ಕಾರ್ಯಕ್ರಮದಲ್ಲಿ ಹದಿನಾರು ರಾಜ್ಯಗಳಿಂದ ಗೇರು ಉದ್ಯಮ ಪ್ರತಿನಿಧಿಗಳ ಉಪಸ್ಥಿತಿ. ಜತೆಗೆ ಗೇರು  ಬೆಳೆಯುವ ರೈತರ ಉಪಸ್ಥಿತಿ. ಮಾರುಕಟ್ಟೆ, ಬ್ರಾಂಡಿಂಗ್, ಹೊಸ ತಲೆಮಾರಿಗೆ ಉದ್ಯಮವನ್ನು ದಾಟಿಸುವತ್ತ ಯೋಚನೆ-ಯೋಜನೆ, ಗೇರು ಕೃಷಿಯ ವಿಸ್ತರಣೆ, ರೈತರಿಗೆ ಉತ್ತೇಜನ.. ಮೊದಲಾದ ವಿಚಾರಗಳ ಮಾತುಕತೆ. ಗೇರು ನೀತಿ ರೂಪಿಸಲು ಸರಕಾರಕ್ಕೆ ಒತ್ತಾಯ. ಅದ್ದೂರಿ ಸಮಾರಂಭ.
             ಐವತ್ತಕ್ಕೂ ಮಿಕ್ಕಿದ ಯಂತ್ರೋಪಕರಣ ಮಳಿಗೆಗಳ 'ಮಿನಿ ಯಂತ್ರ ಮೇಳ'ವು ಸಮಾವೇಶದ ಧನಾಂಶ. ಬೀಜದ ಸಿಪ್ಪೆ ತೆಗೆಯುವ, ಗ್ರೇಡಿಂಗ್, ಕಲರ್ ಸಾರ್ಟಿಂಗ್, ಲೇಬಲಿಂಗ್ ಮಾಡುವ ವಿವಿಧ ಯಂತ್ರಗಳ ಪ್ರಾತ್ಯಕ್ಷಿಕೆಗಳು. ಆಧುನಿಕ ಮಾದರಿಯ ಗ್ರೇಡಿಂಗ್ ಯಂತ್ರವು ಈ ಭಾಗಕ್ಕೆ ಹೊಸತು. ಅಂತಾರಾಷ್ಟ್ರೀಯ ಗುಣಮಟ್ಟಕ್ಕನುಸಾರವಾಗಿ ಉತ್ಪನ್ನವನ್ನು ಸಿದ್ಧಗೊಳಿಸಲು ದುಬಾರಿಯಾದರೂ  ಇಂತಹ ಯಂತ್ರಗಳನ್ನು ಭವಿಷ್ಯದಲ್ಲಿ ಹೊಂದುವುದು ಅನಿವಾರ್ಯ, ಎನ್ನುತ್ತಾರೆ ವಾಲ್ಟರ್ ಡಿ'ಸೋಜ.
               ಭಾರತದಲ್ಲೇ ಗೇರು ಬೆಳೆಯ ವಿಸ್ತರಣೆಯಾದರೆ ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡಬಹುದು. ಗೇರು ಉತ್ಪಾದಕರ ಸಂಘದ ಅಂಕಿ ಅಂಶ ಗಮನಿಸಿ. ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ನಾಲ್ಕುನೂರು ಗೇರು ಬೀಜ ಸಂಸ್ಕರಣಾ ಕೇಂದ್ರಗಳಿವೆ. ಕಳೆದ ಮೂರು ದಶಕಗಳಲ್ಲಿ ದೇಶದ ವಾರ್ಶಿಕ ಗೋಡಂಬಿ ವ್ಯವಹಾರ ಐವತ್ತು ಕೋಟಿಯಿಂದ ಎರಡು ಸಾವಿರ ಕೋಟಿ ರೂಪಾಯಿಗೆ ಏರಿದೆ. ರಫ್ತು ವಹಿವಾಟು ಮೂಲಕ ರಾಷ್ಟ್ರದ ಬೊಕ್ಕಸಕ್ಕೆ ಲಭಿಸುವ ಆದಾಯದ ಪ್ರಮಾಣವು ಗಣನೀಯವಾಗಿ ಏರಿದೆ.
               ಜಗತ್ತಿನ ಗೇರು ಉತ್ಪಾದನೆಯಲ್ಲಿ ನಮ್ಮ ದೇಶ ದೊಡ್ಡಣ್ಣ. ಅಂತಾರಾಷ್ಟ್ರಿಯ ಗುಣಮಟ್ಟವನ್ನು ಹೊಂದಿದ ಉತ್ಪನ್ನ. ಒಂದು ಅಂಕಿಅಂಶದಂತೆ ದೇಶದಲ್ಲಿ 9.82 ಲಕ್ಷ ಹೆಕ್ಟಾರಿನಲ್ಲಿ 7.28 ಲಕ್ಷ ಟನ್ ಗೇರು ಉತ್ಪಾದನೆ. ಸುಮಾರು 1.15 ಲಕ್ಷ ಟನ್ ಗೇರು ಬೀಜವು ಯು.ಎಸ್.ಎ., ನೆದರ್ಲ್ಯಾಂಡ್, ಸೌದಿಅರೇಬಿಯಾ, ಜಪಾನ್, ಫ್ರಾನ್ಸ್, ಜರ್ಮನಿ.. ಮೊದಲಾದ ಅರುವತ್ತೈದು ದೇಶಗಳಿಗೆ ರಫ್ತಾಗುತ್ತದೆ. ಗೇರು ಬೀಜ ವ್ಯವಹಾರದಿಂದ ಐದುಸಾವಿರ ಕೋಟಿ ರೂಪಾಯಿಗೂ ಮಿಕ್ಕಿ ವಿದೇಶಿ ವಿನಿಮಯ ಗಳಿಸುತ್ತಿದೆ. ಗೇರು ಬೀಜದ ಸಿಪ್ಪೆಯ ಎಣ್ಣೆಯಿಂದ ಏನಿಲ್ಲವೆಂದರೂ ಮೂವತ್ತೆಂಟು ಕೋಟಿ ರೂಪಾಯಿ ವ್ಯವಹಾರವಾಗುತ್ತಿವೆ. ದೇಶಾದ್ಯಂತ ಐದುಸಾವಿರ ಗೇರು ಸಂಸ್ಕರಣಾ ಘಟಕಗಳಿವೆ. ಸುಮಾರು ಹದಿನೆಂಟು ಲಕ್ಷ ಟನ್ ಕಚ್ಚಾ ಗೇರುಬೀಜದ ಆವಶ್ಯಕತೆಯಿದೆ.
              ದೊಡ್ಡ ಪ್ರಮಾಣದಲ್ಲಿ ರಾಷ್ಟ್ರದ ಬೊಕ್ಕಸಕ್ಕೆ ಆದಾಯ ತರುವ ಗೇರು ಇತರ ಕೃಷಿಗಳಂತೆ ಮುಖ್ಯ ಕೃಷಿಯಾಗಬೇಕು. ವರ್ಷದ ಕೆಲವೇ ತಿಂಗಳು ಹೆಚ್ಚು ಶ್ರಮವಹಿಸಬೇಕಾದ ಕೃಷಿಯ ವಿಸ್ತರಣೆಯಿಂದ ಕೃಷಿಕರಿಗೂ, ಉದ್ಯಮಕ್ಕೂ, ದೇಶಕ್ಕೂ ಲಾಭ. ಉದ್ಯಮ ಪ್ರೋತ್ಸಾಹದ ಜತೆಗೆ ಕೃಷಿ, ಕೃಷಿಕರಿಗೆ ಗೇರು ಬೆಳೆಯುಲು ಗರಿಷ್ಠ ಉತ್ತೇಜನ ನೀಡುವ ಪ್ಯಾಕೇಜ್ ರೂಪುಗೊಳ್ಳಬೇಕು. ಗೇರು ಉತ್ಪಾದಕರ ಸಂಘವು ಮುಂದಿನ ದಿನಗಳಲ್ಲಿ ಸುಮಾರು ಅರುವತ್ತು ಸಾವಿರ ಗೇರು ಸಸಿಗಳನ್ನು ವಿತರಿಸುವ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಿದೆ. ಇದೊಂದು ಉತ್ತಮ ಪರಿಕ್ರಮ.
            ಪುತ್ತೂರಿನ ಗೇರು ನಿರ್ದೇಶನಾಲಯವು ಗೇರು ಕೃಷಿಕರ ಬೆನ್ನಿಗೆ ನಿಂತ ಸರಕಾರಿ ಸಂಸ್ಥೆ. ಇಲ್ಲಿನ ವಿಜ್ಞಾನಿಗಳು ಕೃಷಿಕ ಪರ. ಹಾಗಾಗಿ ಇಲ್ಲಿನ ಬಹುತೇಕ ಕಾರ್ಯಕ್ರಮಗಳಲ್ಲಿ ಕೃಷಿಕರು ಭಾಗವಹಿಸುತ್ತಾರೆ. ಈ ನಿರ್ದೇಶನಾಲಯದ ಸಲಹೆಯಂತೆ ಐನೂರಕ್ಕೂ ಮಿಕ್ಕಿ ಕೃಷಿಕರು ಗೇರು ಕೃಷಿಯನ್ನು ಕೈಗೊಂಡಿದ್ದು ವಿಜ್ಞಾನಿಗಳ ಸರ್ವ ಸಹಕಾರವಿರುವುದು ಗಮನೀಯ.  ತನ್ನ ನಿರ್ದೇಶನಾಲಯದ ಆವರಣದಲ್ಲಿ ವಿವಿಧ ವೈವಿಧ್ಯ ಗೇರು ತಾಕುಗಳು ಕೃಷಿಕರಿಗೊಂದು ಪ್ರಾತ್ಯಕ್ಷಿಕೆ. ಗೇರು ಕೃಷಿಯ ವಿಸ್ತರಣೆಯ ಲಾಭವನ್ನು ಕಾಲಕಾಲಕ್ಕೆ ಕೃಷಿಕರಿಗೆ ಒದಗಿಸುತ್ತಾ ಬಂದಿದೆ. ಉಳ್ಳಾಲದ ಗೇರು ಸಂಶೋಧನಾ ಕೇಂದ್ರವು ಕಾಜೂ ವಿಸ್ತರಣೆಯತ್ತ ಶ್ರಮಿಸುತ್ತಿದೆ.
              ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಸ್ಥೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೇರಳ ಕೃಷಿ ವಿಶ್ವವಿದ್ಯಾಲಯವು ಗೇರು ಹಣ್ಣಿನ 'ಕುಡಿಯಲು ಸಿದ್ಧ' (ರೆಡಿ ಟು ಸರ್ವ್) ಪೇಯ, ಸಿರಪ್.. ತಯಾರಿಗಳ ತರಬೇತಿ ಆಗಾಗ್ಗೆ ನೀಡುತ್ತಿದೆ. ಸಾಕಷ್ಟು ಮಂದಿ ತರಬೇತಿಯನ್ನು ಪಡೆದವರೂ ಇದ್ದಾರೆ. ಉದ್ಯಮವನ್ನು ರೂಪಿಸಿದವರು ಮಾತ್ರ ತೀರಾ ತೀರಾ ಕಡಿಮೆ. ಗೇರು ಹಣ್ಣಿನ ಮೌಲ್ಯವರ್ಧನೆಗೆ ಒಂದಷ್ಟು ತಾಂತ್ರಿಕ, ಮತ್ತಷ್ಟು ಮಾನಸಿಕ ಅಡ್ಡಿಗಳಿವೆ. ಮುಖ್ಯವಾಗಿ ಮದ್ಯದ ಅಂಶ ಇರಬಹುದೆಂಬ ಗುಮಾನಿ. ಮತ್ತೊಂದು ಗಂಟಲು ಕೆರೆಯುವ ಗುಣ. ಇದನ್ನು ಮರೆಮಾಡಲು ಸುಲಭ ವಿಧಾನಗಳಿವೆ ಬಿಡಿ.
             ಪುತ್ತೂರು ಸನಿಹದ ಕಾವು ಮಳಿ 'ಮಧು ಮಲ್ಟಿಪ್ಲೆಕ್ಸ್' ಇದರ ಎಂ.ಎನ್.ವೆಂಕಟಕೃಷ್ಣ ಹಣ್ಣಿನ ತಾಜಾ ರಸದಿಂದ ತಯಾರಿಸಿದ ಕುಡಿಯಲು ಸಿದ್ಧ ಪೇಯದ ಉದ್ಯಮಕ್ಕೀಗ ಎರಡನೇ ವರುಷ. 'ಕ್ಯಾಶ್ಯೂ ಫನ್ನಿ' (ಫೆನ್ನಿ ಅಲ್ಲ) ಬ್ರಾಂಡಿನ ಪೇಯಕ್ಕೆ ಮಾವು, ಕಿತ್ತಳೆ, ನಿಂಬೆಯ ಸ್ವಾದದ ಪ್ರತ್ಯೇಕ ಐಟಂ ಜನಪ್ರಿಯವಾಗುತ್ತಿವೆ. ಕಾರ್ಬೋನೇಟೆಡ್ ಡ್ರಿಂಕ್ ಅಲ್ಲದೆ ಗೇರು ಹಣ್ಣಿನ ಸ್ಕ್ವಾಶ್ ತಯಾರಿಸಿದ್ದಾರೆ. ಇವರಉತ್ಪನ್ನ ಕೃಷಿಕರ ಅಂಗೀಕಾರ ಪಡೆದಿದೆ.  ಕೃಷಿಕನೊಬ್ಬನ ಈ ಸಾಧನೆಯನ್ನು ಕೇಂದ್ರ ಆಹಾರ ಮಂತ್ರಾಲಯವು ಶ್ಲಾಘಿಸಿದೆ. ದೆಹಲಿಯಲ್ಲಿ ಜರುಗಿದ ವಿಶ್ವ ಮಟ್ಟದ ವಿಚಾರಗೋಷ್ಠಿಗೆ ವೆಂಕಟಕೃಷ್ಣರನ್ನು ಕರೆಸಿ ಆಭಿಪ್ರಾಯ ಪ್ರಸ್ತುತಿಗೆ ಅವಕಾಶ ಮಾಡಿ ಕೊಟ್ಟಿದೆ.
              ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ 'ಕೊಂಕಣ್ ಕಾಜೂ ಸಮೂಹ್' ಸಂಸ್ಥೆಯ ಯತ್ನದಿಂದ ಕೃಷಿಕ ಕುಟುಂಬಗಳು ಗೇರು ಸಿರಪ್ ತಯಾರಿಸುತ್ತಿವೆ. ಮನೆಮಟ್ಟದಲ್ಲೂ ತಯಾರಿಸುವ, ಬಳಸುವ ಮನಃಸ್ಥಿತಿ ಬಂದಿದೆ. ಗೋವಾ, ಮಹಾರಾಷ್ಟ್ರ ಗಡಿಪ್ರದೇಶಗಳಲ್ಲಿ ನಡೆಯುವ ಉತ್ಸವಗಳ ಸಂದರ್ಭದಲ್ಲಿ ಗೇರು ಪೇಯವನ್ನು ಕೊಡುವ ಪರಿಪಾಠವಿದೆ. ಚಿಕ್ಕಚಿಕ್ಕ ಗೂಡಂಗಡಿಗಳಲ್ಲಿ 'ಕಾಜೂ ಶರಬತ್' ಹೆಜ್ಜೆಯೂರಿದೆ. ಈ ಭಾಗದಲ್ಲಿ ಹಣ್ಣಿನ ಮೌಲ್ಯವರ್ಧನೆ ಯೋಜನೆ ಗರಿಕೆದರುತ್ತಿದೆ. ದಕ್ಷಿಣ ಗುಜರಾತಿನ 'ಭೈಫ್' ಸಂಸ್ಥೆಯು ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ, ತರಬೇತಿ ನಡೆಸುತ್ತಿದೆ. ದಾಪೋಲಿಯಲ್ಲಿ ಗೇರಿನ ತಾಜಾ ರಸ ಹಿಂಡಿ ಇಪ್ಪತ್ತನಾಲ್ಕು ಗಂಟೆಯೊಳಗೆ ಸರಬರಾಜು ಮಾಡುವ ಜಾಲಸರಪಳಿ ಬಿಗಿಯಾಗುತ್ತಿದೆ. ಇದು ಆಯುರ್ವೇದ ಔಷಧ ತಯಾರಿ ಉದ್ದೇಶಗಳಿಗೆ ಬಳಕೆಯಾಗುತ್ತದೆ.
              ಕೇರಳದ ಕಣ್ಣೂರಿನ ಅಬ್ದುಲ್ ನಜ್ಹೀರ್ ಗೇರು ಹಣ್ಣಿನ ರಸವನ್ನು ತಾಜಾ ಆಗಿ ಮಾರುವ ಉದ್ದಿಮೆ ರೂಪಿಸಿದ್ದಾರೆ. ಇವರಿಗೆ ಮಡಕ್ಕತ್ತಾರ ಗೇರು ಸಂಶೋಧನಾ ಕೇಂದ್ರದಿಂದ ತರಬೇತಿ. ಹತ್ತಾರು ಬೂತ್ಗಳನ್ನು ತೆರೆದಿದ್ದಾರೆ. ಬೇಸಿಗೆಯಲ್ಲಿ ಮೂರು ತಿಂಗಳ ಗಳಿಕೆ. ತಲಶ್ಶೇರಿಯ ಕೃಷಿಕರೊಬ್ಬರು ಸಿರಪ್, ಕ್ಯಾಂಡಿ, ಉಪ್ಪಿನಕಾಯಿ ತಯಾರಿಯ ಉದ್ಯಮ ಶುರು ಮಾಡಿದ್ದಾರೆ. ಹೆಚ್ಚೇಕೆ, ಮೊನ್ನೆ ನಡೆಯಿತಲ್ಲಾ, ಕಾಜು ಸಮಾವೇಶದಲ್ಲಿ ಮಂಗಳೂರು ಕಾಪಿಕಾಡಿನ 'ಪ್ರಕೃತಿ ಫುಡ್ಸ್'ನ ಶ್ಯಾಮಲಾ ಶಾಸ್ತ್ರಿಯವರು ಆಕರ್ಷಕ ಸ್ಯಾಚೆಟಿನಲ್ಲಿ ಗೇರು ಹಣ್ಣಿನ ಸ್ಕ್ವಾಶ್ ಮಾರಾಟಕ್ಕಿಟ್ಟಿದ್ದರು. ಜತೆಗೆ ಗೇರಿನ ಉಪ್ಪಿನಕಾಯಿ, ಹಲ್ವ ಕೂಡಾ.
              ಕರ್ನಾಾಟಕ ಗೇರು ಉತ್ಪಾದಕರ ಸಂಘಕ್ಕೆ ಮುಂದಿನ ಒಂದು ವರುಷ ವಜ್ರದ ಗುಂಗು. ಗಟ್ಟಿ ಕಾರ್ಯಹೂರಣಗಳ ಸಂಪನ್ನತೆ. ಗೇರು ಬೀಜದ ಉದ್ದಿಮೆಯೊಂದಿಗೆ ಹಣ್ಣಿನ ಮೌಲ್ಯವರ್ಧನೆಯತ್ತಲೂ ಯೋಚನೆ. 'ಕರ್ನಾಾಟಕವು ಕಾಜು ರಾಜ್ಯವಾಗಬೇಕು' ಎನ್ನುವುದು ಸಂಘದ ಆಶಯ.


0 comments:

Post a Comment