Friday, July 28, 2017

ಹಲಸಿನ ಅರಿವು ಮೂಡಿಸುವ ಯಾತ್ರೆ

ಹೊಸದಿಗಂತ-ಮಾಂಬಳ / 28-12-2016

              ಕೇರಳ ರಾಜಧಾನಿಯಿಂದ ೨೦೧೬ ಜುಲೈಯಲ್ಲೊಂದು ರಥಯಾತ್ರೆ ಹೊರಟಿದೆ. ಹೆಸರು 'ಹಲಸಿನ ಅರಿವು ಮೂಡಿಸುವ ಯಾತ್ರೆ'. ಭವಿಷ್ಯದ ಬೆಳೆ ಹಲಸಿನ ಬಗ್ಗೆ ಊರವರಿಗೆ, ಅದಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಪರಮೋದ್ದೇಶ. ಜತೆಗೆ ಹಲಸಿನಿಂದ ಬೇರೆಬೇರೆ ಉತ್ಪನ್ನ ಸಾಧ್ಯತೆಗಳ, ಮಾರಾಟಾವಕಾಶಗಳ ಕಲ್ಪನೆ ಕೊಡುವುದು. ಹಲಸಿನ ತಯಾರಿಗಳ ಮಾರಾಟ. ಕೇರಳದ ಹಲವು ಶಾಸಗಿ ಮತ್ತು ಸರಕಾರಿ ಸಂಸ್ಥೆಗಳು ಈ ಯಾತ್ರೆಗೆ ಹೆಗಲು ಕೊಟ್ಟಿವೆ.
              ಈ ರಥದ ಹೆಸರು 'ಚಕ್ಕವಂಡಿ' ಅಂದರೆ ಹಲಸಿನ ಗಾಡಿ. ಪಾಲಕ್ಕಾಡಿನ ಚಿಕ್ಕೂಸ್ ಐಸ್ಕ್ರೀಮಿನ ಮಾಲಕ ಮೃದುವರ್ಣನ್ ಅವರ ಕನಸು. ಜ್ಯಾಕ್ಫ್ರುಟ್ ಪ್ರೊಮೋಶನ್ ಕೌನ್ಸಿಲ್ ಮತ್ತು ಜ್ಯಾಕ್ಫ್ರುಟ್ ಪ್ರೊಮೋಶನ್ ಕನ್ಸೋಶರ್ಿಯಂ ಹೆಗಲೆಣೆ. ಎರಡು ವರುಷಗಳ ದೀರ್ಘ ಸಿದ್ಧತೆ. ಇವರಿಗೆ 2011ರಲ್ಲಿ ತಿರುವನಂತಪುರದಲ್ಲಿ ಜರುಗಿದ ಅಂತಾರಾಷ್ಟ್ರೀಯ ಹಲಸು ಮೇಳದ ಸ್ಫೂರ್ತಿ. ಮೃದುವರ್ಣನ್ ಆಶಯಕ್ಕೆ ಹಲಸಿಗಾಗಿ ಕೆಲಸ ಮಾಡುವ ಸಂಸ್ಥೆಗಳು ಜತೆಸೇರಿವೆ. ಶಾಲೆ, ಪಂಚಾಯತ್ಗಳಲ್ಲಿ ಪ್ರೀತಿಯ ಸ್ವಾಗತ.
              ಚಕ್ಕವಂಡಿಯಲ್ಲಿ ಏನೇನಿದೆ? ಐಸ್ಕ್ರೀಂ, ಕಸಿಗಿಡಗಳು, ಮನೆಉತ್ಪನ್ನಗಳು, ಅಂದಂದೇ ತಯಾರಿಸಿದ ಉತ್ಪನ್ನಗಳು.. ಇದು ವ್ಯಾಪಾರ ವ್ಯವಸ್ಥೆಯಲ್ಲ. ಇದು ಶಿಕ್ಷಣ ವ್ಯವಸ್ಥೆಯಾಗಿ ರೂಪುಗೊಳ್ಳಬೇಕು ಎನ್ನುವುದು ಮೃದುವರ್ಣನ್ ಆಶಯ. ದಶಂಬರ್ ಮೊದಲ ವಾರದಲ್ಲಿ ಹಲಸಿನ ಗಾಡಿಯು ಕಾಞಂಗಾಡ್, ಕಾಸರಗೋಡು  ವರೆಗೂ ಬಂದಿತ್ತು. ಯಾತ್ರೆಯುದ್ದಕ್ಕೂ ಶಾಲಾ ವಿದ್ಯಾಥರ್ಿಗಳಿಗೆ ಹಲಸಿನ ಬಳಕೆ, ಅವುಗಳ ಮೌಲ್ಯವರ್ಧಿತ ಉತ್ಪನ್ನಗಳ ಪರಿಚಯ, ಔಷಧೀಯ ಮಹತ್ವ.. ಮೊದಲಾದ ವಿಚಾರಗಳನ್ನು ತಿಳಿಹೇಳಲಾಗುತ್ತದೆ.
              ಮೃದುವರ್ಣನ್ ಮೂರು ವರುಷದ ಹಿಂದೆ ಮಿತ್ರ ಜಾನ್ಸನ್ ಜತೆ ಮಹಾರಾಷ್ಟ್ರದ ಕುಡಾಲಿಗೆ ಹೋಗಿದ್ದರು. ಅಲ್ಲಿ ಹಲಸಿನ ಹಣ್ಣಿನ(ಹಹ)ಪಲ್ಪ್ ಮಾಡುವ ಜ್ಞಾನವನ್ನು ಕಲಿತರು. ಹಲಸಿನ ಹಣ್ಣಿನ ಪಲ್ಪ್ನೊಂದಿಗೆ ಊರಿಗೆ ಮರಳಿದ್ದರು. ಈ ಪಲ್ಪನ್ನು ಬಳಸಿ ತಮ್ಮ 'ಚಿಕ್ಕೂಸ್' ಉದ್ಯಮದಲ್ಲಿ ಐಸ್ಕ್ರೀಂ ಸಿದ್ಧಪಡಿಸಿದ್ದರು. ಹಲಸಿನ ಹಣ್ಣಿನ ಐಸ್ಕ್ರೀಮಿಗೆ ಹಳ್ಳಿ ಜನರ ಒಲವು ತೀರಾ ಕಡಿಮೆಯಿತ್ತು. ಆದರೆ ಪೇಟೆ ಮಂದಿಗೆ ತುಂಬಾ ಇಷ್ಟವಾಯಿತು.  ಈ ಐಸ್ಕ್ರೀಮಿನ ಮಾರಾಟಕ್ಕೆ ನಗರದಲ್ಲಿ ಅವಕಾಶ ದೊರೆಯಿತು. ಮೇಳಗಳಲ್ಲಿ ಮಳಿಗೆ ತೆರೆದು ರುಚಿ ಉಣಿಸಿದರು. ಉತ್ತಮ ಹಿಮ್ಮಾಹಿತಿ ಸಿಕ್ಕಿತು. ಈ ಯಶದ ಹಿನ್ನೆಲೆಯಲ್ಲಿ ಜನರೇ ಇರುವಲ್ಲಿಗೆ ಉತ್ಪನ್ನದೊಂದಿಗೆ ಹೋದರೆ ಹೇಗೆ ಎನ್ನುವ ಯೋಚನೆಯು ಚಕ್ಕವಂಡಿ ಮೂಲಕ ತೆರೆಯಿತು.
               ಕೊಟ್ಟಾಯಂನಲ್ಲಿ 'ಭೂಮಿಕಾ' ಸಂಸ್ಥೆಯು 'ಜಾಕ್ಅಪ್' ಬ್ರಾಂಡಿನಲ್ಲಿ ಈಗಾಗಲೇ ಹಲಸಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ವರುಷಪೂರ್ತಿ ಹಲಸಿನ ಉತ್ಪನ್ನ ಸಿದ್ಧಪಡಿಸುವಷ್ಟು ಸದೃಢರಾಗಿದ್ದಾರೆ. ತಾವೂ ಒಂದು ಚಕ್ಕವಂಡಿ ಆರಂಭಿಸುವ ಬಗ್ಗೆ ಇವರು ಚಿಂತನೆ ಆರಂಭಿಸಿದ್ದಾರೆ. ಗುಜ್ಜೆ, ಹಲಸಿನ ಹಣ್ಣನ್ನು ತಾಜಾ ಅಗಿಯೇ ಮಾರಾಟ ಮಾಡುವ ಕನಸು ಇವರದು.
              ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ಯಾಲಿಫೋರ್ನಿಯಾದ ಮಿರಿಯಮ್ ಎಂಬ ಮಹಿಳೆ ಟ್ರಕ್ಕಿನಲ್ಲಿ 'ಲಾ ಜಾಕಾ ಮೊಬೈಲ್' ಎನ್ನುವ ಹೆಸರಿನಲ್ಲಿ ಹಲಸಿನ ಉತ್ಪನ್ನಗಳನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಶ್ರೀ ಪಡ್ರೆಯವರ ಹಲಸಿನ ಬಗೆಗಿನ ಮಾಹಿತಿ ಆಂದೋಳನ, ಹಲಸಿನ ಕೆಲಸಗಳು ತನಗೆ ಸ್ಫೂತರ್ಿ ನೀಡಿದೆ ಎನ್ನುತ್ತಾರೆ. ಶ್ರೀ ಪಡ್ರೆಯವರು ಹಲಸು ಆಂದೋಳನಕ್ಕೆ ಶ್ರೀಕಾರ ಬರೆದವರು.
                 ಕ್ಯಾಲಿಫೋರ್ನಿಯಾದಲ್ಲಿ ಹಲಸಿನ ಬೆಳೆ ಕಡಿಮೆ. ಮೆಕ್ಸಿಕೋದಿಂದ ತರಿಸಿಕೊಳ್ಳಬೇಕಷ್ಟೇ. ಅವರು ಹಲಸಿನ ಸಿದ್ಧ ಉತ್ಪನ್ನಗಳನ್ನು ತಯಾರಿಸಿ ರುಚಿ ನೋಡಿ ಖರೀದಿಸುವಂತೆ ವಿನಂತಿಸುತ್ತಾರೆ. ಟ್ರಕ್ಕಿನಲ್ಲಿ ಸ್ಥಳದಲ್ಲೇ ತಯಾರಿಸುವ ತಿಂಡಿಗಳನ್ನು ಜನರು ಇಷ್ಟಪಟ್ಟು ತಿನ್ನುತ್ತಾರೆ. ಮದುವೆಗಳಲ್ಲಿ ಇವರ ಗಾಡಿಯನ್ನು ಬುಕ್ ಮಾಡುತ್ತಾರೆ. ಹಲಸಿನ ರುಚಿ ತೋರಿಸಲು ಇದು ಒಳ್ಳೆಯ ದಾರಿ. ಗಾಡಿಯಲ್ಲೇ ಬಿಸಿಯಾದ ತಿಂಡಿ ತಯಾರಿಸಿ ನೀಡಿದರೆ ತಿಂಡಿ ಮಾಡುವಷ್ಟು ಪುರುಸೊತ್ತಿಲ್ಲ! ಗಿರಾಕಿಗಳ ಹತ್ರ ಹಲಸನ್ನು ಒಯ್ಯುವ ತಂತ್ರವಿದು.
                ಕಬ್ಬಿನ ಹಾಲಿಗಿರುವ 'ಕೆನೋಲ' (ಅಚಿಟಿಠಟಚಿ) ಒಳ್ಳೆಯ ಕಲ್ಪನೆ. ನೊಣ ಹಾರುವ ವಾತಾವರಣಕ್ಕಿಂತ ಭಿನ್ನವಾಗಿ ಕಬ್ಬಿನ ಹಾಲನ್ನು ಸವಿಯುವ ವ್ಯವಸ್ಥೆ. ಬೆಂಗಳೂರಿನಲ್ಲಿ ಏನಿಲ್ಲವೆಂದರೂ ನೂರಕ್ಕೂ ಮಿಕ್ಕಿ ಯಾಂತ್ರೀಕೃತ ಕಬ್ಬಿನ್ನು ಹಿಂಡಿ ರಸತೆಗೆದು ಸರ್ವ್ ಮಾಡುವ ಮಳಿಗೆಗಳಿವೆ. ಬಸ್ ನಿಲ್ದಾಣಗಳಿಗೂ ಕೆನೋಲ ಲಗ್ಗೆಯಿಟ್ಟು ಕ್ರಾಂತಿ ಮಾಡಿತು. ಈಗ ಎಲ್ಲಾ ವರ್ಗದ ಜನರೂ ಒಂದೇ ಸೂರಿನಲ್ಲಿ ನಿಂತು ನಿರ್ಮಲವಾಗಿ ಕಬ್ಬಿನ ಹಾಲನ್ನು ಕುಡಿಯುತ್ತಾರೆ. ಫುಟ್ಪಾತ್ ಯೋಗವನ್ನು ಕೆನೋಲ ತಪ್ಪಿಸಿತು!
              ಇದೇ ರೀತಿ ಹಲಸಿಗೂ ವ್ಯವಸ್ಥೆ ರೂಪುಗೊಳ್ಳಬೇಕು. ಅಕಾಲದಲ್ಲಿ ಹಣ್ಣು, ಉತ್ಪನ್ನಗಳು ಒದಗಿಸುವಂತಿರಬೇಕು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ತಿರುವನಂತಪುರ, ಚೆನ್ನೈ.. ಮೊದಲಾದ ಪಟ್ಟಣಗಳಲ್ಲಿ ಕ್ಲಿಕ್ ಆಗಬಹುದು. ರೈತರ ಜತೆ ಸಂಪರ್ಕವಿರಿಸಿ ಹಲಸಿನ ಹಣ್ಣು ಖರೀದಿಯ ಮಾತುಕತೆಯನ್ನು ಮಾಡಿಕೊಟ್ಟುಕೊಳ್ಳಬಹುದು. ಈ ದೇಶದಲ್ಲಿ ನಿರ್ವಿಷ ಹಣ್ಣಾಗಿ, ತರಕಾರಿಯಾಗಿ ಸಿಗುವಂತಹ ಹಲಸಿಗೆ ಈ ಮೂಲಕ ನ್ಯಾಯ ಸಲ್ಲಿಸಬಹುದು. ಗಿರಾಕಿಗಳ ಕೊರತೆ ಖಂಡಿತಾ ಬಾರದು.
ಪ್ರಚಾರ ಮತ್ತು ಮಾರಾಟವನ್ನು ಜನರ ಮಧ್ಯೆ ಹೋಗಿ ಮಾಡಲು ಸುಲಭ. ನಗರದಲ್ಲಿ ನೋಡಿ. ಗಾಡಿಗಳಲ್ಲಿ ಆಹಾರವನ್ನು ಸಿದ್ಧಪಡಿಸಿ ಶುಚಿ, ರುಚಿಯಾಗಿ ನೀಡುವ ವ್ಯವಸ್ಥೆಯನ್ನು ಪ್ರಜ್ಞಾವಂತರೂ ಸ್ವೀಕರಿಸಿದ್ದಾರೆ. ಅಂತಹ ಗಾಡಿಯನ್ನು ವಿದ್ಯಾವಂತರೇ ನಡೆಸುತ್ತಿರುವುದು ಗಮನೀಯ. ಚಕ್ರದ ಮೇಲೆ ಆಹಾರ ಬರುವುದು ಹೊಸತಲ್ಲ. ಅದನ್ನು ಹಲಸಿನ ಜತೆ ಸಮೀಕರಿಸಿದರೆ?
            ಯಾವುದೇ ಆಹಾರವನ್ನು ಜನರ ಬಳಿಗೆ ಒಯ್ಯುವುದು ದೊಡ್ಡ ಕೆಲಸವಲ್ಲ. ಉತ್ತಮ ನೋಟ ಮತ್ತು ಒಳ್ಳೆಯ ನಿರ್ವಹಣೆ ಮುಖ್ಯ. ರುಚಿಯಾದ ತುಮಕೂರು ಹಲಸು, ತೂಬುಗೆರೆ ಹಲಸಿನ ಸೊಳೆಯನ್ನು ಒಮ್ಮೆ ಹೊಟ್ಟೆಗಿಳಿಸಿದರೆ ಇನ್ನೂ ತಿನ್ನಬೇಕೆಂಬ ಸ್ವಾದ. ಅಂತೆಯೇ ಕೆಂಪುಸೊಳೆ ತಳಿಯ ಹಣ್ಣು ಗ್ರಾಹಕ ಸ್ವೀಕೃತಿ ಪಡೆಯುವುದು ಖಂಡಿತ. ಇವೆಲ್ಲಾ ಅಕಾಲದಲ್ಲಿ ಜನರಿಗೆ ಸರ್ವ್ ಮಾಡಲು ಸ್ವಲ್ಪ ಹೈಫೈ ವ್ಯವಸ್ಥೆ ಬೇಕು.
              ಕೇರಳದ ಚಕ್ಕವಂಡಿಯು ಹಲಸಿನ ಉದ್ಯಮಕ್ಕೆ ಹೊಸ ಸಂದೇಶವನ್ನು ನೀಡಿದೆ. ಜನರದ್ದೆಡೆ ಉತ್ಪನ್ನವನ್ನು ಒಯ್ಯುವ ಮೃದುವರ್ಣನ್ ಅವರ ಶ್ರಮ ಮಾದರಿಯಾಗಲಿ. ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಹಲಸಿನ ಟ್ರಕ್ ಯಾಕೆ? ನಮ್ಮೂರಲ್ಲೂ ಯಶಸ್ವಿಯಾಗದೇ?



0 comments:

Post a Comment