Friday, July 28, 2017

ಅಕ್ಷರ ಸಾಕ್ಷರತೆಯೊಂದಿಗೆ ಮಿಳಿತವಾದ ಜಲಸಾಕ್ಷರತೆ



ಹೊಸದಿಗಂತ_ಮಾಂಬಳ /  25-1-2017

               ದೇಶದೆಲ್ಲಡೆ ನೀರಿನದ್ದೇ ಮಾತುಕತೆ. ಮಳೆಗಾಲ ಕಳೆದು ನಿಜಾರ್ಥದ ಚಳಿಗಾಲದ ಅನುಭವ ಕನ್ನಾಡಿನ ಹಲವೆಡೆ ಅನುಭವಕ್ಕೆ ಬಂದಿದೆ. ಚಳಿಯ ಕಚಗುಳಿಯ ಮಧ್ಯೆ ಬೇಸಿಗೆಯು ನಿಧಾನಕ್ಕೆ ಪರದೆ ಸರಿಸುತ್ತಿದೆ. ಕಳೆದ ವರುಷದ ಬೇಸಿಗೆಯ ಬೇಗೆಯನ್ನು ಗ್ರಹಿಸಿಕೊಂಡರೆ ಗರ್ಭದಲ್ಲಿ ಚಳಿ! ಮುಂದಿನ ಬೇಸಿಗೆ ಹೇಗೋ ಎನ್ನುವ ಆತಂಕ. ಈ ಮಧ್ಯೆ ನೀರಿನ ಬರಕ್ಕೆ ಪರಿಹಾರವಾಗಿ ಖಾಸಗಿ ನೆಲೆಯಲ್ಲಿ ಮತ್ತು ಸಾಮೂಹಿಕವಾಗಿ ಒಂದಷ್ಟು ಗಣನೀಯ ಪ್ರಮಾಣದ ನೆಲ-ಜಲ ಸಂರಕ್ಷಣೆಯ ಕೆಲಸಗಳು ಆಗಿವೆ, ಆಗುತ್ತಿವೆ. ಕರಾವಳಿಯ ಶಾಲೆಗಳಲ್ಲಿ ಪಠ್ಯದೊಂದಿಗೆ ನೀರಿನ ಪಾಠದ ಸ್ಪರ್ಶವಾಗಿದೆ. ಅಧ್ಯಾಪಕರು ಸಕ್ರಿಯರಾಗಿದ್ದಾರೆ. ನೀರುಳಿತಾಯಕ್ಕೆ ಕೇರಳದ ಶಾಲೆಯೊಂದು ಮಾಡಿದ ಮಾದರಿ ಕನ್ನಾಡಿಗೂ ಅನ್ವಯಿಸಬಹುದಾಗಿದೆ.    
             ’ಕೊಂಬುಗಿಂಡಿ - ದೇವರ ನಾಡಿನ ಸಂಸ್ಕೃತಿಯ ಒಂದಂಗ. ಮಲೆಯಾಳದಲ್ಲಿದು 'ವಾಲ್ಕಿಂಡಿ'. ಕಾಲುದೀಪ, ಗಿಂಡಿಗಳಿಲ್ಲದ ಮನೆಯಿಲ್ಲ. ಮನೆಮಂದಿಗೆ, ಅತಿಥಿಗಳಿಗೆ ಕೈಕಾಲು, ಬಟ್ಟಲು-ಪಾತ್ರೆ ತೊಳೆಯಲು ಕೊಂಬುಗಿಂಡಿಯನ್ನೇ ಬಳಸುತ್ತಿರುವುದು ಪಾರಂಪರಿಕವಾಗಿತ್ತು. ಹೊಸ ವ್ಯವಸ್ಥೆಗಳು ಕೊಂಬುಗಿಂಡಿಯ ಜಾಗವನ್ನು ಅತಿಕ್ರಮಿಸಿದೆ. ಕೆಲವೊಂದು ಧಾಮರ್ಿಕ ಆಚರಣೆಗಳಿಗಷ್ಟೇ ಅಟ್ಟದಿಂದ ಇಳಿದು ಬರುತ್ತದೆ! ಬದಲಾದ ಕಾಲಘಟ್ಟದಲ್ಲೂ ಹಿರಿ ಮನೆಗಳಲ್ಲಿ ಗಿಂಡಿಯ ಬಳಕೆ ಈಗಲೂ ಊರ್ಜಿತ.
               ಅವಶ್ಯವಿದ್ದಷ್ಟೇ ನೀರು ಹೊರಹರಿಸಿ ಬಳಸುವುದು ಗಿಂಡಿಯ ವಿಶೇಷ. ಒಂದರ್ಥದಲ್ಲಿ ಹಿರಿಯರು ಹಾಕಿಕೊಟ್ಟ ನೀರಿನರಿವು. ನಳ್ಳಿ ನೀರು ಬರುವುದಕ್ಕಿಂತ ಮೊದಲು ಕೊಂಬಿನಗಿಂಡಿಯು ಕೇರಳದ ಮನೆಮನೆಯ ಜಲದಾಯಿ. ಒಂದೊಂದು ಮನೆಯಲ್ಲಿ ಕನಿಷ್ಠ ನಾಲ್ಕೈದು ಗಿಂಡಿಗಳು ಇದ್ದೇ ಇರುತ್ತಿದ್ದುವು. ಕಾಲುದೀಪ, ಆರತಿಗಳು, ಗಿಂಡಿಗಳೆಲ್ಲಾ ಕಂಚಿನಿಂದ ಸಿದ್ಧಪಡಿಸಿದವುಗಳು. ವಿವಿಧ ವಿನ್ಯಾಸದ ರಚನೆಗಳಲ್ಲಿ ಸೂಕ್ಷ್ಮ ಕಸೂತಿಗಳು ಹಿರಿಯರ ಕಲಾಗಾರಿಕೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.
               ಅದು ಕಣ್ಣೂರು ಜಿಲ್ಲೆಯ ಮುಳಕ್ಕುನ್ನು ಸರಕಾರಿ ಪ್ರಾಥಮಿಕ ಶಾಲೆ. ಹಳ್ಳಿ ಪರಿಸರ. ಶಾಲೆಯಲ್ಲಿ ಹದಿನೈದಕ್ಕೂ ಮಿಕ್ಕಿದ ಡಿವಿಜನ್ಗಳಿವೆ. ಐನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಕೊಂಬುಗಿಂಡಿಗೆ ಇಲ್ಲಿ ಜಲಸಾಕ್ಷರತೆಯ ಕೆಲಸ. ಪುಟ್ಟ ಮಕ್ಕಳಿಗೆ ಎತ್ತಿ ಬಳಸಲು ಕಂಚಿನ ಗಿಂಡಿಯು ಭಾರವಾಗುತ್ತದೆ. ಬದಲಿಗೆ ಅದನ್ನೇ ಹೋಲುವ ಪ್ಲಾಸ್ಟಿಕ್ಕಿನ ಗಿಂಡಿಯನ್ನು ತಯಾರಿಸಿ ಮಕ್ಕಳ ಕೈಗೆ ನೀಡಿದ್ದಾರೆ. ಅಲ್ಲಿನ ಮಕ್ಕಳು ಬಟ್ಟಲು, ಕೈಕಾಲು ಅಲ್ಲದೆ ಉದ್ಯಾನದ ಹಸಿರಿಗೆ ನೀರುಣಿಸುವುದೂ ಇದರಲ್ಲೇ. ಇದು ಎಳೆ ಮನಸ್ಸುಗಳೊಳಗೆ ನೀರಿನ ಎಚ್ಚರ ಮತ್ತು ಜಲ ಸಂರಕ್ಷಣೆಗೆ ಬೀಜಾಂಕುರ. ಅವಶ್ಯವಿದ್ದಷ್ಟೇ ನೀರು ಬಳಸಿ ಎಂಬ ಪರೋಕ್ಷ ಪಾಠ.
              ಈ ಶಾಲೆಯು ನೀರಿನ ಅರಿವನ್ನು ಬಿತ್ತುವ ಚಟುವಟಿಕೆಗಳನ್ನು ನಡೆಸುತ್ತಿದೆ. ಆಡಳಿತದ ಗಮನ ಸೆಳೆದಿದೆ. ಮಾಧ್ಯಮಗಳು ಬೆಳಕು ಹಾಕಿವೆ. ಪ್ರತಿ ತಿಂಗಳು ವಿದ್ಯಾರ್ಥಿಗಳು 'ನೀರರಿವು' ಭಿತ್ತಪತ್ರವನ್ನು ಸಿದ್ಧಪಡಿಸುತ್ತಾರೆ. ಅದು ಜಲತರಂಗ ಹಸ್ತಪತ್ರಿಕೆಯಾಗಿ ರೂಪುಗೊಂಡು ಚಿಣ್ಣರು ಓದುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನೀರುಳಿತಾಯದ ಸಂದೇಶವನ್ನು ಸಾರುವ ಕವನಗಳು ಪ್ರಕಟಗೊಳ್ಳುತ್ತಿವೆ. ಕೇರಳದ ಅನೇಕ ಪ್ರಸಿದ್ಧ ಕವಿಗಳಿಂದ ಬರೆಸಿದ ಕವನಗಳು ಕಂದಮ್ಮಗಳ ಜ್ಞಾನಕ್ಕೊಂದು ಉಪಾಧಿ. ಈ ಕವನಗಳ ಸಂಕಲನವು ಅಚ್ಚು ಕಂಡಿದೆ. ಆರಂಭದಲ್ಲಿ ಒಂದೆರಡು ಕೈ ಬರಹದ ಪುಸ್ತಿಕೆ. ಈಗದು ಸುಂದರ ವಿನ್ಯಾಸದಿಂದ ಮುದ್ರಣವಾಗಿ ಮಕ್ಕಳ ಕೈ ಅಲಂಕರಿಸುತ್ತಿದೆ. ವಿದ್ಯಾರ್ಥಿಗಳಿಗೆ ಓದುವುದಕ್ಕಾಗಿಯೇ ಪ್ರತ್ಯೇಕವಾದ 'ಜಲ ಲೈಬ್ರರಿ'ಯಿದೆ.
               ಬಳಸಿ ಬಿಸಾಕುವ ಬಾಟ್ಲಿ, ಪೆಟ್ಟಿಗೆಗಳು ಇಲ್ಲಿ ವಿಜ್ಞಾನದ ಮಾದರಿಗಳು. ಪ್ರತೀ ತರಗತಿಗೆ ನೀರಿನ ಪ್ರಯೋಗದ ಮಾರ್ಗದರ್ಶನ ಮಾಡುವ ಅಧ್ಯಾಪಕರು. 'ಲೋ ಕೋಸ್ಟ್-ನೋ ಕೋಸ್ಟ್' ಕಿಟ್ ನಿರ್ಮಿಸುವ ಇಂತಹ ಪಾಠ ಪಠ್ಯೇತರ. ನ್ಯೂಟನ್ನಿನ ನಿಯಮ, ಜಾದೂಗಾರರ 'ವಾಟರ್ ಆಫ್ ಇಂಡಿಯಾ' ಮಸೂರದಲ್ಲಿ ಎದುರಿನ ಬಿಂಬ ಕಾಣುವ ಬಗೆ, ಮೋಡದಿಂದ ಮಳೆ ಹೇಗೆ.. ಇಂತಹ ಕುತೂಹಲಕಾರಿ ಪ್ರಯೋಗಗಳು. ಇದಕ್ಕೆಲ್ಲಾ ದುಬಾರಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದ್ದಲ್ಲ ಎನ್ನುವುದು ಗಮನೀಯ.
              ಬಾಟ್ಲಿಗೆ ಸುತ್ತಲೂ ರಂಧ್ರ ಕೊರೆದು ನೀರು ತುಂಬಿ ಮೇಲೆತ್ತಿದ್ದಾಗ ಹೊರ ಚಿಮ್ಮುವ ನೀರಿನ ಧಾರೆಯು ಬಾಟ್ಲಿಯನ್ನು ತನ್ನ ಅಕ್ಷದಲ್ಲಿ ತಿರುಗಿಸುತ್ತದೆ. ಅಂದರೆ ಪ್ರತಿಯೊಂದು ಕ್ರಿಯೆಗೂ ಸಮ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್ನದ ಮೂರನೇ ನಿಯಮವನ್ನು ಮನದಟ್ಟು ಮಾಡಲು ಇಂತಹ ಪ್ರಯೋಗಗಳು. ಇದಕ್ಕೂ ಜಲಸಂರಕ್ಷಣೆಗೂ ನೇರಾನೇರ ಸಂಬಂಧವಿಲ್ಲ. ಆದರೆ ವಿದ್ಯಾರ್ಥಿಗಳ ಮನಸೆಳೆಯುವ ಕೆಣಿ. ಜತೆಜತೆಗೆ ನೀರಿನ ಪಾಠ. ವಿಜ್ಞಾನದ ಇಂತಹ ಐವತ್ತಕ್ಕೂ ಮಿಕ್ಕಿದ ಸೂತ್ರಗಳ 'ಜಲಸೂತ್ರ' ಪ್ರಕಟವಾಗಿದೆ.  ಅದರಲ್ಲಿ ನೀರುಳಿತಾಯದ ಸಂದೇಶಕ್ಕೆ ಮೊದಲ ಮಣೆ.
              ಶಾಲೆಯ ಎಲ್ಲಾ ಡಿವಿಜನ್ನಿಗೊಂದು 'ಕಿಂಡಿ ಲೀಡರ್' ಇದ್ದಾರೆ. ಎಲ್ಲಾ ಲೀಡರುಗಳಿಗೆ ಮತ್ತೊಬ್ಬ ಮುಖ್ಯಸ್ಥ. ಮಕ್ಕಳ ಮೇಲೆ ಎಷ್ಟು ಪರಿಣಾಮ ಎಂದರೆ ಲೀಡರ್ಗಳು ಮನೆಯಲ್ಲಿ ಆಧುನಿಕವಾದ ನಲ್ಲಿ ವ್ಯವಸ್ಥೆ ಇದ್ದರೂ ಕೊಂಬುಗಿಂಡಿಯನ್ನೇ ಬಳಸುತ್ತಾರೆ. ಹೆತ್ತವರಿಗೆ ನೀರಿನ ಅರಿವಿನ ಮಹತ್ವ ಅರಿವಾಗಿದೆ. 'ಇಂತಹ ಕೊಂಬುಗಿಂಡಿಯನ್ನು ಖರೀದಿಸಿ ಬಳಸುತ್ತೇವೆ, ಎನ್ನುವವರ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿದೆ. ಮಕ್ಕಳ ಮನಸ್ಸನ್ನು ತಟ್ಟಿದ ನೀರಿನ ಎಚ್ಚರ ಮನೆಯ ಕದವನ್ನೂ ತಟ್ಟಿದೆ. 
               ಕೇರಳದ ಶಿಕ್ಷಣ ಇಲಾಖೆಯು ಮುಳಕ್ಕುನ್ನು ಶಾಲೆಯ ನೀರಿನ ಪಾಠವನ್ನು ಶ್ಲಾಘಿಸಿದೆ. ಅಧ್ಯಾಪಕರಿಗೆ ವಿತರಿಸುವ ಇಲಾಖೆಯ ಮಾರ್ಗದರ್ಶನಯಲ್ಲಿ ಶಾಲೆಯ ಕೊಂಬುಗಿಂಡಿ ಪ್ರಯೋಗವನ್ನು ಉಲ್ಲೇಖಿಸಿದ್ದಾರೆ. ಕೊಂಬುಗಿಂಡಿಯು ಜಲಸಂರಕ್ಷಣೆಯ ಒಂದು ಸಂಕೇತ ಮಾತ್ರ. ಇಂತಹ ಚಟುವಟಿಕೆಗಳಿಗೆ ಊರಿನವರ ಸಹಕಾರ ಸ್ಮರಣೀಯ. ಎಲ್ಲಾ ಕೊಂಬುಗಿಂಡಿಗಳೂ ದೇಣಿಗೆಯಾಗಿಯೇ ಬಂದಿವೆ, ಎನ್ನಲು ಅಧ್ಯಾಪಕರಿಗೆ ಹೆಮ್ಮೆ. ಈ ಶಾಲೆಯಲ್ಲಿ ನೀರಿನ ಕೊರತೆಯಿಲ್ಲ. ಆದರೆ ಹತ್ತಿರದ ಶಾಲೆಗಳು ಈ ಪ್ರಯೋಗವನ್ನು ತಮ್ಮಲ್ಲೂ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಕೆಲವರು ಅನುಷ್ಠಾನದತ್ತ ಹೆಜ್ಜೆ ಊರಿದ್ದಾರೆ.
               ಶಾಲೆಯ 'ಕೊಂಬುಗಿಂಡಿ'ಯ ಮೂಲಕ ನೀರಿನೆಚ್ಚರದ ಕಾವು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಊರಿನ ಮನೆಗಳಿಗೂ ಹಬ್ಬಿವೆ. ನೀರು ವ್ಯರ್ಥ ಮಾಡಬಾರದು. ಇದು ಜೀವಜಲ. ಎಚ್ಚರದಿಂದ ಬಳಸಬೇಕು, ಅರಿವು ಮೂಡುತ್ತಿದೆ. ನೂರಕ್ಕೂ ಮಿಕ್ಕಿ ಮನೆಗಳಲ್ಲಿ ಕಂಚಿನ ಕೊಂಬುಗಿಂಡಿ ಅಟ್ಟದಿಂದ ಕೆಳಗೆ ಇಳಿದಿವೆಯಂತೆ. ಜಲಸಾಕ್ಷರತೆಯಲ್ಲಿ ಶಾಲೆಯ ಸಾಧನೆಗೆ ಅಲ್ಲಿನ ಪ್ರಸಿದ್ಧ ಪತ್ರಿಕೆ ಮಲೆಯಳ ಮನೋರಮಾ ನಗದು ಪುರಸ್ಕಾರವನ್ನು ನೀಡಿ ಬೆನ್ನುತಟ್ಟಿದೆ.


0 comments:

Post a Comment