Monday, January 25, 2010

ಬದನೆ ಬಚಾವ್!


ಮಾಧ್ಯಮಗಳಲ್ಲಿ, ಮಿಂಚಂಚೆಗಳಲ್ಲಿ ಕಳೆದೊಂದು ತಿಂಗಳುಗಳಿಂದ 'ಬಿಟಿ ಬದನೆ'ಯದ್ದೇ ಸುದ್ದಿ. 'ಬಿಟಿ ಬೇಡ, ನಾಟಿ ಬೇಕು' ಎಂಬ ಘೋಷಣೆ-ಹೋರಾಟ. ಆರೇಳು ರಾಜ್ಯಗಳು ಬಿಟಿ ಯಾ ಕುಲಾಂತರಿ ಬದನೆ ಬಗ್ಗೆ ಈಗಾಗಲೇ ಸ್ವರ ಎಬ್ಬಿಸಿವೆ. ರಾಜ್ಯ ಸರಕಾರ ಈಗಷ್ಟೇ ಮಾತನಾಡಲು ಶುರುಮಾಡಿದೆ!

ಕೆಲವು ಸ್ವಯಂ ಸೇವಾ ಸಂಸ್ಥೆಗಳು, ರೈತರು, ರೈತ ಪರ ಸಂಸ್ಥೆಗಳು ಕುಲಾಂತರಿ ಬದನೆ ವಿರುದ್ಧ ನೇರ ಹೋರಾಟಕ್ಕಿಳಿದಿದೆ. ಕುಲಾಂತರಿ ಬದನೆ ಕೃಷಿ, ಅದರ ಸೇವನೆಯಿಂದ ಬದುಕಿಗಾಗುವ ದುಷ್ಪರಿಣಾಮಗಳ ಬಗ್ಗೆ ಆಧಾರ ಸಹಿತ ದಾಖಲೆಗಳನ್ನು ಜನರ ಮುಂದಿಡುತ್ತಿದೆ.

ಕೇಂದ್ರ ಸರಕಾರವು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕುತ್ತಿರುವುದು ಇದೇನೂ ಹೊಸತಲ್ಲ. ಭಾಸ್ಮತಿಯಂತಹ ಭಾರತದ್ದೇ ತಳಿಗಳನ್ನು ತಮ್ಮದೆಂದು ಹೇಳಿ ಪೇಟೆಂಟ್ ಪಡಕೊಂಡರೂ ನಮ್ಮದು ದಿವ್ಯ ಮೌನ! ಕುಲಾಂತರಿ ಬದನೆಯ ವಿಚಾರದಲ್ಲೂ ಅಷ್ಟೇ.

ಏನಿದು ಕುಲಾಂತರಿ? ಆಂಗ್ಲಭಾಷೆಯಲ್ಲಿ 'ಜಿ.ಎಂ.ಓ - ಜೆನೆಟಿಕಲಿ ಮಾಡಿಫೈಡ್ ಆರ್ಗಾನಿಸಮ್ಸ್'. ಬೇರೆ ಸಸ್ಯ, ಪ್ರಾಣಿ ಅಥವಾ ಸೂಕ್ಷ್ಮಣುವೊಂದರ ವಂಶವಾಹಿಗಳನ್ನು ಕೃತಕವಾಗಿ ಒಳಸೇರಿಸಿ ರೂಪಾಂತರಿಸಿದ ಬೆಳೆ ತಳಿಗಳು. ಈ ಹಿಂದೆ ಬಿಟಿ ಹತ್ತಿ ಎಂಬ ಕುಲಾಂತರಿ ತಳಿಯನ್ನು ಚಿನ್ನದ ತಟ್ಟೆಯಲ್ಲಿಟ್ಟು ರೈತರ ಕೈಗೆ ಕೊಟ್ಟ ದೃಷ್ಟಾಂತ ಕಣ್ಣಮುಂದಿದೆ. ಕಾಂಡ ಕೊರಕ ಮತ್ತು ಹಣ್ಣುಕೊರಕ ಕೀಟಗಳನ್ನು ಈ ತಳಿ ಸ್ವಯಂ ಆಗಿ ನಿಯಂತ್ರಿಸುತ್ತದೆ ಎಂದು ರೈತರನ್ನು ನಂಬಿಸಲಾಗಿತ್ತು. ಈಗ ಬದನೆ ಸರದಿ. 'ಉತ್ಕೃಷ್ಟ ಗುಣಮಟ್ಟ, ಕೀಟಬಾಧೆಯಿಂದ ಮುಕ್ತ, ಅಧಿಕ ಇಳುವರಿ' - ಎಂಬ ಸ್ಲೋಗನ್.

ಸಹಜ ಸಮೃದ್ಧದ ಜಿ. ಕೃಷ್ಣಪ್ರಸಾದ್ ಹೇಳುತ್ತಾರೆ - 'ಭಾರತ ಸರಕಾರವು ಅತ್ಯಂತ ಅವೈಜ್ಞಾನಿಕವಾಗಿ ಬಿಟಿ ಬದನೆಯ ತಳಿಯನ್ನು ಬೆಳೆಯಲು 2009 ಅಕ್ಟೋಬರ್ ನಲ್ಲಿ ಅನುಮತಿ ನೀಡಿದೆ. ಇದನ್ನು ಮಾರಕಟ್ಟೆಗೆ ತರಲು ಮಹಿಕೋ ಸಂಸ್ಥೆಗೆ ಅಧಿಕಾರ ನೀಡಲಾಗಿದೆ. ಈ ಅನುಮತಿ ನೀಡುವ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಮಹಿಕೋ ಸಂಸ್ಥೆಯ ಪ್ರತಿನಿಧಿ!'

ಸ್ವದೇಶಿ ಜಾಗರಣದ ಕುಮಾರಸ್ವಾಮಿಯವರು ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ ಮಾತು ಗಮನಿಸಿ - 'ಮೆಕ್ಕೆಜೋಳದ ತವರೂರು ಮೆಕ್ಸಿಕೋ. ಜೋಳವನ್ನು ಕುಲಾಂತರಿ ಮಾಡಲು ಅಲ್ಲಿನ ಸರಕಾರ ಒಪ್ಪಿಗೆ ನೀಡಿಲ್ಲ. ಕಾರಣ, ಎಲ್ಲಿ ಮೂಲ ತಳಿಗಳಿವೆಯೋ ಅಲ್ಲಿ ಕುಲಾಂತರಿ ತಂತ್ರಜ್ಞಾನವನ್ನು ಅಳವಡಿಸಕೂಡದು ಎಂಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರ್ವಸಮ್ಮತವಾದ ವಿಚಾರ'.

ಆದರೆ ಭಾರತದಲ್ಲಿ? ಬದನೆಯು ಭಾರತದ ದೇಸೀ ತಳಿ. ಎರಡು ಸಾವಿರಕ್ಕೂ ಅಧಿಕ ತಳಿಗಳಿವೆ. ಕರ್ನಾಟಕದಲ್ಲೇ ನೋಡಿ - ಬಿಳಿಗುಂಡು ಬದನೆ, ಚೋಳ ಬದನೆ, ಕೊತ್ತಿತಲೆ ಬದನೆ, ಹೊಳೆಚಿಪ್ಲಿ, ನೆಲ್ಲೆ ಬದನೆ, ಪುಟ್ಟ ಬದನೆ, ಮಟ್ಟಿಗುಳ್ಳ - ಎಷ್ಟೊಂದು ವೈವಿಧ್ಯಗಳು! ಕುಲಾಂತರಿ ತಳಿಗಳು ಹೊಲಕ್ಕೆ ನುಗ್ಗಿದರೆ ನಮ್ಮ ದೇಸೀ ತಳಿಗಳಿಗೆ ಅವಸಾನ ಖಂಡಿತ. 'ಅಧಿಕ ಇಳುವರಿ, ರೋಗರಹಿತ' ಎಂದು ರೈತರನ್ನು ನಂಬಿಸಿ' ಮಣ್ಣನ್ನು, ಮನುಷ್ಯನ ಆರೋಗ್ಯವನ್ನೂ ಕುಲಾಂತರಿ ತಳಿಗಳು ನಾಶಪಡಿಸುತ್ತದೆ.
'ಕುಲಾಂತರಿ ಬದನೆಯ ಸೇವನೆ ಆರೋಗ್ಯಕ್ಕೆ ಮಾರಕ. ಅಲರ್ಜಿ, ಶ್ವಾಸಕೋಸದ ಕಾಯಿಲೆ, ಸಂತಾನಹರಣ, ರೋಗನಿರೋಧಕ ಶಕ್ತಿಯ ನಾಶ, ನೋವು, ವಿಕೃತ ಕೋಶ.. ಹೀಗೆ ಬದುಕಿಗೆ ಮಾರಕ' ಎನ್ನುವುದು ಕೃಷ್ಣಪ್ರಸಾದ್ ಅಧ್ಯಯನದಿಂದ ಕಂಡು ಕೊಂಡ ವಿಚಾರ.

ಕರ್ನಾಟಕದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಬಿಟಿ ಬದನೆಯ ಸಂಶೋಧನೆ ಕೈಗೊಂಡಿದೆಯಂತೆ. 'ಮೊನ್ನೆಮೊನ್ನೆಯವರೆಗೆ ನೈಸರ್ಗಿಕ / ಸಾವಯವ ಕೃಷಿಗೆ ಒತ್ತು ಕೊಡುತ್ತಿದ್ದ ವಿವಿಯು ದಿಢೀರನೇ ಕುಲಾಂತರಿ ಬದನೆಯತ್ತ ಒತ್ತು ಕೊಟ್ಟಿರುವುದು ಯಾಕೆ? ಬಹುಶಃ ಫಂಡಿಂಗ್ ಹೆಚ್ಚು ಬರುತ್ತದೆಂಬ ಕಾರಣಕ್ಕಾಗಿ ನೈಸರ್ಗಿಕ ಕೃಷಿಯನ್ನು ಕೈಬಿಟ್ಟು, ಬಿಟಿ ಹಿಂದೆ ಬಿದ್ದಿದ್ದಾರೆ' ಎಂದು ಕುಮಾರಸ್ವಾಮಿಯವರು ಛೇಡಿಸುತ್ತಾರೆ.

ಬೀಜಸಂರಕ್ಷಣೆಯ ವಿಧಿವಿಧಾನಗಳು ನಮ್ಮಲ್ಲಿ ಪಾರಂಪರಿಕ. ಕುಲಾಂತರಿ ಹೊಲಕ್ಕೆ ನುಗ್ಗಿತೆಂದಾದರೆ, ಕಂಪೆನಿಗಳು ನೀಡುವ ಲ್ಯಾಬ್ ತಯಾರಿಯ ದುಬಾರಿ ವೆಚ್ಚದ ಬೀಜಕ್ಕೆ ಕೈಯೊಡ್ಡಬೇಕು. ಬೀಜವನ್ನು ಸಂರಕ್ಷಿಸುವಂತಿಲ್ಲ. ಸಂರಕ್ಷಿಸಿದರೂ ಅವು ಮೊಳಕೆಯೊಡೆವ ಸಾಮಥ್ರ್ಯ ಹೊಂದಿರುವುದಿಲ್ಲ! ಒಂದು ವೇಳೆ ಬೀಜಗಳನ್ನು ಸಂರಕ್ಷಿಸಿದರೂ ಅವು ಕಾನೂನು ಬಾಹಿರ. ಕೈಕೋಳ ತೊಡಿಸಿ ಕತ್ತಲಕೋಣೆಯ ಶಿಕ್ಷೆ ಕಾದಿದೆ!

ಸ್ಥಳೀಯ ತಳಿಗಳ ರಕ್ಷಣೆಗಾಗಿ ಈಗಾಗಲೇ 'ಬದನೆ ಮೇಳ'ಗಳು ನಡೆದಿವೆ. ರೈತರಿಗೆ ಅರಿವನ್ನು ಮೂಡಿಸುವ ಕೆಲಸವಾಗಿದೆ. ಮಧ್ಯಪ್ರದೇಶ, ಉತ್ತರಾಂಚಲ, ಕೇರಳ, ತಮಿಳುನಾಡು, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಚತ್ತೀಸ್ಗಡ ರಾಜ್ಯಗಳು ಬಿಟಿಯನ್ನು ವಿರೋಧಿಸಿವೆ. ಕನರ್ಾಟಕ ಮಾತ್ರ ಚಾದರ ಸರಿಸಿ ಆಕಳಿಸುತ್ತಾ ಎದ್ದಿದೆಯಷ್ಟೇ!

'ಬಿಟಿ ಬದನೆಯನ್ನು ವಾಣಿಜ್ಯಿಕ ಉದ್ದೇಶಕ್ಕೆ ಅನುಮತಿ ನೀಡಿದರೆ, ಹೀಗೆ ಕುಲಾಂತರಗೊಂಡ ಟೊಮ್ಯಾಟೋ, ಮೆಕ್ಕೆಜೋಳ, ಬೆಂಡೆಕಾಯಿ, ಪಪಾಯ ಮುಂತಾದ ಐವತ್ತಾರು ಪ್ರಯೋಗನಿರತ ತಳಿಗಳು ಭಾರತದ ಹೊಲಗಳಿಗೆ ನುಗ್ಗಲಿವೆ' ಎನ್ನುವ ಕೃಷ್ಣಪ್ರಸಾದ್, 'ಭಾರತದಲ್ಲಿ ಆಹಾರ ಬೆಳೆಗಳನ್ನು ತಮ್ಮ ಸ್ವಾಮ್ಯಕ್ಕೆ ಕಸಿದುಕೊಳ್ಳುವ ವ್ಯವಸ್ಥಿತ ಹುನ್ನಾರ' ಎಂದು ಎಚ್ಚರಿಸುತ್ತಾರೆ.
ಕೇಂದ್ರ ಸರಕಾರವು ಬಿಟಿ ವಿರುದ್ಧ ಎದ್ದಿರುವ ವಿರೋಧವನ್ನು ವಿಮರ್ಶೆ ಮಾಡಲು ದೇಶದ ಏಳು ಕಡೆಗಳಲ್ಲಿ 'ಅಹವಾಲು ಆಲಿಕೆ'ಯನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಗುಡ್ ಶೆಫಡರ್ ಆಡಿಟೋರಿಯಂನಲ್ಲಿ ಇದೇ ಫೆ.೧ ರಂದು ಅಹವಾಲು ಆಲಿಕೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ಖುದ್ದಾಗಿ ಭಾಗವಹಿಸುತ್ತಾರೆ.

'ರೈತರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದರಂತೆ ನಮ್ಮ ಸರಕಾರ ನಡೆಯುತ್ತದೆ' ರಾಜ್ಯ ತೋಟಗಾರಿಕಾ ಸಚಿವ ಉಮೇಶ್ ಕತ್ತಿಯವರ ಆಶ್ವಾಸನೆಯೇನೋ ಸಿಕ್ಕಿದೆ. ನಮ್ಮ ಸಿಎಂ ಕೂಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ಕೊಟ್ಟಿದ್ದಾರೆ!
'ಬಿಟಿ ಬದನೆ ತಂತ್ರಜ್ಞಾನವನ್ನು ರೈತರು ಕೇಳಿಲ್ಲ. ಕಂಪೆನಿಗಳಿಗೆ ನೆಲೆಯೂರಲು ಜಾಗಕೊಟ್ಟು ರೈತರ ಜೀವನದೊಂದಿಗೆ ಚೆಲ್ಲಾಟವಾಡುವ ಯಾವುದೇ ತಂತ್ರಜ್ಞಾನ ನಮಗೆ ಬೇಕಿಲ್ಲ. ಭಾರತ ಬಿಟಿಮುಕ್ತ ದೇಶವಾಗಬೇಕು' ಎನ್ನುವ ಆಶಯ ಕೋಡಿಹಳ್ಳಿ ಚಂದ್ರಶೇಖರ್ ಅವರದು. ನೋಡೋಣ. ಇದು ರೈತರ ದನಿ. ಇದಕ್ಕೆ ಭಿನ್ನವಾಗಿ ಸಂಶೋಧಕರು-ವಿಜ್ಞಾನಿಗಳ ಸಿದ್ಧ ಉತ್ತರಗಳು ಇದ್ದೇ ಇರುತ್ತವಲ್ಲಾ!

(ಚಿತ್ರ ಕೊಡುಗೆ : ಜಿ ಕೃಷ್ಣಪ್ರಸಾದ್)

1 comments:

ಸಾಗರದಾಚೆಯ ಇಂಚರ said...

ತುಂಬಾ ಒಳ್ಳೆಯ ಲೇಖನ ಸರ್

Post a Comment