Wednesday, November 3, 2010

ದೇವವೃಂದದಲ್ಲಿ ಕಾಮ್ ದಶಮಾನ ವೈಭವ



`ಕೃಷಿಕನ ಬದುಕಿನಲ್ಲಿ ಸವಾಲು ನಿತ್ಯ ಎದುರಾಗುತ್ತಿದೆ. ಈ ಸವಾಲುಗಳ ಮಧ್ಯೆ ಪರ್ಯಾಯ ಕೃಷಿಯ ಚಿಂತನೆಗಳು, ಯಾಂತ್ರೀಕರಣದತ್ತ ನೋಟ, ಸಮಸ್ಯೆಗಳನ್ನು ಹಗರು ಮಾಡಿಕೊಳ್ಳುವ ಉಪಾಧಿಗಳತ್ತ ನಿತ್ಯ ಹುಡುಕಾಟ ನಡೆಯುತ್ತಲೇ ಇದೆ. ಆದರೆ ಸಮಸ್ಯೆಯಿಂದ ಪಾರಾಗಬಲ್ಲ ಎಲ್ಲಾ ದಾರಿಗಳು ಮುಚ್ಚಿರುವುದು, ನಮ್ಮ ಆಡಳಿತದ ತಪ್ಪು ನೀತಿಗಳಿಂದಾಗಿ. ಕೃಷಿಕನ ಸಮಸ್ಯೆಯನ್ನು ಎತ್ತಿ ಹಿಡಿದು ಪರಿಹಾರ ಕಂಡುಕೊಳ್ಳುವಲ್ಲಿ ಇವುಗಳು ಸೋತಿವೆ. ಯಾವಾಗ ಸರಕಾರಕ್ಕೆ ಕೃಷಿ ಉಳಿಯಬೆಕು ಎಂಬ ಕಾಳಜಿ ದೂರವಾಯಿತೋ, ಆಗ ಮಾಧ್ಯಮ ಎದುರು ನಿಲ್ಲಲೇ ಬೇಕು. ಮಾಧ್ಯಮಗಳಿಗೂ ಇತಿಮಿತಿಗಳಿವೆ. ಹಾಗೆಂತ ಕೈಚೆಲ್ಲಿ ಕೂಡ್ರುವ ಕಾಲವಲ್ಲ' ಎಂದು ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಹೇಳಿದರು.
ಅವರು ಮೂಡಿಗೆರೆ ಸನಿಹದ ದೇವವೃಂದದಲ್ಲಿ ಕೃಷಿ ಮಾಧ್ಯಮ ಕೇಂದ್ರದ ದಶಮಾನ ಸಮಾರಂಭದಲ್ಲಿ ಮಾಧ್ಯಮಗಳ ಪಾತ್ರವನ್ನು ಬಿಚ್ಚಿಟ್ಟರು. `ರೈತನ ಬಗ್ಗೆ ಮಾಧ್ಯಮದಲ್ಲಿ ಬೆಳಕು ಕಾಣುವ ಯಶೋಗಾಥೆಗಳು ಅವನ ಬದುಕನ್ನು ಎತ್ತರಕ್ಕೆ ಏರಿಸಲು ಸಹಕಾರಿ' ಎಂದ ಅಥಣಿಯ ಎಸ್.ಎಂ.ಪಾಟೀಲ್, 'ಪ್ರಕೃತ ಕಾಲಮಾನದ ಕೃಷಿಕ, ಕೃಷಿರಂಗವನ್ನು ಗಮನಿಸಿದಾಗ ಭವಿಷ್ಯ ನಿರಾಶದಾಯಕವಾಗಿ ಕಾಣುತ್ತಿದೆ. ಈ ದಿಸೆಯಲ್ಲಿ ಕೃಷಿಕನ ಆಸರೆಗೆ ಮಾಧ್ಯಮಗಳು ಬರಬೇಕು' ಎಂಬ ಆಶಯ ವ್ಯಕ್ತಪಡಿಸಿದರು ಯಡೇಹಳ್ಳಿಯ ಹಿರಿಯ ಕೃಷಿಕ ವೈ.ಸಿ.ರುದ್ರಪ್ಪ. ಊರಿನ ಹಿರಿಯರಾದ ಡಿ.ಬಿ.ಸುಬ್ಬೇಗೌಡರು ಸಭಾಧ್ಯಕ್ಷತೆ ವಹಿಸಿದ್ದರು. 'ರೈತನು ದೇಶದ ಬೆನ್ನೆಲುಬು ಎನ್ನುವ ಸರಕಾರದಿಂದ ರೈತರ ಏಳಿಗೆ ಸಾಧ್ಯವಿಲ್ಲ. ಬೆಳೆದರೆ ಬೆಲೆಯಿಲ್ಲ, ಬೆಲೆಯಿದ್ದರೆ ಬೆಳೆಯಿಲ್ಲ. ವ್ಯತಿರಿಕ್ತವಾದ ಹವಾಮಾನಗಳು ಕೃಷಿಕನ ಬದುಕನ್ನು ಹೈರಾಣ ಮಾಡುತ್ತಿವೆ.' ಎಂದರು.
ಕಾಮ್ ದಶಮಾನೋತ್ಸವ ಪುರಸ್ಕಾರ : ಹೆಚ್.ಜೆ.ಪದ್ಮರಾಜ್, ಎಡ್ವರ್ಡ ರೆಬೆಲ್ಲೋ, ಕೆ.ನಾರಾಯಣ ಸ್ವಾಮಿ, ಮಹೇಶ್ ದೇಶಪಾಂಡೆ, ರೂಪೇಶ್ ಕಾಮತ್ - ಇವರಿಗೆ ದಶಮಾನೋತ್ಸವ ಪುರಸ್ಕಾರ ನೀಡಿ ಸಂಮಾನಿಸಲಾಯಿತು.
ಪುಸ್ತಕ ಬಿಡುಗಡೆ: ವೇದಿಕೆಯಲ್ಲಿ ಕೆಸುವಿನ ಎಲೆಯ ಎರಡು ಚಿಕ್ಕ ರಚನೆಗಳಿದ್ದುವು. ಎಲ್ಲರಲ್ಲೂ ಕುತೂಹಲ. ವೇದಿಕೆಯ ಗಣ್ಯರು ಅದನ್ನು ಬಿಡಿಸಿ, ಅದರೊಳಗೆ ಅವಿತಿದ್ದ ಹೊಸ ಪುಸ್ತಕಗಳನ್ನು ತೆಗೆದು ಅನಾವರಣಗೊಳಿಸಿದರು. * ಅನುಸೂಯ ಶರ್ಮಾ ಇವರು ಬರೆದ 'ಹಿತ್ತಿಲು-ಕೈತೋಟಕ್ಕೊಂದು ಕೈಪಿಡಿ' ಮತ್ತು ಮಲ್ಲಿಕಾರ್ಜುನ ಹೊಸಪಾಳ್ಯ ಅವರ 'ಚೌಳು ನೆಲದ ಬಂಗಾರ: ಮರೆಯಾಗುತ್ತಿರುವ ಬರದ ನಾಡಿನ ಭತ್ತವೈವಿಧ್ಯ' - ಬಿಡುಗಡೆಗೊಂಡ ಕೃತಿಗಳು.
ಸಿರಿಧಾನ್ಯ ಬಹುಮಾನ: ಸಿರಿಧಾನ್ಯಗಳನ್ನು ಕುರಿತು ಕಾಮ್ ಬಳಗದವರು ಬರೆದಿರುವ ಉತ್ತಮ ಕನ್ನಡ ಲೇಖನಗಳಿಗೆ 'ಮಿಲೆಟ್ ನೆಟ್ ವರ್ಕ್ ಆಫ್ ಇಂಡಿಯಾ' (ಮಿನಿ) ನೀಡುತ್ತಿರುವ ಮೂರು ಬಹುಮಾನಗಳ ವಿತರಣೆ. ನಾ. ಕಾರಂತ ಪೆರಾಜೆ (ಪ್ರಥಮ ಪುರಸ್ಕಾರ), ಗಣಪತಿ ಭಟ್ ಹಾರೋಹಳ್ಳಿ (ದ್ವಿತೀಯ) ಮತ್ತು ರವಿ ವಿಶ್ವನಾಥಪುರ (ತೃತೀಯ ಪುರಸ್ಕಾರ)`
ಕಾಮ್ ಫೆಲೋ'ಗಳ ಕೆಲವು ಅನಿಸಿಕೆ (2009-10) :
ರಮಾ ಅರಕಲಗೂಡು - ಕಾಮ್ ತರಬೇತಿ ಪೂರೈಸಲೇಬೇಕೆಂಬ ಹಠವಿತ್ತು. ಗ್ರಾಮೀಣ ಮಹಿಳೆಯರ ಸಾಧನೆ ಕುರಿತು ಹೆಚ್ಚು ಬೆಳಕು ಹಾಕಲು ಕಾಮ್ ನೆರವಾಯಿತು. ಬರೆಹಗಳ ಕುರಿತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದೆ. ನನ್ನೊಳಗಿದ್ದ ಬರೆಹದ ತುಡಿತಕ್ಕೆ ಕಾಮ್ ರೂಪ ಕೊಟ್ಟಿತು.
ಕೆ.ಶಶಿಧರ ಹೆಮ್ಮಣ್ಣ - ನನ್ನೊಳಗೆ ಹುದುಗಿದ್ದ 'ಪತ್ರಕರ್ತನ ವಿಕಾರ'ಗಳನ್ನು ಕಾಮ್ ಹೊಸಕಿ ಹಾಕಿತು.
ಕೆ.ವಿ.ಸರಸ್ವತಿ - ಕೃಷಿ ಮತ್ತು ಬರವಣಿಗೆ ನನಗೆ ಹೊಸತು, ಆಕಸ್ಮಿಕ. ಸರಕಾರಿ ವೃತ್ತಿಯಲ್ಲಿದ್ದ ನಾನು ನಿವೃತ್ತಳಾದ ಬಳಿಕ ಕೃಷಿಕಳಾದೆ. ಕೃಷಿ ಲೇಖನಗಳನ್ನು ಬರೆಯಬೇಕೆಂಬ ಆಸೆಯಿತ್ತು. ಕೃ.ಮಾ.ಕೇಂದ್ರವು ನನ್ನ ಆಸೆಯನ್ನು ಈಡೇರಿಸಿದೆ.
ಸುರೇಶ ನಿ.ಧಾರವಾಡಕರ - ಮಗುವೊಂದನ್ನು ನೋಡಿಕೊಳ್ಳುವಂತೆ ನೋಡಿಕೊಂಡರು. ಅಂಬೆಗಾಲಿಕ್ಕುವಂತೆ, ನಡೆಯುವಂತೆ ಕಲಿಸಿತು. ಲೇಖನಿ ಕೊಟ್ಟು ಬರೆಸಿತು. ಒಂದು ವರುಷದ ತರಬೇತಿಯಲ್ಲಿ ನಾನಿಷ್ಟು ಪರಿವರ್ತನೆಯಾಗುತ್ತೇನೆಂದು ಭಾವಿಸಿರಲಿಲ್ಲ. ನಾನು ಮತ್ತು ನನ್ನ ಕುಟುಂಬದ ಎಲ್ಲಾ ಸದಸ್ಯರು ಕೃ.ಮಾ.ಕೇಂದ್ರಕ್ಕೆ ಆಭಾರಿ.
ಸರವು ಸದಾನಂದ - ಮೊದಲಿದ್ದ ಬರಹಗಾರ ಈಗ ಜಾಗೃತನಾಗಿದ್ದಾನೆ. ತಪ್ಪನ್ನು ತಿದ್ದಿಕೊಂಡಿದ್ದೇನೆ.
ಸುಬ್ರಾಯ ಮ. ಹೆಗಡೆ - ಪತ್ರಿಕೋದ್ಯಮದ ಅ,ಆ,ಇ.ಈ.. ಕಲಿತುಕೊಂಡೆ.
ಮಧುಮತಿ ದೇ.ಪಾಟೀಲ - ಪತ್ರಕರ್ತೆಯಾಗಬೇಕೆಂಬ ಹಂಬಲವಿತ್ತು. ವಾಟರ್ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಯಶೋಗಾಥೆಗಳನ್ನು ಬರೆಯಬೇಕೆಂಬ ನನ್ನ ಆಸೆ ಈಗ ಈಡೇರಿದೆ.
'ಅಡಿಕೆ ಪತ್ರಿಕೆ' ಬಹುಮಾನ
ಈ ಸಂದರ್ಭದಲ್ಲಿ ಜಿ.ಗಣಪತಿ ಭಟ್, ಲೀಲಾ ನಾ. ಕೌಜಗೇರಿ, ಶಶಿಧರ ಸಕ್ಕರೆಮಕ್ಕಿ, ಪ್ರಕಾಶ್ ಭಟ್ ಕರ್ಕಿ, ಕೆ.ಎಸ್.ಪೂರ್ಣಿಮಾ, ರವಿಶಂಕರ ದೊಡ್ಡಮಾಣಿ - ಇವರಿಗೆ 'ಅಡಿಕೆ ಪತ್ರಿಕೆ' ಬಹುಮಾನ ನೀಡಲಾಯಿತು. ಅಡಿಕೆ ಪತ್ರಿಕೆಯ ಪ್ರಕಾಶಕ ಮಂಚಿ ಶ್ರೀನಿವಾಸ ಆಚಾರ್, ಶ್ರೀ ಪಡ್ರೆ ಬಹುಮಾನ ವಿತರಿಸಿದರು.
'ಕೃಷಿಕ' ಪತ್ರಿಕೆಯ ಪ್ರಕಾಶಕ ಎಂ.ಜೆ.ದಿನೇಶ್ ಅವರಿಂದ ಸ್ವಾಗತ. ಕೃಷಿ ಮಾಧ್ಯಮ ಕೇಂದ್ರದ ಅಧ್ಯಕ್ಷೆ ಅನಿತಾ ಪೈಲೂರು ಅವರಿದ ಪ್ರಾಸ್ತಾವಿಕ ಮಾತು. ಜಿ.ಶಿವಣ್ಣ ವಂದನಾರ್ಪಣೆ. ಕೆ.ಎಸ್.ಪೂರ್ಣಿಮಾ - ನಿರ್ವಹಣೆ.

ಮನದ ಮಾತು:
ಅಡ್ಡೂರು ಕೃಷ್ಣ ರಾವ್ - ಮಾಹಿತಿಗಳು ನನ್ನೊಳಗೆ ಬೆಚ್ಚಗೆ ಕುಳಿತಿರಬಾರದು. ಅದು ಇನ್ನೊಬ್ಬರಿಗೆ ಹಂಚಲ್ಪಡಬೇಕು ಎಂಬ ಉದ್ದೇಶದಿಂದ ಕಾಮ್ ಹಾದಿಯಲ್ಲಿ ಸಾಗಿ ಬಂದಿದ್ದೇನೆ. ನಾನು ನಂಬಿದ್ದನ್ನೇ ನಂಬಿದವರು ಇಲ್ಲಿ ಸಿಗ್ತಾರೆ ಎಂಬ ಉದ್ದೇಶದಿಂದ ಬಂದಿದ್ದೇನೆ. ನನಗೆ ವಯಸ್ಸಾಗ್ತಾ ಇದೆ. ನನಗಿಂತ ಕಿರಿಯರ ಉತ್ಸಾಹ ನೋಡಿ, ನನಗೂ ಉತ್ಸಾಹ ಮೂಡಿಸಿಕೊಳ್ಳುವ ಉದ್ದೇಶದಿಂದ ಬಂದಿದ್ದೇನೆ.
ಪಡಾರು ರಾಮಕೃಷ್ಣ ಶಾಸ್ತ್ರಿ - ಅಡಿಕೆ ಪತ್ರಿಕೆಯು ಕೃಷಿಕರ ಕೈಗೆ ಲೇಖನಿ ನೀಡಿತು. ಅದೇ ದಾರಿಯನ್ನು ವಿಸ್ತರಿಸುತ್ತಿದ್ದಾರೆ ಕಾಮ್ ಮುಖ್ಯಸ್ಥರಾದ ಅನಿತಾ ಪೈಲೂರು ಮತ್ತು ಶಿವರಾಂ ಪೈಲೂರು. ಹಳ್ಳಿ ಮಂದಿಗೆ ಲೇಖನಿ ನೀಡಿ ನಗರವಾಸಿಗಳ ಕಣ್ತೆರೆಸುತ್ತಿದ್ದಾರೆ. ಹೆಚ್.ಎನ್.ಆನಂದ್ : ಓರ್ವ ಯಶಸ್ವೀ ಪುರಷನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎಂಬ ಮಾತು ಜನಜನಿತ. ಆದರೆ ಇಲ್ಲಿ ಓರ್ವ ಮಹಿಳೆಯ (ಅನಿತಾ ಪೈಲೂರು) ಹಿಂದೆ ಪುರುಷನೊಬ್ಬನ (ಶಿವರಾಂ ಪೈಲೂರು) ಪ್ರೋತ್ಸಾಹವಿದ್ದರೆ ಅದು ಆ ಮಹಿಳೆಯ ಯಶಸ್ಸಿಗೆ ಕಾರಣವಾಗುತ್ತದೆ ಎಂಬುದು ಇಲ್ಲಿ ಕಾಣುವ ಸತ್ಯ.
ಕಾಮ್ ಚಟುವಟಿಕೆಗಳಲ್ಲಿ ಎಲ್ಲೂ ಕಾಣಿಸಿಕೊಳ್ಳದೆ, ನೇಪಥ್ಯದಲ್ಲೇ ಕಲಾಪಗಳನ್ನು ಮುನ್ನಡೆಸುತ್ತಿರುವ ಶಿವರಾಂ ದಂಪತಿಗಳನ್ನು ಹೆಚ್.ಎನ್. ಆನಂದ್ ಅವರು ವೇದಿಕೆಯ ಮುಂಭಾಗಕ್ಕೆ ಬಲವಂತದಿಂದ ಆಹ್ವಾನಿಸಿ ಬೆನ್ನುತಟ್ಟಿದ ಆ ಕ್ಷಣದಲ್ಲಿ ಪ್ರೋತ್ಸಾಹದ ಚಪ್ಪಾಳೆ ಬಂದರೂ, ಸಭಾಮಧ್ಯದಲ್ಲಿದ್ದ ಅನಿತಾ ಅವರ ಅಮ್ಮ - ಕರುಳಕುಡಿಯ ಕಾಯಕಕ್ಕೆ ತಲೆದೂಗಿ - ಭಾವುಕರಾದರು. ಅವರಿಗರಿಯದಂತೆ ಒಂದೆರಡು ಕಣ್ಣೀರಹನಿ ಜಾರಿದುದು ಯಾರಿಗೂ ತಿಳಿಯಲೇ ಇಲ್ಲ.
'ಭಾವನೆಗಳಿಗೂ ಭಾಷೆಯಿದೆ' ಎಂಬುದು ಪ್ರತೀ ಕಾಮ್ ಶಿಬಿರಗಳಲ್ಲಿ ಎದ್ದು ಕಾಣುವ ಅಂಶ. ದಿನೇಶ್, ಜಯರಾಂ ದೇವವೃಂದ, ತೀರ್ಥಮಲ್ಲೇಶ್ ಮತ್ತು ಊರಿನ ಸಮಾನ ಮನಸ್ಕರ ನೇಪಥ್ಯ ವ್ಯವಸ್ಥೆಗಳು ಶಿಬಿರ ಯಶಸ್ಸಿನ ಹಿಂದಿನ ಗುಟ್ಟು.

3 comments:

Shree Padre said...

ಹೃದಯಸ್ಪರ್ಶಿಯಾಗಿ ಬರೆದಿದ್ದೀರಿ.
ಅದು ಹೇಗೆ ಒತ್ತಡದ ನಡುವೆಯೂ
ಇದು ಸಾಧ್ಯವಾಗುತ್ತದೆ?

Unknown said...

ಚಿಕ್ಕದಾದರೂ ಚೊಕ್ಕ ಬರಹ. ಎಲ್ಲರ ಭಾವನೆಗಳನ್ನೂ ಅಕ್ಷರರೂಪಕ್ಕೆ ಸಮರ್ಥವಾಗಿ ಇಳಿಸಿದ್ದೀರಿ. ನಮ್ಮ ಮಧ್ಯೆಯೇ ಇದ್ದರೂ ದೂರ ನಿಂತು ನೋಡಿದ, ನೀಡಿದ ನೋಟ ಚೆನ್ನಾಗಿದೆ.
ಅಂದ ಹಾಗೆ ದೇವವೃಂದದಲ್ಲಿ ಐದು ದಿನಗಳು ಹೇಗೆ ಸರಿದುಹೋದವೋ ಗೊತ್ತಾಗಲಿಲ್ಲವಲ್ಲ..!!?
- ಪ್ಯಾಟಿ, ಗುಲ್ಬರ್ಗ

ಮಹೇಶ ಭಟ್ಟ said...

ಕೃಷಿಕರನ್ನು ಒಟ್ಟುಗೂಡಿಸಿ , ಪರಸ್ಪರ ವಿಚಾರ ವಿನಿಮಯ ನಡೆಸುವಂತಹ ಇಂತಹ ಕಾರ್ಯಕ್ರಮಗಳು ತುಂಬಾ ಪ್ರಶಂಸನೀಯ, ಇಂತಹ ಕಾರ್ಯಕ್ರಮಗಳು ನೂರಾರು ನಡೆಯಲಿ ಎಂದು ಹಾರೈಸುತ್ತೇನೆ.

Post a Comment