Thursday, April 14, 2011

ಹಳ್ಳಿ ಮನೆಯಿಂದ ಖರ್ಜೂರ ಮೌಲ್ಯವರ್ಧನೆ

ಟಿವಿಯಲ್ಲಿ ಜಾಹೀರಾತು ಬಂದರೆ ಮಾತ್ರ ಅಂತಹ ವಸ್ತುವಿಗೆ ಗುಣಮಟ್ಟದ ಖಾತ್ರಿ! ರಂಗುರಂಗುನ ಪ್ಯಾಕೇಟನ್ನು ಹರಿದು, ಚಿತ್ರತಾರೆಯರು 'ಆಹಾ' ಎನ್ನುತ್ತಾ ಜಗಿದಾಗ ಚಾಕೊಲೇಟ್ಗೆ ಸ್ವಾದ. ಗುಣಮಟ್ಟ ವೃದ್ಧಿ! ಇದನ್ನು ವೀಕ್ಷಿಸಿದ ಪುಟಾಣಿಗಳಿಂದ ಹೆತ್ತವರಲ್ಲಿ ರಂಪಾಟ. ಹರಸಾಹಸದ ಹುಡುಕಾಟ. ಅದನ್ನು ಬಾಯಿಗೆ ಹಾಕಿ ಜಗಿಯುತ್ತಿದ್ದಾಗ ಮಕ್ಕಳ ಮುಖವೆಷ್ಟು ಅರಳುತ್ತದಲ್ವಾ. ಕಾರಣ ಟಿವಿ ಪ್ರಭಾವ.

ನಮ್ಮ ಬಹುತೇಕ ಮೌಲ್ಯವರ್ಧಿತ ವಸ್ತುಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ ಮಾರುಕಟ್ಟೆ ರೂಪಿತವಾಗುವುದಿಲ್ಲ. ಕಾರಣ 'ಅದು ಟಿವಿಯಲ್ಲಿ ಬರುವುದಿಲ್ಲ'! ಟಿವಿಯಲ್ಲಿ ಬಿತ್ತರವಾದರೆ ಮಾತ್ರ ಅದು ಶ್ರೇಷ್ಠ ಎನ್ನುವ ಕೆಟ್ಟ ಅರಿವನ್ನು ಎಲ್ಲಾ ವಾಹಿನಿಗಳು ಬಿಂಬಿಸುತ್ತವೆ. ಇರಲಿ, ಇಲ್ಲೋಡಿ ಕರಾವಳಿ ಮೂಲೆಯ ಹಳ್ಳಿಯೊಂದರ ಮನೆಯಿಂದ ಖರ್ಜೂರ ಪರಿಮಳ ಬರುತ್ತಿದೆಯಲ್ಲಾ.

ದಕ್ಷಿಣ ಕನ್ನಡ ಜಿಲ್ಲೆಯ ಕೋಡಪದವಿನ ಕೃಷಿಕ ಕಿನಿಲ ಅಶೋಕ್ ಖರ್ಜೂರದಿಂದ ಚಾಕೊಲೇಟ್ ತಯಾರಿಸಿದ್ದಾರೆ. ಕಂಪೆನಿ ಜಾಹೀರಾತಿನ ಚಾಕೊಲೇಟ್ ಭರಾಟೆ ಮಧ್ಯೆ ಈ ಹಳ್ಳಿ ಉತ್ಪನ್ನವನ್ನು ಹುಡುಕಿ ತಿನ್ನುವ ಗ್ರಾಹಕರು ರೂಪಿತವಾಗಿರುವುದು ಇದರ ಗುಣಮಟ್ಟಕ್ಕೆ ಸಾಕ್ಷಿ.

ಈ ಚಾಕೊಲೇಟ್ಗೆ ಉತ್ತಮ ಗುಣಮಟ್ಟದ ಕಪ್ಪು ಖರ್ಜೂರವನ್ನು ಬಳಸಿದ್ದಾರೆ. ಬೀಜ ತೆಗೆದು, ಶುಚಿ ಗೊಳಿಸಿ, ಅದರಲ್ಲಿರುವ ನೀರಿನಾಂಶವನ್ನು 'ಮೈಕ್ರೋ ಓ ಹೀಟಿಂಗ್' ಮೂಲಕ ತೆಗೆದು, ಅದರೊಳಗೆ ಚಾಕೊಲೇಟ್ ತುಂಬಿಸಿ ಪ್ಯಾಕಿಂಗ್! ಇಷ್ಟೆನಾ..! ಅಂತ ಗೋಣು ಅಲ್ಲಾಡಿಸಬೇಡಿ. ಇಷ್ಟನ್ನು ಮಾಡಿ, ಗುಣಮಟ್ಟ ತರಲು ಅವರ ಕಿಸೆಯಿಂದ ಕೆಲವು ಸಾವಿರ ಜಾರಿದೆ!

ಕೈಗಾರಿಕಾ ಉದ್ದೇಶಕ್ಕೆ ಮಾಡುವಂತಹ ಕೋಕೋ ಚಿಪ್ಸ್ ಇದರ ಮೂಲ ಹೂರಣ. ಎರಡು ಚಾಕೊಲೇಟ್ಗೆ ಆರು ರೂಪಾಯಿ. ಹತ್ತು ಚಾಕೊಲೇಟ್ನ ಕರಂಡಕ. ಆಕರ್ಷಕ ನೋಟ. 'ಕಚ್ಚಾವಸ್ತುಗಳಿಗೆ ದರ ಹೆಚ್ಚಿರುವುದರಿಂದ ಇದಕ್ಕಿಂತ ಕಡಿಮೆ ದರ ನಿಗದಿ ಮಾಡುವುದು ಕಷ್ಟ' ಎನ್ನುತ್ತಾರೆ ಅಶೋಕ್. ಆರಂಭದಲ್ಲಿ ಒಂದಷ್ಟು ಮಂದಿ ಸ್ನೇಹಿತರಿಗೆ ಪ್ರಾಯೋಗಿಕ ಚಾಕೊಲೇಟನ್ನು ಹಂಚಿ, ರುಚಿ ಹಿಡಿತವನ್ನು ಸಾಧಿಸಿದ್ದಾರೆ. ಆದ್ದರಿಂದ ಹಳ್ಳಿ ಉತ್ಪನ್ನವನ್ನು ಪ್ರೀತಿಸುವ, ದೇಸಿ ಪ್ರೀತಿಯ ಒಂದಷ್ಟು ಮಂದಿ ತಮ್ಮ ಮನೆ ಸಮಾರಂಭಗಳಿಗೆ ಅಶೋಕರನ್ನು ಸಂಪರ್ಕಿಸುತ್ತಲೇ ಇದ್ದಾರೆ.

ಇವರ ಆರಂಭದ ಉತ್ಪನ್ನ 'ಸುಪಾರಿ.' ಹಣ್ಣಡಿಕೆ ಮತ್ತು ಗೋಟಡಿಕೆ ಹೂರಣ. ಅದರ ಅನುಭವದ ಪರಿಣಾಮವಾಗಿ `ಖರ್ಜೂರ ತಾಂಬೂಲ' ಅಭಿವೃದ್ಧಿ. ಖರ್ಜೂರದ ಒಳಗೆ ಸುಪಾರಿ ಸಹಿತ ವಿವಿಧ ಸಾಂಬಾರಗಳ ಹೂರಣ. ಖರ್ಜೂರದ ಹೊರಮೈಗೆ ಸುತ್ತಿದ ಬೆಳ್ಳಿಕಾಗದವನ್ನು ತೆಗೆದು ಬಾಯೊಳಗಿಟ್ಟು ಜಗಿದರೆ, ಷಡ್ರಸದ ಅನುಭವ. ಕೃತಕ ಪರಿಮಳವಿಲ್ಲ. ರಾಸಾಯನಿಕಗಳಿಲ್ಲ. ತಂಬಾಕು ಯಾ ಮಾದಕ ವಸ್ತುಗಳಿಲ್ಲ. ಸಂಪೂರ್ಣವಾಗಿ ನೈಸರ್ಗಿಕ.

ಮುಖ್ಯ ಕಚ್ಚಾವಸ್ತು ಅಡಿಕೆ. `ಒಂದು ಗುಟ್ಕಾದ ಸ್ಯಾಚೆಟ್ನಲ್ಲಿ ಇರುವಷ್ಟು ಅಡಿಕೆ ಇದರಲ್ಲಿದೆ. ನಾವು ವೀಳ್ಯ ಹಾಕುವಾಗ ಎಷ್ಟು ಪ್ರಮಾಣದಲ್ಲಿ ಅಡಿಕೆ ಜಗಿಯುತ್ತೇವೆಯೋ ಅಷ್ಟೇ ಅಡಿಕೆ, ಕಾಳುಮೆಣಸು, ಲವಂಗ, ಶುಂಠಿ, ದಾಲ್ಚಿನ್ನಿ, ಜಾಯಿಕಾಯಿ, ಚೆಂಡುಹುಳಿ, ಪುದಿನಾ, ಸೋಂಪು, ಮೆಂಥಾಲ್, ಪಚ್ಚೆಕರ್ಪೂರ, ಉಪ್ಪು, ತುಪ್ಪ, ಏಲಕ್ಕಿ - ಇವುಗಳ ಮಿಶ್ರಣ.

ಇದೊಂದು `ಮಿನಿ ಉದ್ಯಮ'. ಮದುವೆ, ಉಪನಯನ ಅಲ್ಲದೆ, ಇತರ ಸಮಾರಂಭಗಳಲ್ಲಿ ಈ ತಾಂಬೂಲ ಬಳಸಲು ಅನುಕೂಲ. ಮಕ್ಕಳಿಗಂತೂ ಬಹಳ ಇಷ್ಟ. ಇದನ್ನು `ಪ್ರಿಯಾ ಹೋಂ ಪ್ರಾಡಕ್ಟ್' ಹೆಸರಿನಡಿ ಅಶೋಕರು ಪರಿಚಯಿಸುತ್ತಾರೆ. ಈಗ ಖರ್ಜೂರದ ಇನ್ನೊಂದು ಅವತಾರ - ಚಾಕೊಲೇಟ್.

ಆರಂಭದಲ್ಲಿ ಮನೆ ಉಪಯೋಗಕ್ಕಾಗಿ ಹಣ್ಣಡಿಕೆಯಿಂದ ಮತ್ತು ಗೋಟಡಿಕೆಯಿಂದ ಎರಡೆರಡು ಬಗೆಯ ಸುಪಾರಿಯನ್ನು ತಯಾರಿಸಿದ್ದರು. ಚಿಪ್ಸ್ಗಾತ್ರ, ಜಗಿಯಲು ಸಿಗುವಂತಹ ಗಾತ್ರ, ಅಡಕೆ ಹುಡಿ, ಮತ್ತು ಸಿಹಿ ರಹಿತವಾದ ನಾಲ್ಕು ತರಹದ ಸುಪಾರಿ. 'ಕೃಷಿ ಕೆಲಸದೊಂದಿಗೆ ನಾನೊಬ್ಬನೇ ನಿಗಾ ವಹಿಸಬೇಕಾದುದರಿಂದ ಕೆಲಸ ಹೊರೆ ಹೆಚ್ಚಾಗುತ್ತದೆ. ಹಾಗಾಗಿ ಖರ್ಜೂರದ ಬಳಕೆ ಶುರುಮಾಡಿದ್ದರಿಂದಾಗಿ ಈ ಎಲ್ಲಾ ಸುಪಾರಿ ತಯಾರಿಯನ್ನು ಕೈಬಿಟ್ಟಿದ್ದೇನೆ' ಎನ್ನುತ್ತಾರೆ ಅಶೋಕ್.

ಮನೆ ಸುಪಾರಿ ಮೆಲ್ಲುವ ಹವ್ಯಾಸ ಅಭ್ಯಾಸವಾಗಿ ಬೆಳೆದರೆ, ಕಂಪೆನಿ ಸ್ಯಾಚೆಟ್ಗೆ ವಿದಾಯ ಹೇಳಬಹುದು. ಒಂದಷ್ಟು ಹೆಚ್ಚು ದಿವಸ ಆರೋಗ್ಯವನ್ನು ಕಾಪಾಡಬಹುದು. ಇದರಲ್ಲಿ ಉಗುಳುವಂತಹುದು ಇಲ್ಲ, ಎಲ್ಲವೂ ನುಂಗಬಹುದಾದ ಕಚ್ಚಾವಸ್ತುಗಳು. ಮಾದಕತೆ ನೀಡುವ ರಾಸಾಯನಿಕ ಮಿಶ್ರಿತ ಸುಪಾರಿಯಂತೆ ಈ ಮನೆತಯಾರಿ ಸುಪಾರಿಯಲ್ಲಿ ರಾಸಾಯನಿಕ ಇಲ್ಲದಿದ್ದರೂ, ಅಡಕೆಯೇ ಆ ಕೆಲಸ ಮಾಡುತ್ತದೆ..... ಹೀಗೆ ತಮ್ಮ ಅನುಭವವನ್ನು ಅಶೋಕರು ಮುಂದಿಡುತ್ತಾರೆ.

ಈ ಎಲ್ಲಾ ಉತ್ಪನ್ನಗಳಿಗೆ ಇವರ ಮನೆಯೇ ಪ್ಯಾಕ್ಟರಿ. ಮನೆ ಸದಸ್ಯರೇ ಕಾರ್ಮಿಕರು. ಬೇಡಿಕೆಯಷ್ಟೇ ತಯಾರಿ. ಹಾಗೆಂತ ಹೆಚ್ಚು ಬೇಡಿಕೆ ಬಂದರೂ ಪೂರೈಸಲು ತ್ರಾಸ. ಅಶೋಕರು ತಮ್ಮ ಮಿತಿಯಲ್ಲಿ ಈ ಉತ್ಪನ್ನಗಳನ್ನು ಪೂರೈಸುತ್ತಾರೆ. (ಸಂಚಾರಿವಾಣಿ: 9448859053, 9900349035)

0 comments:

Post a Comment