Friday, April 29, 2011

'ಬಯೋಪಾಟ್' ಮಾಹಿತಿ-ಸಂವಾದ

ಬೆಂಗಳೂರಿನ ಕ್ರಾಪ್ಕೇರ್ ಸಂಸ್ಥೆಯು ಅಡಿಕೆಯ ಕೊಳೆರೋಗಕ್ಕೆ ಪರಿಣಾಮಕಾರಿ 'ಬಯೋಪಾಟ್' ಎಂಬ ಸಿಂಪಡಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ಕುರಿತು ಅಡಿಕೆ ಕೃಷಿಕರಿಗೆ ಮಾಹಿತಿಯನ್ನು ತಿಳಿಸುವ ಸಮಾರಂಭವು ಪುತ್ತೂರಿನ ಜಿ.ಎಲ್.ರೋಟರಿ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಫಾರ್ಮರ್ ಫಸ್ಟ್ ಟ್ರಸ್ಟ್ನ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ವಹಿಸಿ ಮಾತನಾಡುತ್ತಾ, 'ಅಡಿಕೆ ಕೃಷಿಕ ಇಂದು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿದ್ದಾನೆ. ಅಡಿಕೆ ಕೃಷಿಯನ್ನು ಉಳಿಸುವುದೇ ಒಂದು ಸವಾಲಿನ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರೈತಪರ ಕಂಪೆನಿಗಳ ಸ್ಪಂದನ ಕೃಷಿ ರಂಗಕ್ಕೆ ಬೇಕಾಗಿದೆ' ಎಂದರು.

ಕ್ರಾಪ್ಕೇರ್ ಸಂಸ್ಥೆಯ ವಿಜ್ಞಾನಿಗಳಾದ ಡಾ.ಚಂದ್ರಶೇಖರ್ ಮತ್ತು ಪ್ರಕಾಶ್ ತಮ್ಮ ಬಯೋಪಾಟ್ ಉತ್ಪನ್ನದ ಕುರಿತು ವೈಜ್ಙಾನಿಕ ಮಾಹಿತಿ ನೀಡಿದರು. ಉತ್ಪನ್ನದ ಗುಣಮಟ್ಟ, ಪ್ರಯೋಗ, ಫಲಿತಾಂಶ ಕುರಿತು ಆಸಕ್ತ ಕೃಷಿಕರ ಸಂಶಯಗಳನ್ನು ಪರಿಹರಿಸಿದರು. ಕೃಷಿಕರಾದ ಪವನ ವೆಂಕಟ್ರಮಣ ಭಟ್, ಕೃಷ್ಣರಾಜ್ ಗಿಳಿಯಾಳ್, ಶ್ರೀ ಪಡ್ರೆ, ಪಡಾರು ರಾಮಕೃಷ್ಣ ಶಾಸ್ತ್ರಿ, ಡಾ.ಸುರೇಶ್ಕುಮಾರ್ ಕೂಡೂರು, ಸೇಡಿಯಾಪು ತ್ರಿವಿಕ್ರಮ ಭಟ್, ದರ್ಭೆ ವಿಜಯಕೃಷ್ಣ, ಬನಾರಿ ಈಶ್ವರ ಪ್ರಸಾದ್, ಎ.ಪಿ.ಸುಬ್ರಹ್ಮಣ್ಯಂ, ಎಡಂಬಳೆ ಸತ್ಯನಾರಾಯಣ, ಪೆಲತ್ತಡ್ಕ ಶಿವಸುಬ್ರಹ್ಮಣ್ಯ.. ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡರು.

ಸಮಾರಂಭದ ಸ್ಥಳದಲ್ಲಿ ರಿಯಾಯಿತಿ ದರದಲ್ಲಿ 'ಬಯೋಪಾಟ್' ಮಾರಾಟ ವ್ಯವಸ್ಥೆಯನ್ನು ಸಾಕಷ್ಟು ಕೃಷಿಕರು ಸದುಪಯೋಗಪಡಿಸಿಕೊಂಡರು. ಸಮೃದ್ಧಿಯ ನೇತೃತ್ವದಲ್ಲಿ ಜರುಗಿದ ಮಾರಾಟ ಪ್ರಕ್ರಿಯೆಯಲ್ಲಿ ಏನಿಲ್ಲವೆಂದರೂ ಮೂರು ಲಕ್ಷ ರೂಪಾಯಿಯ ಬಯೋಪಾಟ್ ಮಾರಾಟವಾಯಿತು. ಸರತಿಯ ಸಾಲಿನಲ್ಲಿ ನಿಂತು ಬಯೋಪಾಟ್ ಖರೀದಿಸುವ ದೃಶ್ಯ ಕೃಷಿರಂಗದ ನಿಜ ಸಮಸ್ಯೆಗೆ ಕನ್ನಡಿ.

ಈಗಾಗಲೇ ಮಾರುಕಟ್ಟೆಯಲ್ಲಿರುವ ಬಯೋಫೈಟ್, ಫೈಲೋಫಾಸ್, ಬಯೋಪಾಟ್.. ಉತ್ಪನ್ನಗಳನ್ನು ಸಿ.ಪಿ.ಸಿ.ಆರ್.ಐ ಮತ್ತು ವಾರಣಾಶಿ ಸಂಶೋಧನಾ ಕೇಂದ್ರದಲ್ಲಿ ಸಮೃದ್ಧಿ ವತಿಯಿಂದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸುವುದೆಂದು ನಿರ್ಣಯಿಸಲಾಯಿತು. `ಇದರಿಂದಾಗಿ ಉತ್ಪನ್ನದ ಗುಣಮಟ್ಟ ಮತ್ತು ಒಳಸುರಿಗಳ ಸ್ಪಷ್ಟ ಚಿತ್ರಣ ಚಿಕ್ಕಿ ಗೊಂದಲಗಳು ಪರಿಹಾರವಾಗಲಿವೆ' ಎಂದು ಸಮೃದ್ಧಿಯ ಕಾರ್ಯದರ್ಶಿ ರಾಂ ಕಿಶೋರ್ ಹೇಳಿದರು.

ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಮತ್ತು ಗಿಡಗೆಳತನ ಸಂಘ 'ಸಮೃದ್ಧಿ'ಯು ಸಮಾರಂಭವನ್ನು ಸಂಘಟಿಸಿತ್ತು. ಹಿರಿಯ ಕೃಷಿಕ ವಿ.ಮ.ಭಟ್ ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಮಾರಂಭವನ್ನು ಪತ್ರಕರ್ತ ನಾ. ಕಾರಂತ ಪೆರಾಜೆ ನಿರ್ವಹಿಸಿದರು. ಸಮೃದ್ಧಿಯ ಕಾರ್ಯದರ್ಶಿ ಮಂಚಿ ರಾಂ ಕಿಶೋರ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಮೃದ್ಧಿಯ ಅಧ್ಯಕ್ಷ ಪೆರುವಾಜೆ ಈಶ್ವರ ಭಟ್ ವಂದಿಸಿದರು.

ಮುಂದಿನ ತಿಂಗಳು ಉಪ್ಪಿನಂಗಡಿಯಲ್ಲಿ ಕೃಷಿಕ ಪೆಲಪ್ಪಾರು ವೆಂಕಟ್ರಮಣ ಭಟ್ ಇವರ ಸಾರಥ್ಯದಲ್ಲಿ ಬಯೋಪಾಟ್ ಮಾಹಿತಿ-ಸಂವಾದ ಸಮಾರಂಭ ನಡೆಯಲಿದೆ.

0 comments:

Post a Comment