Thursday, April 21, 2011

ಅನನ್ಯ ಅನುಭವದ ಪುತ್ತೂರು ಜಾತ್ರೆ

ಮೊನ್ನೆ ಶನಿವಾರ (ಎ.೧೦)ಶಾಲಾ ಫಲಿತಾಂಶ ಪ್ರಕಟವಾಗುವ ದಿನ. ಐದಾರು ವಿದ್ಯಾರ್ಥಿಗಳು ಮಾರ್ಗವನ್ನಾಕ್ರಮಿಸಿ ತಮ್ಮಷ್ಟಕ್ಕೇ ಸಾಗುತ್ತಿದ್ದರು. ವಯೋಸಹಜವಾದ ಲವಲವಿಕೆ ಕಾಣಲಿಲ್ಲ.

'ಎಂತಾಗುತ್ತೋ ಮಾರಾಯ, ಪಾಸಾಗಬಹುದು. ತೊಂಭತ್ತೈದು ಪರ್ಸೆಂಟ್ ಸಿಗೊತ್ತೊ ಇಲ್ವೋ' ಎಂದು ಒಬ್ಬ ಆತಂಕದಲ್ಲಿದ್ದರೆ, 'ನಿನ್ನದು ಎಂತ ಪರ್ಸೆಂಟ್ ಮಾರಾಯ, ನಾನು ಪಾಸಾಗ್ತೇನೋ ಇಲ್ವಾ. ಪಾಸಾದರೆ ಮಹಾಲಿಂಗೇಶ್ವರನಿಗೆ ಐದು ರೂಪಾಯಿ ಕಾಣಿಕೆ ಹಾಕ್ತೇನೆ' ಎಂದ. 'ಜಾತ್ರೆ ಖರ್ಚಿಗೆ ಅಂತ ಅಜ್ಜಿ ಕೊಟ್ಟ ಹತ್ತು ರೂಪಾಯಿ ಇದೆ. ಅದರಲ್ಲಿ ಐದು ರೂಪಾಯಿ ಕಾಣಿಕೆ. ಮಿಕ್ಕ ಐದು ರೂಪಾಯಿಯಲ್ಲಿ ನಾವು ಐಸ್ಕ್ಯಾಂಡಿ ತಿನ್ನೋಣ' ಅಂತ ಸಂತೋಷವನ್ನು ಭರಿಸಿಕೊಂಡ.

ವಾರದ ಹಿಂದೆ ಪೇಟೆ ಮಧ್ಯ ಇಬ್ಬರಲ್ಲಿ ಜಟಾಪಟಿ. ಬಹುಶಃ ವ್ಯವಹಾರದ ವಿಚಾರವಿರಬಹುದೇನೋ? ಒಂದಷ್ಟು ಮಂದಿ ಗುಂಪು ಸೇರಿದ್ದರು. ಯಾರೂ ಜಗಳವನ್ನು ಶಮನ ಮಾಡುವತ್ತ ಪ್ರಯತ್ನಿಸಿರಲಿಲ್ಲ. ಅಪಘಾತವಾದಾಗಲೂ ಹೀಗೆನೇ. ಸುತ್ತಲೂ ಗುಂಪು ಸೇರಿ ಗುಸುಗುಸು ಮಾತಾಡ್ತಾರೆ ವಿನಾ ಗಾಯಾಳುವಿನ ಆರೈಕೆ ಬಿಡಿ, ಅನುಕಂಪದ ಮಾತೂ ಇರುವುದಿಲ್ಲ! ಸರಿ, ಕೊನೆಗೆ ಆರಕ್ಷಕರು ಬಂದರು. ಜಗಳ ಬಿಡಿಸಿದರು. 'ಮಹಾಲಿಂಗೇಶ್ವರ ನೋಡಿದ ಹಾಗಿರಲಿ' ಎಂಬಲ್ಲಿಗೆ ಜಗಳಕ್ಕೆ ಕೊನೆ. 'ಭೀಭತ್ಸ ಮೋರೆ’ಯಿಂದ ಇಬ್ಬರೂ ನಿರ್ಗಮಿಸುತ್ತಿದ್ದಂತೆ ಜನ ಚದುರಿದರು.
ಕೆಲವೊಂದು ಸಂದರ್ಭದಲ್ಲಿ ದೇವರ ಬಗ್ಗೆ ಇರುವ ನಂಬುಗೆಯ ಕೆಲವು ಮಾದರಿಗಳು ಅಷ್ಟೇ. ಮೇಲಿನ ಘಟನೆಯಲ್ಲಿ ದೇವರಂತಿರುವ ಮಕ್ಕಳ ಮನಸ್ಸು ಎಷ್ಟು ಮೃದುವಾಗಿದೆ. ಅಲ್ಲಿ ಕಾಪಠ್ಯವಿಲ್ಲ. ಆದರೆ ದುಗುಡವಿದೆ. ಒತ್ತಡವಿದೆ. ಒತ್ತಡದ ಶಮನಕ್ಕೆ ಮಹಾಲಿಂಗೇಶ್ವರನಿಗೆ ಐದು ರೂಪಾಯಿ ಕಾಣಿಕೆ. ಎರಡನೇ ಘಟನೆಯಲ್ಲಿ ಅಹಂಕಾರವಿದೆ. ಮಾತ್ಸರ್ಯವಿದೆ. ದುರುದ್ದೇಶವಿದೆ. ಮಹಾಲಿಂಗೇಶ್ವರನಿಗೆ ಇಬ್ಬರೂ ಪ್ರಿಯ ಭಕ್ತರೇ. ಸುಧನ್ವ ಕಾಳಗದಲ್ಲಿ ಕೃಷ್ಣನಿಗೆ ಉಂಟಾದ ಸಂಕಟದ ಹಾಗೆ.

ಸುಪ್ತಾವಸ್ಥೆಯಲ್ಲಿದ್ದ 'ಭಕ್ತಿ' ಸಾಕಾರವಾಗುವ ಬಗೆ ಹಲವು. ಶ್ರೀ ಮಹಾಲಿಂಗೇಶ್ವರನ ಜಾತ್ರೆಯಲ್ಲಿ ಇಂತಹ ಹಲವು ಭಕ್ತಿ ಪ್ರಕಟೀಕರಣವಾಗುತ್ತದೆ. ಪುತ್ತೂರು ನಗರದ ಮುಖ್ಯ ರಸ್ತೆಗಳಲ್ಲಿ ದೇವರ ಸವಾರಿ ಜಾತ್ರೆಯ ವಿಶೇಷ. ಹತ್ತನೇ ತಾರೀಕಿನಿಂದ ಹದಿನೈದರ ತನಕ. ಕೊನೆಯ ಅವಭೃತದಂದು ದೀರ್ಘ ಸವಾರಿ. ವೀರಮಂಗಲದ ತನಕ.

ವರ್ಷವಿಡೀ 'ಬ್ಯುಸಿ'ಯಾಗಿರುವವರು ಜಾತ್ರೆ ಸಮಯದಲ್ಲಿ ನಿರುಮ್ಮಳವಾಗುತ್ತಾರೆ. ಸಂಜೆ ದೇವರ ಉತ್ಸವ ಆರಂಭವಾಗುವಾಗ ದೇವಳದಲ್ಲಿರುತ್ತಾರೆ. ಪೇಟೆ ಸವಾರಿ ಮುಗಿದು, ರಾತ್ರಿಯ ಪೂಜೆಯಾಗಿ ಪ್ರಸಾದ ಸ್ವೀಕರಿಸಿದ ಬಳಿಕವೇ ಮನೆಗೆ ತೆರಳುತ್ತಾರೆ. ಇದು ಒಂದು ದಿನದ ಪ್ರಕ್ರಿಯೆಯಲ್ಲ. ಧ್ವಜಾರೋಹಣದಿಂದ ಧ್ವಜಾವರೋಹಣದ ತನಕ ನಿರಂತರ.

ಸವಾರಿಯ ಹೊತ್ತಿಗೆ ಬರಿಗಾಲಲ್ಲಿರುತ್ತಾರೆ. ಪ್ಯಾಂಟ್ ಧರಿಸುವುದಿಲ್ಲ. ಶುಭ್ರ ಪಂಚೆ, ಹೆಗಲಲ್ಲಿ ಶಾಲು. ಶುದ್ಧ ಸಾಂಪ್ರದಾಯಿಕ ಉಡುಪು. ದೇವರು ಹೋಗುವ ಮಾರ್ಗದ ಉದ್ದಕ್ಕೂ ಬೇರೆ ಬೇರೆ ಸ್ವರೂಪದಲ್ಲಿ ಇವರ ಸೇವೆ ಸಲ್ಲುತ್ತಾ ಇರುತ್ತದೆ. ಇದರಲ್ಲಿ ಯಾರದ್ದೇ ಒತ್ತಡವಿಲ್ಲ. ಕೋರಿಕೆಯಿಲ್ಲ. ಈ ರೀತಿಯ ಸೇವೆಯ ಹಿಂದಿದೆ, ಶರಣಾಗತಿಯ ಸಂದೇಶ. 'ದೇವರ ಮುಂದೆ ಶರಣಾಗದಿದ್ದರೆ ಆತ ನಮ್ಮನ್ನು ಭಕ್ತ ಎಂದು ಹೇಗೆ ಒಪ್ಪಿಕೊಂಡಾನು?' ಹಾಗಾಗಿ ಇಲ್ಲಿ ಶರಣಾಗತಿ ಹೆಚ್ಚು ಮಹತ್ ಪಡೆಯುತ್ತದೆ.
ಇನ್ನೂ ಒಂದಷ್ಟು ಮಂದಿ ದೇವರ ಉತ್ಸವದಲ್ಲಿರುತ್ತಾರೆ. ಮನಸ್ಸಿನಲ್ಲಿ ಭಗವಂತನ ಸ್ಮರಣೆ ಮಾಡುತ್ತಾ ಇರುತ್ತಾರೆ. ಯಾವುದೇ ತಮಾಶೆಗಳಿಲ್ಲ, ಮಾತುಕತೆಯಿಲ್ಲ. ಮೊಬೈಲಂತೂ ದೂರದ ಮಾತು. ತಮ್ಮಷ್ಟಕ್ಕೆ ಸವಾರಿಯುದ್ದಕ್ಕೂ ಸಂಚರಿಸುತ್ತಾರೆ. 'ನಾಳೆ ನಾನು ಬರುವುದು ಕಷ್ಟ. ನಾಡಿದ್ದು ಡ್ಯೂಟಿಗೆ ಹೋಗ್ಬೇಕಲ್ಲಾ' ಅಂತ ಕಷ್ಟ ತೋಡಿಕೊಳ್ಳುತ್ತಾರೆ. ಆದರೆ ನಾಳೆ ಉತ್ಸವ ಶುರುವಾಗುಷ್ಟರಲ್ಲಿ ಅವರು ಹಾಜರ್!

ಅವಭೃತದ ದಿವಸ. ಸಂಜೆ ದೇವಳದಲ್ಲಿ ದೇವರ ಉತ್ಸವ ಹೊರಟರೆ, ವೀರಮಂಗಲದಲ್ಲಿ ಅವಭೃತವಾಗಿ ಮರಳಿ ದೇವಳ ಸೇರುವಾಗ ಮರುದಿನ ಒಂಭತ್ತು ಗಂಟೆ ಮೀರುತ್ತದೆ. ಹೀಗೆ ದೇವರ ಉತ್ಸವದೊಂದಿಗೆ ವೀರಮಂಗಲಕ್ಕೆ 'ಹೋಗಿ-ಬರುವ' ಭಕ್ತರು ಸಾಕಷ್ಟು ಮಂದಿ ಇದ್ದಾರೆ. ಹೋಗುವಾಗ ಅಲ್ಲಲ್ಲಿ ವೈಭವದ ಕಟ್ಟೆಪೂಜೆಗಳು, ಪಾನೀಯಗಳು, ಯಕ್ಷಗಾನಗಳು.. ಹೀಗೆ ಸಾಕಷ್ಟು ಸಂಭ್ರಮ.

'ದೇವಳದಿಂದ ಹೋಗಿ ಬರಲು ಏನಿಲ್ಲವೆಂದರೂ 25-30 ಕಿಲೋಮೀಟರ್ ದೂರವಿದೆ. ಇಷ್ಟು ದೂರ ಸಾಗಿದರೂ ಯಾವುದೇ ಆಯಾಸ ಗೊತ್ತಾಗುವುದೇ ಇಲ್ಲ. ಖಂಡಿತಾ ಇದು ದೇವರ ಮಹಿಮೆಯಲ್ಲದೆ ಇನ್ನೇನು. ಇದು ನನ್ನ ಇಪ್ಪತ್ತೆಂಟು ವರುಷಗಳ ಅನುಭವ' ಎನ್ನುತ್ತಾರೆ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್.

ವೀರಮಂಗಲದಿಂದ ದೇವರು ಪುನಃ ದೇಗುಲಕ್ಕೆ ಬರುವಾಗಲೂ ಭಕ್ತ ಸಂದೋಹ. ಭಗವನ್ನಾಮ ಸಂಕೀರ್ತನೆಯೊಂದಿಗೆ ಬೀಸುಹೆಜ್ಜೆಯಲ್ಲಿ ಬರುವ ಸಂಭ್ರಮವನ್ನು ಎಣಿಸಿದರೆ ರೋಮಾಂಚನವಾಗುತ್ತದೆ. ದೇವರು ದೇವಳ ಪ್ರವೇಶಿಸಿ, ಧ್ವಜಾವರೋಹಣವಾಗಿ ಪ್ರಸಾದ ಸ್ವೀಕರಿಸಿ ಮರಳುವಾಗ 'ಇಷ್ಟು ಬೇಗ ಜಾತ್ರೆ ಮುಗಿಯಿತಾ' ಅಂತ ಮನಸ್ಸು ಭಾರವಾಗುತ್ತದೆ.

ಬದುಕಿನಲ್ಲಿ ಒಮ್ಮೆ ವೈಭವ. ಮತ್ತೊಮ್ಮೆ ವಿಷಾದ. ಮಹಾಲಿಂಗೇಶ್ವರನ ಅವಭೃತದಲ್ಲೂ ಇದು ಗೋಚರ. ಸಂಜೆ ದೇವರು ಸಂಚರಿಸುವ ಉದ್ದಕ್ಕೂ ಝಗಮಗಿಸುವ ಲೈಟ್ಗಳು, ಜನರ ಉಲ್ಲಾಸಗಳು, ಕಲಾ ಸಂಬಂಧಿ ಚಟುವಟಿಕೆಗಳು, ಪೂಜೆ-ಭಜನೆಗಳು. ಮರುದಿನ ಮರಳುವಾಗ ಹಿಂದಿನ ರಾತ್ರಿಯ ವೈಭವ ನೆನಪಾಗಿ ಉಳಿಯುತ್ತದಷ್ಟೇ. ಅದೇ ದಾರಿ, ಅದೇ ಪರಿಸರ. ಅದೇ ಜನ. ರಾತ್ರಿ ಕಳೆದು ಹಗಲಾಗಿದೆ ಅಷ್ಟೇ. 'ಗುರುತು ಸಿಗದ ಬದಲಾವಣೆ'! ಮಹಾಲಿಂಗೇಶ್ವರನು ನಾವು ಅಥರ್ೈಸುವ 'ಬದಲಾವಣೆ'ಯನ್ನು ಸ್ವೀಕರಿಸಲಾರ. ಆತ ಸ್ಥಿತಪ್ರಜ್ಞ. ತ್ರಿಕಾಲ ಜ್ಞಾನಿ. ಭಕ್ತರ ಮನಸ್ಸನ್ನು ಆವರಿಸುವ ದೇವ. ಹಾಗಾಗಿ 'ಬದಲಾವಣೆ' ಎಂದು ಸ್ವೀಕರಿಸುವ ಸ್ಥಿತಿ ಇದೆಯಲ್ಲಾ, ಅದಕ್ಕೆ ಮಾನದಂಡ ಅನುಭವ.

'ಅನುಭವ' ಎಂಬುದು ಅನುಭವಕ್ಕೆ ಬಾರದೆ ಇದ್ದರೆ ಅರ್ಥಶೂನ್ಯ. ದೇವರ ಅಸ್ತಿತ್ವವನ್ನು 'ಒಪ್ಪದೆ' ಇಂತಹ ಅನುಭವ ಸಿಗದು. ಅನುಭವಿಸುವ ಮನಸ್ಸಿದ್ದವನಿಗೆ, ಬದುಕಿನಲ್ಲೂ 'ಸುಭಗತನ'ವಿದೆ ಎಂದು ಒಪ್ಪಿಕೊಳ್ಳವ ಜಾಯಮಾನ ನಮ್ಮದಾಗಿದ್ದರೆ ಮಹಾಲಿಂಗೇಶ್ವರನ ಉತ್ಸವ ಆಪ್ತವಾಗುತ್ತದೆ, ಪ್ರಿಯವಾಗುತ್ತದೆ. ಮನಸ್ಸನ್ನು ಪುನಃ ಪುನಃ ಕಾಡುತ್ತದೆ.

ಒಟ್ಟಿನಲ್ಲಿ 'ಒಪ್ಪಬೇಕು'! 'ಒಪ್ಪುವಿಕೆ ಎಂಬುದು ಬದುಕಿನ ಯಶಸ್ಸಿನ ಸೂತ್ರ' ಎಂಬ ಹಿರಿಯರ ಮಾತು ಪುಸ್ತಕದಲ್ಲೇ ಉಳಿದಿರುವುದು ಕಾಲದ ದುರಂತ. ಇಂತಹ 'ಅನುಭವ'ಗಳನ್ನು ಆಧುನಿಕ ಭರಾಟೆಯ 'ಅಭಿವೃದ್ಧಿ ಎಂಬ ಸರಕುಗಳಾದ ಕಂಪ್ಯೂಟರ್ಗಳು, ಜಾಲತಾಣಗಳು, ಮೊಬೈಲ್ಗಳು, ವಾಹಿನಿಗಳು ಕಸಿದುಕೊಂಡಿವೆ.

1 comments:

ಮನಸಿನಮನೆಯವನು said...

...

Post a Comment