Sunday, September 30, 2012

'ಶಂಕರ್ ಸಾರಡ್ಕ'ರೀಗ ಮುಖ್ಯ ಗುರು

                 1990. ಅಡಿಕೆ ಪತ್ರಿಕೆಗೆ ಎಂಟ್ರಿ ನೀಡಿದ ಸಮಯ. ಪತ್ರಿಕೋದ್ಯಮದ ಸುಳಿವಿಲ್ಲದ ಬದುಕು. ಜನತಾವಾಣಿ ಅಂಕಣಕ್ಕೆ ಚಿಕ್ಕ ಬರೆಹಗಳನ್ನು ಬರೆಯುವುದು, ಪ್ರಕಟಣಾ ನಂತರ ಸ್ನೇಹಿತರಿಗೆ ತೋರಿಸುವುದು, ಕಟ್ಟಿಂಗ್ ತೆಗೆದಿಡುವುದು.. ಇಂತಹ ಹವ್ಯಾಸಗಳು ಹೆಜ್ಜೆಯೂರುತ್ತಿದ್ದುವಷ್ಟೇ.

                  ಆ ಹೊತ್ತಲ್ಲಿ ಅಡಿಕೆ ಪತ್ರಿಕೆಯ ವತಿಯಿಂದ ಕೊಪ್ಪದಲ್ಲಿ ಕೃಷಿ ಪತ್ರಿಕೋದ್ಯಮ ಶಿಬಿರ. ನಾನೂ ಭಾಗಿ. ಈಶ್ವರ ದೈತೋಟ, ಶ್ರೀ ಪಡ್ರೆ, ಶಂಪಾ ದೈತೋಟ, ಶಂಕರ್ ಸಾರಡ್ಕ, ಡಾ.ಶಿವರಾಂ ಪೈಲೂರು.. ಹೀಗೆ ದಿಗ್ಗಜರ 'ಗುರು'ದಂಡು. ಫೋಟೋಗ್ರಫಿ ಸೆಶನಿಗೆ ಸಾರಡ್ಕರ ಸಾರಥ್ಯ. ಕ್ಯಾಮರಾ ಹಿಡಿಯುವಲ್ಲಿಂದ ಫೋಟೋ ಡೆವಲಪ್ ಮಾಡುವಲ್ಲಿಯ ತನಕದ ವಿವಿಧ ಹಂತದ ನಿರೂಪಣೆ. ಫೋಟೋಗ್ರಫಿಯಲ್ಲಿ 'ಹೀಗೂ ಉಂಟೇ' ಎನ್ನುವ ಅರಿವಾಗಿತ್ತು. ಅಷ್ಟರಲ್ಲಿ ನನ್ನೊಳಗೆ ಸಾರಡ್ಕರು ಆವರಿಸಿದ್ದರು.

                  ಮುಂದಿನ ದಿನಗಳಲ್ಲಿ ಅಡಿಕೆ ಪತ್ರಿಕೆಯು 'ಫಾರ್ಮರ್ ಫಸ್ಟ್ ಟ್ರಸ್ಟ್' ಒಡೆತನಕ್ಕೆ ಬಂದಾಗ ಸಾರಡ್ಕರು ಟ್ರಸ್ಟಿನ ಕಾರ್ಯದರ್ಶಿಯಾದರು. ಅಲ್ಲಿಂದ ನಮ್ಮ ಒಡನಾಟ ಹತ್ತಿರವಾಯಿತು. ಮಾತಿಗೆ ಸಿಕ್ಕಾಗಲೆಲ್ಲಾ ಪತ್ರಿಕೋದ್ಯಮ, ಲೇಖನ, ಪತ್ರಿಕಾ ಕಚೇರಿಗಳ ಸುತ್ತ ಮಾತುಕತೆ. 'ಯಾವ ಲೇಖನ ಬರೆದ್ರಿ' ಎನ್ನುತ್ತಾ ಮಾತಿಗೆಳೆಯುತ್ತಿದ್ದರು.

                  ಕಚೇರಿ ಕೆಲಸಗಳ ಕುರಿತು ಸಾರಡ್ಕರ ಮೆಚ್ಚುಗೆಯನ್ನು ನಾನು ಉಲ್ಲೇಖಿಸಲೇ ಬೇಕು. ಕಚೇರಿಯ ಕೆಲಸ ಕಾರ್ಯಗಳ ಸ್ಪಷ್ಟ ಅರಿವಿದ್ದ ಅವರಿಗೆ ಯಾವ್ಯಾವ ವಿಭಾಗದಲ್ಲಿ ಎಷ್ಟೆಷ್ಟು ಹೊರೆ ಎಂಬುದು ಗೊತ್ತಿತ್ತು. ಎಷ್ಟೋ ಸಲ ಬೆನ್ನುತಟ್ಟಿದ್ದರು. ನನ್ನ ಲೇಖನಗಳು ಪ್ರಕಟಗೊಂಡಾಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. 'ಹಾಗಲ್ಲ, ಹೀಗೆ' ಎಂದು ತಿದ್ದಿದುಂಟು. ವೈಯಕ್ತಿಕ ಬೆಳವಣಿಗೆಗೆ ಪ್ರಾಂಜಲ ಮನಸ್ಸಿನಿಂದ ಹಾರೈಸಿದ ಗುರು ಸಮಾನ ಶಂಕರ ಸಾರಡ್ಕರು ತಮ್ಮ ವೃತ್ತಿಯಲ್ಲಿ ದೊಡ್ಡ ಹೆಜ್ಜೆಯಿರಿಸಿ ಈಗ 'ಮುಖ್ಯ ಗುರು'ವಿನ ಪಟ್ಟ ಅಲಂಕರಿಸಿರುವುದು ಹೆಮ್ಮೆಯ ವಿಚಾರ.

                 ಕಾಸರಗೋಡು ಜಿಲ್ಲೆ ಪೆರಡಾಲದ ನವಜೀವನ ಹೈಯರ್ ಸೆಕೆಂಡರಿ ಸ್ಕೂಲಿನಲ್ಲಿ ಇಪ್ಪತ್ತೆಂಟು ವರುಷ ಗಣಿತ ಮತ್ತು ಆಂಗ್ಲ ಭಾಷಾ ಅಧ್ಯಾಪಕರಾಗಿ ಸೇವೆ. ಇದರಲ್ಲಿ ಹತ್ತು ವರುಷ ಕಂಪ್ಯೂಟರ್ ಕೋರ್ಡಿನೇಟರ್ ಮತ್ತು ಶಿಕ್ಷಕರಾಗಿ ಹತ್ತು ವರುಷ. ಎರಡು ವರುಷ ಡೆಪ್ಯುಟಿ ಮುಖ್ಯೋಪಾಧ್ಯಾಯರು. ಈಗ ಮುಖ್ಯಗುರುವಾಗಿ ಭಡ್ತಿ. ಶಾಲೆಯಲ್ಲಿ ಒಂದು ಸಾವಿರ ಏಳುನೂರು ವಿದ್ಯಾರ್ಥಿಗಳು. ಅರುವತ್ತೈದು ಮಂದಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು. ಕನ್ನಡ, ಮಲೆಯಾಳ ಮತ್ತು ಆಂಗ್ಲ ಭಾಷಾ ಮಾಧ್ಯಮವನ್ನು ಹೊಂದಿದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಿದು.

                ಕೇಂದ್ರ ಸರಕಾರದ ನವದೆಹಲಿಯ ಸಿಸಿಆರ್ಟಿಯಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಶಾಲೆಯಲ್ಲಿ ನಡೆಸಿದ ವಿಶೇಷ ಪಠ್ಯೇತರ ಚಟುವಟಿಕೆಗಳಿಗಾಗಿ 1991ರಲ್ಲಿ ಸಿಸಿಆರ್ಟಿ ರಾಷ್ಟ್ರ ಮಟ್ಟದ ಪ್ರಶಸ್ತಿ. ಸಿಸಿಆರ್ಟಿ ಗುರುತಿಸಿ ಮಾನ್ಯತೆ ನೀಡಿದ ಕೇರಳ ರಾಜ್ಯದ ಏಕೈಕ ತರಬೇತುದಾರ. ಕೇರಳ ಜೇಸೀಸ್ ತರಬೇತುದಾರರೂ ಆಗಿದ್ದರು.
  
                 ಸಾರಡ್ಕರು ಉತ್ತಮ ಲೇಖಕ, ಪತ್ರಕರ್ತ ಛಾಯಾಗ್ರಾಹಕ, ಕೃಷಿಕ, ಪ್ರಾಣಿಕ್ ಹೀಲಿಂಗ್ ಮತ್ತು ರೇಖಿ ತಜ್ಞರು, ವಾಗ್ಮಿ, ಯಕ್ಷಗಾನ ಅರ್ಥಧಾರಿ. ನೂರಾರು ಲೇಖನಗಳು ಕನ್ನಡ, ಆಂಗ್ಲ ಮತ್ತು ಮಲಯಾಳಂ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಸಾಮಾಜಿಕ ಕಾಳಜಿಯಿಂದ ಬರೆದ ಸಮಸ್ಯೆಗಳ ಚಿತ್ರಣ ಸಮಸ್ಯೆಗಳನ್ನು ಬಗೆಹರಿಸಿ ಫಲ ನೀಡಿದ ಉದಾಹರಣೆ ಸಾಕಷ್ಟಿವೆ. ಇವರ ಫೋಟೋಗಳು ಪ್ರಶಸ್ತಿ ಮತ್ತು ಪ್ರದರ್ಶನಗಳನ್ನು ಕಂಡಿವೆ.

0 comments:

Post a Comment