Tuesday, August 8, 2017

ಕೃಷಿಕ ಜ್ಞಾನದ ನೀರಿನ ರೇಶನ್!

ಉದಯವಾಣಿಯ 'ನೆಲದ ನಾಡಿ' ಅಂಕಣ / 6-4-2017

                ಬಿಸಿಲ ಧಗೆ ಏರುತ್ತಿದೆ. ಕೊಳವೆ ಬಾವಿ ಕೊರೆತದ ಯಂತ್ರಗಳು ಸದ್ದನ್ನು ಹೆಚ್ಚಿಸುತ್ತಿವೆ. ಒಂದೆಡೆ ಕನ್ನಾಡಿನ ಕೆಲವೆಡೆ ಕೊಳವೆ ಬಾವಿ ಕೊರತಕ್ಕೆ ನಿಷೇಧ. ಮತ್ತೊಂದೆಡೆ ನಿಷೇಧ ತೆರವುಗೊಳಿಸುವ ಪರವಾನಿಗೆಗೆ ಸಹಿ ಹಾಕುವ ತರಾತುರಿ! ಕೆರೆ, ಬಾವಿ ಮೊದಲಾದ ನೀರಿನ ಮೂಲಗಳನ್ನು ಬರಿದಾಗಿಸಿದ ಮೇಲೆ ಕಟ್ಟಕಟೆಯ ಕೊಳವೆ ಬಾವಿ ಕೊರೆತದ ಯತ್ನವು ಯಶಕ್ಕಿಂತ ವಿಫಲದ ಸುದ್ದಿಗಳೇ ಕೇಳಿಸುತ್ತಿವೆ.
            ಶಿರಸಿಯ ಪಾಂಡುರಂಗ ಹೆಗಡೆ ಉಲ್ಲೇಖಿಸುತ್ತಾರೆ - ದಶಕದ ಹಿಂದೆ ಬಯಲು ಸೀಮೆಯಲ್ಲಿ ಆರುನೂರರಿಂದ ಎಂಟುನೂರು ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಇಂದು ಒಂದು ಸಾವಿರದ ನಾಲ್ಕುನೂರರಿಂದ ಸಾವಿರದ ಎಂಟು ನೂರು ಅಡಿಗೆ ಕುಸಿದಿದೆ. ಹೆಚ್ಚು ಮಳೆ ಬೀಳುವ ಕರಾವಳಿ, ಮಲೆನಾಡು ಇದಕ್ಕಿಂತ ಹೊರತಲ್ಲ.
              ಒಂದು ಕೊಳವೆ ಬಾವಿ ವೈಫಲ್ಯಗೊಂಡರೆ ಮತ್ತೊಂದು, ಇನ್ನೊಂದು.. ಹೀಗೆ ಕೊರೆತಗಳ ಸಾಲು ಯಶೋಗಾಥೆಗಳು ಕಣ್ತೆರೆದರೆ ಕಾಲಬುಡದಲ್ಲೇ ಇದೆ. ಪ್ರತೀಯೊಬ್ಬನಿಗೂ ತನ್ನ ಸ್ಥಳದಲ್ಲಿ ಒಂದಾದರೂ ಕೊಳವೆ ಬಾವಿ ಇರಲೇ ಬೇಕೆನ್ನುವ ಹಪಾಹಪಿ, ಜತೆಗೆ ಹಠ!  ಧರಣಿಗೆ ನೀರುಣಿಸುವ ಕಾಳಜಿ ಇಲ್ಲ, ಕೊರೆಯಲು ಎಷ್ಟೊಂದು ಅತ್ಯುತ್ಸಾಹ! ನೀರಿನ ಕೊರತೆಯ ಈ ಹೊತ್ತಲ್ಲಿ ಇಂತಹ ಮಾತು ಅಪಥ್ಯವಾಗಬಹುದು.
             ನೀರಿನ ಅಭಾವದ ಸಂಕಷ್ಟದ ಮನಃಸ್ಥಿತಿಯ ತೇವವು ಮಳೆಗಾಲ ಬಂದಾಗಲೂ ಆರಕೂಡದು ಅಲ್ವಾ. ಬಹುಶಃ ಆಗ ಭೂ ಒಡಲಿಗೆ ನೀರಿಂಗಿಸುವ, ಮಳೆಕೊಯ್ಲಿನಂತಹ ಜಲಸಂರಕ್ಷಣೆಯ ಅರಿವಿನ ಅನುಷ್ಠಾನಕ್ಕೆ ಕಾಲ ಪಕ್ವ.  ನೀರಿಲ್ಲ ಎಂದಾಗ ಸರಕಾರದಲ್ಲಿರುವ ಒಂದೇ ಅಸ್ತ್ರ - ಕೊಳವೆ ಬಾವಿಗಳ ಕೊರೆತ. ಇಂತಹ ಬಾವಿಗಳ ವೈಫಲ್ಯದ ಕತೆಗಳು ಸರಕಾರದ ಕಡತದಲ್ಲಿ ಎಷ್ಟಿಲ್ಲ. ಅವು ಎಂದೂ ತೆರೆದುಕೊಳ್ಳುವುದಿಲ್ಲ ಬಿಡಿ.
             'ನಮ್ಮ ಬಾವಿ, ನಮ್ಮ ನೀರು' ಎಂದು ಬೀಗುವ ಕಾಲಕ್ಕೀಗ ಇಳಿಲೆಕ್ಕ. ಬಾವಿಯಲ್ಲಿ ನೀರಿದೆ ಎಂದು ಟ್ಯಾಂಕಿ ತುಂಬಿ ಪೋಲಾಗುವಷ್ಟು ಪಂಪ್ ಚಾಲೂ ಮಾಡುವಾತನಿಗೆ ಭವಿಷ್ಯದ ಕರಾಳತೆಯ ಅರಿವು ಬೇಕಾಗಿಲ್ಲ.  'ನೀರನ್ನು ತುಪ್ಪದಂತೆ ಬಳಸಿ' ಎಂದು ಜಲಯೋಧರು ಕಳೆದೆರಡು ದಶಕದಿಂದ ಹೇಳುತ್ತಿದ್ದರೂ ನಗೆಯಾಡಿದವರೇ ಅಧಿಕ. ಆ ನಗೆಯ ಮುಖದಲ್ಲಿ ಈಗ ವಿಷಾದದ ಛಾಯೆ!
             ನೀರನ್ನು ತುಪ್ಪದಂತೆ ಬಳಸುವ ಮನಃಸ್ಥಿತಿಯನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳಬೇಕಾದುದು ಕಾಲದ ಅನಿವಾರ್ಯತೆ. ಹಿಂದೊಮ್ಮೆ ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭರು ಇಸ್ರೆಲಿಗೆ ಹೋಗಿದ್ದರು. "ಕಡಿಮೆ ಮಳೆ ಬೀಳುವ ಇಸ್ರೆಲ್ ದೇಶದ ನೀರಿನ ಬಳಕೆಯ ಪಾಠ ನಿಜಕ್ಕೂ ನೀರಿನ ಪಠ್ಯ. ಅಲ್ಲಿ ನೀರು ತುಪ್ಪಕ್ಕೆ ಸಮಾನ. ಜನರ ಮನಃಸ್ಥಿತಿ ಅದಕ್ಕೆ ಟ್ಯೂನ್ ಆಗಿದೆ. ಹಾಗಾಗಿ ನೋಡಿ, ಕೃಷಿಯಲ್ಲಿ ಇಸ್ರೆಲ್ ಮುಂದಿದೆ," ಎಂದಿದ್ದರು.
            ಕನ್ನಾಡಿನಲ್ಲಿ ಅದರಲ್ಲೂ ಕರಾವಳಿಯಲ್ಲಿ ಸಹಕಾರ ವ್ಯವಸ್ಥೆಯು ಗ್ರಾಮೀಣ ಭಾರತದ ಉಸಿರು. ಇಂತಹ ಸಹಕಾರ ವ್ಯವಸ್ಥೆಯು ನೀರಿನ ವಿಚಾರದಲ್ಲೂ ಹೊಂದಿದರೆ ಕೊಳವೆ ಬಾವಿಗಳ ಅವಿರತ ಕೊರೆತಕ್ಕೆ ಪರ್ಯಾಯ ಪರಿಹಾರವಾಗಬಹುದು. ಕೇವಲ ಕೊಳವೆ ಬಾವಿ ಮಾತ್ರವಲ್ಲ, ಜಲನಿಧಿಗಳಾದ ಕಟ್ಟ, ಮದಕಗಳ ನೀರಿನ ಬಳಕೆಯಲ್ಲೂ ಇದೇ ಮಾದರಿಯನ್ನು ಹೊಂದಿರುವ ಉದಾಹರಣೆಗಳು ಎಷ್ಟಿಲ್ಲ. ಅಂತಹ ತಂಪು ಸುದ್ದಿಗಳು ಎಲ್ಲೂ ಸುದ್ದಿಯಾಗುವುದಿಲ್ಲ.
            ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮಕ್ಕೆ ಮೃತ್ಯುಂಜಯ ನದಿ ಜಲದಾತೆ. ನೇತ್ರಾವತಿಯ ಮೂರನೇ ಒಂದು ಉಪನದಿ. ಅಗಲ ಸುಮಾರು ಐವತ್ತು ಮೀಟರ್. ಆಳ ಒಂದೂವರೆ ಮೀಟರ್. ಇದು ಚಾರ್ಮಾಡಿಯ ಮಧುಗುಂಡಿಯಲ್ಲಿ ಹುಟ್ಟಿ ಹದಿನೈದು ಕಿಲೋಮೀಟರ್ ಹರಿದು ಫಜಿರಡ್ಕದಲ್ಲಿ ನೇತ್ರಾವತಿಯನ್ನು ಸೇರುತ್ತದೆ. ಇಲ್ಲಿನ ಪೂರ್ವಜರು ಶತಮಾನಕ್ಕೂ ಮೊದಲೇ ಕಟ್ಟ ನಿರ್ಮಿಸಿ ಕೃಷಿಗೆ ನೀರು ಬಳಸುತ್ತಿದ್ದರು.
            ಕಟ್ಟ ಎಂದರೆ ಹರಿಯುವ ನೀರನ್ನು ತಡೆಯಲು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ನದಿಗೆ (ತೋಡಿಗೆ) ಅಡ್ಡವಾಗಿ ಕಟ್ಟುವ ತಾತ್ಕಾಲಿಕ ತಡೆಗಟ್ಟ ಅಥವಾ ಚೆಕ್ಡ್ಯಾಮ್. ನದಿಗುಂಟದ ಹದಿನೆಂಟು ಮನೆಗಳು ಕಟ್ಟದ ಫಲಾನುಭವಿಗಳು. ಮೊದಲು ಇಪ್ಪತ್ತೆರಡು ಕುಟುಂಬಗಳಿದ್ದುವಂತೆ. ಎಲ್ಲರದೂ ಮುಖ್ಯ ಕೃಷಿ ಅಡಿಕೆ. ಕಟ್ಟದ ನೀರೇ ಆಧಾರ. ಸುಮಾರು 1906ರಲ್ಲಿ ಈ ಕಟ್ಟ ಆರಂಭವಾಗಿರುವ ಉಲ್ಲೇಖ ಕೃಷಿಕರಲ್ಲಿದೆ. 1917ರಿಂದ ಸವಿವರವಾದ ಖರ್ಚುವೆಚ್ಚ ಬರೆದಿಟ್ಟ ದಾಖಲೆಗಳಿವೆ.
             ಕಟ್ಟದ ಫಲಾನುಭವಿಗಳಲ್ಲಿ ಒಬ್ಬರು ಗಜಾನನ ವಝೆ ಅವರಿಗೆ ಕಟ್ಟದ ಸುದ್ದಿ ಹೇಳಲು ಖುಷಿ - ಪ್ರತಿ ವರುಷ ನವೆಂಬರ್ ತಿಂಗಳಲ್ಲಿ ಕಟ್ಟ ಕಟ್ಟುವ ಮುಹೂರ್ತ. ನಮ್ಮೆಲ್ಲರ ತೋಟಗಳಿಗೆ ಎರಡು ತಿಂಗಳ ಕಾಲ ಸಮೃದ್ಧ ಹಾಯಿ ನೀರಾವರಿ. ನೀರು ಕಡಿಮೆಯಾಗುತ್ತಿದ್ದಂತೆ ರೇಶನ್! ಅಂದರೆ ನಾಲ್ಕು ತಿಂಗಳ ತುಂತುರು ನೀರಾವರಿ. ತೋಡಿನಲ್ಲಿ ನೀರಿನ ಹರಿವಿರುವಾಗ ಎಲ್ಲ ಕೆರೆ, ಬಾವಿಗಳು ತುಂಬಿರುತ್ತವೆ. ಕಟ್ಟ ಕಟ್ಟುವ ಸ್ಥಳವು ಪೂರ್ತಿ ನೇರವಾಗಿಲ್ಲ. ನದಿಯಲ್ಲೇ ನೈಸರ್ಗಿಕ  ಬಂಡೆಕಲ್ಲುಗಳಿವೆ. ಇವು ಕೆಲಸವನ್ನು ಸುಲಭವಾಗಿಸಿದೆ. ಅಲ್ಲಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಅಡ್ಡ ಕಟ್ಟಿದರೆ ಸಾಕು, ಕಟ್ಟ ಆಗಿಬಿಡುತ್ತದೆ.
            ಕಟ್ಟದ ಕತೆಗೆ ಕಿವಿಯಾಗುತ್ತಿದಂತೆ ಸಹಜವಾಗಿ 'ನೀರಿನ ಖುಷಿ' ಆಗುತ್ತದೆ. ಆದರೆ ವರುಷ ವರುಷ ಮಳೆ ಕಡಿಮೆಯಾಗುತ್ತಿದ್ದಂತೆ ಕಟ್ಟದ ನೀರಿನಲ್ಲೂ ವ್ಯತ್ಯಯವಾಗುತ್ತಿದೆ. ಎಪ್ರಿಲ್-ಮೇ ತಿಂಗಳಲ್ಲಿ ತೋಡಿನಲ್ಲಿ ಧಾರಾಳವಾಗಿ ನೀರು ಹರಿಯುತ್ತಿದ್ದ ದಿನಮಾನಗಳನ್ನು ನೆನೆಯುತ್ತಾರೆ ವಝೆ, "ಆ ಕಾಲದಲ್ಲಿ ನದಿಯ ನೀರನ್ನು ಪಂಪ್ ಮಾಡುತ್ತಿರಲಿಲ್ಲ. ಕೆಲವರು ಅವರವರ ತೋಟದ ಕೆಳಭಾಗದಲ್ಲಿ ಪಂಪ್ ಇಟ್ಟಿರುತ್ತಾರೆ. ಬರಬರುತ್ತಾ ಕಟ್ಟದ ನೀರು ತೋಟಕ್ಕೆ ಹರಿಯುವ ದಿನಗಳು ತುಂಬಾ ಕಡಿಮೆಯಾಗುತ್ತಿವೆ.  ಬಹುತೇಕ ಫೆಬ್ರವರಿ ತನಕ ನೀರು ಹರಿಯುತ್ತದಷ್ಟೇ. ಕೆಲವೊಮ್ಮೆ ಜನವರಿಗೇ ಕಡಿಮೆಯಾಗಿರುತ್ತದೆ. ಹೀಗಿದ್ದೂ ಆರು ತಿಂಗಳ ಬದಲು ಎರಡೇ ತಿಂಗಳಿಗೆ ನೀರು ಸಿಗುತ್ತಿದ್ದರೂ ಕಟ್ಟ ಕಟ್ಟುವುದನ್ನು ನಿಲ್ಲಿಸಿಲ್ಲ."
           ಕಾಸರಗೋಡು ಜಿಲ್ಲೆಯ ಮೀಯಪದವಿನ 'ಉಪ್ಪಳ ನದಿ'ಯ ಒಂದು ದಡದಲ್ಲಿ ಡಾ.ಡಿ.ಸಿ.ಚೌಟರ ತೋಟ. ಮತ್ತೊಂದು ದಡದಲ್ಲಿ ಸುಮಾರು ಇಪ್ಪತ್ತೈದು ಮಂದಿ ಕೃಷಿಕರ ಗದ್ದೆ-ತೋಟ. ಒಂದೆಕ್ರೆಯಿಂದ ಐದೆಕ್ರೆ ತನಕ. ಏತದ ಮೂಲಕ ನೀರೆತ್ತಿ ಗದ್ದೆ ಬೇಸಾಯ ಮಾಡಿದ ದಿನಮಾನಗಳನ್ನು ಕೃಷಿಕರು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಮೋಟಾರು ಪಂಪ್ ಇಲ್ಲದ ಕಾಲಘಟ್ಟ. ಭೂಮಿಯಿದೆ, ಕೃಷಿ ಮಾಡುವ ಉಮೇದಿದೆ. ಮಾಡಲಾಗುತ್ತಿಲ್ಲ ಎನ್ನುವ ಸ್ಥಿತಿ.
          ಈ ಸಂಕಟ ಪರಿಹಾರಕ್ಕೆ ಕೃಷಿಕ ಡಾ.ಡಿ.ಸಿ.ಚೌಟರ ಯೋಜನೆ. ಮೊದಲಿಗೆ ಹನ್ನೆರಡು ಮಂದಿಯ ಗುಂಪು ರಚನೆ. ವಿದ್ಯುತ್ ಸಂಪರ್ಕಕ್ಕೆ ಮೊದಲಾದ್ಯತೆ. ಹೊಳೆಯಿಂದ ಮೋಟಾರ್ ಪಂಪ್ ಮೂಲಕ ನೀರೆತ್ತಿ ಕೃಷಿಗೆ ಸಹಕಾರಿ ವ್ಯವಸ್ಥೆಯಲ್ಲಿ ಬಳಕೆ. ಅವರವರ ಕೃಷಿ ಭೂಮಿಗೆ ಹೊಂದಿಕೊಂಡು ನೀರಿನ ವಿತರಣೆ. ಎಲ್ಲರ ತೋಟಗಳು ಒತ್ತಟ್ಟಿಗೆ ಇದ್ದುದರಿಂದ ಯೋಜನೆಗೆ ಶೀಘ್ರ ಚಾಲನೆ. ಸುಮಾರು ಇಪ್ಪತ್ತೆರಡು ವರುಷವಾಯಿತು, ಕೃಷಿಕರಲ್ಲಿ ಪರಸ್ಪರ ನಿಜಾರ್ಥದ ಒಗ್ಗಟ್ಟು ಮತ್ತು ಸನ್ಮನಸ್ಸು ಮೂಡಿದ್ದರಿಂದಾಗಿ ನೀರಿನ ಬಳಕೆಯಲ್ಲಿ ಸಹಕಾರಿ ತತ್ವ ಅನ್ವಯವಾಗಿ ಯಶವಾಗಿವೆ. ಸಹಕಾರಿ ನೀರಾವರಿ ಶುರುವಾಗುವ ಮೊದಲು ಹದಿನೈದೆಕ್ರೆ ಕೃಷಿಯಾಗುತ್ತಿತ್ತು. ಈಗ ದುಪ್ಪಟ್ಟು ಅಲ್ಲ ಅದಕ್ಕಿಂತಲೂ ಹೆಚ್ಚು ವಿಸ್ತಾರಗೊಂಡಿದೆ' ಎನ್ನುತ್ತಾರೆ ಚೌಟರು.
ಈ ಎಲ್ಲಾ ಜಲವಿಚಾರಗಳನ್ನು ಜಾಲಾಡುತ್ತಿದ್ದಾಗ ಪುತ್ತೂರು ಬಲ್ನಾಡಿನ ಕೃಷಿಕ ಸುರೇಶ್ ಭಟ್ ಮಾಹಿತಿ ಹಂಚಿಕೊಂಡರು - ತನ್ನೂರಲ್ಲಿ ಒಂದು ಕೊಳವೆ ಬಾವಿಯಿಂದ ದಿನಕ್ಕೊಬ್ಬರಂತೆ ಏಳು ಮಂದಿ ಕೃಷಿಕರು ಸಹಕಾರಿ ತತ್ವದಂತೆ ನೀರನ್ನು ಬಹುಕಾಲ ಬಳಸುತ್ತಿದ್ದರು. ಈ ವ್ಯವಸ್ಥೆ ಒಂದಷ್ಟು ಕಾಲ ನಡೆದಿತ್ತು.
           ಕೊಳವೆ ಬಾವಿಗಳನ್ನು ಕೊರೆಯುತ್ತಾ ಹೋಗುವುದಕ್ಕಿಂತ ಜೀವವಿದ್ದ ಕೊಳವೆಬಾವಿಗಳ ನೀರನ್ನು 'ಸಹಕಾರಿಕರಣ'ಗೊಳಿಸಬಹುದು. ಇದರಲ್ಲಿ ಸಮಸ್ಯೆ ಇಲ್ಲವೆಂದಲ್ಲ. ಅಲ್ಲಲ್ಲಿನ ಸಂಪನ್ಮೂಲ, ಅಗತ್ಯಗಳಿಗೆ ಹೊಂದಿಕೊಂಡು ಮನಃಸ್ಥಿತಿಗಳನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ಮನಸ್ಸು  ಸಜ್ಜಾಗಬೇಕಷ್ಟೇ. ಸಹಕಾರಿ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಬಹುಶಃ ನೀರಿಗೂ ರೇಶನ್ ಸಿಸ್ಟಂ ಅನಿವಾರ್ಯ.
           ಒಂದು ನೆನಪಿಟ್ಟುಕೊಳ್ಳೋಣ - ನೀರಿನ ಬರಕ್ಕೆ ಕೊಳವೆ ಬಾವಿಗಳ ಕೊರೆತ ಪರಿಹಾರವಲ್ಲ. ಇಂತಹ ಚಿಕ್ಕಪುಟ್ಟ ಸಹಕಾರಿಕರಣವು ಕೂಡಾ ಜಲಸಂರಕ್ಷಣೆಗೆ ಮಾದರಿ. ಕನ್ನಾಡಿನಲ್ಲಿ ನೀರುಳಿತಾಯದ ಸಹಕಾರಿ ಮಾದರಿಗಳು ವಿರಳವಾಗಿವೆ. ಅರಿವಿನ ದೃಷ್ಟಿಯಿಂದ ಅದಕ್ಕೆ ಬೆಳಕ್ಕೊಡ್ಡುವ ತುರ್ತಿದೆ.  

0 comments:

Post a Comment