Sunday, January 31, 2010

ಊಟದ ಬಟ್ಟಲಿಗೆ ಉತ್ಸವದ ಥಳಕು

ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು - ಕಿರು ಧಾನ್ಯಗಳು. ಇವುಗಳ ಕಾಳುಗಳು ಕಿರಿದಾಗಿರುವುದರಿಂದ 'ಕಿರುಧಾನ್ಯ'. ನಿಜಕ್ಕೂ ಇವು 'ಸಿರಿಧಾನ್ಯ'ಗಳು.

ದೊಡ್ಡ ಕಿರುಧಾನ್ಯ ಮತ್ತು ಚಿಕ್ಕ ಕಿರುಧಾನ್ಯಗಳೆಂಬ ಎರಡು ವಿಧಗಳಿವೆ. ಜೋಳ ಮತ್ತು ಸಜ್ಜೆ ಕಿರುಧಾನ್ಯಗಳಲ್ಲೇ 'ದೊಡ್ಡಣ್ಣ'! ಉಳಿದವು ಚಿಕ್ಕವು. ಬರಗಾಲ ಪ್ರದೇಶದಲ್ಲಿ ರೈತರ ಜೀವವುಳಿಸಿದ ಅಮೃತ! 'ಬರಗಾಲದ ಮಿತ್ರ' ಎಂಬ ಬಿರುದೂ ಇದೆ.
ಕಿರುಧಾನ್ಯಗಳು ಒಣಭೂಮಿ ಪ್ರದೇಶಗಳ ಮುಖ್ಯ ಆಹಾರ.. ಇಲ್ಲಿನ ಬದುಕಿನಲ್ಲಿ ಸಾಂಪ್ರದಾಯಿಕವಾಗಿ ಬಂದ ಆಹಾರ ತಯಾರಿಯಲ್ಲಿ ವೈಶಿಷ್ಟ್ಯ ಮತ್ತು ವಿಶಿಷ್ಟತೆಯಿದೆ. ರಾಗಿಯಿಂದ ರಾಗಿಮುದ್ದೆ, ರಾಗಿ ಅಂಬಲಿಯಿಲ್ಲದೆ ಊಟವಿಲ್ಲ. ಪಶ್ಚಿಮ ಭಾರತದಲ್ಲಿ ಜೋಳವನ್ನು ಹಿಟ್ಟು ಮಾಡಿ ಅದರಿಂದ ತೆಳುವಾದ ರೊಟ್ಟಿಗಳನ್ನು ತಯಾರಿಸುತ್ತಾರೆ. ಇದು ಮುಖ್ಯಾಹಾರ..

ಅರುವತ್ತರ ದಶಕದೀಚೆಗೆ ಹಸಿರು ಕ್ರಾಂತಿ ಕಾಲಿಟ್ಟಾಗ, ಅಧಿಕ ಉತ್ಪಾದನೆ ಬರುವ ಬೆಳೆಗಳತ್ತ ಒತ್ತು ಕೊಡಲಾಯಿತು. ಆಗ ಬಡವರ ಪಾಲಿನ ಈ ಕಿರುಧಾನ್ಯಗಳಿಗೆ ಇಳಿಲೆಕ್ಕ! ಸಿರಿಧಾನ್ಯಗಳಲ್ಲಿರುವಷ್ಟು ಪೋಷಕಾಂಶ, ಪೌಷ್ಠಿಕತೆ ಬೇರ್ಯಾವ ಆಹಾರದಲ್ಲಿ ಸಿಗದು. 'ನ್ಯಾಯಬೆಲೆ ಅಂಗಡಿಗಳಲ್ಲಿ ಮೂರು ರೂಪಾಯಿಗೆ ಅಕ್ಕಿ ಸಿಕ್ತದೆ ಅಂತಾದ್ರೆ ಧಾನ್ಯ ಬೆಳೆಸೋ ಉಸಾಬರಿ ಯಾಕ್ರಿ' ರೈತರ ಪ್ರಶ್ನೆ. ಹೆಚ್ಚು ಶ್ರಮ ಬೇಡುವ ಧಾನ್ಯಗಳ ಕೃಷಿ ಸರಕಾರದ ಮೂರು ರೂಪಾಯಿಯ ಅಕ್ಕಿ ಯೋಜನೆ ನುಂಗಿನೊಣೆದಿದೆ! ಎಲ್ಲೋ ರುಚಿಗೊತ್ತಿದ್ದ ಹಿರಿಯರು ಧಾನ್ಯಕ್ಕಂಟಿಕೊಂಡಿದ್ದಾರೆ.

ಹಾಗಿದ್ದರೆ ಉಳಿಸುವ ದಾರಿ? ಕಿರುಧಾನ್ಯ ಬೆಳೆಯನ್ನು ಹೆಚ್ಚು ಜನಪ್ರಿಯಗೊಳಿಸುವುದು, ಕಿರುಧಾನ್ಯಗಳ ಸಂಸ್ಕೃತಿ, ಪ್ರಾಮುಖ್ಯತೆ ಮತ್ತು ಆಹಾರಗಳಲ್ಲಿರುವ ಪೌಷ್ಠಿಕ ಅಂಶಗಳ ಬಗ್ಗೆ ಅಗತ್ಯವಾದ ಮಾಹಿತಿಯನ್ನು ರೈತರಿಗೆ ಮೂಡಿಸುವುದು ಮೊದಲಾವಶ್ಯಕತೆ. ಹೈದರಾಬಾದಿನ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯು (ಡಿಡಿಎಸ್) ಸಿರಿಧಾನ್ಯಗಳನ್ನು 'ಮತ್ತೊಮ್ಮೆ ವೈಭವದತ್ತ' ಒಯ್ಯಲು ಶ್ರಮಿಸುತ್ತಿದೆ.

ಮಹಿಳೆಯರು ಕೃಷಿಯ ಕೊಂಡಿ. ಈಗಿನ ಕೃಷಿ ವ್ಯವಸ್ಥೆಯಲ್ಲಿ ಪುರುಷನೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಮಹಿಳೆಯರಲ್ಲಿದ್ದ ಕೃಷಿ ಜಾಣ್ಮೆಗಳು ಮಸುಕಾಗಿವೆ. ಬೀಜದ ಆಯ್ಕೆಯಿಂದ ಬೆಳೆ ವರೆಗಿನ ಲೆಕ್ಕ ಅವರ ಬೆರಳ ತುದಿಯಲ್ಲಿರುತ್ತಿತ್ತು. ಮಸುಕು ಹಿಡಿದ ಜಾಣ್ಮೆಗೆ ಮರು ಜೀವ ಕೊಡುವಂತಹ ಕೆಲಸವಾದಾಗಲೇ ಕಿರುಧಾನ್ಯಗಳ ಶಾಪಕ್ಕೆ ಮೋಕ್ಷ ಸಿಗಬಹುದು - ಈ ಹಿನ್ನೆಲೆಯಿಂದ ಡಿಡಿಎಸ್ ಆಶ್ರಯದಲ್ಲಿ ರೂಪುಗೊಂಡಿದೆ - ಮಿಲ್ಲೆಟ್ ನೆಟ್ವವರ್ಕ ಆಫ್ ಇಂಡಿಯಾ. ಇದು ರಾಷ್ಟ್ರಮಟ್ಟದಲ್ಲಿ ಕಾರ್ಯವೆಸಗುವ ಒಕ್ಕೂಟ.

ಡಿಡಿಎಸ್ ಕಾರ್ಯಕ್ಷೇತ್ರ ಆಂಧ್ರಪ್ರದೇಶದ ಮೇದಕ್ ಜಿಲ್ಲೆಯ ಜಹೀರಾಬಾದ ತಾಲೂಕು. (ಬೀದರಿಗೆ ಸಮೀಪ) ಎಪ್ಪತ್ತೈದು ಹಳ್ಳಿಗಳ ವ್ಯಾಪ್ತಿ. ಇಲ್ಲಿನ ಮಹಿಳೆಯರಿಗೆ 'ಸ್ವಾಯತ್ತತೆ' ನೀಡುವುದು ಮೊದಲಾದ್ಯತೆ. ಆಹಾರ ಉತ್ಪಾದನೆ, ಬೀಜ, ನೈಸರ್ಗಿಕ ಸಂಪನ್ಮೂಲ, ಮಾರುಕಟ್ಟೆ ಮತ್ತು ಮಾಧ್ಯಮ - ಇಷ್ಟೂ ಕ್ಷೇತ್ರಗಳಲ್ಲಿ ಅವಳು ಸ್ವಾವಲಂಬಿಯಾಗುವ ದೃಷ್ಟಿಯ ಕಾರ್ಯಹೂರಣ.

ಹಡಿಲು ಬಿಟ್ಟ ಹತ್ತು ಸಾವಿರ ಎಕ್ರೆ ಜಮೀನನ್ನು 'ಕೃಷಿ ಯೋಗ್ಯ'ವನ್ನಾಗಿ ಮಾಡುವಲ್ಲಿ ಡಿಡಿಎಸ್ ಸಫಲವಾಗಿದೆ. ಬಂಜರುನೆಲ, ನೀರಿಗೆ ತತ್ವಾರ, ಮಿತವಾದ ಮಳೆ.. ಇಂತಹ ಸ್ಥಿತಿಯಲ್ಲೂ ಜನರ ಮನವನ್ನು ಪರಿವರ್ತನೆ ಮಾಡಿ, ಕೃಷಿಗೆ ಇಳಿಸುವುದು ಸಣ್ಣ ಮಾತಲ್ಲ. ಡಿಡಿಎಸ್ ನಿರ್ದೇಶಕ ಸತೀಶ್ ಹೇಳುತ್ತಾರೆ - 'ಕಳೆದೆರಡು ದಶಕಗಳಿಂದ ಈಚೆಗೆ ಇಲ್ಲಿ ಒಂದು ದಶಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಿದೆ. ಐದು ಲಕ್ಷ ಕಿಲೋ ಧಾನ್ಯ ಬೆಳೆಯುವ ಇಲ್ಲಿ ಅದರ ಆರು ಬೆಳೆಸಲಾಗುತ್ತದೆ' ಎಂಬ ಅಚ್ಚರಿಯ ಸುದ್ದಿಯನ್ನು ಹೇಳುತ್ತಾರೆ.

ಇಪ್ಪತ್ತು ವರುಷಗಳ ಫಲಶೃತಿಯನ್ನು ಹೇಳುವುದಾದರೆ ಪ್ರತೀಯೊಬ್ಬ - ಮಹಿಳೆಯೂ ತಮ್ಮ ಪುಟ್ಟ ಜಮೀನಿನಲ್ಲಿ ಕನಿಷ್ಠ ಐದಾರು ವಿಧದ ಬೆಳೆ ಬೆಳೆಯುತ್ತಾರೆ. ಹಳ್ಳಿಯಲ್ಲೇ ಬೀಜ ಬ್ಯಾಂಕ್ ಸ್ಥಾಪಿಸಿಕೊಂಡಿದ್ದಾರೆ. ಬೀಜಗಳು ಸ್ಥಳದಲ್ಲೇ ಸಿಗುತ್ತವೆ. ಕಂಪೆನಿಗಳ ಹಂಗಿಲ್ಲ.

ಮಾರುಕಟ್ಟೆಗಾಗಿ 'ಜಹೀರಾಬಾದ ಗ್ರಾಹಕ ಕ್ರಿಯಾ ಸಂಘಟನೆ' ಅಸ್ತಿತ್ವಕ್ಕೆ. ಇದರ ಮೂಲಕ ಉತ್ಪನ್ನಗಳ ಮಾರಾಟ. ನೈಸಗರ್ಿಕ ಸಂಪನ್ಮೂಲಗಳನ್ನು ಉಳಿಸುವತ್ತಲೂ ಪ್ರಯತ್ನ. ಸಾವಿರ ಎಕ್ರೆ ಜಾಗದಲ್ಲಿ ಹತ್ತು ಲಕ್ಷ ಸಸಿಗಳನ್ನು ಮಹಿಳೆಯರೇ ನೆಟ್ಟಿದ್ದಾರೆ. ಜತೆಗೆ ಔಷಧೀಯ ಸಸ್ಯಗಳು ಕೂಡಾ.

ಹಳ್ಳಿಯಲ್ಲೇ ಕಳೆದೈದು ವರುಷದಿಂದ ನಲವತ್ತು ಟನ್ ಸಾಮಥ್ರ್ಯದ 'ಬೀಜಗೋದಾಮು' ಆರಂಭವಾಗಿದೆ. ಧಾನ್ಯ ಸಂಸ್ಕರಣೆ ಮಾಡಲು ಯಂತ್ರಗಳು. ಮೌಲ್ಯವರ್ಧನೆಗೂ ಒತ್ತು. 'ಕೆಫೆ ಎಥ್ನಿಕ್'ನಲ್ಲಿ ಧಾನ್ಯಗಳ ವಿವಿಧ ತಿಂಗಳು ಹೊಟ್ಟೆಗಿಳಿಯುತ್ತವೆ.
ಡಿಡಿಎಸ್ ನೇತೃತ್ವದಲ್ಲಿ ಸಮುದಾಯ ರೇಡಿಯೋ (ಸಂಘಂ ರೇಡಿಯೋ) ನಡೆಯುತ್ತಿದೆ. ನೆಲಜಲ, ಕೃಷಿಯ ಭವಿಷ್ಯ, ಜಾಗತಿಕ ವಿಚಾರಗಳು, ಮಳೆಯಾಧಾರಿತ ಕೃಷಿ, ಕಾಡಿನ ಬಳಕೆ, ಆಹಾರ ವಿಚಾರಗಳ ಬಗ್ಗೆ ಮಾಹಿತಿ. ಜತೆಜತೆಗೆ ಸ್ಥಳೀಯ ಕಲೆಗಳ ಪ್ರಸಾರ. ದೇಶದ ವಿದ್ಯಮಾನವನ್ನು ಅನಕ್ಷರಸ್ಥರಾದ ಇವರು ತಿಳಿದುಕೊಂಡಿದ್ದಾರೆ! ವೀಡಿಯೋ ದಾಖಲಾತಿಯಲ್ಲೂ ಮಹಿಳೆಯರದ್ದೇ ಪ್ರಾಬಲ್ಯ. ವೃತ್ತಿಪರರನ್ನು ನಾಚಿಸುವಷ್ಟು ವೀಡಿಯೋ ದಾಖಲಾತಿ ಮಾಡಬಲ್ಲರು. 'ಮಹಿಳಗೆ ಸ್ವಾಯತ್ತತೆ ಕೊಟ್ಟ ಪರಿಣಾಮ' ಎನ್ನುತ್ತಾರೆ ಸತೀಶ್.

ಕಳೆದೊಂದು ದಶಕದಿಂದ ಡಿಡಿಎಸ್ ಇಲ್ಲಿ 'ಸಂಚಾರಿ ಜೀವ ವೈವಧ್ಯ ಮೇಳ'ವನ್ನು ನಡೆಸುತ್ತಿದೆ. ಮಕರ ಸಂಕ್ರಾಂತಿಯಿಂದ ಶುರುವಾಗಿ ತಿಂಗಳ ಕಾಲ ಹಳ್ಳಿಯಿಡೀ ಉತ್ಸವ ನಡೆಯುತ್ತದೆ. ಎತ್ತಿನ ಗಾಡಿಗಳಲ್ಲಿ ಆಹಾರ ಧಾನ್ಯಗಳನ್ನಿಟ್ಟು ಮೆರವಣಿಗೆ. ಎತ್ತಿನ ಗಾಡಿಗಳಿಗೆ ದೇಸಿ ಅಲಂಕಾರ., ಬಣ್ಣಬಣ್ಣದ ಹೂಗಳ ಹಾರ. ಹಳ್ಳಿಯಿಂದ ಹಳ್ಳಿಗೆ ರಥೋತ್ಸವದಂತೆ ಗಾಡಿ ಉತ್ಸವ! ಜತೆಗೆ ಕಿರುಧಾನ್ಯಗಳ ಮಹತ್ವನ್ನು ತಿಳಿಸುವ ವಿವಿಧ ಉಪಾಧಿಗಳು.

ಒಂದು ಹಳ್ಳಿಯಿಂದ ಹೊರಟು ಇನ್ನೊಂದು ಹಳ್ಳಿಗೆ ಹೋಗುತ್ತಿರುವಾಗಲೇ ಗಾಡಿಗಳ ಸಂಖ್ಯೆ ಹೆಚ್ಚಾಗುತ್ತದೆ. ಸ್ಥಳೀಯ ಕಲೆಗಳು, ಆಟಗಳು, ಹಾಡುಗಳಲ್ಲಿ ಮಹಿಳೆಯರು, ಪುರುಷರು ಒಟ್ಟಾಗಿ ಪಾಲ್ಗೊಳ್ಳುತ್ತಾರೆ. ಪಾರಂಪರಿಕ ತಿಂಡಿಗಳ ಪ್ರದರ್ಶನ. ಸಮಾರೋಪಕ್ಕೆ ದೇಶ-ವಿದೇಶಗಳಿಂದ ರೈತರು ಹಲವಾರು ಮಂದಿ ಪಾಲ್ಗೊಳ್ಳುತ್ತಾರೆ. ಉಣ್ಣುವ ಆಹಾರದ ಹಿಂದೆ ಇಷ್ಟು ದೀರ್ಘವಾಗಿ ನಡೆಯುವ ಹಬ್ಬ ಬಹುಶಃ ದೇಶದಲ್ಲೇ ಅಪರೂಪ!. ಈ ಸಾರಿಯ ಹಬ್ಬದ ಸಮಾರೋಪ ಫೆಬ್ರವರಿ 13ರಂದು ಪಸ್ತಾಪೂರ್ನಲ್ಲಿ ಜರುಗಲಿದೆ.

3 comments:

Nisha said...

Uttama mahithi. Thilisi kottadakke dhanyavadagalu.

ಸಾಗರದಾಚೆಯ ಇಂಚರ said...

Olleya lekhana
dhanyavaadagalu

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಗಮನಸೆಳೆಯುವ ಉತ್ತಮ ಮಾಹಿತಿಯನ್ನು ನೀಡಿದ್ದೀರಿ.
ಕಾರಂತರೇ,
ಅಭಿನಂದನೆಗಳು..

Post a Comment