Tuesday, November 20, 2012

ಹೊಟ್ಟೆ ಹೊರೆಯಲು ಲಾವಣಿ ಕೃಷಿ


               ಗದಗ ಸನಿಹದ ಬೆಟಗೇರಿಯ ಸಾವಿತ್ರಿ ಕಲಬುರ್ಗಿಯವರುಗೆ ರಸ್ತೆಗುಂಟ ಹತ್ತೆಕ್ರೆ ಭೂಮಿ. ಅದರಲ್ಲಿ ಎರಡೆಕ್ರೆ ತಾನಿಟ್ಟುಕೊಂಡು, ಮಿಕ್ಕ ಎಂಟೆಕ್ರೆಯನ್ನು ಐದು ಮಂದಿಗೆ ವಾರ್ಷಿಕ ಕ ಗುತ್ತಿಗೆ (ಲಾವಣಿ) ಆಧಾರದಲ್ಲಿ ವಿಭಾಗಿಸಿದ್ದಾರೆ. ಎಲ್ಲರೂ ಸಣ್ಣ ಕೃಷಿಕರು.

              ಸಾವಿತ್ರಿ ಅವರಿಗೆ ಎರಡೆಕ್ರೆಯಲ್ಲಿ ಕರಿಬೇವು ಕೃಷಿ. ನಗರದ ತ್ಯಾಜ್ಯ (ಗಟಾರ) ನೀರಿನಿಂದ ನೀರಾವರಿ. ಗಟಾರ ನೀರಿನ ಹರಿವು ಹೆಚ್ಚಿರುವಲ್ಲಿ ಪಂಪ್ ಶೆಡ್ ಸ್ಥಾಪಿಸಿದ್ದಾರೆ. ಅಲ್ಲಿಂದ ಪೈಪ್ ಮೂಲಕ ಪ್ರತೀಯೊಬ್ಬರ ಹೊಲಕ್ಕೂ ಸಂಪರ್ಕ. ವಾರಕ್ಕೊಮ್ಮೆ ಸರದಿಯಂತೆ ನೀರುಣಿಕೆ.

                 ಒಂದು ದಿವಸದಲ್ಲಿ ಎರಡೆಕ್ರೆ ಭೂಮಿ ತೋಯುತ್ತದೆ. ಪಂಪ್ ಶೆಡ್ ಬಳಿ ನೀರನ್ನು ನೋಡಿದರೆ ಬಣ್ಣ ಕಪ್ಪು. ಜತೆಗೆ ವಾಸನೆ! ಕೃಷಿಗೆ ನೀರು ಹರಿಸುತ್ತಿರುವಾಗ ವಾಸನೆಯೇನೊ, ಆದರೆ ಇಂಗಿದ ಬಳಿಕ ವಾಸನೆ ಬಿಡಿ, ಮಣ್ಣಿನಲ್ಲಿ ಕಪ್ಪು ಅಂಟಿಕೊಂಡಿರುವುದೂ ಕಾಣದು.

                   ಸಾವಿತ್ರಿ ಎರಡು ವರುಷದಿಂದ ಕರಿಬೇವಿನ ಕೃಷಿ ಮಾಡುತ್ತಾರೆ. ವಾರ್ಶಿಕ ಗುತ್ತಿಗೆ. ಗುತ್ತಿಗೆದಾರರು ಇವರಿಗೆ ಹದಿನೈದರಿಂದ ಹದಿನೆಂಟು ಸಾವಿರ ರೂಪಾಯಿ ತನಕ ನೀಡುತ್ತಾರೆ. ವರುಷಕ್ಕೆ ಮೂರು ಸಲ ಕಟಾವ್. ಕಹಿಬೇವಿನ ಗಿಡಗಳೆಲ್ಲಾ ಹತ್ತು ವರುಷ ಪ್ರಾಯದವು. ನೀರುಣಿಕೆ ಹೆಚ್ಚಾದರೆ ಎಲೆಗಳು ಹಳದಿ ವರ್ಣಕ್ಕೆ ಬದಲಾಗುತ್ತದೆ. ಹೀಗಾಗದಂತೆ ಎಚ್ಚರ ಬೇಕಾಗುತ್ತದೆ ಎನ್ನುತ್ತಾರೆ. ರೋಗದ ಬಾಧೆಯಿಲ್ಲ.

                    ಉಳಿದ ಕೃಷಿಕರು ಹೂಕೋಸು, ಟೊಮೆಟೋ, ಸೊಪ್ಪು ತರಕಾರಿ, ಮೂಲಂಗಿ, ಮೆಂತೆಸೊಪ್ಪು, ಸಬ್ಬಸಿಗೆ ಬೆಳೆಯುತ್ತಾರೆ. ಜತೆಗೆ ಬದನೆ, ಸೌತೆ, ಕ್ಯಾಬೇಜ್, ರಾಜಗೀರ್ ಹರಿವೆ, ಪುದಿನ.. ಹೀಗೆ ತರಕಾರಿ ವೈವಿಧ್ಯಗಳು. ಕ್ಯಾಬೇಜ್, ಹೂಕೋಸಿನಂತಹ ತರಕಾರಿಗೆ ಔಷಧ (ವಿಷ) ಸಿಂಪಡಣೆ ಬೇಕೇ ಬೇಕು. ಯಾಕೋ, ಸಿಂಪಡಣೆ ಮಾಡದಿದ್ದರೆ ತರಕಾರಿ ಕೃಷಿ ಅಸಾಧ್ಯ!

                  ಸ್ಥಳೀಯ ಗದಗದಲ್ಲಿ ತರಕಾರಿಗಳಿಗೆ ಮಾರುಕಟ್ಟೆ. ಕೆಲವರು ದ್ವಿಚಕ್ರ ವಾಹನದಲ್ಲಿ ಮಾರುತ್ತಾರೆ, ರಖಂ ಆಗಿ ಮಾರಾಟ ಮಾಡುವವರೂ ಇದ್ದಾರೆ. 'ಇಲ್ಲಿ ಕಾಯಿಪಲ್ಲೆ ಚೆನ್ನಾಗಿ ಬೆಳೆಯುತ್ತದೆ. ಗಟಾರದ ನೀರು ಉತ್ತಮ ಫಲವತ್ತತೆ ಹೊಂದಿದೆ' ಎನ್ನುವುದು ಕೃಷಿಕ ನಂಜಪ್ಪ ಅನುಭವ.

                     ಅವರ ಹೊಲಕ್ಕೆ ಭೇಟಿಯಿತ್ತಾಗ ಸೊಪ್ಪು ತರಕಾರಿಯನ್ನು ದಂಪತಿ ಸಹಿತ ಕೀಳುತ್ತಿದ್ದರು. ಸೊರಗಿದ ಸಸಿಗಳು. ಮಳೆ ಕೈಕೊಟ್ಟಿದ್ದರ ಪರಿಣಾಮ. ಸಾರ್, ಒಂದೆರಡು ಮಳೆ ಬಂದುಬಿಟ್ಟಿದ್ದರೆ ನಾವೆಲ್ಲಾ ಕಾಸಿನಲ್ಲಿ ಚಲೋ ಇರ್ತೀವಿ ಎಂದರು. ಗಿಡಗಳೆಲ್ಲಾ ಸೊಂಪಾಗಿ ಬೆಳೆಯುತ್ತಿದ್ದುವು. ಗ್ರಹಿಸಿದ ಹಾಗೆ ಮಾರುಕಟ್ಟೆಗೆ ಉತ್ಪನ್ನವನ್ನು ಪೂರೈಸಲು ಆಗುತ್ತಿತ್ತು.

                'ಗಟಾರ್ ನೀರಿನಲ್ಲಿ ಕೃಷಿ ಮಾಡುವುದು ಪಾರಂಪರಿಕ. ಪ್ರತೀವರುಷದಂತೆ ಮಳೆ ಬಂದರೆ ಗಟಾರ ನೀರಿನಲ್ಲಿ ದೋಷವಿಲ್ಲ. ಶೇ.50ರಷ್ಟು ಮಡ್ ಉಳಕೊಂಡರೆ ಓಕೆ. ನೀರಿನ ಮಡ್ ಮಳೆ ನೀರಿನಲ್ಲಿ ಇಂಗಿ ಹೋಗಿ ಬ್ಯಾಲೆನ್ಸ್ ಆಗಿಬಿಡುತ್ತದೆ. ಮಳೆಯೇ ಬಾರದಿದ್ದರೆ ಶೇ.100 ಹಾಗೆ ಉಳಿದುಬಿಡುತ್ತದಲ್ಲಾ ಎರಡು ವರುಷದಿಂದ ಮಳೆಯೇ ಬಂದಿಲ್ಲ. ನೀರಿನ ಮಡ್ ಹಾಗೆ ಉಳಿದುಕೊಳ್ಳುತ್ತದೆ. ಇದು ಅಪಾಯ.', ಎನ್ನುತ್ತಾರೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಜಾವೂರು.

                  ಕೊಳವೆ ಬಾವಿಗಳಿಲ್ಲ. ಗದಗ ಬೆಟಗೇರಿ ಏತ ನೀರಾವರಿ ಯೋಜನೆಯಡಿಯಲ್ಲಿ ಡ್ಯಾಮ್ ಮೂಲಕ ವಿತರಣೆಯಾಗುವ ನೀರು ತಿಂಗಳಿಗೊಂದು ಸಲ ಬರುತ್ತೆ. ಹೀಗೆ ನೀರು ಬಂದಾಗ ತಿಂಗಳಿಗೆ ಬೇಕಾದಷ್ಟು ಕುಡಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಸ್ಥಿತಿ.

                    ಕೃಷಿ ಮಾಡಲು ಹೊಲವಿಲ್ಲ, ಭೂಮಿಯಿಲ್ಲ ಎನ್ನುತ್ತಾ ಕಾಲಯಾಪನೆ ಮಾಡಬೇಕಿಲ್ಲ. ವಾರ್ಶಿಕ ಗುತ್ತಿಗೆ ಆಧಾರದಲ್ಲಿ ಭೂಮಿ ಪಡೆದು ಕೂಡು ಕೃಷಿ ಮಾಡುವ ಬೆಟಗೇರಿಯ ಐದು ಮಂದಿ ಕೃಷಿಕರ ಶ್ರಮವೇ ಅವರ ಬದುಕಿನ ಗುಟ್ಟು. ರಾಸಾಯನಿಕವೋ, ಗಟಾರದ ನೀರೋ, ಅದರಿಂದ ಆರೋಗ್ಯ-ಅನಾರೋಗ್ಯ.. ಅವರಿಗೆ ಬೇಕಾಗಿಲ್ಲ. 'ದುಡಿದು ತಿನ್ನಬೇಕು' ಎಂಬ ನಿಲುವು. ಇಲ್ಲದಿದ್ದರೆ ಹೊಟ್ಟೆಗೆ ತಂಪು ಬಟ್ಟೆಯೇ ಗತಿ.

                     ಸರಕಾರದ ಯೋಜನೆಯ ಫೈಲುಗಳು ಇಂತಹ ಕೃಷಿಕರ ಹೊಲದತ್ತ ನೋಡುವುದೇ ಇಲ್ಲ!

0 comments:

Post a Comment