Tuesday, November 6, 2012

ಕೃಷಿ ವಿಕಸನ - ಯಂತ್ರ ಮೇಳ ಸಂಚಿಕೆ

ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳ ತಮ್ಮ ಮಾಸಿಕ ವಾರ್ತಾಪತ್ರ 'ವಿಕಸನ' ಪತ್ರಿಕೆಯನ್ನು 'ಯಂತ್ರ ಮೇಳ' ವಿಶೇಷ ಸಂಚಿಕೆಯನ್ನಾಗಿ ರೂಪಿಸಿದ್ದಾರೆ. ಒಂದು ರಾತ್ರಿಯಲ್ಲಿ ನಾಲ್ಕು ಪುಟಗಳ ಸಂಚಿಕೆಯನ್ನು ವಿನ್ಯಾಸಿಸಿ, ಮುದ್ರಿಸಿ, ಸಮಾರೋಪದಂದು ಬಿಡುಗಡೆ ಮಾಡಿರುವುದು ವಿದ್ಯಾರ್ಥಿಗಳ ಆಸಕ್ತಿಗೆ ಸಾಕ್ಷಿ. ಮೂರೂ ದಿವಸವೂ ವಾರ್ತಾ ಪತ್ರವನ್ನು ಮುದ್ರಿಸುವ ಯೋಚನೆ ಪೂರ್ವದಲ್ಲಿದ್ದರೂ, ಮಧ್ಯೆ ಪರೀಕ್ಷೆ ನಿಗದಿಯಾದುದರಿಂದ ವಾರ್ತಾಪತ್ರದ ತಯಾರಿಯನ್ನು ಕೈಬಿಡಲಾಗಿತ್ತು. ಆದರೆ ಕೃಷಿ ಯಂತ್ರ ಮೇಳದ ಎರಡನೇ ದಿವಸ, ಅಂದರೆ ನವೆಂಬರ್ 3ಕ್ಕೇ ಪರೀಕ್ಷೆ ಮುಗಿದಿತ್ತು. ಒಂದು ದಿವಸಕ್ಕಾದರೂ ವಾರ್ತಾಪತ್ರ ಪ್ರಕಟವಾಗಬೇಕೆಂಬ ಮಕ್ಕಳ ತುಡಿತಕ್ಕೆ ಸಾಥ್ ನೀಡಿದವರು ಕಾಲೇಜಿನ ಪ್ರಾಂಶುಪಾಲ ಡಾ.ಮಾಧವ ಭಟ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಜಿ.ಶ್ರೀಧರ್. ಮುಖ್ಯ ಸಂಪಾದಕ ಉಪನ್ಯಾಸ ರಾಕೇಶ್ ಕುಮಾರ್ ಕಮ್ಮಾಜೆ. ಪತ್ರಿಕೆಯ ಸಂಪಾದಕ ಮಂಜುನಾಥ್ ಎಲ್.ಕೆ. ಅಭಿಷೇಕ್ ಡಿ. ಪುಟವಿನ್ಯಾಸ. ಸಮಾರೋಪದಂದು ಮಧ್ಯಾಹ್ನದ ಹೊತ್ತಿಗೆ ವಾರ್ತಾಪತ್ರ ಮುದ್ರಣಗೊಂಡು ತಯಾರಾಗಿತ್ತು. ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಪತ್ರವನ್ನು ಬಿಡುಗಡೆ ಮಾಡಿ, ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಶುಭ ಹಾರೈಸಿದರು. ಮಂಚಿ ಶ್ರೀನಿವಾಸ ಆಚಾರ್, ಪಡಾರು ರಾಮಕೃಷ್ಣ ಶಾಸ್ತ್ರಿ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ಹಿರಿಯ ಪತ್ರಕರ್ತ ಶ್ರೀ ಪಡ್ರೆ.. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಕ್ಷಿಪ್ರ ಸಾಧನೆಗೆ ಬೆನ್ನು ತಟ್ಟಿದರು. ಮೇಳದಲ್ಲಿ ಒಂದು ಪತ್ರಿಕೆಗೆ ಎರಡು ರೂಪಾಯಿಯಂತೆ ವಿದ್ಯಾರ್ಥಿಗಳು ಮಾರಾಟ ಮಾಡಿದ್ದರು. ವಾರ್ತಾಪತ್ರದ ಮುದ್ರಣ ವೆಚ್ಚವನ್ನು ಕೃಷಿ ಯಂತ್ರ ಮೇಳವು ಭರಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.

0 comments:

Post a Comment