Tuesday, November 6, 2012

ಕೃಷಿಕರ ಅನುಭವ ಪ್ರಸ್ತುತಿ


             ಮೆದುಳಿಗೆ ಮೇವು ನೀಡುವ ಕೃಷಿಕರ ಅನುಭವ ಕಥನ ಯಂತ್ರ ಮೇಳದ ಹೈಲೈಟ್. ಪವರ್ ಪಾಯಿಂಟ್ ಮೂಲಕ ವಿಚಾರಗಳ ಪ್ರಸ್ತುತಿ. ತಮಗಾಗಿ ಮಾಡಿಕೊಂಡ ಅವಿಷ್ಕಾರಗಳು, ಅದರ ಗೆಲುವುಗಳ ಬಗ್ಗೆ ಅನುಭವಗಳನ್ನು ವಿನಿಮಯಮಾಡಿಕೊಳ್ಳುವ ಆಸಕ್ತಿ ಮೆಚ್ಚುವಂತಾದ್ದು.

              ಕೃಷಿ ಯಾಂತ್ರೀಕರಣ: ಮೊದಲ ದಿವಸದ ಮೊದಲ ಗೋಷ್ಠಿ. ಕ್ಯಾಂಪ್ಕೋ ವ್ಯವಸ್ಥಾಕಪ ನಿರ್ದೇಶಕ ಸುರೇಶ್ ಭಂಡಾರಿಯವರ ಅಧ್ಯಕ್ಷತೆ. 'ಕೃಷಿ ಕೆಲಸಗಳಲ್ಲಿ ನಾನು ಪೂರ್ತಿ ಸ್ವಾವಲಂಬಿ' ಎನ್ನುವ ಬನಾರಿ ಈಶ್ವರ ಪ್ರಸಾದ್, 'ರೈತ ಆವಿಷ್ಕಾರಗಳಿಗೆ ಅಡಿಕೆ ಸಂಸ್ಥೆಗಳು ಬೆಂಬಲವಾಗಿ ನಿಲ್ಲಬೇಕು' ಎಂದ ತೀರ್ಥಹಳ್ಳಿಯ ಕೂಳೂರು ಸತ್ಯನಾರಾಯಣ, 'ಅನಿವಾರ್ಯವೇ ಆವಿಷ್ಕಾರಕ್ಕೆ ಮೂಲಕ' ಎನ್ನುವ ನಿಟಿಲೆ ಮಹಾಬಲೇಶ್ವರ ಭಟ್ - ಇವರು ಕೃಷಿ ಯಾಂತ್ರೀಕರಣದ ತಮ್ಮ ಅನುಭವ, ಆವಿಷ್ಕಾರಗಳನ್ನು ಪ್ರಸ್ತುತಪಡಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಗೋಷ್ಠಿಯನ್ನು ನಿರ್ವಹಿಸಿದರು.

              ಪಶುಪಾಲನೆ-ಯಾಂತ್ರೀಕರಣದ ಸಾಧ್ಯತೆ ಮತ್ತು ಸವಾಲುಗಳು : ಶಾಂತಾರಾಮ ಹೆಗಡೆಯವರ ಅಧ್ಯಕ್ಷತೆ. ಶಿರಸಿ ನೀರ್ನಳ್ಳಿಯ ಸೀತಾರಾಮ ಹೆಗಡೆಯವರಿಂದ ಹೈನುಗಾರಿಕೆ ಅನುಭವ ಪ್ರಸ್ತುತಿ. ಹಟ್ಟಿಯ ಕೆಲಸಗಳ ಸರಳೀಕರಣ ಮತ್ತು ಯಾಂತ್ರೀಕರಣಗೊಳಿಸಿದ ಹೆಗಡೆಯವರ ಉಪಾಯಗಳು ಹೆಚ್ಚು ಗಮನ ಸೆಳೆಯಿತು. ಡಾ.ದಿನೇಶ್ ಸರಳಾಯರಿಂದ ನಿರೂಪಣೆ.
            ಬಯಲು ಪ್ರಾತ್ಯಕ್ಷಿಕೆ : ಚಿಕ್ಕಮಗಳೂರಿನ ಅನ್ನಪೂರ್ಣ ಏಜೆನ್ಸೀಸ್, ಪುತ್ತೂರು ಸಾಯ ಎಂಟರ್ಪ್ರೈಸಸ್ ಸಂಸ್ಥೆಯ ಸಾಯ ಗೋವಿಂದ ಪ್ರಕಾಶ, ವಿಟ್ಲದ ಉರಿಮಜಲು ಮೋಹನ ಇವರಿಂದ ಸ್ಪ್ರೇಗನ್ನುಗಳ ಪ್ರಾತ್ಯಕ್ಷಿಕೆ; ಚೀಮುಳ್ಳು ಸೀತಾರಾಮ ಅವರಿಂದ ಮಿಸ್ಟ್ಬ್ಲೋವರ್ಗಳ ಕಾರ್ಯಕ್ಷಮತೆ, ಮಂಚಿಯ ರಾಮ್ ಕಿಶೋರ್ ಅವರಿಂದ ರೋಪ್ ವೇ ಪ್ರಾತ್ಯಕ್ಷಿಕೆಗಳಲ್ಲಿ ಕೃಷಿಕರ ಸ್ಪಂದನ ಶ್ಲಾಘನೀಯ. ಸಲಕರಣೆಯ ಸಹಾಯದಿಂದ ತೆಂಗಿನ ಮರವೇರುವ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟ ಕಾಸರಗೋಡಿನ ಶ್ರೀಮತಿ ಕೃಷ್ಣವೇಣಿ ಅವರ ಅನುಭವ ಸಾವಿರಾರು ಮಂದಿಯ ನೋಟಕರ ಹುಬ್ಬೇರಿಸಿತು! ಜಾಬ್ ವರ್ಕ್ ಮೂಲಕ ತೆಂಗು ಕೊಯ್ಯುವ ವೃತ್ತಿಯನ್ನು ರೂಢಿಸಿಕೊಂಡ ಕೃಷ್ಣವೇಣಿ ಅವರ ಸಾಧನೆ, ಅನುಭವ ಮಾದರಿ.

              ಮರ ಏರದೆ ನೆಲದಲ್ಲಿಯೇ ನಿಂತು ಅಡಿಕೆ ಕೊಯ್ಯುವ 'ವಂಡರ್ ಕ್ಲೈಂಬರ್' ಯಂತ್ರ ಕಾಲದ ಆವಶ್ಯಕತೆ. ಕಳೆದ ತಿಂಗಳು ಕೋಝಿಕೋಡಿನಲ್ಲಿ ಬಿಡುಗಡೆಗೊಂಡ ಯಂತ್ರವನ್ನು ತಯಾರಿಸಿದವರು ಪ್ರಕಾಶನ್. ಅಡಿಕೆ ಮರಕ್ಕೆ ರಾಟೆ ಮೂಲಕ ಯಂತ್ರವು ಮೇಲೇರುತ್ತದೆ. ಅಡಿಕೆ ಗೊನೆ ತನಕ ಹೋದ ಬಳಿಕ ಯಂತ್ರದ ಮೇಲ್ಬಾಗದಲ್ಲಿರುವ ಬ್ಲೇಡ್ ವೇಗದಿಂದ ಗೊನೆಗೆ ಬಡಿಯುತ್ತದೆ. ಗೊನೆ ತುಂಡಾಗಿ ಕೆಳಗೆ ಬೀಳುತ್ತದೆ. ಪ್ರಕಾಶನ್ ಪ್ರಾತ್ಯಕ್ಷಿಕೆ ಮೂಲಕ ಅಡಿಕೆ ತುಂಡರಿಸುವುದನ್ನು ತೋರಿಸಿಕೊಟ್ಟಾಗ ಕೃಷಿಕರು ಕರತಾಡನದ ಮೂಲಕ ಅವರ ಆವಿಷ್ಕಾರಕ್ಕೆ ಗೌರವ ಸಲ್ಲಿಸಿದರು. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಪಡ್ರೆ ಈ ಎಲ್ಲಾ  ಪ್ರಾತ್ಯಕ್ಷಿಕೆಯನ್ನು ನಿರ್ವಹಿಸಿದ್ದರು.

              ಕೃಷಿ ಯಾಂತ್ರೀಕರಣದಲ್ಲಿ ಹೊಸತು -  ಅಳವಡಿಸುವ ಸಾಧ್ಯತೆಗಳು:  ತೀರ್ಥಹಳ್ಳಿ ಸಮೀಪದ 'ವಿಟೆಕ್'ನ ವಿಶ್ವನಾಥ್ ಕುಂಟುವಳ್ಳಿ, ಚಿದಂಬರ ಕುಂಟುವಳ್ಳಿ, ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುರೇಶ್ ಭಂಡಾರಿ, ಬಾಲಚಂದ್ರ ಹೆಗಡೆ ಸಾಯಿಮನೆ, ಸಾಯಿ ಎಂಟರ್ಪ್ರೈಸಸ್ನ ಗೋವಿಂದ ಪ್ರಕಾಶ್ ತಮ್ಮ ಅನುಭವಗಳನ್ನು ಪ್ರಸ್ತುತಪಡಿಸಿದರು.  ಕ್ಯಾಂಪ್ಕೋದ ಹಿರಿಯ ನಿರ್ದೇಶಕ ಕರುಣಾಕರ ನಂಬಿಯಾರ್ ಅವರ ಅಧ್ಯಕ್ಷತೆ. ಉಪನ್ಯಾಸಕ ಪರೀಕ್ಷಿತ ತೋಳ್ಪಾಡಿ ನಿರೂಪಣೆ.

                  ಜಾಬ್ ವರ್ಕ್ ಮೂಲಕ ಯಂತ್ರಗಳ ಬಳಕೆ : ತೀರ್ಥಹಳ್ಳಿಯ ಅಮರನಾಥ್ ಪಡಿಯಾರ್, ಹುಳುಗೋಳ ಸಹಕಾರ ಸೊಸೈಟಿಯ ಕಾರ್ಯದರ್ಶಿ ಶಿರಸಿಯ ಆರ್.ಎಮ್.ಭಟ್, ಹೊಸನಗರದ ರೇಣುಕೇಶ್ ಆನಂದಯ್ಯ ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರು ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಟ್ರಸ್ಟಿಗಳಾದ ಶ್ರೀ ಮಂಚಿ ಶ್ರೀನಿವಾಸ್ ಆಚಾರ್ ಅಧ್ಯಕ್ಷತೆ. ಲೇಖಕ ಪ್ರಕಾಶ ಭಟ್ ಕರ್ಕಿ ನಿರೂಪಣೆ. 

                 ಎರಡನೇ ದಿವಸದ ಮೇಳದ ಕೊನೆಯ ಗೋಷ್ಠಿ : ನೀರಿನಿಂದ ವಿದ್ಯುತ್ ಉತ್ಪಾದನೆ ಕುರಿತು ರತ್ನಾಕರ ಜಯಪುರ, ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದನೆ ವಿಚಾರವಾಗಿ ಡಾ. ಅಶೋಕ್ ಕುಂದಾಪುರ ಮತ್ತು ಕೃಷಿಕ ಶೇಷಾದ್ರಿ ಕನ್ನಂಗಿ ಇವರು ಕೇಂದ್ರೀಕೃತ ಬೆಳೆ ಸಂಸ್ಕರಣೆಯನ್ನು ಮಾಡುವ ಕುರಿತು ತಮ್ಮ ಅನುಭವಗಳನ್ನು ವಿವರಿಸಿದರು. ವಿ.ವಿ ಭಟ್,  ಐ.ಎ.ಎಸ್ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರೊ. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

          ಯಂತ್ರಮೇಳದ ಕೊನೆಯ ದಿವಸದ ಗೋಷ್ಠಿಗಳು : ವಿಟ್ಲ ಸೀತಾರಾಮ ಭಟ್, ಕೋಡಿಬೈಲು ಸತ್ಯನಾರಾಯಣ ಇವರಿಂದ ತೋಟದೊಳಗೆ ಅಂತರ್ಸಾಗಾಟ, ಗೋಪಾಲಕೃಷ್ಣ ಭಟ್ ಅವರಿಂದ ರಿಕ್ಷಾದಿಂದ ತೋಟಗಳಲ್ಲಿ ಸರಕು ಸಾಗಾಟದ ಅನುಭವ ಪ್ರಸ್ತುತಿ. ಕೃಷಿಕ ರಾಮ್ ಕಿಶೋರ್ ಮಂಚಿ ಇವರಿಂದ ನಿರೂಪಣೆ.

          ವಿವೇಕಾನಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೃಷಿ ಉಪಯೋಗಿ ಆವಿಷ್ಕಾರಗಳ ವಿವರಗಳನ್ನು ಕಾಲೇಜಿನ ಪ್ರಿನ್ಸಿಪಾಲ್ ಡಾ.ಅಶೋಕ್ ಕುಮರ್ ಅಧ್ಯಕ್ಷತೆಯಲ್ಲಿ ಜರುಗಿದ ಗೋಷ್ಠಿಯಲ್ಲಿ ವಿವರಿಸಲಾಯಿತು. ಉಪನ್ಯಾಸಕ ಉದಯಕುಮಾರ್ ಅವರ ನಿರೂಪಣೆ.  ಹನಿ ನೀರಾವರಿ ಪ್ರಾಮುಖ್ಯತೆ ಮತ್ತು ರಸಗೊಬ್ಬರಗಳನ್ನು ನೀರಿನ ಮೂಲಕ ಪೂರೈಕೆ ಮಾಡುವ ಕುರಿತು ಶ್ರೀನಿವಾಸ ನಾಯ್ಕ್, ಆಧುನಿಕ ಸಸ್ಯ ಸಂರಕ್ಷಣಾ ಉಪಕರಣಗಳ ಕುರಿತು ಎಸ್.ವಿ.ರಂಗಸ್ವಾಮಿ ಕಂಪೆನಿಯ ಪ್ರತಿನಿಧಿಗಳಿಂದ ಮಾಹಿತಿ. ಪತ್ರಕರ್ತ, ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ ಇವರಿಂದ ನಿರ್ವಹಣೆ. 

          ಮೂರೂ ದಿವಸ ನಡೆದ ಗೋಷ್ಠಿಗಳಲ್ಲಿ ಕೃಷಿಕರ ಉಪಸ್ಥಿತಿ ವಿರಳವಾಗಿದ್ದರೂ, ಮಾಹಿತಿಗಳ ವಿನಿಮಯ ಹೇರಳ. ಪ್ರಶ್ನೋತ್ತರಗಳ ಮೂಲಕ ಸಂಶಯ ಪರಿಹಾರ. ಗಟ್ಟಿ ಹೂರಣಗಳಿದ್ದ ವಿಚಾರಗೋಷ್ಠಿಗಳ ಕಾರ್ಯಸೂಚಿಗಳು ಪ್ರಸ್ತುತ ಕೃಷಿ ರಂಗದ ಸಮಸ್ಯೆಗಳತ್ತ ಪರಿಹಾರದ ನೋಟ ನೀಡಿವೆ.

0 comments:

Post a Comment