Friday, November 2, 2012

ಕೃಷಿ ಯಂತ್ರ ಮೇಳಕ್ಕೆ ಶುಭ ಚಾಲನೆ




                ಪುತ್ತೂರು (ದ.ಕ.) ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದಿನಿಂದ - ನವಂಬರ್ 2 ರಿಂದ 4ರ ತನಕ - ಕೃಷಿ ಯಂತ್ರ ಮೇಳಕ್ಕೆ ಚಾಲನೆ. ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಶಿ ಡಾ.ವೀರೇಂದ್ರ ಹೆಗ್ಗಡೆಯವರಿಂದ ದೀಪಜ್ವಲನೆ ಮೂಲಕ ಉದ್ಘಾಟನೆ. ಜತೆಗೆ ರಿಮೋಟ್ ಮೂಲಕ ಪಂಪ್ ಚಾಲೂ ಮಾಡಿ 'ಯಾಂತ್ರೀಕೃತ'ವಾಗಿ ಚಾಲನೆ.

                 ಅವರ ಉದ್ಘಾಟನಾ ಭಾಷಣದ ಒಂದು ನೋಟ : ನಾವು ಕೃಷಿಕರಾಗಿ ಉಳಿದರೆ ನಮ್ಮ ಮಕ್ಕಳಿಗೆ ಭವಿಷ್ಯವಿಲ್ಲ ಎಂಬ ಹಂತಕ್ಕೆ ಕೃಷಿಕರು ಬಂದುಬಿಟ್ಟಿದ್ದಾರೆ. ನಗರದಿಂದ ವಲಸೆ ಬಂದು ಹಳ್ಳಿಯಲ್ಲಿ ಕೃಷಿ ಮಾಡಲು ಉದ್ಯುಕ್ತರಾದವರು ಬಹಳಷ್ಟು ಮಂದಿ ಸಿಗುತ್ತಾರೆ. ಕೃಷಿ ಕೆಲಸಗಳಲ್ಲಿ ವೆಚ್ಚ ಹೆಚ್ಚಾಗಿದೆ. ಅದಕ್ಕೆ ಹೊಂದುವಂತಹ ಜೀವನಶೈಲಿ ನಮ್ಮಲ್ಲಿಲ್ಲ. ಬದುಕಿನ ಆಸೆಗಳು, ಆಕಾಂಕ್ಷೆಗಳು ಹೇರಳವಾಗಿವೆ. ಅದನ್ನೆಲ್ಲಾ ಕೃಷಿ ಭರಿಸಬೇಕೆನ್ನುವುದು ಎಷ್ಟು ಸರಿ? ಇದ್ದ ಭೂಮಿಯಲ್ಲಿ ಹೆಚ್ಚು ಉತ್ಪನ್ನಗಳನ್ನು ಪಡೆಯುವ ದಾರಿ ಹುಡುಕಬೇಕು. ಆಧುನಿಕ ತಂತ್ರಜ್ಞಾನಗಳು ಎಲ್ಲಾ ರಂಗವನ್ನು ಪ್ರವೇಶಿಸಿವೆ. ಆಷ್ಟೇ ವೇಗದಲ್ಲಿ ಕೃಷಿ ಕ್ಷೇತ್ರಕ್ಕೆ ಅವು ಪ್ರವೇಶವಾಗಿಲ್ಲ. ಕೂಲಿ ಸಮಸ್ಯೆ ಇಂದು ನಿನ್ನೆಯದಲ್ಲ. ಏಳು ದಶಕದ ಹಿಂದೆ ಅಮೇರಿಕಾ, ಯುರೋಪ್ ದೇಶಗಳಲ್ಲಿ ಕಾರ್ಮಿಕ ಸಮಸ್ಯೆ ತಲೆದೋರಿವೆ. ಕಳೆದೆರಡು ದಶಕದಿಂದ ನಮ್ಮಲ್ಲೂ ಸಮಸ್ಯೆ ಬೆಳೆದಿದೆ. ಹತ್ತು ವರುಷಗಳ ಕಾಲ ಇದಕ್ಕೆ ಪರ್ಯಾಯ ದಾರಿ ಕಂಡುಕೊಳ್ಳದೆ ಸಮಸ್ಯೆಯನ್ನೇ ವೈಭವೀರಿಕರಿಸಿದೆವು. ಈಗ ಪರಿಹಾರದ ದಾರಿಯನ್ನು ಹುಡುಕುತ್ತಿದ್ದೇವೆ. ಕೃಷಿಯಲ್ಲಿ ಎದುರಾಗುವ ಸಮಸ್ಯೆಯನ್ನು ಎದುರಿಸಿ, ಅದನ್ನು ಸವಾಲಾಗಿ ಸ್ವೀಕರಿಸಬೇಕು. ಅದಕ್ಕೆ ಬೆನ್ನು ಹಾಕುವುದು ಸರಿಯಲ್ಲ. ಕೃಷಿ ಉಪಕರಣ, ಯಂತ್ರಗಳ ಆವಿಷ್ಕಾರಗಳಿಗೆ ಪ್ರಖರ ಮಾಧ್ಯಮ ಬೆಳಕು ಬಿದ್ದಿಲ್ಲ. ನಮ್ಮಲ್ಲಿ ಅಕ್ಕಿ ಮಿಲ್ಲುಗಳು ಹೇಗೆ ಅಭಿವೃದ್ಧಿಯಾಗಿವೆಯೋ, ಅದೇ ರೀತಿ ಅಡಿಕೆ ಸಂಸ್ಕರಣೆಗೂ ಮಿಲ್ ರೂಪಿತವಾಗಬೇಕು.
.
                ಕ್ಯಾಂಪ್ಕೋದ ಆಧ್ಯಕ್ಷ ಕೊಂಕೋಡಿ ಪದ್ಮನಾಭ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಎಸ್.ಸಿ.ಡಿ.ಸಿ.ಸಿ.ಬ್ಯಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಪ್ರಸಾದ್, ಬಾಹ್ಯಾಕಾಶ ಮತ್ತು ಅಣುಶಕ್ತಿ ಆಯೋಗದ ಕಾರ್ಯದರ್ಶಿ ವಿ.ವಿ.ವಿ.ವಿ ಭಟ್.ಶುಭಾಶಂಸನೆ ಮಾಡಿದರು.

                ಈ ಸಂದರ್ಭದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಜತ ವರ್ಷಕ್ಕೆ ಕಾಲಿಟ್ಟ ಕೃಷಿ ಮಾಧ್ಯಮ ಅಡಿಕೆ ಪತ್ರಿಕೆಯ ವಿಶೇಷಾಂಕವನ್ನು ಮತ್ತು ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ 'ಕೃಷಿಕ ಮಾಹಿತಿ' ಪುಸ್ತಿಕೆಯನ್ನು ಅನಾವರಣಗೊಳಿಸಿದರು.

                ವೇದಿಕೆಯಲ್ಲಿ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ಬಲರಾಮ ಆಚಾರ್ಯ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಉಪಸ್ಥಿತರಿದ್ದರು.

ವಿಚಾರಗೋಷ್ಠಿ:
ಅಪರಾಹ್ನ 'ಕೃಷಿ ಯಾಂತ್ರೀಕರಣದ ಅನುಭವಗಳು ಎಂಬ ವಿಚಾರದಲ್ಲಿ ಅನುಭವ ಪ್ರಸ್ತುತಿ. ಅನುಭವಿ ಕೃಷಿಕರಾದ ಕೂಳೂರು ಸತ್ಯನಾರಾಯಣ, ಈಶ್ವರ ಪ್ರಸಾದ್ ಬನಾರಿ ಮತ್ತು ನಿಟಿಲೆ ಮಹಾಬಲೇಶ್ವರ ಭಟ್ ತಮ್ಮ ಆವಿಷ್ಕಾರಗಳತ್ತ ಪವರ್ ಪಾಯಿಂಟ್ ಮೂಲಕ ಬೆಳಕು ಹಾಕಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಗೋಷ್ಠಿಯನ್ನು ಮುನ್ನಡೆಸಿದ್ದರು.

'ಪಶುಪಾಲನೆ - ಯಾಂತ್ರೀಕರಣದ ಸಾಧ್ಯತೆ-ಸವಾಲುಗಳೂ - ಈ ಗೋಷ್ಠಿಯ ಅಧ್ಯಕ್ಷತೆನ್ನು ಶಾಂತಾರಾಮ ಹೆಗಡೆ ವಹಿಸಿದ್ದರು. ಶಿರಸಿ ನೀರ್ನಳ್ಳಿಯ ಅನುಭವಿ ಕೃಷಿಕ ಸೀತಾರಾಮ ಹೆಗಡೆ ನೀರ್ನಳ್ಳಿಯವರು ತಮ್ಮ ಹೈನುಗಾರಿಕೆ ಅನುಭವವನ್ನು ಪ್ರಸ್ತುತಪಡಿಸಿದರು. ಡಾ.ದಿನೇಶ್ ಸರಳಾಯ ನಿರ್ವಹಣೆ.

                ನೂರ ಐವತ್ತೇಳು ಮಳಿಗೆಗಳು ಭರ್ತಿ. ವಿಪರೀತ ಮಳೆ. ಸ್ವಲ್ಪಮಟ್ಟಿಗೆ ವ್ಯವಸ್ಥೆಯಲ್ಲಿ ಏರುಪೇರು. ಆದರೂ ಸಮಯಕ್ಕೆ ಸರಿಯಾಗಿ ಆರಂಭವಾದ ಕಲಾಪಗಳು. ದಿನಪೂರ್ತಿ ಮಳಿಗೆಗಳಲ್ಲಿ ಕೃಷಿಕರ ಸಂದೋಹ.

0 comments:

Post a Comment