Monday, July 8, 2013

ಅಡ್ಯನಡ್ಕದಲ್ಲಿ ಹಲಸು ಹಬ್ಬ - ಉದ್ದಿಮೆದಾರರೊಂದಿಗೆ ಮಾತುಕತೆ





                  ಬಂಟ್ವಾಳ ತಾಲೂಕು (ದ.ಕ.) ಅಡ್ಯನಡ್ಕ ವಾರಣಾಶಿ ಹಲಸು ಬೆಳೆಗಾರರ ಸಂಘ, ಹಲಸು ಸ್ನೇಹಿ ಕೂಟದ ಆಶ್ರಯದಲ್ಲಿ ಜುಲೈ 7ರಂದು ಅಡ್ಯನಡ್ಕ ಹೈಸ್ಕೂಲಿನಲ್ಲಿ ಹಲಸು ಹಬ್ಬ ಜರುಗಿತ್ತು. ಆಶಯ : ಬೆಳೆಗಾರರು ಮತ್ತು ಉದ್ದಿಮೆದಾರರೊಂದಿಗೆ ನೇರ ಮುಖಾಮುಖಿ. ಹನಿಕಡಿಯದ ಧಾರಾಕಾರ ಮಳೆ ಬರುತ್ತಿದ್ದರೂ ಹಬ್ಬಕ್ಕೆ ಸಾವಿರಕ್ಕೂ ಮಿಕ್ಕಿ ಹಲಸು ಪ್ರಿಯರು ಆಗಮಿಸಿದ್ದರು. ಪುತ್ತೂರು ಶಾಸಕಿ ಶ್ರೀಮತಿ ಶಕುಂತಳಾ ಟಿ. ಶೆಟ್ಟಿಯವರಿಂದ ಹಲಸನ್ನು ತುಂಡರಿಸುವ ಮೂಲಕ ಉದ್ಘಾಟನೆ. ಈ ಸಂದರ್ಭದಲ್ಲಿ ಸವಿತಾ ಎಸ್. ಭಟ್ ಅಡ್ವಾಯಿ ಅವರ ಹಲಸು ಪುಸ್ತಕದ ಅನಾವರಣ.

               ಕರ್ನಾಟಕ ಸರಕಾರದ ಅರಣ್ಯ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು ರೈತರಿಂದ ಆಯ್ಕೆಯಾದ ಹಲಸಿನ ತಳಿಗಳನ್ನು ಬಿಡುಗಡೆಗೊಳಿಸಿದರು. ಮಂಗಳೂರು ಏಸ್. ಫುಡ್ಸ್ ಪ್ರೈ ಲಿ., ಇದರ ಡಾ. ಯಂ ಅಣ್ಣಪ್ಪ ಪೈ, ಮಾಳ ಚಿರಾಗ್ ಹೋಮ್ ಇಂಡಸ್ಟ್ರೀಸ್ ಇದರ ಪರಮಾನಂದ ಜೋಶಿ, ಮಹಾರಾಷ್ಟ್ರ ರತ್ನಾಗಿರಿಯ ಪವಾಸ್ ಕ್ಯಾನಿಂಗ್ ಇದರ ಮಾಲಕರಾದ ಹೇಮಂತ ದೇಸಾಯಿ, ಮುಂಬಯಿಯ ಉದ್ಯಮಿ ಶ್ರೀಮತಿ ಸೌಮ್ಯ ಡಿ. ಪೈ, ಮಾಳದ ಮಾಜಿ ಗ್ರಾ. ಪ. ಆಧ್ಯಕ್ಷ ಹರಿಶ್ಚಂದ್ರ ತೆಂಡೂಲ್ಕರ್ - ತಮ್ಮ ಉದ್ದಿಮೆಯ ಅನುಭಗಳನ್ನು ತೆರೆದಿಟ್ಟರು. ಬೆಂಗಳೂರು ಕೃಷಿ ವಿವಿಯ ಸಹ ಪ್ರಾಧ್ಯಾಪಕರಾದ ಡಾ.ಶ್ಯಾಮಲಮ್ಮ, ಬೆಂಗಳೂರು ಐ.ಐ.ಹೆಚ್.ಆರ್. ವಿಜ್ಞಾನಿ ಡಾ. ಪ್ರಕಾಶ್ ಪಾಟೀಲ, ಕೇರಳ ಅಂಬಲವಾಯಲ್ ಆರ್.ಎ.ಆರ್.ಎಸ್. ಇದರ ಸಹ ನಿರ್ದೇಶಕ ಡಾ. ಪಿ.ರಾಜೇಂದ್ರನ್ - ತಂತಮ್ಮ ಸಂಸ್ಥೆಗಳಲ್ಲಿ ಮಾಡಿದ ಹಲಸಿನ ಕೆಲಸಗಳನ್ನು ಪವರ್ ಪಾಯಿಂಟ್ ಮೂಲಕ ಉಪನ್ಯಾಸ ಮಾಡಿದರು.

              ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ಶ್ರೀ ಪಡ್ರೆಯವರು ತಮ್ಮ ಹಲಸಿನ ಸಾಧ್ಯತೆಗಳ ವಿಶ್ವಲೋಕವನ್ನು ತೆರೆದಿಟ್ಟರು. ವಿದರ್ಭ, ಕೇರಳ, ಶ್ರೀಲಂಕಾ. ಮೆಕ್ಸಿಕೋ.. ಹೀಗೆ ಹಲವು ರಾಷ್ಟ್ರಗಳ ಹಲಸಿನ ಮೌಲ್ಯವರ್ಧನೆಯ ಯಶೋಗಾಥೆಗಳು ಹಬ್ಬದ ಹೈಲೈಟ್.

                 ಐಟಿ ಉದ್ಯೋಗಿ ಮಂಚಿಯ ವಸಂತ ಕಜೆಯವರು ಹಲಸಿನ ಹಣ್ಣಿನ ಐಸ್ ಕ್ರೀಮ್ ಮತ್ತು ತೆಂಗಿನ ಹಾಲಿನ ಐಸ್ ಕ್ರೀಮ್ ಹಬ್ಬಕ್ಕಾಗಿಯೇ ಸಿದ್ದಪಡಿಸಿದ್ದರು. ಕಪ್ ಒಂದರ ಹದಿನೈದು ರೂಪಾಯಿ. ಮಧ್ಯಾಹ್ನದ ಹೊತ್ತಿಗೆ ಎಲ್ಲವೂ ಖಾಲಿ. ಮುಂಬಯಿಯ ನ್ಯಾಚುರಲ್ ಐಸ್ ಕ್ರೀಮ್ ಇದರ ರಘುನಂದ ಕಾಮತರು ಹಲಸಿನ ಹಣ್ಣಿನ ಐಸ್ ಕ್ರೀಮನ್ನು ಉಚಿತವಾಗಿ ವಿತರಿಸಿದ್ದರು. ಬೆಂಗಳೂರಿನ ಬಿಕೇಸ್ ಬೇಕರಿಯ ಬಿ.ಎಸ್.ಭಟ್ಟರು ಉಪಸ್ಥಿತರಿದ್ದು, ಹಲಸಿನ ಹಣ್ಣನ್ನು ಬಳಸಿ ಮಾಡಿದ ಬೇಕರಿ ಐಟಂನ್ನು ಪ್ರದರ್ಶನಕ್ಕಿಟ್ಟಿದ್ದರು. ಅಲ್ಲದೆ ಸಂಜೆಯ ಉಪಾಹಾರಕ್ಕೆ ಕಪ್ ಕೇಕನ್ನು ಉಚಿತವಾಗಿ ನಿಡಿದ್ದರು. ಕೊಪ್ಪದ ವಿಜಯಕುಮಾರ್ ದಂಪತಿಗಳು ಉಪ್ಪಿನಲ್ಲಿ ಹಾಕಿದ ರೆಡಿ ಟು ಗುಜ್ಜೆ, ಒಣ ಹಲಸಿನ ಹಣ್ಣು.. ಉತ್ಪನ್ನಗಳು ಗಮನಾರ್ಹ. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ಮುಳಿಯ ಇವರ ಉಸ್ತುವಾರಿಕೆಯಲ್ಲಿ ಸಿದ್ಧವಾದ ಹಲಸಿನ ಹಣ್ಣಿನ ಹಲ್ವಕ್ಕೆ ಉತ್ತಮ ಬೇಡಿಕೆ.

                ಮಧ್ಯಾಹ್ನ ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್ ಮತ್ತು ಶಿರಂಕಲ್ಲು ನಾರಾಯಣ ಭಟ್ಟರ ಉಸ್ತುವಾರಿಕೆಯಲ್ಲಿ ಹಲಸಿನ ಸವಿ ಭೋಜನ. ವರ್ಮುಡಿ ಶಿವಪ್ರಸಾದ್ ಅವರಿಗೆ ಹಲಸಿನ ಸ್ಪರ್ಧಾ ವಿಭಾಗದ ನಿರ್ವಹಣೆ. ಐವತ್ತಕ್ಕೂ ಮಿಕ್ಕಿ ಖಾದ್ಯಗಳು ಪ್ರದರ್ಶನಕ್ಕೆ ಬಂದಿದ್ದುವು. ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಪೂರ್ಣ ಸಹಯೋಗ. ಹಲಸಿನ ರೆಸಿಪಿ, ಗಿಡಗಳತ್ತ ಬಹುಮಂದಿಯ ಚಿತ್ತ ಎದ್ದು ಕಾಣುತ್ತಿದ್ದುವು. 

ಚಿತ್ರ : ಮಹೇಶ ಪಿ.

0 comments:

Post a Comment