Tuesday, July 2, 2013

ಅಡ್ಯನಡ್ಕ: ಜುಲೈ 7ರಂದು ವಿಶಿಷ್ಟ ಹಲಸಿನ ಹಬ್ಬ

              
               ವಾರಣಾಶಿ ಹಲಸು ಬೆಳೆಗಾರರ ಸಂಘ ಜುಲೈ ಏಳರ ಭಾನುವಾರದಂದು ಅಡ್ಯನಡ್ಕದಲ್ಲಿ ವಿನೂತನ ರೀತಿಯ ಹಲಸಿನ ಹಬ್ಬ ನಡೆಸಲಿದೆ. ತೋಟಗಾರಿಕಾ ಇಲಾಖೆ, ವಾರಣಾಶಿ ಸಂಶೋಧನಾ ಪ್ರತಿಷ್ಠಾನ ಮತ್ತು ಹಲಸುಸ್ನೇಹಿ ಕೂಟಗಳು ಈ ಕಾರ್ಯಕ್ರಮಕ್ಕೆ ಸಹಯೋಗ ನೀಡುತ್ತಿವೆ. ಅಡ್ಯನಡ್ಕದ ಜನತಾ ಜೂನಿಯರ್ ಕಾಲೇಜಿನಲ್ಲಿ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಯ ವರೆಗೆ ಈ ಹಬ್ಬ ನಡೆಯಲಿದೆ.

                 ಹಲಸು ಉದ್ದಿಮೆದಾರ - ಬೆಳೆಗಾರರ ಸಮಾವೇಶ ಮತ್ತು ರೈತ ಆಯ್ಕೆಯ ಸ್ಥಳೀಯ ತಳಿಗಳ ಬಿಡುಗಡೆ ಈ ಏಕದಿನದ ಹಬ್ಬದ ಎರಡು ಅಭೂತಪೂರ್ವ ವಿಶೇಷಗಳು.

               ಜಿಲ್ಲೆಯ ಹಲಸಿನ ಉದ್ದಿಮೆದಾರರು ಮತ್ತು ಬೆಳೆಗಾರರ ನಡುವೆ ಸಂಪರ್ಕ ಕಲ್ಪಿಸಿ, ಪರಸ್ಪರ ತಿಳುವಳಿಕೆ ಮೂಡಿಸುವುದು ಮತ್ತು ಉತ್ತಮ ತಳಿ ನೆಟ್ಟು ಸರಿಯಾದ ರೀತಿಯಲ್ಲಿ ಹಲಸಿನ ಕೃಷಿ ಮಾಡುವ ಬಗ್ಗೆ ರೈತರಲ್ಲಿ ಭರವಸೆ ಮೂಡಿಸುವುದು ಉದ್ದಿಮೆದಾರ - ಬೆಳೆಗಾರರ ಸಮಾವೇಶದ ಉದ್ದೇಶ.

                ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲಸಿನ ಮುಖ್ಯ ಉದ್ದಿಮೆಗಳಾದ ಚಿಪ್ಸ್, ಹಪ್ಪಳ ಮತ್ತು ಉಪ್ಪುಸೊಳೆ ಉತ್ಪನ್ನಗಳ ಉದ್ದಿಮೆದಾರ ಪ್ರತಿನಿಧಿಗಳು ಮಾತನಾಡಲಿದ್ದಾರೆ. ಈಚೆಗೆ ಹಲಸಿನ ತೋಟ ಮಾಡಿದ ಕೃಷಿಕರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ದೇಶವಿದೇಶಗಳಲ್ಲಿ ಹಲಸಿನ ಅಭಿವೃದ್ಧಿಯ ಬಗ್ಗೆ ದಿಕ್ಸೂಚಿ ಸ್ಲೈಡ್ ಪ್ರದರ್ಶನವಿದೆ.

                ಶ್ರೀಮತಿ ಸವಿತಾ ಎಸ್ ಭಟ್ ಅಡ್ವಾಯಿ ಬರೆದ 'ಹಲಸಿನ ಸವಿ' ಪುಸ್ತಕವನ್ನು ಪುತ್ತೂರು ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ ಬಿಡುಗಡೆ ಮಾಡುತ್ತಾರೆ. ಕಳೆದೆರಡು ವರ್ಷಗಳಲ್ಲಿ ಸರಳ ರೀತಿಯ ಆಯ್ಕೆ ಪ್ರಕ್ರಿಯೆಯಿಂದ ಊರಿನ ಕೃಷಿಕರೇ ಆಯ್ದ ಹತ್ತೊಂಭತ್ತು ಸ್ಥಳೀಯ ಉತ್ತಮ ಹಲಸಿನ ತಳಿಗಳನ್ನು ಅರಣ್ಯ ಸಚಿವ ಶ್ರೀ ರಮಾನಾಥ ರೈ ಬಿಡುಗಡೆಗೊಳಿಸಲಿದ್ದಾರೆ. ಇವುಗಳ ಸಾಕಷ್ಟು ಕಸಿಗಿಡಗಳು ಹಲಸಿನ ಹಬ್ಬದಲ್ಲಿ ಕೊಂಡುಕೊಳ್ಳಲು ಲಭ್ಯವಿರುತ್ತವೆ.
ಉದ್ದಿಮೆ ಮತ್ತು ಬೆಳೆಗಾರರ ನಡುವೆ ಸಂಪರ್ಕ ಕಲ್ಪಿಸುವ ಮತ್ತು ರೈತರೇ ಸಂಘಟಿತ ರೀತಿಯಲ್ಲಿ ತಳಿ ಆಯ್ಕೆ ಮಾಡಿ, ಅದನ್ನು ದೊಡ್ಡ ಪ್ರಮಾಣದಲ್ಲಿ ಕಸಿ ಮಾಡಿ ಬಿಡುಗಡೆ - ದೇಶದಲ್ಲಿ ಇದೇ ಮೊದಲು.

               ಊಟದ ನಂತರದ ವೈಜ್ನಾನಿಕ ಸೆಶನಿನಲ್ಲಿ ಕೇರಳ-ಕರ್ನಾಟಕಗಳ ಹಲಸು ವಿಜ್ನಾನಿಗಳು ಹಲಸು ಅಭಿವೃದ್ಧಿಯ ಬಗ್ಗೆ ಮಾತನಾಡಲಿದ್ದಾರೆ. ಹಲಸಿನ ಅಡುಗೆಯ ಸ್ಪರ್ಧೆ ಇನ್ನೊಂದು ವಿಶೇಷ. ಇದಕ್ಕಾಗಿ ಗೃಹಿಣಿಯರು ಸಂಘಟಕರು ಸೂಚಿಸಿದ ವಿಭಾಗಗಳಲ್ಲಿ ಮಾಡಿದ ಹೊಸ ರುಚಿಗಳನ್ನು ಮನೆಯಲ್ಲೇ ಮಾಡಿ ತರಬಹುದು.

                ಹಲಸಿನ ಅಡುಗೆ ಸ್ಪರ್ಧೆ ವಿಜೇತರಿಗೆ ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಭಾರ ತೋಟಗಾರಿಕಾ ನಿರ್ದೇಶಕ ಶ್ರೀ ಮಹೇಶ್ವರ್ ಭಾಗವಹಿಸುತ್ತಾರೆ.

               ಹಲಸಿನಹಣ್ಣು ಬಳಸಿ ಬೆಂಗಳೂರಿನ ಪ್ರಸಿದ್ಧ ಬೇಕಿಂಗ್ ಹೌಸ್ 'ಬೀಕೇಸ್' ತಯಾರಿಸಿದ ಬೇಕರಿ ಉತ್ಪನ್ನಗಳ ಪ್ರದರ್ಶನವಿದೆ. 'ಉದ್ದಿಮೆದಾರ' ಸಮಾವೇಶದಲ್ಲಿ ಎಳೆಹಲಸಿನ (ಗುಜ್ಜೆ) ಕ್ಯಾನಿಂಗ್ ಉದ್ದಿಮೆಯ ಹರಿಕಾರ, ಎರಡು ದಶಕಗಳಿಂದ ಇದನ್ನು ಉತ್ಪಾದಿಸಿ ಮಾರುತ್ತಿರುವ ಮಹಾರಾಷ್ಟ್ರದ ರತ್ನಾಗಿರಿಯ 'ಪವಸ್ ಕ್ಯಾನಿಂಗಿನ' ಒಡೆಯ ಹೇಮಂತ್ ದೇಸಾಯಿ ಮತ್ತು ಮುಂಬಯಿಯಲ್ಲಿ ಮೊತ್ತಮೊದಲ ಬಾರಿಗೆ 'ರೆಡಿ ಟು ಕುಕ್' ಗುಜ್ಜೆಯನ್ನು ಮೇಲ್ದರ್ಜೆಯ ಸೂಪರ್ ಮಾರ್ಕೆಟ್ ಮೂಲಕ ಪರಿಚಯಿಸಿದ ಶ್ರೀಮತಿ ಸೌಮ್ಯ ಡಿ.ಪೈ ತಮ್ಮ ಅನುಭವ ಹಂಚಲಿರುವುದು ಈ ಭಾಗದ ಹಲಸುಪ್ರಿಯರಿಗೆ ಉತ್ತೇಜನ ನೀಡಲಿದೆ.

                ಹಬ್ಬ ಸಂಘಟನೆಗೆ ಹಲಸು ಅಭಿವೃದ್ಧಿಗಾಗಿ ಪ್ರಚಾರ ನಡೆಸುತ್ತಿರುವ ಕೃಷಿಕರ ಮಾಧ್ಯಮ ಅಡಿಕೆ ಪತ್ರಿಕೆ ಸಹಕಾರ ನೀಡುತ್ತಿದೆ. ಪಾಲ್ಗೊಳ್ಳುವವರಿಗೆ ನೋಂದಣಿ ಶುಲ್ಕವಿದೆ.

ಹೆಚ್ಚಿನ ವಿವರಗಳಿಗೆ (08255) 270 254; 94484 70254

(ಚಿತ್ರ : ಶ್ರೀ ಪಡ್ರೆ)

0 comments:

Post a Comment