Tuesday, June 16, 2009

ನೀರಿನಾಟದಿಂದ ಹಸಿರಾದ ಒಣಭೂಮಿ

'ಓಡುವ ನೀರನ್ನು ಹರಿಯುವಂತೆ, ಹರಿಯುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ ಮಾಡುವುದು' - ಮಳೆಕೊಯ್ಲಿನ ಸರಳ ಸೂತ್ರ. 'ನಲ್ಲಿನಲ್ಲಿ ಒಂದು ಸೆಕೆಂಡಿಗೆ ಒಂದು ಹನಿ ಸೋರಿದರೆ ದಿನಕ್ಕೆ ಐವತ್ತು ಲೀಟರ್ ನೀರು ಹಾಳು' - ಇದು ನೀರಿನ ಲೆಕ್ಕಾಚಾರ.

ಮಹಾರಾಷ್ಟ್ರದ ಜಲಗಾಂವ್ನ ಭವರ್ಲಾಲ್ ಜೈನ್ 'ಪಾಳು ಭೂಮಿ'ಯನ್ನು ನೀರಿನ ಜಾಣ್ಮೆ ಬಳಕೆಯಿಂದ ಹಸಿರು ಮಾಡಿರುವುದು ಮಳೆಕೊಯ್ಲಿನ ಯಶಕ್ಕೊಂದು ಉದಾಹರಣೆ.ಜಲಗಾಂವ್ನ ಸಿರ್ಸೋಲಿಯಾ ಗುಡ್ಡಪ್ರದೇಶ ಮನುಷ್ಯ ಸಂಚಾರವಿಲ್ಲದ, ವ್ವವಸಾಯಕ್ಕೆ ಅಯೋಗ್ಯವಾದ ಒಣಭೂಮಿ. ನಿಷ್ಪ್ರಯೋಜಕವೆಂದು ಸರಕಾರಿ ದಾಖಲೆಯಲ್ಲಿರುವ ಈ ಭೂಮಿಯ ಖರೀದಿಗೆ ಜೈನ್ 'ತಲೆ ಕೆಟ್ಟಿದೆ' ಅಂತ ಗೇಲಿ ಮಾಡಿದರು.

ಜಲಗಾಂವ್ನಲ್ಲಿ ಬೀಳುವ ಮಳೆ 700-750 ಮಿ.ಮೀ. ತಾಪಮಾನ 7 - 45 ಡಿಗ್ರಿ ಸೆಲ್ಸಿಯಸ್. ಕೊಳವೆ ಪಾತಾಳಕ್ಕೆ ಇಳಿದರೂ ಭಣಭಣ. ಇದಕ್ಕೊಂದು ಪರಿಹಾರ ಬೇಕಾಗಿತ್ತು. ತನ್ನ ಹನಿನೀರಾವರಿ ವ್ಯವಸ್ಥೆಯ ಜ್ಞಾನವನ್ನು ಕೃಷಿಕರಿಗೆ ತಲುಪಿಸಲು ಜೈ ಅವರಿಗೆ 'ಡೆಮೋ' ಬೇಕಿತ್ತು. ತನ್ನ ಕನಸಿನ ಈ ಜಾಗ ಸಿಕ್ಕಾಗ ಅವರಿಗಾದ ಖುಷಿ ಇದೆಯಲ್ಲಾ!

ಈ ಗುಡ್ಡವು ಸಾವಿರಡಿ ಎತ್ತರ. ಮಣ್ಣು ವಿರಳ. ಕಲ್ಲುಗುಂಡುಗಳೇ ಅಧಿಕ. ಅಲ್ಲಲ್ಲಿನ ಹೊಂಡ, ಕಣಿವೆಗಳನ್ನು ಅಲ್ಲಲ್ಲೇ ಮುಚ್ಚಿ, ಸಮತಟ್ಟು ಮಾಡಿದರು. ಎತ್ತಿನ ಗಾಡಿ ಹೋಗುವಷ್ಟು ಕಚ್ಚಾ ರಸ್ತೆ ನಿರ್ಮಾಣ. ಮಾನವಶ್ರಮದೊಂದಿಗೆ ಜೆಸಿಬಿಗೂ ಕೆಲಸ. 'ಇಲ್ಲಿ ಅಂತರ್ಜಲ ಇಲ್ಲ' -ಎಂದು ಸರ್ಟಿಫಿಕೆಟ್ ನೀಡಿದ ವರಿಷ್ಠರಿಂದ. 'ಕೃಷಿಹೊಂಡಕ್ಕೆ ಓಕೆ' ಶಿಫಾರಸು.

1989ರಲ್ಲಿ ಗುಡ್ಡದ ತುದಿಯಲ್ಲಿ ಕೃಷಿಹೊಂಡವನ್ನು ನಿರ್ಮಿಸಿದರು. ಮಳೆಗಾಲದಲ್ಲಿ ನೀರು ತುಂಬಿ ಇಂಗಿತು. ಪ್ಲಾಸ್ಟಿಕ್ ಹಾಸಿದ ಮತ್ತೊಂದು ಹೊಂಡದಲ್ಲಿ ಮಳೆನೀರು ಸಂಗ್ರಹ. ಯಾಕೋ ಅದು ವಿಫಲವಾಯಿತು.ಇಂಗಿದ ನೀರಿನ ಪ್ರಯೋಜನ ಪಡೆಯಲು ತಪ್ಪಲಿನಲ್ಲಿ (ಜೈನ್ ವ್ಯಾಲಿ) ಕೊಳವೆ ಬಾವಿ ಕೊರೆತ. ಐದು ಕಿಲೋಮೀಟರ್ ದೂರದಲ್ಲಿರುವ ಗಿರಣ ನದಿ ಹರಿದಷ್ಟೂ ದಿವಸ ನೀರನ್ನು ಪಂಪ್ ಮಾಡಿ ಸಂಗ್ರಹಿಸಿದರು. ಗುಡ್ಡದ ಮೇಲೆ ಮೂರುಲಕ್ಷ ಲೀಟರಿನ ಟ್ಯಾಂಕ್ ನಿರ್ಮಾಣ. ಸಂಗ್ರಹಿತ ನದಿಯ ನೀರನ್ನು ಪಂಪ್ ಮೂಲಕ ಮೇಲೆತ್ತಿ ಟ್ಯಾಂಕಿನಲ್ಲಿ ತುಂಬಿದರು.ಗುಡ್ಡಕ್ಕೆ ಯಾವಾಗ ನೀರು ಬಂತೋ, ಮುಂದಿನ ದಾರಿಗಳು ಸುಲಭವಾಯಿತು.

ಗುಡ್ಡದ ಇಳಿಜಾರಿನಲ್ಲಿ ಸಮತಳ ಅಗಳು (ಕಂಟೂರು ಟ್ರೆಂಚ್)ಗಳನ್ನು ರಚಿಸಿದರು. ಹಣ್ಣಿನ ಗಿಡಗಳು, ಅರಣ್ಯಗಿಡಗಳನ್ನು ನೆಟ್ಟರು. ಕಚ್ಚಾರಸ್ತೆಯ ಬದಿಗಳಲ್ಲೂ ತೆಂಗಿನ ಗಿಡಗಳು. ಹನಿನೀರಾವರಿ ಮೂಲಕ ಗಿಡಗಳಿಗೆ ನೀರುಣಿಕೆ. ಅಗಳು ರಚಿಸಿದ್ದರಿಂದ ಮುಂದಿನ ಮಳೆಗಾಲದಲ್ಲಿ ಮಣ್ಣಿನ ಸವಕಳಿ ನೀಂತಿತು.ನದಿ ನೀರನ್ನು ನಂಬುವಂತಿಲ್ಲ. 93ರ ಸುಮಾರಿಗೆ ಜೈನ್ವ್ಯಾಲಿಯಲ್ಲಿ 12.5 ಕೋಟಿ ಲೀಟರ್ ನೀರಿನ ದೊಡ್ಡ ಇಂಗುಗೊಳ ರಚನೆ. ಇದಕ್ಕೆ 'ಜೈನ್ ಸಾಗರ್' ಎಂದು ಕರೆದರು.

ಗುಡ್ಡದಿಂದ ಇಳಿದು ಬರುವ ನೀರು ಇದರಲ್ಲಿ ಸಂಗ್ರಹ. ಇಲ್ಲಿಂದ ಗುಡ್ಡದ ತುದಿಗೆ! ಮಿಕ್ಕಿದ ನೀರು ಹರಿದು ಹೊರಹೋಗುವಲ್ಲಿ ಬಾವಿ ರಚನೆ. ಈ ಎಲ್ಲಾ ನೀರಿನಾಟದಿಂದಾಗಿ 2001-02ರ ಬರದಲ್ಲೂ ನೀರಿಗೆ ತೊಂದರೆಯಾಗಲಿಲ್ಲ!ಸಮತಳು ಬದು, ಬಾಂದಾರಗಳ ರಚನೆ. ದೂರದಿಂದ ಗುಡ್ಡವನ್ನು ನೋಡಿದರೆ ಮೆಟ್ಟಿಲುಗಳ ಸರಪಳಿಯಂತೆ ಕಾಣುತ್ತದೆ. ಮೆಟ್ಟಿಲುತಟ್ಟು ಅಸಾಧ್ಯವಾದ ಜಾಗದಲ್ಲಿ ಅಡ್ಡವಾಗಿ 'ಕಟ್ಟ'ದಂತಹ ರಚನೆ. ಇದರಿಂದಾಗಿ ಮಳೆನೀರು ಇಂಗಲು ಸಹಕಾರಿ. ಮೆಟ್ಟಿಲು ತಟ್ಟುಗಳು ಮಳೆನೀರನ್ನು ಹಿಡಿದಿಡುತ್ತದೆ. ವ್ಯಾಲಿಯಲ್ಲಿರುವ ಜೈನ್ ಸಾಗರ್ ಕೊಳ ಕಡು ಬೇಸಿಗೆಯಲ್ಲೂ ಬತ್ತುವುದಿಲ್ಲ!

ಜೈನ್ ಅವರ ಈ ಎಲ್ಲಾ ಕೆಲಸಗಳಿಂದಾಗಿ ಮಳೆಕೊಯ್ಲು, ಜಲಸಂರಕ್ಷಣೆ ಮತ್ತು ಮರುಪೂರಣಗಳು ಏಕಕಾಲಕ್ಕೆ ಆಗುವಂತಾಗುತ್ತದೆ.ಮೂವತ್ತು ಸಾವಿರಕ್ಕೂ ಮಿಕ್ಕಿ ಮಾವಿನ ಗಿಡಗಳು, ಹುಣಿಸೆ, ಪೇರಳೆ, ಸೀತಾಫಲಗಳು ಎದ್ದಿವೆ. ಹಸಿರೆಲೆ ಗೊಬ್ಬರ, ಸಾವಯವ ಕೃಷಿ ಫಲವತ್ತೆಗಳು ಮಣ್ಣಿಗೆ ಮರುಜೀವ ಕೊಟ್ಟಿವೆ. ಇಷ್ಟೆಲ್ಲ ಕೆಲಸ ಮಾಡಿದ ಭವರ್ಲಾಲ್ ಜೈನ್ ಯಾರು ಗೊತ್ತೇ - ವಿಶ್ವಖ್ಯಾತಿಯ ಜೈನ್ ಇರಿಗೇಶನ್ ಸಂಸ್ಥೆಯ ಯಜಮಾನ! ಜೈನ್ ಅವರ ನೀರಿನ ಕತೆಯ ಒಟ್ಟು ಸಂದೇಶ - ನೀರನ್ನು 'ಬಡವರ ತುಪ್ಪದ ಹಾಗೆ' ಬಳಸಿ. ಪ್ರತೀ ಕೆಲಸವನ್ನು ಕಡಿಮೆ ನೀರಲ್ಲಿ ಮಾಡುವ ಬಗ್ಗೆ ಚಿಂತಿಸಿ. ನೀರಿನ ಮರುಬಳಕೆ, ಮಳೆನೀರನ್ನು ಬಳಸುವ ಅಭ್ಯಾಸ ಶುರು ಮಾಡಿ.

0 comments:

Post a Comment