Saturday, June 27, 2009

ಮಂಗಳೂರಲ್ಲೂ ಹಲಸು ಮೇಳ!











ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಂದಾಳ್ತನದಲ್ಲಿ 'ಹಲಸು ಮೇಳ ನಿನ್ನೆ, ಇಂದು (ಜೂನ್ 26, 27, 2009) ನಡೆಯಿತು. ಇನ್ನೇನು ಹಲಸು ಮುಗಿಯುವ ಸಮಯ. 'ಈಗಲಾದರೂ ಆಯಿತಲ್ಲಾ' ಸಮಾಧಾನ! ಎರಡೂ ದಿವಸವೂ ಸುಮಾರು ಇನ್ನೂರರ ಹತ್ತಿರ ಹಲಸುಪ್ರಿಯರಿದ್ದರು. 'ನಮಗೆ ಗೊತ್ತೇ ಇಲ್ವಲ್ಲಾ' ಅಂದವರೇ ಅಧಿಕ.
ಶಿರಸಿಯ ಕದಂಬ ಸಂಸ್ಥೆಯ ಮಮತಾರಿಂದ ಮೊದಲ ದಿನ ಕೆಲವು ಖಾದ್ಯಗಳ ಪ್ರಾತ್ಯಕ್ಷಿಕೆ. ಎರಡನೇ ದಿನ ಬೆಂಗಳೂರು ಕೃವಿವಿಯ ಸಂಸ್ಕರಣಾ ವಿಭಾಗದ ಕೆ.ಬಿ.ಸುರೇಶ್ ಮತ್ತು ಉಷಾರವೀಂದ್ರರಿಂದ ಶ್ರೀಖಂಡ, ಜ್ಯೂಸ್ಗಳ ಪ್ರಾತ್ಯಕ್ತಿಕೆಗಳು ಕುತೂಹಲಕರ. ಅಡಿಕೆ ಪತ್ರಿಕೆಯ ಸಂಪಾದಕರಿಂದ ಹಲಸಿನ ವಿವಿಧ ರೂಪದ 'ದೇಶನೋಟ'! ಅಲ್ಲಲ್ಲ ಕಡಲಾಚೆಯ ಸುದ್ದಿ ಕೂಡಾ. ಮತ್ತೆಲ್ಲಾ ಮಾಮೂಲಿ.
ದೊಡ್ಡಬಳ್ಳಾಪುರ ತೂಬುಗೆರೆ ಹಲಸು ಬೆಳೆಗಾರರ ಸಂಘದ ರವಿಕುಮಾರ್ ಹಲಸಿನೊಂದಿಗೆ ಮೇಳಕ್ಕೆ ಬಂದಿದ್ದರು. ನಡೆದ ಹಲಸು ಸ್ಪರ್ಧೆಯಲ್ಲಿ ಅವರೇ ಪ್ರಥಮ! ದ್ವಿತೀಯ ಮೂಡಬಿದ್ರೆಯ ಡಾ.ಎಲ್.ಸೋನ್ಸ್ ಅವರ ಹಲಸು. ಎರಡೂ ದಿವಸ ಹಲಸಿನದ್ದೇ ಮಾತುಕತೆ. ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದಲ್ಲಿ ಹಲಸಿನ ಸುಳಿವೇ ಇಲ್ವಲ್ಲಾ. 'ಮೊದಲ ದಿವಸ ಹಲಸಿನ ಸಾಂಬಾರು ಇತ್ತಲ್ವಾ' ಯಾರೋ ಪಿಸುಗುಟ್ಟಿದರು. 'ತೀರ್ಥಹಳ್ಳಿ ಹಲಸ ಮೇಳದಲ್ಲಿ ಅನ್ನ ಮತ್ತು ಮಜ್ಜಿಗೆ ಹೊರತುಪಡಿಸಿ ಮಿಕ್ಕೆಲ್ಲಾ ಖಾದ್ಯಗಳು ಹಲಸಿನದ್ದೇ ಇದ್ದುವಲ್ಲಾ' ನೆನಪಾಯಿತು.
ಕೆವಿಕೆಯ ವರಿಷ್ಠರಲ್ಲಿ ಹೇಳಿದಾಗ 'ಮುಂದಿನ ವರುಷ ಎಲ್ಲಾ ಸರಿ ಮಾಡುವಾ' ಆಶ್ವಾಸನೆ. ಅಂತೂ ಆಯಿತು. ಎಲ್ಲಾ ಅಧಿಕಾರಿಗಳಲ್ಲಿ 'ಹಲಸು ಕಾಳಜಿ' ಎದ್ದುಕಾಣುತ್ತಿತ್ತು. ಜತೆಗೆ ಕೃಷಿಕರ ಉಪಸ್ಥಿತಿಯೂ! 'ನಮ್ಮಲ್ಲೂ ಆಗಬೇಕಲ್ಲಾ' ಕಾಸರಗೋಡು ಕೆವಿಕೆಯ ಸರಿತಾ ಹೆಗಡೆಯವರ ಉತ್ಸಾಹ. ಅಧಿಕಾರಿಗಳು ಓಕೆ ಅಂತಾರೆ ಬಿಡಿ. ಜವಾಬ್ದಾರಿಯನ್ನು ಹೊತ್ತುಕೊಳ್ಳುವವರು ಬೇಕಷ್ಟೇ. ಮೇಳದ ದಿನಾಂಕ ನಿರೀಕ್ಷಿಸಿ.
ಇಲ್ಲೂ ನಡೆದರೆ ಇದು 'ದ್ವಾದಶ ಮೇಳ'! ಈ ವರುಷಕ್ಕೆ ಸಾಕಲ್ವಾ!ಭಳಿರೇ, ಹಲಸಿನ ಮೇಳಗಳ ಮಧ್ಯೆ ಅಡಿಕೆ ಪತ್ರಿಕೆಯು ಎರಡು ಹಲಸಿನ ವಿಶೇಷಾಂಕವನ್ನೇ ಹೊರತಂದಿತು. ಓದಿಲ್ವಾ. ಖಂಡಿತಾ ಓದಿ.



0 comments:

Post a Comment