Thursday, June 25, 2009

ಬೇಲಿಯಾಚೆಯ ಲೋಕ!

'ಎಳನೀರು ಕೊಯ್ದು ಮಾರಿದಾತ ತೀರಾ ದರಿದ್ರ ಸ್ಥಿತಿಗೆ ತಲುಪಿದವನು' ಎಂಬ ಭಾವನೆಯಿಂದಾಗಿ ತುಮಕೂರು ಜಿಲ್ಲೆಯಲ್ಲಿ ಎಳನೀರು ಕೀಳುವುದೇ ಇಲ್ಲ! ಏನಿದ್ದರೂ ಕೊಬ್ಬರಿಗೇ ಮೀಸಲು. ವಿಶೇಷ ಹಬ್ಬಗಳಲ್ಲಿ ಅನಿವಾರ್ಯವಾದರೆ ಮಾತ್ರ ಒಂದೋ ಎರಡೋ ಎಳನೀರು ಕೀಳುತ್ತಾರೆ.

ತಿಪಟೂರಿನ ಬಿಳಿಗೆರೆಯಲ್ಲಿ ನಡೆದ 'ಎಳನೀರು ಮೇಳ'ವು ಎಳನೀರಿನ ಕುರಿತಾದ ಭಾವನೆಗಳನ್ನು ಪೋಸ್ಟ್ಮಾರ್ಟಂ ಮಾಡಿತು. , 'ಕೊಬ್ಬರಿಯನ್ನು ಸಿಕ್ಕಿದಷ್ಟು ಧಾರಣೆಗೆ ಮಾರಿದರೆ ನಾವು ಇಂದಲ್ಲ, ಎಂದೆಂದೂ ಪರಾವಲಂಬಿಗಳೇ' ಬಿಳಿಗೆರೆ ಕೃಷ್ಣಮೂರ್ತಿ ಆಗಾಗ್ಗೆ ಮೇಳದಲ್ಲಿ ಚುಚ್ಚುತ್ತಿದ್ದರು. ಪರಿಣಾಮ, ಎಳನೀರಿನ ಹೊಸರೂಪಕ್ಕಾಗಿ ಒಂದಷ್ಟು ಜನರು ಹಪಹಪಸುತ್ತಿರುವುದು ಕಂಡುಬಂತು.

ಕೇರಳದ ಕಾಯಂಕುಳಂ ಸನಿಹದ ಪೆರುಂಗಾಲ ಹಳ್ಳಿಯಲ್ಲಿರುವ 'ಎಳನೀರು ಸೋಡಾ' ಘಟಕವು ವರುಷಕ್ಕೆ ಹತ್ತು ಲಕ್ಷಕ್ಕೂ ಮಿಕ್ಕಿ ಎಳನೀರನ್ನು ನಗದಾಗಿ ಬದಲಾಯಿಸುತ್ತದೆ. ಜತೆಗೆ ಕೃಷಿಕರನ್ನೂ ಉತ್ತೇಜಿಸುತ್ತಿದೆ. ತ್ರಿಶೂರಿನಿಂದ ತಿರುವನಂತಪುರದವರೆಗೆ ಕಳೆದೆರಡು ವರುಷದಲ್ಲಿ ಹತ್ತಕ್ಕೂ ಮಿಕ್ಕಿ ಸೋಡಾ ಘಟಕಗಳು ಶುರುವಾಗಿವೆ. ಕೇರಳದಲ್ಲೇಕೆ, ನಮ್ಮಲ್ಲೂ ಸಾಧ್ಯವಿಲ್ಲವೇ? ಅವಕಾಶಗಳು ಬೇಕಾದಷ್ಟಿವೆ. ಮನಸ್ಸು ಬೇಕಷ್ಟೇ.

ಎಳನೀರಿನ ಹಿಮಚೆಂಡು (ಸ್ನೋಬಾಲ್ ಟೆಂಡರ್ ಕೊಕೊನಟ್) - ಜನಪ್ರಿಯವಾಗುತ್ತಿರುವ ಉತ್ಪನ್ನ. ಕಾಸರಗೋಡಿನ ಸಿಪಿಸಿಆರ್ಐಯ ಕೂಸಿದು. ಅರ್ಧಬಲಿತ ಎಳನೀರಿನ್ನು ಯಂತ್ರದ ಸಹಾಯದಿಂದ ಚಿಪ್ಪು (ಗೆರಟೆ) ತೆಗದು, ಅದರೊಳಗಿನ ಬಿಳಿಗೋಳವನ್ನು ಬೇರ್ಪಡಿಸಿ, ಮೇಲ್ಮೈಯ ಪದರವನ್ನು ಕೆರೆದು ತೆಗೆದರೆ 'ಹಿಮಚೆಂಡು' ರೆಡಿ. ಕುಡಿದು ತಿನ್ನಬಹುದಾದ ಇದನ್ನು ದೊಡ್ಡ ಹೋಟೆಲ್ಗಳಲ್ಲಿ ನೀಡುವ ವ್ಯವಸ್ಥೆಯಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಸೀಯಾಳದ ಅಂದವನ್ನು ಹೆಚ್ಚಿಸಿ IT ಕಚೇರಿಗಳಿಗೆ ವಿತರಿಸುತ್ತಿದೆ. ಥೈಲ್ಯಾಂಡ್ನಲ್ಲಿ ಎಳನೀರಿನ ಸಿಪ್ಪೆ ಕೆತ್ತುವಾಗಲೇ ಅಂದದ ಆಕಾರ ಕೊಟ್ಟು, ಹೊರಬಣ್ಣ ಕೆಡದಂತೆ ಸಂರಕ್ಷಗಳನ್ನು ಬಳಸುತ್ತಾರೆೆ. ಫಿಲಂನಲ್ಲಿ ಪ್ಯಾಕ್ ಮಾಡಿ ಅಮೇರಿಕಾ, ಇಂಗ್ಲೇಂಡ್, ಜಪಾನ್, ಆಸ್ಟ್ರೇಲಿಯಾ, ಸಿಂಗಾಪುರ, ಯುರೋಪ್.ಗಳಿಗೆ ಸಾಗಾಟ.

ಥಾಯ್ಯ ಇನ್ನೊಂದು ಉತ್ಪನ್ನ ನೋಡಿ. ಸಿಪ್ಪೆ ತೆಗೆದು, ಹಿಂಬದಿಯಲ್ಲಿ ಅಡ್ಡಕ್ಕೆ ತುಂಡರಿಸಿ, ತುಂಡನ್ನು ಪುನಃ ಜೋಡಿಸಿ, ಪಾಲಿಥೀನ್ ತರಹದ ಲಕೋಟೆಯಲ್ಲಿ ಪ್ಯಾಕಿಂಗ್. ಇದನ್ನು ಐಸ್ ಬಾಕ್ಸ್ನಲ್ಲಿಟ್ಟು ಮಾರಾಟ. ಅಂತೆಯೇ ತೆಂತಾ ಎಣ್ಣೆ, ಜೆಲ್ ಕೋಕೊನಟ್, ಸಿಹಿತಿಂಡಿಗಳು.. ಕೇರಳದ ಆಲೆಪ್ಪಿಯ ಸುಧರ್ಮ ಎಂಬವರು ಕಳೆದ ನಾಲ್ಕು ವರುಷಗಳಿಂದ ತಮ್ಮ ಒಂದು ಹೆಕ್ಟೇರ್ ತೋಟದ ಉತ್ಪನ್ನವನ್ನು ಮಾರಿಲ್ಲ! ಎಲ್ಲದರ ಉತ್ಪನ್ನ ತಯಾರಿಸಿದ್ದಾರೆ. ಥಾ ಸಾಧನೆಯನ್ನು ಹಿಂದಿಕ್ಕುವ ಪ್ರಯತ್ನ! ತೆಂಗಿನ ಹಾಲಿನ ಚಾಕೋಲೆಟ್, ಹತ್ತು ನಮೂನೆಯ ಸ್ನಾನದ ಸಾಬೂನು, ಚಟ್ನಿಪುಡಿ, ಪದಾರ್ಥಕ್ಕೆ ಬಳಸಲು ದಿಢೀರ್ ಪೇಸ್ಟ್, ಜ್ಯಾಂ, ಜೆಲ್ಲಿ.. ಹೀಗೆ ನಲವತ್ತಕ್ಕೂ ಮಿಕ್ಕಿ ಉತ್ಪನ್ನಗಳು. 'ತೆಂಗು ಬೆಳೆಯುವುದು ಮಾತ್ರವಲ್ಲದೆ, ಅದನ್ನು ಮೌಲ್ಯವರ್ಧನೆ ಮಾಡಿ ಮಾರಲೂ ಕಲಿಯಬೇಕು' - ದಶಕದ ಅನುಭವದ ಹಿರಿಮಾತು.

ವಿಯೆಟ್ನಾಮಿನಲ್ಲಿ ಬಾ ಥಾನ್ ಎಪ್ಪತ್ತರ ಹಿರಿಯ ದೊಡ್ಡಪ್ರಮಾಣದಲ್ಲಿ ಹಾಳಾಗಿ ಹೋಗುತ್ತಿದ್ದ ತೆಂಗಿನ ನೀರನ್ನು ಬಳಸಿ ಮದ್ಯ ತಯಾರಿಸಿದ್ದಾರೆ. ಮಧ್ಯ ಕೊರಿಯಾ, ಆಸ್ಟ್ರೇಲಿಯಾ, ರಶ್ಯಾ, ಕಾಂಬೋಡಿಯಾ ದೇಶಗಳಿಗೆ ರಫ್ತಾಗುತ್ತದೆ.ದೂರದ ಥ್ಯಾಲ್ಯಾಂಡ್ ಸುದ್ದಿ ಬಿಡಿ. ನಮ್ಮ ಬೆಂಗಳೂರಿನಲ್ಲಿ ತೆಂಗಿನ ಹಾಲನ್ನು ಉದ್ದಿಮೆಯಾಗಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೇನು, ಮಿಲ್ಕ್ ಪಾರ್ಲರ್ಗಳಲ್ಲಿ ಸಿಗುವ ನಂದಿನಿ ಹಾಲಿನಂತೆ, ತೆಂಗಿನ ಹಾಲೂ ಬರಲಿದೆ! ನಮ್ಮ ಗೃಹಿಣಿಯರಿಗೆ ಅಡುಗೆ ಕೆಲಸ ಮತ್ತಷ್ಟು ಹಗುರವಾಗಲಿದೆ!

ಸರಿ, 'ನಮ್ಮೂರಲ್ಲೂ ಸಾಧ್ಯವಾ, ಬಂಡವಾಡ ಬೇಡ್ವೋ, ಮಾರುಕಟ್ಟೆ ಕುದುರಿಸುವುದು ಹೇಗೆ' ಪ್ರಶ್ನೆಗಳು. 'ಮೊದಲು ಸಾಧ್ಯತೆಯನ್ನು ಪರಿಶೀಲಿಸುವಾ, ಉತ್ಪನ್ನಗಳನ್ನು ಮಾಡೋಣ. ನಂತರವಷ್ಟೇ ಮಾರುಕಟ್ಟೆ. ಉತ್ಪನ್ನವೇ ತಯಾರಾಗಿಲ್ಲ, ಇನ್ನು ಮಾರುಕಟ್ಟೆಯ ಮಾತೇನು?' - ಎಳನೀರು ಮೇಳದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮೀಯಪದವಿನ ಡಾ.ಚಂದ್ರಶೇಖರ ಚೌಟರಿಂದ ಉತ್ತರ. ಕೂಸು ಹುಟ್ಟುವ ಮೊದಲೋ ಕುಲಾವಿಯ ಚಿಂತೆ!

ಚೌಟರು ಮೀಯಪದವಿನಂತಹ ಹಳ್ಳಿಯಲ್ಲಿ ಎಳನೀರಿಗೆ ಮಾರುಕಟ್ಟೆಯನ್ನು ಸೃಷ್ಟಿಸಿದ ಕೃಷಿಕ. ದಿನಕ್ಕೆ ಏನಿಲ್ಲವೆಂದರೂ 200-250 ಎಳನೀರು ಮಾರಿಹೋಗುತ್ತವೆ. ಎಳನೀರಿನ ಬಗ್ಗೆ ಮಿದುಳಿನಲ್ಲಿರುವ ಕೆಟ್ಟ ಹುಳವನ್ನು ಹೊಡೆದೋಡಿಸಿದರೆ, ನಮ್ಮ ಬೇಲಿಗಿಂತ ಆಚೆಯೂ ಒಂದು ಪ್ರಪಂಚವಿದೆ ಅಂತ ನೋಡಬಹುದು.

0 comments:

Post a Comment