Thursday, December 15, 2011

ಅಡಿಕೆ ಕೃಷಿ ಯಾಂತ್ರೀಕರಣ - ವಿಚಾರಗೋಷ್ಠಿ

ಮಂಗಳೂರಿನ ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ ಸಂಘ ನಿ (ಕ್ಯಾಂಪ್ಕೋ) ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನವು 'ಅಡಿಕೆ ಕೃಷಿ, ಸಂಸ್ಕರಣೆಯಲ್ಲಿ ಯಂತ್ರಗಳ ಬಳಕೆ' ಹೂರಣದ ಒಂದು ದಿವಸದ ವಿಚಾರಗೋಷ್ಠಿ ಇಂದು (15-12-2011) ಕ್ಯಾಂಪ್ಕೋ ಸಭಾಭವನದಲ್ಲಿ ಜರುಗಿತು. ದಕ್ಷಿಣಕನ್ನಡ, ಕೇರಳ, ಉತ್ತರ ಕನ್ನಡದಿಂದ ನೂರಕ್ಕೂ ಮಿಕ್ಕಿ ಕೃಷಿಕರು, ಕೃಷಿ ತಂತ್ರಜ್ಞರು, ಅಡಿಕೆ ಸಂಸ್ಥೆಗಳ ಮುಖ್ಯಸ್ಥರು, ಸಂಶೋಧನಾ ಕ್ಷೇತ್ರದ ಇಂಜಿನಿಯರುಗಳು... ಭಾಗವಹಿಸಿದ್ದರು.

ಅಡಿಕೆ ಕೃಷಿಯ ಗೊಬ್ಬರ, ನೀರಾವರಿ, ಸಿಂಪಡಣೆ, ಕೊಯ್ಲು, ಸಂಸ್ಕರಣೆಯಲ್ಲಿ ಚಿಕ್ಕ ಚಿಕ್ಕ ಯಂತ್ರಗಳು, ಸಲಕರಣೆಗಳ ಆವಿಷ್ಕಾರ, ಶ್ರಮ ಹಗುರ ಮಾಡುವ ವಿಧಾನಗಳು, ಈಗಾಗಲೇ ತಯಾರಾಗಿರುವ ಅಡಿಕೆ ಸುಲಿ ಯಂತ್ರಗಳ ಕ್ಷಮತೆಗಳನ್ನು ಸೆಮಿನಾರಿನಲ್ಲಿ ಚರ್ಚೆ, ಕೃಷಿಕರು ರೂಪಿಸಿದ ಯಂತ್ರಗಳ ಅಭಿವೃದ್ಧಿ ಕುರಿತು ಚಿಂತನೆ. ಹಸಿ ಅಡಿಕೆ, ಚಾಲಿ ಅಡಿಕೆ ಸಂಸ್ಕರಣಾ ವಿಧಾನದಲ್ಲಿ ಏಕರೂಪತೆ ತರುವ ವ್ಯವಸ್ಥೆಯನ್ನು ರೂಪಿಸಲು ಕೃಷಿಕರಿಂದ ಒತ್ತಾಯ. ತೋಟದ ಕೆಲಸಗಳ ವಿಶೇಷಜ್ಞರ (ಮರವೇರಿ ಬೋರ್ಡೋ ಸಿಂಪಡಿಸುವ, ಅಡಿಕೆ ಕೊಯ್ಯುವ) 'ಜ್ಞಾನ'ವನ್ನು ಹೊಸ ತಲೆಮಾರಿಗೆ ದಾಟಿಸಲು ತರಬೇತಿಯತ್ತ ಒಲವು.

ಸುರತ್ಕಲ್ ತಾಂತ್ರಿಕ ಕಾಲೇಜು, ಸಿ.ಪಿ.ಸಿ.ಆರ್.ಐ., ಅಡಿಕೆ ಸುಲಿ ಯಂತ್ರಗಳ ತಯಾರಕರಿಂದ ಪವರ್ ಪಾಯಿಂಟ್ ಮೂಲಕ ವಿಚಾರಗಳ ಪ್ರಸ್ತುತಿ. ವಿಚಾರ ವಿಮರ್ಶೆ. 2012ರ ಮಾರ್ಚ್ ತಿಂಗಳಲ್ಲಿ ಎರಡನೇ 'ಯಂತ್ರಮೇಳ'ವನ್ನು ಪುತ್ತೂರಿನಲ್ಲಿ ಏರ್ಪಡಿಸಲು ನಿರ್ಧಾರ. ಅಡಿಕೆ ಕೃಷಿಯ ಒಂದೊಂದು ವಿಭಾಗಗಳ ಕುರಿತಾಗಿ ಪ್ರತ್ಯ ಪ್ರತ್ಯೇಕ ಗೋಷ್ಠಿಗಳು ಮತ್ತು ಕೃಷಿ ಯಂತ್ರೋಪಕರಣಗಳ ಕೈಪಿಡಿಯೊಂದರ ರಚನೆಯತ್ತ ಸೆಮಿನಾರ್ ತೀರ್ಮಾನ.

ಡಾ.ಡಿ.ಸಿ.ಚೌಟ ಮೀಯಪದವು, ಕೃಷಿಕ-ಲೇಖಕ ಪಡಾರು ರಾಮಕೃಷ್ಣ ಶಾಸ್ತ್ರಿ, ಕೆ.ಎಂ.ಹೆಗಡೆ, ಶ್ರೀ ಪಡ್ರೆ, ಮಂಚಿ ಶ್ರೀನಿವಾಸ ಆಚಾರ್, ಬಯೋಪಾಟ್ ಇದರ ಚಂದ್ರಶೇಖರ್, ಎಸ್.ಆರ್.ಹೆಗಡೆ ಶೀಗೆಹಳ್ಳಿ.. ಹೀಗೆ ಅನುಭವಿ ಕೃಷಿಕರಿಂದ ಕೃಷಿ ರಂಗದ ಈಗಿನ ಸವಾಲುಗಳು, ಅಗತ್ಯತೆಗಳು ಮತ್ತು ಯಂತ್ರದ ಕುರಿತಾದ ಸಲಹೆಗಳು.

ಕ್ಯಾಂಪ್ಕೋ ಆವಿಷ್ಕರಿಸಿದ ಅಡಿಕೆ ಸುಲಿ ಯಂತ್ರದ ಪ್ರಾತ್ಯಕ್ಷಿಕೆಯಿತ್ತು. ವಿಚಾರಗೋಷ್ಠಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಶ್ರೀ ಕೊಂಕೋಡಿ ಪದ್ಮನಾಭ, ಆಡಳಿತ ನಿರ್ದೇಶಕ ಎ.ಎಸ್. ಭಟ್ ಮತ್ತು ಆಡಳಿತ ಸಮಿತಿಯವರ ಸಮರ್ಥ ಸಾರಥ್ಯ.

0 comments:

Post a Comment