Tuesday, December 27, 2011

'ಕೃಷಿ ವಿಜ್ಞಾನಿಗಳೆ ಕಾಲುಭಾಗ ಸಮಯ ರೈತರೊಂದಿಗೆ ಕಳೆಯಿರಿ'





'ನಮ್ಮ ರೈತರ ಹೊಲಗಳಲ್ಲಿ ಅತ್ಯಪೂರ್ವ ತಂತ್ರಜ್ಞಾನ, ತಳಿಗಳು ಅಡಗಿವೆ. ಕೃಷಿ ವಿಜ್ಞಾನಿಗಳೇ ರೈತರಿಗೆ ಆಧ್ಯತೆ ನೀಡಿ. ನಿಮ್ಮ ಕಾಲುಭಾಗ ಸಮಯವನ್ನು ಅವರೊಂದಿಗೆ, ಹೊಲಗಳಲ್ಲಿ ಕಳೆಯಿರಿ,' ಎಂದು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಮಹಾನಿರ್ದೇಶಕರಾದ ಡಾ. ಅಯ್ಯಪ್ಪನ್ ಕರೆನಿಡಿದರು. ಪುತ್ತೂರಿನ, ಗೇರು ಸಂಶೋಧನಾ ನಿರ್ದೇಶನಾಲಯದ (Directorate of Cashew Research, Puttur) ಬೆಳ್ಳಿಹಬ್ಬದ (೨೩, ೨೪ ದಶಂಬರ ೨೦೧೧) ಸಮಾರೋಪ ಭಾಷಣ ಮಾಡುತ್ತಿದ್ದರು.

ಹರಿಯಾಣದಲ್ಲಿ ರೈತರೊಬ್ಬರ ಹೊಲದಲ್ಲಿ ಪ್ರತಿ ಎಕರೆಗೆ 12 ಕ್ವಿಂಟಲ್ ಇಳುವರಿ ಕೊಡುವ ಕೆಂಪು ಕಡಲೆಯ ದೇಸೀ ತಳಿಯೊಂದನ್ನು ಕಂಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರಲ್ಲದೇ, 'ರೈತ ಹಕ್ಕು ಸಂರಕ್ಷಣಾ ಕಾಯ್ದೆ' ಅಂತಹ ತಳಿಗಳ ಹಕ್ಕನ್ನು ರೈತರೇ ಪಡೆದುಕೊಳ್ಳಲು ಸಹಕಾರಿಯಾಗುವುದು ಎಂದರು. ಇಂತಹ ಉನ್ನತ ತಂತ್ರಜ್ಞಾನ, ತಳಿಗಳ ಪ್ರಾಯೋಗಿಕ ಜ್ಞಾನವಿರುವ ರೈತರನ್ನು 'ಅತಿಥಿ ಪ್ರಾಧ್ಯಾಪಕ'ರೆಂದು ಪರಿಗಣಿಸಿ, ಗೌರವಿಸಿ ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನಾ ಸಂಸ್ಥೆಗಳು ಅವರ ಜ್ಞಾನವನ್ನು ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು.

ಗೇರು ಉತ್ಪಾದಕತೆ ಹೆಚ್ಚಿಸಲು ಸಾಂದ್ರ ಬೇಸಾಯ ಪದ್ಧತಿ ಹಾಗೂ ಅದಕ್ಕೆ ಬಳಕೆಯಾಗಬಲ್ಲ ಕುಬ್ಜ ತಳಿಗಳ ಕುರಿತು, ಹಾಗೂ ಕಾಂಡಕೊರಕ ಹುಳಗಳ ನಿಯಂತ್ರಣಕ್ಕೆ ಭವಿಷ್ಯದ ಸಂಶೋಧನೆ ಸಹಾಯಕವಾಗಲಿ. ಗೇರು ಬೆಳೆಯನ್ನು 'ಜೀವಂತ ಬೇಲಿ'ಯಾಗಿ, ಪರಿಸರ ಸ್ನೇಹಿ ಬೆಳೆಯಾಗಿ, 'ಗಾಳಿತಡೆ' ಬೆಳೆಯಾಗಿ ಮತ್ತು ಮೌಲ್ಯವರ್ಧನೆಯಲ್ಲಿ ಸಂಸ್ಕರಣಾ ಉದ್ದಿಮೆಗಳ ಸಹಕಾರ ಪಡೆಯುವಂತಹ ವಿವಿಧ ಸಾಧ್ಯತೆಗಳ ಅಧ್ಯಯನವಾಗಬೇಕು. 2017ನೆ ಇಸವಿಯ ವೇಳೆಗೆ ದೇಶದ ಗೇರು ಉತ್ಪಾದನೆಯನ್ನು ಇಂದಿನ 6.5 ಲಕ್ಷ ಟನ್ನಿಂದ 10 ಲಕ್ಷ ಟನ್ನಿಗೇರಿಸುವ ನಿರ್ಧಿಷ್ಟ ಗುರಿಯನ್ನು ಹೊಂದೋಣ ಎಂದು ಅವರು ಹೇಳಿದರು.
ನಿರ್ದೇಶನಾಲಯದ ವರ್ತಮಾನದ ಬೆಳವಣಿಗೆಗಳ ಕುರಿತು ಅಯ್ಯಪ್ಪನ್ ಅವರು ಸಂತಸ ವ್ಯಕ್ತಪಡಿಸಿದರು. ಎರಡು ದಿನಗಳ ಕಾಲ ನಡೆದ ವಿವಿಧ ಗೋಷ್ಠಿಗಳಲ್ಲಿ ಮಂಡಿಸಿದ ಗೇರು ಅಭಿವೃದ್ಧಿ ಕುರಿತಾದ ವಿಚಾರಗಳ, ಅಲ್ಲಿ ಮೂಡಿಬಂದ ಸಲಹೆಗಳ ಸಂಕ್ಷಿಪ್ತ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ಪರಿಷತ್ತಿನ ಉಪಮಹಾನಿರ್ದೇಶಕರಾದ ಡಾ ಎಚ್ ಪಿ ಸಿಂಗ್, ಗೇರು ಸಂಶೋಧನೆಯ ಸ್ಥಿಗತಿ ಹಾಗೂ ಭವಿಷ್ಯದ ಯೋಜನೆಗಳನ್ನು ವಿವರಿಸಿದರು.

(ವರದಿ : ಪ್ರಕಾಶ್ ಭಟ್ ಕರ್ಕಿ)

0 comments:

Post a Comment