Tuesday, July 9, 2013

ದೇಶಮಟ್ಟದಲ್ಲೇ ಮೊದಲಿನದು ! ಹಲಸು ಕಾರ್ಯಾಗಾರ




          ಮಂಗಳೂರಿನ ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇಂದು ಅಪರೂಪದ ಮತ್ತು ದೇಶಮಟ್ಟದಲ್ಲೇ ಮೊದಲಿನದು ಎನ್ನಬಹುದಾದ ಕಾರ್ಯಾಗಾರ. ಮನೆಯ ಹಿತ್ತಿಲಿನ ಹಲಸು ಹೋಟೆಲ್ ವ್ಯವಹಾರವನ್ನು ಕಲಿಯುತ್ತಿರುವ ನೂತನ ಬಾಣಸಿಗರ ಕೈಯಲ್ಲಿ ಹಣ್ಣಿನ ಪಾಯಸದಿಂದ ತೊಡಗಿ ಪಿಜ್ಜಾ, ಬರ್ಗರ್ ತಯಾರಿಯ ತನಕ ಅವಕಾಶವನ್ನು ತೆರೆದಿಟ್ಟಿತು. ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವರ್ಗ, ವಿದ್ಯಾರ್ಥಿ ಸಮೂಹ ಬಹಳ ಆಸಕ್ತಿಯಿಂದ ಸಂಪೂರ್ಣ ತೊಡಗಿಸಿಕೊಂಡಿರುವುದು ಗಮನಾರ್ಹ.

              ಒಂದೆಡೆ ಅಡುಗೆಮನೆಯಲ್ಲಿ ವಿವಿಧ ಖಾದ್ಯಗಳ ತಯಾರಿ. ಮತ್ತೊಂದೆಡೆ ಪ್ರಾತ್ಯಕ್ಷಿಕೆ. ಮೀಯಪದವಿನ ಪ್ರೇಮಾ ಭಟ್ (70) ಓಡಾಡಿಕೊಂಡು ಖಾದ್ಯಗಳ ರೆಸಿಪಿಯನ್ನು ವಿವರಿಸುತ್ತಿದ್ದಾಗ ವಿದ್ಯಾರ್ಥಿಗಳು ಕಾಗದಕ್ಕಿಳಿಸುತ್ತಿದ್ದರು. ಕಾರ್ಯಾಗಾರದ ಕೊನೆಗೆ 'ನಮ್ಮ ಕಾಲೇಜಿನ ಸಮಾರಂಭಗಳಲ್ಲಿ ಹಲಸಿನ ಒಂದಾದರೂ ಖಾದ್ಯವನ್ನು ಮಾಡುತ್ತೇವೆ' ಎಂದು ವರಿಷ್ಠರ ನಿರ್ಧಾರ.

                ಕಾಸರಗೋಡು ಜಿಲ್ಲೆಯ ಚೌಟರ ಚಾವಡಿ-ಸಂಸ್ಕೃತಿ ವೇದಿಕೆ ಮತ್ತು ಅಡಿಕೆ ಪತ್ರಿಕೆಯು ಕಾರ್ಯಾಗಾರವನ್ನು ಆಯೋಜಿಸಿತ್ತು. ಮಂಗಳೂರಿನ ಶಾಸಕ ಜೆ.ಆರ್.ಲೋಬೋ ಸಮಾರಂಭವನ್ನು ಉದ್ಘಾಟಿಸಿದ್ದರು. ಮೇಯರ್ ಸುದೇಶ್ ಶೆಟ್ಟಿ ಉಪಸ್ಥಿತಿ. ಅಪ ಸಂಪಾದಕ ಶ್ರೀಪಡ್ರೆಯವರು ಹಲಸಿನ ಅವಕಾಶಗಳ ಪವರ್ ಪಾಯಿಂಟ್ ಪ್ರಸ್ತುತಿ. ಕನ್ನಾಡು ಮಾತ್ರವಲ್ಲ ಹೊರಗಿನ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ ಕಾರ್ಯಾಗಾರವು ಹಲಸನ್ನು ನಗರಕ್ಕೆ ಒಯ್ಯುವಲ್ಲಿ ಮೊದಲ ಹೆಜ್ಜೆಯಾಗಿ ಭರವಸೆ ಮೂಡಿಸಿತು.

1 comments:

rajeshwari said...

ಹಲಸು ಬಹಳ ಸೊಗಸು, ಇದನರಿಯಲು
ಹಲಸು ಬೆಳೆಸು, ಹಲಸು ಬಳಸು
ಹಲಸು ಖಾದ್ಯ ತಯಾರಿಸು, ಬಾಯಿ ಚಪ್ಪರಿಸು
ಸವಿಯ ಆನಂದಿಸು, ಹಲಸು ಬಹಳ ಸೊಗಸು-

Jackfruit – “Wonder Fruit”. It was wonderful workshop, we are proud to be a part of this huge event

Post a Comment