Tuesday, June 29, 2021

ಕೊರೊನಾ ಸಂಕಟದಲ್ಲೊಂದು ‘ಮೊಬೈಲ್ ದಾನ’ ಪರಿಕಲ್ಪನೆ



 

ಇಲ್ಲಿದೆ..... ಮುಸ್ಸಂಜೆಯ ಹೊಂಗಿರಣ ಪುಸ್ತಕದ ಮೊದಲ ಲೇಖನ – ನಾಗೇಂದ್ರ ಸಾಗರ್ ಅವರ ಪರಿಕಲ್ಪನೆಯಲ್ಲಿ ಯಶಕಂಡ ಮೊಬೈಲ್ ದಾನ ಪರಿಕಲ್ಪನೆ.   

 

ನಾಗೇಂದ್ರ ಸಾಗರ್ ಕೃಷಿಕರು. ಸಾಗರ ಸನಿಹದ ವರದಾಮೂಲ-ಚಿಪ್ಲಿಯವರು. ಸ್ವ-ಶ್ರಮದ  ಬದುಕು. ಅವರ ಸಹಾಯಕ ಉದಯ. ಇವರ ಮಗಳು ನಿಶಾ ಈಗ ಎಸ್.ಎಸ್.ಎಲ್.ಸಿ. ಯಾ ಮೆಟ್ರಿಕ್. ಕೊರೊನಾದಿಂದಾಗಿ ಶಾಲೆಗಳು ಆರಂಭಗೊಂಡಿಲ್ಲ. ನೇರ ಪಾಠದ ಬದಲಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಅದು ಸ್ಮಾರ್ಟ್ ಫೋನ್ ಹೊಂದಿದವರಿಗೆ ಅನುಕೂಲ. ನಿಶಾಳಲ್ಲಿ ಮೊಬೈಲ್  ಇಲ್ಲದೆ ಪಾಠಗಳಿಂದ ವಂಚಿತಳಾಗಿದ್ದಳು. 

ಮಗುವಿನ ಮನಸ್ಸರಿತ ನಾಗೇಂದ್ರರು ರೇಖಾಳಿಗೆ ತನ್ನ ಹೆಚ್ಚುವರಿ ಮೊಬೈಲನ್ನು ನೀಡಿದರು. ಅದು 3ಜಿ ಸೆಟ್ ಆಗಿತ್ತು. ಅದು ಉಪಯೋಗಕ್ಕೆ ಬರಲಿಲ್ಲ. ನಾಗೇಂದ್ರರು ಈ ವಿಚಾರವನ್ನು ತಮ್ಮ ಫೇಸ್ಬುಕ್ ವಾಲ್ನಲ್ಲಿ ಬರೆದರು. ಸ್ನೇಹಿತರೊಬ್ಬರು ತಕ್ಷಣ ಸ್ಪಂದಿಸಿ ಮೊಬೈಲು ಕಳುಹಿಸಿಕೊಟ್ಟರು. ಇದು ನಿಶಾಳಿಗೆ ಆನ್ಲೈನ್ ತರಗತಿ ಕಲಿಕೆಗೆ ನೆರವಾಯಿತು. ನಿಶಾ ಖುಷ್. ಈ ಖುಷಿಯು ನಾಗೇಂದ್ರರ ಮನದೊಳಗೆ ನೂತನ ಆಭಿಯಾನದ ಬೀಜವೊಂದನ್ನು ಹುಟ್ಟು ಹಾಕಿತು. ಇವಳಂತೆ ಸ್ಮಾರ್ಟ್ ಫೋನ್ ಹೊಂದಿರದೆ ಆನ್ಲೈನ್ ಪಾಠಗಳಿಂದ ದೂರವಾಗಿರುವ ಮಕ್ಕಳ ಮನಸ್ಸಿನ ಕೊರಗು ಕಾಡಲಾರಂಭಿಸಿತು. 

ಬಹುತೇಕರು ಒಂದೋ ಎರಡೋ ಸ್ಮಾರ್ಟ್ ಫೋನ್ ಹೊಂದಿರುತ್ತಾರೆ. ಹೆಂಡತಿಗೊಂದು, ಮಗಳಿಗೊಂದು, ಮಗನಿಗೊಂದು ಮೊಬೈಲ್. ಬೇಕಾದರೆ ಇನ್ನೊಂದೆರಡು ಹೆಚ್ಚುವರಿ. ಐದಾರು ತಿಂಗಳಲ್ಲಿ  ಮತ್ತೆ ಹೊಸ ಮೊಬೈಲ್ ಬುಕ್ ಆಗಿರುತ್ತದೆ. ಹಳೆಯದು ಉತ್ತಮ ಸ್ಥಿತಿಯಲ್ಲಿದ್ದರೂ ಬದಿಗೆ ಸರಿಯುತ್ತದೆ. ಹೀಗೆ ಸರಿದ, ಸರಿಯುತ್ತಿರುವ ಮೊಬೈಲುಗಳನ್ನು ಸಂಗ್ರಹಿಸಿ, ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗೆ ಹಂಚಿದರೆ ಅನುಕೂಲ. ಈ ಯೋಚನೆಗೆ ಜಾಲತಾಣಿಗರು ಸ್ಪಂದಿಸಿದರು. ಯೋಜನೆಗೆ  ಮಾಧ್ಯಮ ಬೆಳಕು ಬಿತ್ತು.

ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಸಹೃದಯಿಗಳಿಂದ ಆಶ್ವಾಸನೆಗಳು ಬಂದುವು. ಈಗಾಗಲೇ ಆತ್ಮೀಯರು, ಸ್ನೇಹಿತರಿಂದ ಪಡೆದ  ನೂರಕ್ಕೂ ಮಿಕ್ಕಿ ಮೊಬೈಲುಗಳು ವಿದ್ಯಾರ್ಥಿಗಳ ಕೈಸೇರಿವೆ. ಕೆಲವರು ಹೊಸತನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕೊರಗು ದೂರವಾಗಿದೆ. ಎಂಬ ಖುಷಿಯನ್ನು ಹಂಚಿಕೊಂಡರು ನಾಗೇಂದ್ರ.

ಸಾಗರ ತಾಲೂಕಿನಲ್ಲಿ ಮೂವತ್ತೆಂಟು ಸರಕಾರಿ ಮತ್ತು ಅನುದಾನಿತ ಶಾಲೆಗಳಿವೆ. ಅಭಿಯಾನದ ಸವಲತ್ತು  ಗ್ರಾಮೀಣರಿಗೆ ಮತ್ತು ಗ್ರಾಮೀಣ ಪ್ರದೇಶದಿಂದ ನಗರ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅವಶ್ಯ. ಅದರಲ್ಲೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮೊದಲಾದ್ಯತೆ. ಕೃಷಿಕರ ಮಕ್ಕಳಲ್ಲಿ  ಮೊಬೈಲ್ ಇಲ್ಲದವರೂ ಇದ್ದಾರೆ. ಅವರಿಗೆ ಮೊಬೈಲ್ ಇಲ್ಲ ಎನ್ನಲು ಮುಜುಗರ. ಅಂತಹವರು ಯಾರೆಂದು ಮೇಲ್ನೋಟಕ್ಕೆ ಗೊತ್ತಾಗುತ್ತಿಲ್ಲ. ಶಾಲೆಯ ಮುಖ್ಯೋಪಾಧ್ಯಾಯರಲ್ಲಿ ಪ್ರತಿ ಮಗುವಿನ ಡಾಟಾ ಇದ್ದೇ ಇರುತ್ತದೆ. ಅವರ ನೆರವಿನಿಂದ ಸಂಬಂಧಪಟ್ಟವರನ್ನು ಸಂಪರ್ಕಿಸಿದ್ದರು, ನಾಗೇಂದ್ರ ಸಾಗರ್.

ದಾನಿಗಳಿಂದ ಮೊಬೈಲು ಪಡೆದ ತಕ್ಷಣ ಅವುಗಳ ಕ್ಷಮತೆಯ ಪರೀಕ್ಷೆ. ಬ್ಯಾಟರಿ ಕೆಟ್ಟರೆ ಹೊಸ ಬ್ಯಾಟರಿ ಅಳವಡಿಕೆ.  ಜತೆಗೆ ಚಾರ್ಜರ್ ಇಲ್ಲದಿದ್ದರೆ ಹೊಸತನ್ನು ಒದಗಿಸುವುದು - ಈ ಎಲ್ಲಾ ಕೆಲಸಗಳನ್ನು ನಾಗೇಂದ್ರ ಕುಟುಂಬ (ಮಡದಿ ವಾಣಿ, ಮಗಳು ಶ್ರಾವ್ಯ) ನಿರ್ವಹಿಸಿದೆ. ಕೆಲವು ಹಳ್ಳಿಗಳಲ್ಲಿ ನೆಟ್ ವರ್ಕ್ ಇರುವುದಿಲ್ಲ. ಅಂತಹ ಪ್ರದೇಶದ ಮಕ್ಕಳು ನೆಟ್ ವರ್ಕ್ ಇರುವಲ್ಲಿ ಒಂದಾಗಿ ಆನ್ಲೈನ್ ತರಗತಿಗೆ ಹಾಜರಾಗುತ್ತಾರೆ. ಈಗಾಗಲೇ ಶಿಕ್ಷಣ ಇಲಾಖೆಯು ವಠಾರ ತರಬೇತಿ ಪ್ರಕ್ರಿಯೆಯನ್ನು ಅನುಷ್ಠಾನಿಸಿತ್ತು. ಈ ಶಾಲೆಗೂ ಈಗ ಕೊರೊನಾ ಭಯ!

 ‘ಶಾಲೆಗೆ ನಿಯಮಿತವಾಗಿ ಬರುವ ಮತ್ತು ಕಲಿಕಾ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಗುರುತಿಸಿ ಅಂತಹವರಿಗೆ ಮೊದಲು ಮೊಬೈಲ್ ಲಭ್ಯವಾಗುವಂತೆ ನೋಡಿಕೊಳ್ಳುತ್ತೇನೆ. ಮೊಬೈಲ್ ಅಲ್ಲದೆ ಕಂಪ್ಯೂಟರ್, ಲ್ಯಾಪ್ಟಾಪ್, ಟಿವಿ.. ಗಳನ್ನು ಕೂಡಾ (ಹೊಸದು, ಬಳಸಿದ್ದು) ನೀಡಲು ಮುಂದೆ ಬಂದಿರುವುದು ಉತ್ತೇಜಿತ ಬೆಳವಣಿಗೆ. ವೈಯಕ್ತಿಕ ನೆಲೆಯ ಈ ಅಭಿಯಾನಕ್ಕೆ ಶಿಕ್ಷಣಾಧಿಕಾರಿಗಳು ಗುಣಾತ್ಮಕವಾಗಿ ಸ್ಪಂದಿಸಿದ್ದಾರೆ.” ಎನ್ನುತ್ತಾರೆ.

ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಚಟುವಟಕೆಗಳನ್ನು ನಡೆಸುತ್ತಿರುವ ತನ್ನ ಶ್ರಾವಣ ಚಾವಡಿ ಸಂಸ್ಥೆಯಡಿ ಈ ಅಭಿಯಾನವನ್ನು ನಾಗೇಂದ್ರ ನಡೆಸುತ್ತಿದ್ದಾರೆ.  ಈ ಅಭಿಯಾನದ ಬಗ್ಗೆ ತಿಳಿದ ಸಾಗರದ ಹೊರಗಿನ,  ಶಿವಮೊಗ್ಗ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ವಿದ್ಯಾರ್ಥಿ ಪೋಷಕರ ಕಿವಿಗೂ ತಲುಪಿದೆ. ‘ನಮಗೂ ಕೊಡಿಸಿ’ ಎನ್ನುತ್ತಿದ್ದಾರಂತೆ. ಏನಿದ್ದರೂ ಸಾಗರ ತಾಲೂಕಿಗೆ ಮೊದಲ ಪ್ರಾಶಸ್ತ್ಯ. ಮಿಕ್ಕೆಡೆಯದ್ದು ಬಳಿಕ. ಕೆಲವರು ನಗದು ಕೊಡುತ್ತೇನೆಂದು ಮುಂದೆ ಬಂದಿದ್ದಾರೆ. ನಾಗೇಂದ್ರರು ಅಂತಹ ಕೊಡುಗೆಯನ್ನು ನಯವಾಗಿ ತಿರಸ್ಕರಿಸಿ, ‘ನೀವೇ ಮೊಬೈಲು ಖರೀದಿಸಿ ಕೊಟ್ಟುಬಿಡಿ’ ಎಂದು ವಿನಂತಿಸಿದ್ದಾರೆ. ಕಾರಣ, ನಗದು ಅಂದಾಗ ಹಲವಾರು ಊಹಾಪೋಹಗಳು ರಿಂಗಣಿಸುವ ಅಪಾಯದ ಎಚ್ಚರ ಇವರಲ್ಲಿದೆ.

ಕೌಶಲ್ಯ ಆಧಾರಿತ ಸ್ಮಾರ್ಟ್ ಕ್ಲಾಸ್

          ದಾನಿಯೊಬ್ಬರು ಲ್ಯಾಪ್ಟಾಪ್, ಸ್ಕ್ರೀನ್, ಸಿಪಿಯು.. ಮೊದಲಾದವುಗಳನ್ನು ನೀಡಿ ‘ಸ್ಮಾರ್ಟ್ ಕ್ಲಾಸ್ ಮಾಡಿ’ ಎಂದರು. ಈ ತರಗತಿಗಳು ಕೌಶಲ್ಯ ಆಧಾರಿತವಾಗಿರಬೇಕೆನ್ನುವುದು ನಾಗೇಂದ್ರರ ಆಶಯ.

          ಕೌಶಲ್ಯ ಆಧಾರಿತ ಅಂದರೆ? ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಕಾರಾತ್ಮಕ ಚಿಂತನೆ ಹಾಗೂ ಕೃಷಿಯ ನೇರ ಕಲಿಕೆ. ಈಗಾಗಲೇ ಕೃಷಿಯಲ್ಲಿ ಸಾಧನೆ ಮಾಡಿರುವವರ ಬದುಕನ್ನು ತೋರಿಸುವುದರಿಂದ ವಿಶ್ವಾಸ ವೃದ್ಧಿಯಾಗುತ್ತದೆ. ಇದರಿಂದಾಗಿ ಪಠ್ಯೇತರವಾಗಿ ವಿದ್ಯಾರ್ಥಿ ಬೌದ್ಧಿಕವಾಗಿ ಗಟ್ಟಿಯಾಗುತ್ತಾನೆ. ಮುಂದೆ ಆತ ಉದ್ಯೋಗಕ್ಕಾಗಿ ನಗರ ಸೇರಿದರೂ ಈ ಕಲಿಕೆಗಳು ಆತನಲ್ಲಿ ಆತ್ಮವಿಶ್ವಾಸವನ್ನು ಸದಾ ಜಾಗೃತವಾಗಿಸುವಲ್ಲಿ ನೆರವಾಗುತ್ತದೆ.

          ಗ್ರಾಮೀಣ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಹೇಳುವಂತಹ ಪ್ರಭುತ್ವ ಹೊಂದಿರುವುದಿಲ್ಲ. ಸ್ಮಾರ್ಟ್ ಕ್ಲಾಸ್ ಮೂಲಕ ಆಂಗ್ಲ ಭಾಷೆಯನ್ನು ಕಲಿಸುವ, ಗಣಿತವನ್ನು ಕಲಿಸುವ ವ್ಯವಸ್ಥೆಗಳಿಂದ ನಗರದ ವಿದ್ಯಾರ್ಥಿಗಳಿಗೆ ಸಮದಂಡಿಯಾಗಿ ಬೆಳೆಯಲು ಪೂರಕವಾಗಲಿದೆ. ಬದುಕಿಗೆ ಪೂರಕವಾದ ಸಂಗತಿಗಳನ್ನು ಕಲಿಯಲು ಅವಕಾಶ. ಈಗಾಗಲೇ ಎರಡು ಶಾಲೆಗಳು ಸ್ಮಾರ್ಟ್  ತರಗತಿಗೆ ಆಹ್ವಾನ ನೀಡಿದೆ.

0 comments:

Post a Comment