Wednesday, June 30, 2021

ಸಂಕಟ ಕಾಲದಲ್ಲೂ ಮಾಸದ ಮಂದಹಾಸ

 ಅಡಿಕೆ ಮರ ಏರಲು  ಅಲ್ಪಸ್ವಲ್ಪ ಅಭ್ಯಾಸ ಇತ್ತಷ್ಟೇ. ವಿಟ್ಲ (ದ.ಕ.) ಸಿ.ಪಿ.ಸಿ.ಆರ್.ಐ. ಆವರಣದಲ್ಲಿ ಜರುಗಿದ ಶಿಬಿರದಲ್ಲಿ ಮರವೇರುವ ಕೌಶಲ್ಯಗಳನ್ನು ಕಲಿತೆ. ಒಂದೂವರೆ ವರುಷವಾಯಿತು, ಈಗ ಸ್ವತಂತ್ರವಾಗಿ ಅಡಿಕೆ ಮರಕ್ಕೆ ಬೋರ್ಡೋ ಸಿಂಪಡಣೆ, ಅಡಿಕೆ ಕೊಯಿಲು ಮಾಡುತ್ತಿದ್ದೇನೆ. ತೃಪ್ತಿಕರ ಆದಾಯವು ಕೈ ಸೇರುತ್ತಿದೆ.

ಕಾಸರಗೋಡು ಜಿಲ್ಲೆಯ ಬದಿಯಡ್ಕದ ಸುರೇಶರ ಮನತುಂಬಿದ ಮಾತುಗಳು. ಇವರು ಕ್ಯಾಂಪ್ಕೋ ಆಯೋಜಿಸಿದ್ದ ಅಡಿಕೆ ಕೌಶಲ್ಯ ಪಡೆಯ ಮೊದಲ ಶಿಬಿರದ ಶಿಬಿರಾರ್ಥಿ.  ವಿಟ್ಲದ ಸಿ.ಪಿ.ಸಿಆರ್.ಐ. ಆವರಣದಲ್ಲಿ ಕಳೆದ ವರ್ಷ ಶಿಬಿರ ಜರುಗಿತ್ತು. ಶಿಬಿರಾರ್ಥಿಗಳೆಲ್ಲಾ ಬಹುತೇಕ ಇಪ್ಪತ್ತೈದರ ಒಳಗಿನ ಯುವಕರು. ಕಲಿಯುವ ಉತ್ಸಾಹದಿಂದ ಬಂದವರು ಮರಳುವಾಗ ಅಡಿಕೆ ಮರ ಏರುವ ವಿವಿಧ ಕೌಶಲಗಳನ್ನು ಕಲಿತು  ತೆರಳಿದ್ದರು.

“ಇವರಲ್ಲಿ ಶೇ.90ರಷ್ಟು ಮಂದಿ ರಂಗಕ್ಕಿಳಿದಿದ್ದಾರೆ. ತಮ್ಮ ಬದುಕಿನ ಭದ್ರತೆಯನ್ನು ತಾವೇ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ. ಕೆಲವರು ಯಶಸ್ವಿಯಾಗಿದ್ದಾರೆ. ಸಮಾಜದಲ್ಲಿ ಗೌರವ ಸಿಗುತ್ತಾ ಇದೆ. ವಿಷ ಸಿಂಪಡಣೆಗಳ ದುಷ್ಪರಿಣಾಮಗಳನ್ನು ಅರಿತಿದ್ದಾರೆ. ನಂತರ ಜರುಗಿದ ಶಿಬಿರಗಳ ಅಭ್ಯರ್ಥಿಗಳಲ್ಲಿ ಕೆಲವರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ” ಶಂ.ನಾ ಖಂಡಿಗೆ. ಇವರು ಕ್ಯಾಂಪ್ಕೋ ಉಪಾಧ್ಯಕ್ಷರು.

ಕಾಲಿಗೆ ತಳೆ ಕಟ್ಟಿ ಅಡಿಕೆ ಮರ ಏರುವಲ್ಲಿಂದ ಕೊಯ್ಲು ತನಕದ ಪ್ರಾಕ್ಟಿಕಲ್ ಶಿಕ್ಷಣವು ಶಿಬಿರದ ಸಿಲೆಬಸ್ ಆಗಿತ್ತು. ಮರದಲ್ಲಿ ಕುಳಿತು ಔಷಧ ಸಿಂಪಡಿಸಲು, ಕೊಯಿಲು ಮಾಡುವಾಗ ಬಳಸುವ ಕೊಟ್ಟೆಮಣೆ ಬಳಕೆ, ಅದಕ್ಕೆ ರಕ್ಷಣಾತ್ಮಕವಾಗಿ ಹಗ್ಗ ಹಾಕುವ ವಿಧಾನ, ಕೊಟ್ಟೆಮಣೆಯೊಂದಿಗೆ ಮರ ಏರುವ ಮತ್ತು ಇಳಿಯುವ ಜಾಣ್ಮೆ, ಅಡಿಕೆ ಕೊಯ್ಲಿನ ಕೊಕ್ಕೆಗೆ (ಬಿದಿರಿನ ಗಳ) ಸಿಕ್ಕಿಸುವ ಹಲ್ಲಿನ ತಯಾರಿ, ಕೊಕ್ಕೆ ಹಿಡಿಯವ ಶೈಲಿ, ಹಣ್ಣಡಿಗೆ ಕೊಯ್ಯುವಾಗ ಯಾವ ವಿನ್ಯಾಸದಲ್ಲಿ ಕೊಕ್ಕೆ ಇರಬೇಕೆನ್ನುವ ಪಾಠ.. ಇವೇ ಮೊದಲಾದ ವೃತ್ತಿಸೂಕ್ಷ್ಮಗಳನ್ನು ಅನುಭವಿಗಳು ಕಲಿಸಿಕೊಟ್ಟಿದ್ದರು.

ಅಡಿಕೆ ಮರವೇರಿ ನಿರ್ವಹಿಸುವ ಕೆಲಸಗಳ ಜ್ಞಾನಗಳು ಹಿರಿಯರಲ್ಲಿದ್ದುವು. ಅವರೊಂದಿಗೆ ಕೆಲಸ ಮಾಡುತ್ತಾ ಕಿರಿಯರು ಕಲಿತುಕೊಳ್ಳುತ್ತಿದ್ದರು. ಕೃಷಿ ಮತ್ತು ಕೃಷಿ ಬದುಕಿನ ಪಲ್ಲಟಗಳ ಬೀಸುಗಾಳಿಯು ಯುವಕರನ್ನು ಕೃಷಿಯಿಂದ ಹಿಮ್ಮೆಟ್ಟಿಸಿತು. ಹಿರಿಯ ವಿಶೇಷಜ್ಞರು ಇಳಿವಯಸ್ಸಿಗೆ ಜಾರಿದರು. ಹೀಗಾಗಿ ಅಲಿಖಿತ ಜ್ಞಾನಗಳು ಕಿರಿಯರಿಗೆ ವರ್ಗಾವಣೆ ಆಗದೆ ಅದು ಸಮಸ್ಯೆಗಳ ರೂಪದಲ್ಲಿ ಬದುಕನ್ನು ಆವರಿಸುತ್ತಾ ಬಂತು. ಈಗ ಅಂತಹ ಸಮಸ್ಯೆಗಳಿಗೆ ಇಳಿಲೆಕ್ಕ. ಕ್ಯಾಂಪ್ಕೋ ಇಂತಹ ಕಲಿಕೆಗೆ ಲಿಖಿತ ಸಿಲೆಬಸ್ ರೂಪಿಸಿದೆ.

ಯುವಕರ ಬದುಕಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದರೆ ಅವರು ಯಾಕೆ ನಗರ ಸೇರುತ್ತಾರೆ? ಹಳ್ಳಿಯಲ್ಲೇ ಉಳಿಯುವ ನಿರ್ಧಾರ  ಮಾಡಿದ, ಹಿರಿಯರ ಕಾಯಕವನ್ನು ಮುಂದುವರಿಸುವ ಮನಸಿಗರಿಗೆ ಶಿಬಿರವು ಕೈತಾಂಗು ಆಗಿದೆ. ಈಗ ಅಡಿಕೆಯ ಕೌಶಲ ಕೆಲಸಗಳ ಸಣ್ಣ ಸಣ್ಣ ಗುಂಪುಗಳು ರೂಪುಗೊಂಡಿವೆ.

“ಸೊಸೈಟಿಗಳ ವ್ಯಾಪ್ತಿಯಲ್ಲಿ ಶಿಬಿರಗಳು ಸಂಪನ್ನಗೊಂಡು ಯುವಕರು ನಗುನಗುತ್ತಾ ಮರಳಿ ತೋಟ ಸೇರುವಂತಾದರೆ ಅಡಿಕೆ ಕೃಷಿ ರಂಗದ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಂತೆ” ಹಿಂದೊಮ್ಮೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿಯವರು ಮಾತಿಗೆ ಸಿಕ್ಕಾಗ, ಸಹಕಾರಿ ಸಂಘಗಳ ಜೀವವಿರುವುದು ಅಡಿಕೆ ತೋಟದಲ್ಲಿ. ಎಂದಿರುವುದು ತುಂಬಾ ಅರ್ಥಪೂರ್ಣ. ಈ ಎಲ್ಲಾ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯು ಅಡಿಕೆ ರಂಗದ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರದ ಮಾದರಿಯ ಒಂದೆಳೆಯನ್ನು ಪ್ರಾಕ್ಟಿಕಲ್ ಆಗಿ ತೋರಿಸಿಕೊಟ್ಟಿದೆ.

ಎಲ್ಲವೂ ಹೌದು.. ಕೃಷಿ ಬದುಕಿನ ಸುಭಗತೆಗೆ ಕೊರೊನಾ ಲಾಕ್ಡೌನ್ ಮಾಡಿತ್ತು. ಇಂತಹ ಸಂಕಟದ ಸಮಯದಲ್ಲೂ ನಮ್ಮ ಅಡಿಕೆ ಕೌಶಲ್ಯ ಪಡೆಯ ಯುವಕರ ಮುಖದ ಮಂದಹಾಸ ಮಾಸಿಲ್ಲ. ಈಗಲೂ ಕೈತುಂಬಾ ಕೆಲಸ


 

0 comments:

Post a Comment