Thursday, June 5, 2014

ಅರಣ್ಯ ಓದಿಗೆ ಹಳ್ಳಿ ಹಸಿರಿನ ಕಿಟಕಿ

              "ಸೋಲಿನ ಮುಖವನ್ನೇ ನೋಡುತ್ತಿದ್ದರೆ ಗೆಲ್ಲುವ ದಾರಿ ಕಾಣುವುದಿಲ್ಲ. ಗೆದ್ದವರ ಮಾದರಿಗಳಲ್ಲಿ ಸ್ಫೂರ್ತಿಯ ಸೆಲೆಯಿದೆ. ಯುವ ಕೃಷಿಕರು ಬಿಡುವು ಮಾಡಿಕೊಂಡು ಆಗಾಗ ಪ್ರವಾಸ ಮಾಡಿ ಬೇರೆಡೆಯ ಕೃಷಿಯನ್ನು, ಯಶೋಗಾಥೆಗಳನ್ನು ವೀಕ್ಷಿಸಬೇಕು. ಕೃಷಿಕರನ್ನು ಮಾತನಾಡಿಸಬೇಕು. ಆಗ ಬದುಕಿನ ಕಷ್ಟಗಳ ಅರಿವಾಗುತ್ತದೆ. ಹತ್ತಿರದಿಂದ ಸಣ್ಣ ಸಣ್ಣ ರೈತ ಪ್ರಯೋಗಗಳನ್ನು ಗಮನಿಸಿದರೆ ನಮ್ಮ ಭೂಮಿಯಲ್ಲಿ ಏನು ಮಾಡಬಹುದೆಂಬ ಹೊಳಹು ಮೂಡುತ್ತದೆ," ಕೃಷಿಕ ಪತ್ರಕರ್ತ ಶಿರಸಿಯ ಶಿವಾನಂದ ಕಳವೆ ಮಾತನಾಡುತ್ತಾ ಹೋದಂತೆ ನಾಡಿನ ಹಳ್ಳಿಗಳ ದರ್ಶನವಾಗುತ್ತದೆ.
             ಕಳವೆಯಲ್ಲಿ ಮಾದರಿಗಳು, ಪ್ರಯೋಗಗಳು ಮಾತನಾಡುತ್ತವೆ! ಇವುಗಳ ಪರಿಚಯವಿದ್ದಾಗ ಪರಿಸರ ಸಂರಕ್ಷಣೆಯ ಕೆಲಸಗಳನ್ನು ಅರ್ಥಮಾಡಿಕೊಳ್ಳಲು ಸುಲಭ.  ಕಾಂಚಾಣದ ಸದ್ದೊಳಗೆ ಪರಿಸರ ಸಂರಕ್ಷಣೆಯು ಏಗುವ ಕಾಲಘಟ್ಟವಿದು. ಈ ಮಧ್ಯೆ ನಿಜವಾದ ಪರಿಸರದ ಉಳಿವಿನ ಕೆಲಸಗಳಿಗೆ ಕಳವೆ ಗ್ರಾಮದ ಮಾದರಿಗಳು ಕನ್ನಡಿ. ನೆಲಜಲ ಸಂರಕ್ಷಣೆ ಮತ್ತು ಪರಿಸರ ಸಂವಹನಕ್ಕಾಗಿ 'ಕಾನ್ಮನೆ-ನಿಸರ್ಗ ಜ್ಞಾನ ಕೇಂದ್ರ'ವು ಇಂದು ಲೋಕಾರ್ಪಣೆಯಾಗುತ್ತಿದೆ. ಕಳವೆಯ ಗ್ರಾಮ ಅರಣ್ಯ ಸಮಿತಿಯ ಸಾರಥ್ಯ. ಶಿವಾನಂದ ಕಳವೆಯವರ ಮೆದುಳಮರಿ.
               ಏನಿದು ಕಾನ್ಮನೆ? "ನೆಲಜಲ ಸಂರಕ್ಷಣೆಯ ಕೆಲಸಗಳನ್ನು ನೋಡಲು, ಕಾಡನ್ನು ವೀಕ್ಷಿಸಲು ಸಾಕಷ್ಟು ಮಂದಿ ಬರುತ್ತಾರೆ. ಅವರನ್ನೆಲ್ಲಾ ಒಂದೆಡೆ ಕುಳ್ಳಿರಿಸಿ ಪರಿಸರದ ಕತೆ ಹೇಳಲು ಸೂರು ಬೇಕಾಗಿತ್ತು.  ದೇಸಿ ಅರಣ್ಯ ಜ್ಞಾನ ಹಂಚಿಕೆಯ, ನೆಲಮೂಲದ ನಿಸರ್ಗ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಮಲೆನಾಡಿನ ಪಾರಂಪರಿಕ ಪೌಳಿ ಮನೆಯಂತಿರುವ ಸುಮಾರು ನಾಲ್ಕು ಸಾವಿರ ಚದರಡಿಯ ಮನೆಯಿದು," ಶಿವಾನಂದ ಕಾನ್ಮನೆಯನ್ನು ಪರಿಚಯಿಸುತ್ತಾರೆ. 
              ಶಿರಸಿಯಿಂದ ಕಳವೆ ಗ್ರಾಮಕ್ಕೆ ಎಂಟು ಕಿಲೋಮೀಟರ್ ದೂರ. ಗ್ರಾಮ ಅರಣ್ಯ ಸಮಿತಿಯ ಮುಂದಾಳ್ತನದಲ್ಲಿ ಹದಿನೈದು ವರುಷಗಳಿಂದ ನಿರಂತರವಾಗಿ ನೆಲ-ಜಲ ಸಂರಕ್ಷಣೆಯ ಕಾಯಕಗಳು ನಡೆಯುತ್ತಲೇ ಬಂದಿವೆ. ಮುನ್ನೂರೈವತ್ತು ಎಕರೆ ಪ್ರದೇಶದಲ್ಲಿ ಮುರುಗಲು (ಪುನರ್ಪುಳಿ), ಉಪ್ಪಾಗೆ, ಹುಣಸೆ, ಮಾವು, ಹಲಸು, ಹೆಬ್ಬಲಸು, ದಾಲ್ಚಿನ್ನಿ.. ಹೀಗೆ ಹಲವಾರು ಮರಗಿಡಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಿರು ಅರಣ್ಯಗಳಲ್ಲಿ ಮತ್ತಿ, ಕಿಂದಳ, ಹೊನ್ನೆ, ತಾರಿ, ಸಳ್ಳೆ ಮುಂತಾದ ಮರಗಳಿಗೆ ಕೊಡಲಿ ಸ್ಪರ್ಶವಾಗದೆ ಮೂರುವರೆ ದಶಕ ಮೀರಿತು!
                 ಮೂವತ್ತಾರು ಸರಣಿ ಕೆರೆಗಳ ರಚನೆಗಳು ಇಲ್ಲಿನ ನೀರಿನ ನಿಧಿಗಳು. ಹಿರಿಯರು ಕಾಡು ಕಣಿವೆಗಳಲ್ಲಿ ನಿರ್ಮಿಸಲಾಗುತ್ತಿದ್ದ ಕೆರೆಯ ಮಾದರಿ ಪ್ರೇರಣೆ. ಕೆರೆಗಳ ಹೂಳು ತೆಗೆಯುವ ಯತ್ನ. ಸೊಪ್ಪಿನ ಬೆಟ್ಟದ ನೂರ ಎಂಭತ್ತು ಎಕ್ರೆ ಕ್ಷೇತ್ರಕ್ಕೆ ರಕ್ಷಣೆ. ಅಲ್ಲೆಲ್ಲಾ ನೀರಿಂಗಿಸುವ ರಚನೆಗಳು. ಇವುಗಳಲ್ಲದೆ ಇಂಗುಗುಂಡಿಗಳ ಮೂಲಕ ನೀರಿಂಗಿಸುವ ಕ್ರಿಯೆಗಳು ಹೆಜ್ಜೆಗೊಂದಿದೆ.  ಸರಕಾರದ ವತಿಯಿಂದ ಹೊಸ ರಸ್ತೆ ನಿರ್ಮಾಣವಾಗುವಾಗ ರಸ್ತೆಗಾಗಿ ಮಣ್ಣು ತೆಗೆಯುವ ನೆಲೆಯನ್ನು ನೀರು ಹಿಡಿದಿಡುವ ರಚನೆಯಾಗಿ ಪರಿವರ್ತನೆ. ಇದರಲ್ಲಿ ಹಿಡಿಯುವ ನೀರಿನ ಸಾಮಥ್ರ್ಯ ನಾಲ್ಕು ಕೋಟಿ ಲೀಟರ್! ಒಂದು ರೂಪಾಯಿ ವೆಚ್ಚವಿಲ್ಲದೆ ಇಷ್ಟೊಂದು ನೀರು ಹಿಡಿದಿಡುವ ಕಾರ್ಯ ರಾಜ್ಯಕ್ಕೆ ಮಾದರಿ. ಇದರಿಂದಾಗಿ ಗುಡ್ಡದ ಕೆರೆಗಳಲ್ಲಿ ಬೇಸಿಗೆಯಲ್ಲೂ ಭಾಗೀರಥಿ ಗೋಚರ.
                  ಅಡುಗೆಯಲ್ಲಿ ಗೋಬರ್ ಅನಿಲ ಸ್ಥಾವರಗಳ ಸ್ಥಾಪನೆಯಿಂದ ಉರುವಲು ಬಳಕೆಯ ನಿಯಂತ್ರಣ. ಅಗತ್ಯಬಿದ್ದಲ್ಲಿ ಎಲ್ಪಿಜಿ ಸೌಲಭ್ಯ. ವಿದ್ಯುತ್ ಬಳಕೆ ಕಡಿಮೆಗೊಳಿಸಲು ಎಲ್ಲಾ ಮನೆಗಳಿಗೆ ಸಿಎಫ್ಎಲ್ ಬಲ್ಬ್ ಅಳವಡಿಕೆ. ಊರಿನಲ್ಲಿ ಜರಗುವ ಸಮಾರಂಭಗಳಿಗೆ ದೂರದ ಪೇಟೆಯಿಂದ ಪಾತ್ರೆ, ಶಾಮಿಯಾನಗಳು ಬರುತ್ತಿಲ್ಲ. ಅವೆಲ್ಲವೂ ಊರಿನಲ್ಲೇ ಸಿಗುವಂತಹ ವ್ಯವಸ್ಥೆ. ಪರಿಸರ ಸಂರಕ್ಷಣೆಯ ಹಿಂದೆ ಇವೆಲ್ಲವೂ ಗಣನೀಯ.
               ಇಂದು ಶೈಕ್ಷಣಿಕವಾಗಿ ವಿಶೇಷಾಧ್ಯಯನ ಪ್ರಬಂಧವನ್ನು ಸಿದ್ಧಪಡಿಸಿ ಡಾಕ್ಟರೇಟ್ ಪದವಿಯನ್ನು ಪಡೆಯುವ ಪ್ರತಿಭಾವಂತರನ್ನು ನೋಡುತ್ತೇವೆ. ಅದರಲ್ಲೂ ಗಿಡ, ಬಳ್ಳಿ, ಸಸ್ಯಗಳ ಅಧ್ಯಯನ ಮಾಡುವವರು ಸಿದ್ಧ ಪಠ್ಯದಿಂದ ಹೆಕ್ಕಿದ ವಿಚಾರಗಳನ್ನಷ್ಟೇ ದಾಖಲಿಸಿಕೊಂಡಿರುತ್ತಾರೆ. ಅವರೆಂದೂ ಕಾಡಿಗೆ ಬಂದಿರುವುದಿಲ್ಲ, ಹಸಿರನ್ನು ಕಂಡಿರುವುದಿಲ್ಲ. ಬರಿಗಾಲಲ್ಲಿ ಓಡಾಡಿದವರಲ್ಲ. ಅವರೇನಾದರೂ ಕಾಡಿಗೆ ಬಂದಾಗ ಸಸ್ಯಗಳ ಹೆಸರು ಬಿಡಿ, ಗುರುತಿಸಲು ಅವರ ಜ್ಞಾನ ಕೈಕೊಟ್ಟಿರುತ್ತದೆ! ಸಸ್ಯಗಳ  ಪಾರಂಪರಿಕ ಬಳಕೆ, ಜನಜೀವನದಲ್ಲಿ ಅವುಗಳ ಸ್ಥಾನ, ಹಿರಿಯರ ಬಳಕೆ ವಿಧಾನ ಇವೆಲ್ಲವೂ ಅಲಿಖಿತ. ಇಂತಹ ವಿಶೇಷಾಧ್ಯಯನ ಆಸಕ್ತರಿಗಾಗಿ ಕಾನ್ಮನೆ ಸದಾ ತೆರೆದಿರುತ್ತದೆ - ಶಿವಾನಂದರ ಮಾತಲ್ಲಿ  ವಾಸ್ತವದ ಚಿತ್ರ ಕುಣಿಯುತ್ತದೆ.
              ಕಳವೆಯಲ್ಲಿ ಪ್ರತಿ ಎಕರೆಗೆ ಎಂಭತ್ತೈದರಿಂದ ತೊಂಭತ್ತು ಲಕ್ಷ ಲೀಟರ್ ಮಳೆ ನೀರು ಸುರಿಯುತ್ತದೆ. ಇಲ್ಲಿರುವ ರಚನೆಗಳು ಮಳೆನೀರನ್ನು ಹಿಡಿದಿಡುತ್ತವೆ. ಪ್ರತಿ ಗಿಡದ ಬುಡದಲ್ಲೂ ಚಂದ್ರಬರಾವ್ (ಅರ್ಧಚಂದ್ರಾಕಾರದ ಇಂಗುಗುಂಡಿ) ರಚನೆಗಳಿವೆ. ಸೊಪ್ಪಿನ ಬೆಟ್ಟದಲ್ಲಿ ನೀರು ಹರಿದು ಹೋಗುವುದು ಕಡಿಮೆ.
                ಶಿವಾನಂದ ಕಾಲಿಗೆ ಚಕ್ರ ಕಟ್ಟಿಕೊಂಡು ಕಾಡು ಮೇಡುಗಳನ್ನು ಅಲೆದಿದ್ದಾರೆ. ಅಲ್ಲಿನ ಜನರೊಂದಿಗೆ ಬೆರೆತಿದ್ದಾರೆ. ಜತೆಯಲ್ಲಿ ಉಂಡು ಅನುಭವಗಳನ್ನು ಮೊಗೆದಿದ್ದಾರೆ. ಬದುಕನ್ನು  ದಾಖಲಿಸಿದ್ದಾರೆ. ಕಷ್ಟ-ಸುಖಗಳಿಗೆ ದನಿಯಾಗಿದ್ದಾರೆ. ಹಾಗಾಗಿ ಕಾಡಿನ ಮೌನ ಭಾಷೆಗೆ ಹಲವು ದಶಕಗಳಿಂದ ಮಾತಾಗಿದ್ದಾರೆ. ಅದರ ಒಟ್ಟೂ ಪರಿಣಾಮ - ಕಾನ್ಮನೆ. ಪರಿಸರ ಸಂರಕ್ಷಣೆ ಎನ್ನುವುದು ವೇದಿಕೆಯ ಘೋಷಣೆಯಲ್ಲ, ಅದರ ಅನುಷ್ಠಾನದ ಸಣ್ಣ ಹೆಜ್ಜೆಯಿಂದ ಸ್ವಸ್ಥ ಬದುಕಿಗೆ ನಾಂದಿ. "ಇಲ್ಲಿ ಠರಾವು ಸ್ವೀಕರಿಸುವ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ," ಶಿವಾನಂದರ ವಿನೋದದ ಮಾತಲ್ಲಿ ಕಾನ್ಮನೆಯ ಸ್ಪಷ್ಟ ದೂರದೃಷ್ಟಿಯಿದೆ.
                ಕುಪ್ಪಳ್ಳಿಯ ಕುವೆಂಪು ಅವರ ಮನೆಯನ್ನು ವೀಕ್ಷಿಸಿದವರಿಗೆ ಕಾನ್ಮನೆಯ ರಚನೆ ಹೆಚ್ಚು ಅರ್ಥವಾಗಬಹುದು. ಮಲೆನಾಡಿನ ಹಳೆಯ ವಾಸ್ತು ಶೈಲಿ. ತೊಟ್ಟಿಮನೆ (ಕಟ್ಟಿಗೆ ಮನೆ, ಪೌಳಿ ಮನೆ) ನೂರಾರು ಮಂದಿ ಕುಳಿತುಕೊಳ್ಳಬಹುದಾದ ವಿಶಾಲತೆ. ಪುಟ್ಟ ಸಭಾಂಗಣ, ವೇದಿಕೆ. ಎಲ್.ಸಿ.ಡಿ.ವ್ಯವಸ್ಥೆ, ಪಾಕಶಾಲೆ. ಕಳವೆಯ ಹಿರಿಯರಾದ ಗೋಪಾಲ ದೀಕ್ಷಿತರು ಕಾನ್ಮನೆಗೆ ಸ್ಥಳದಾನ ನೀಡಿದ ಸಹೃದಯಿ. ಶಿವಾನಂದರ ಕನಸಿನ ಸಾಕಾರಕ್ಕೆ ಹೆಗಲು ಕೊಟ್ಟವರಲ್ಲಿ ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಂತಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಯತೀಶ್ ಕುಮಾರ್ ಮುಖ್ಯರು.
            ಗ್ರ್ರಾಮ ಅರಣ್ಯ ಸಮಿತಿಯ ಗ್ರಾಮ ಅಭಿವೃದ್ಧಿ ನಿಧಿಯ ನೆರವಿನಿಂದ ಕಾನ್ಮನೆ ರೂಪುಗೊಳ್ಳುತ್ತಿದೆ. ಸುಮಾರು ಮೂವತ್ತೈದು ಲಕ್ಷ ರೂಪಾಯಿಯ ಯೋಜನೆ. ಕಟ್ಟಡ ನಿರ್ಮಿಸಿದ ಮಾತ್ರಕ್ಕೆ ಎಲ್ಲವೂ ಮುಗಿಯುವುದಿಲ್ಲ. ನಾಡಿನ ಪರಿಸರ ಆಸಕ್ತರು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ವಿವಿದ ವರ್ಗದ ಜನರಿಗೆ ಲಾಭವಾಗಬೇಕು. ರಾಜ್ಯದ ನೆಲಮೂಲ ನಿಸರ್ಗ ಜ್ಞಾನದ ಕೇಂದ್ರವಾಗಿ ಬೆಳೆಸುವ ಆಸೆಯಿದೆ. ಅದಕ್ಕಾಗಿ ಪರಿಣತರ ಸಂಪರ್ಕ ಬೆಳೆಯಬೇಕು. ನಿರಂತರ ಕಾರ್ಯಚಟುವಟಿಕೆಗೆ ಆರ್ಥಿಕ, ಸಾಮಾಜಿಕ ನೆರವಿನ ಅಗತ್ಯಗಳು - ಮುಂದಿರುವ ಸವಾಲುಗಳು.
            ಸರಕಾರಿ ವ್ಯವಸ್ಥೆಯನ್ನು ಏಕಮುಖವಾಗಿ ಖಂಡಿಸುವುದರಲ್ಲಿ ನಾವೆಲ್ಲಾ ಜಾಣರು. ಅಲ್ಲಿನ ವ್ಯವಸ್ಥೆ, ಸಾಮಾಜಿಕವಾಗಿ ಅವುಗಳು ಬಿಂಬಿಸುವ ವಿಧಾನಗಳೂ ಕಾರಣವೆನ್ನಿ. ಕಳವೆಯಲ್ಲಿ ಕಾನ್ಮನೆ ರೂಪುಗೊಳ್ಳುವ ಹಿಂದಿನ ಎಲ್ಲಾ ಕೆಲಸಗಳಿಗೂ ಸರಕಾರಿ ಇಲಾಖೆಯ, ಅಧಿಕಾರಿಗಳ ಸ್ಪಂದನವಿದೆ. ಈ ಸ್ಪಂದನ ಹೇಗೆ ಸಾಧ್ಯವಾಯಿತು? "ನಾವು ಕೆಲಸ ಶುರು ಮಾಡಿದೆವು. ಆಶಯವನ್ನು ಅರ್ಥಮಾಡಿಕೊಂಡ ಇಲಾಖೆಗಳು, ವರಿಷ್ಠರು ಕೈಜೋಡಿಸಿದರು. ಇಲಾಖೆಗಳಲ್ಲೂ ಉತ್ತಮ ಮನಸ್ಸಿನವರಿದ್ದಾರಲ್ವಾ. ಅಂತಹ ಮನಸ್ಸುಗಳನ್ನು ನಾವೇ ಹುಡುಕಬೇಕು. ಎಲ್ಲವೂ ಸರಕಾರವೇ ಮಾಡಲಿ ಎಂದು ಕೈಕಟ್ಟಿ ಕುಳಿತುಕೊಂಡರೆ ಇಲಾಖೆಗಳೂ ಮೌನವಾಗುತ್ತವೆ," ಶಿವಾನಂದ ಅನುಭವ.
               ರಾಜ್ಯದ ಪರಿಸರ ಜ್ಞಾನಕ್ಕೆ ಮಾತಿಗಿಂತ ಮಾದರಿ ಪರಿಚಯಕ್ಕೆ ಕಾನ್ಮನೆಯಲ್ಲಿ ಮಹತ್ವ. ಚಿಕ್ಕ ಅನುಭವದ ಮಿತಿಯಲ್ಲಿ ದೊಡ್ಡ ಕನಸು. ಪುಟ್ಟ ಹಳ್ಳಿಯ ಹಸಿರನ್ನು ಎದುರಿಗಿಟ್ಟುಕೊಂಡು ಕನ್ನಾಡಿನ ಅರಣ್ಯವನ್ನು ಓದುವ ಯೋಚನೆ, ಯೋಜನೆ. ವಿಶ್ವಪರಿಸರ ದಿನಾಚರಣೆಯ ಇಂದಿನ ಶುಭದಿನದಲ್ಲಿ ಕಾನ್ಮನೆಯು ವಿದ್ಯುಕ್ತವಾಗಿ ತೆರೆದುಕೊಳ್ಳುತ್ತದೆ. ಯೋಜಿತ ಕೆಲಸಗಳು ಪೂರ್ತಿಗೊಳ್ಳಲು ಸಮಯ ಮತ್ತು ಆರ್ಥಿಕ ಸಹಕಾರ ಬೇಕಾಗಿದೆ.
               ಶಿವಾನಂದ ಕಳವೆಯವರ ಕಾಡು ಸುತ್ತಾಟದಲ್ಲಿ ಪರಿಚಿತವಾದವರು ಎಂಭತ್ತರ ಹರೆಯದ ಶೀನು ಸಿದ್ಧಿ. ಆರು ದಶಕಗಳ ಅವರ ಕಾಡಿನ ಅನುಭವ. ಜೇನು, ಹಣ್ಣುಗಳೊಂದಿಗೆ ಬದುಕು ರೂಪಿಸಿದ ಶೀನು ಸಿದ್ಧಿ ಕಾನ್ಮನೆಗೆ ಮೊದಲು ಪ್ರವೇಶ ಮಾಡುತ್ತಾರೆ.


0 comments:

Post a Comment