Wednesday, May 13, 2015

ಕಾಡಿನ ಕತೆಗೆ ಕವಿತೆಯಾದ ಚಿಣ್ಣರು

               ಅಂಡ್ರಿಯಾಸ್ ಕ್ಲೇಯರ್ ಜರ್ಮನ್ ಪ್ರಕೃತಿ ಶಾಸ್ತ್ರಜ್ಞ. ಜಾವಾ ಪ್ರದೇಶಕ್ಕೆ 1648ರಲ್ಲಿ ಚಹ ಬೆಳೆಯನ್ನು ಪರಿಚಯಿಸುತ್ತಾನೆ. ಮುಂದೆ 1835ರಲ್ಲಿ ಅಸ್ಸಾಂ ರಾಜ್ಯಕ್ಕೆ ಚಹ ಪ್ರವೇಶಿಸಿತು. ನಲವತ್ತು ವರುಷಗಳ ಬಳಿಕ ಚಹ ಒಂದು ವಾಣಿಜ್ಯ ಕೃಷಿಯಾಗಿ ಮಾರ್ಪಟ್ಟಿತು. 1867ರಲ್ಲಿ ಹತ್ತು ಎಕ್ರೆ ಪ್ರದೇಶದಲ್ಲಿ ಬೆಳೆಯುತ್ತಿದ್ದ ಚಹ ಕೇವಲ ಒಂದೇ ದಶಕದಲ್ಲಿ ಇನ್ನೂರೈವಟ್ಟು ಪಟ್ಟು ವಿಸ್ತಾರಗೊಂಡಿತು. ಬದುಕಿಗಂಟಿದ ಚಹ ಈಗಂತೂ ವಿಶ್ವಖ್ಯಾತಿ.
             ಚಹ ಸೇವನೆ ರೂಢಿಯಾಗುವ ಹಿಂದೆ ವಿವಿಧ ಕುಡಿಗಳ ಕಷಾಯಗಳ ಬಳಕೆಯಿದ್ದುವು. ಮೈಕೈನೋವಿಗೆ ಶಿವನೆ ಸೊಪ್ಪಿನ ಕಷಾಯ, ಮಳೆಗಾಲದ ಛಳಿಗೆ ಕಾಳುಮೆಣಸಿನ ಕಷಾಯ, ಒಂದೆಲಗ ಕಷಾಯ.... ನೂರಾರು. ಬದುಕಿನಲ್ಲದು ಅಲಿಖಿತವಾಗಿ ಅನುಷ್ಠಾನವಾಗುತ್ತಿದ್ದುವು. ಚಿಕ್ಕಪುಟ್ಟ ಅಸ್ವಸ್ಥತೆಗೂ ಆಸ್ಪತ್ರೆಗೆ ಓಡುವ ಪ್ರಮೇಯ ಬರುತ್ತಿರಲಿಲ್ಲ. ಆಹಾರದಲ್ಲಿ ಆರೋಗ್ಯ ಕಾಪಾಡುವ ಜ್ಞಾನವಿತ್ತು. ಇದರ ಅನುಷ್ಠಾನ ಮಸುಕಾದಂತೆ ಆಹಾರ ಪದ್ಧತಿಗಳು ಅಜ್ಞಾತವಾದುವು. ರುಚಿಗಳು ಮರೆಯಾದುವು. ಜೀವನ ಶೈಲಿ ಬದಲಾದುವು ಗುಳಿಗೆ-ಸಿರಪ್ಗಳು ಆಹಾರದ ಸ್ಥಾನ ಪಡೆದುವು!
             ಶಿರಸಿಯ ಪರಿಸರ ಪತ್ರಕರ್ತ ಶಿವಾನಂದ ಕಳವೆ ಮಕ್ಕಳ ಶಿಬಿರದಲ್ಲಿ ಕಳೆದ ಕಾಲವನ್ನು ನೆನಪಿಸುತ್ತಿದ್ದಾಗ ಎಳೆಯ ಮನಸ್ಸುಗಳು ಕುತೂಹಲ ಕಣ್ಣಿನಿಂದ, ತೆರೆದ ಕಿವಿಯಿಂದ ಆಲಿಸುತ್ತಿದ್ದುವು.  "ಕಾಫಿ, ಚಹದಲ್ಲಿರುವ ಅಡ್ಡಪರಿಣಾಮಗಳನ್ನು ಮಕ್ಕಳಿಗೆ ತಿಳಿಹೇಳಿದೆವು. ಎಲ್ಲಕ್ಕಿಂತ ಮುಖ್ಯವಾಗಿ ಶಿಬಿರದಲ್ಲಿ ಹದಿನೆಂಟು ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಕಷಾಯದ ರುಚಿಗೆ ಚಿಣ್ಣರು ಮಾರುಹೋದರು. ಕಷಾಯ ಕುಡಿಯಲು ಪೈಪೋಟಿ ಆಗುತ್ತಿತ್ತು. ಕೆಲವು ಚಹ ಪ್ರಿಯ ಮಕ್ಕಳು ಶಿಬಿರ ಮುಗಿಯುವುದರೊಳಗೆ ಕಷಾಯ ಪ್ರಿಯರಾಗಿ ಬದಲಾದರು", ಶಿವಾನಂದ ವಿವರಿಸುತ್ತಾರೆ.
              ಶೈಕ್ಷಣಿಕ ವ್ಯವಸ್ಥೆಯಲ್ಲಿ ನೈಜ ಬದುಕಿಗೆ ದಾರಿ ತೋರುವ ಪಠ್ಯಗಳಿಲ್ಲ. ಪ್ರಕೃತಿ, ಗಾಳಿ, ಮರಗಳನ್ನು ಚಿತ್ರಗಳ ಮೂಲಕ ತೋರಿಸಿ ಮಾಡುವ ಪರಿಸರ ಪಾಠವು ಒಂದಂಕದ ಪ್ರಶ್ನೆಗಳಿಗಷ್ಟೇ ಸೀಮಿತ. ನಗರದಲ್ಲೇ ಬೆಳೆದ ಮಕ್ಕಳಿಗೆ ನೈಜ ಪರಿಸರವನ್ನು ಅನುಭವಿಸಲು ಕಷ್ಟ. ಹಳ್ಳಿ ಮೂಲದ ಕುಟುಂಬದಲ್ಲಿ ಬೆಳೆದ ಮಗುವಿಗೆ ಅಪ್ಪಾಮ್ಮ ಹಳ್ಳಿಯ, ಪರಿಸರದ ಪಾಠ ಹೇಳಿಲ್ಲ. ಹೇಳಬೇಕೆಂದು ಕಂಡಿಲ್ಲ. ಹಾಗಾಗಿ ನೋಡಿ, ಇಂತಹ ಮಕ್ಕಳು ಹಳ್ಳಿಗೆ ಬಂದಾಗ ಬಾಟಲ್ ನೀರನ್ನೇ ಅಪೇಕ್ಷಿಸುತ್ತವೆ, ತಿಂದುಣ್ಣಲು ಡೈನಿಂಗ್ ಟೇಬಲ್ಲೇ ಬೇಕು! ಅಂಗಿಗೆ ಚೂರು ಮಣ್ಣಾದರೂ ಭೂಮಿ-ಆಕಾಶ ಒಂದು ಮಾಡುವಷ್ಟು ರಾದ್ದಾಂತ. ಮಕ್ಕಳು ಪರೀಕ್ಷೆಗಳಿಗೆ ಸಿದ್ಧವಾಗುವ ಯಂತ್ರಗಳಾಗಿದ್ದಾರೆ. ಈ ಧಾವಂತದಲ್ಲಿ ಬಾಲ್ಯ ಕಳೆದುಹೋಗಿರುತ್ತದೆ.
               ಶಿರಸಿ-ಕಳವೆ ಹಳ್ಳಿಯ 'ಕಾನ್ಮನೆ'ಯು ಈಚೆಗೆ ಪರಿಸರದ ನೈಜ ಪಾಠವನ್ನು ಶಿಬಿರದ ಮೂಲಕ ಹೇಳುವ ಯತ್ನ ಮಾಡಿದೆ. ನೂರಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಮೂರು ದಿವಸ ಕಾಡಿನಲ್ಲಿ ಓಡಾಡಿದರು. ಮಣ್ಣಲ್ಲಿ ಆಟವಾಡಿದರು. ನೀರಲ್ಲಿ ಈಜಾಡಿದರು. ಮರದ ಇಳಿಬೇರುಗಳಲ್ಲಿ ಜೀಕಿದರು. ಕಾಡು ಹಣ್ಣುಗಳನ್ನು ತಿಂದರು. ಕಷಾಯ ಕುಡಿದರು. ಜೀವವೈವಿಧ್ಯತೆಗೆ ಬೆರಗಾದರು. "ನಗರದಲ್ಲಿ ಬೆಳೆದ ಮನಸ್ಸುಗಳಿಗೆ ಆರಂಭಕ್ಕೆ ಕಷ್ಟವಾಯಿತು. ಶಿಬಿರ ಮುಗಿಯುವ ಹೊತ್ತಿಗೆ ಹೊಸ ವಿಚಾರಗಳನ್ನು ಅನುಭವ ಮಾಡಿಕೊಂಡ ಖುಷಿ ಕಾಡಿತ್ತು. ಹೆತ್ತವರಿಗೂ ಪರಿಸರದ ಅಗತ್ಯವನ್ನು ಶಿಬಿರ ಕಟ್ಟಿಕೊಟ್ಟಿತ್ತು," ಎನ್ನುತ್ತಾರೆ ಶಿವಾನಂದ.
                ವಿದ್ಯಾರ್ಥಿಗಳಿಗೆ ವಿವಿಧ ವೈವಿಧ್ಯ ಹೂರಣಗಳೊಂದಿಗೆ ಬೇಸಿಗೆ ಶಿಬಿರಗಳು ಕನ್ನಾಡಿನಾದ್ಯಂತ ನಡೆಯುತ್ತಿವೆ. ಕಾನ್ಮನೆಯಲ್ಲಿ ಜರುಗಿದ ಶಿಬಿರ ಎಲ್ಲಕ್ಕಿಂತ ಭಿನ್ನ. ಪರಿಸರದ ಸೂಕ್ಷ್ಮಗಳನ್ನು ಥಿಯರಿ ಮೂಲಕ ಮಾತ್ರವಲ್ಲ, ಅದನ್ನು ಪ್ರಾಕ್ಟಿಕಲ್ ಮಾಡುವತ್ತ ದೊಡ್ಡ ಹಜ್ಜೆಯಿರಿಸಿತ್ತು. ಕಳವೆಯಲ್ಲಿ ನೀರಿಂಗಿಸುವ ಮಾದರಿಗಳು ಸಾಕಷ್ಟಿವೆ. ಹಸಿರೆಬ್ಬಿಸಿದ ಯಶೋಗಾಥೆಗಳಿವೆ. ಶಿವಾನಂದರ ಬತ್ತಳಿಕೆಯಲ್ಲಿ ನೂರಾರು ಕಾಡಿನ ಕತೆಗಳಿವೆ. ನೀರಿನ ಗಾಥೆಗಳಿವೆ. ಶಿಬಿರದುದ್ದಕ್ಕೂ ಇಂತಹ ಕತೆಗಳನ್ನು ಕೇಳಿದ, ನೋಡಿದ ಮಕ್ಕಳು ತಾವೇ ಒಂದು ಕತೆಯಾಗುವಷ್ಟು ಬೆಳೆಯುತ್ತಾರೆ! ಕೆರೆಗಳ ಕಲ್ಪನೆ ಇಲ್ಲದ ವಿದ್ಯಾರ್ಥಿಗಳು ಕಣಿವೆ ಕೆರೆಯನ್ನು ನೋಡಿ ದಿಗ್ಭಾಂತಿಯನ್ನೂ ಹೊಂದಿದ್ದರು. ನೀರಿಂಗಿಸುವ ಮಾದರಿಗಳನ್ನು ವೀಕ್ಷಿಸುತ್ತಾ, ಅದರ ಕ್ರಿಯೆಗಳನ್ನು ಆಲಿಸುತ್ತಾ ನೀರಿನ ಮಹತ್ವವನ್ನು ಹತ್ತಿರದಿಂದ ತಿಳಿದುಕೊಂಡರು.
                ಹಣ್ಣುಗಳ ಮರ ಕಂಡರೆ ಸಾಕು, ಮರವೇರಿ ಹಣ್ಣು ಕೊಯ್ದು ಉದರಕ್ಕಿಳಿಸುವುದು ಬಾಲ್ಯ ಸ್ವಭಾವ.  ಅಂಗಿ, ಚಡ್ಡಿಯ ಜೇಬುಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡು ಶಾಲೆ ತಲಪುವಾಗ ಒಂದು ಅವಧಿ ಕಳೆದುಹೋಗಿ, ಅಧ್ಯಾಪಕರಿಂದ ಬೆತ್ತಸೇವೆ ಮಾಡಿಕೊಂಡ ದಿವಸಗಳಿದ್ದುವಲ್ಲಾ. ಬದಲಾದ ಕಾಲಘಟ್ಟದಲ್ಲಿ ಮರ ಏರಿ ಹಣ್ಣುಗಳನ್ನು ಕೊಯ್ಯುವುದು ಬಿಡಿ, ಮರದ ಪರಿಚಯ ಮಾಡಿಕೊಳ್ಳುವಷ್ಟು ಪುರುಸೊತ್ತಿಲ್ಲ. ಶಿಬಿರದಲ್ಲಿ ಮರವನ್ನು ಏರಲು ಮಕ್ಕಳಿಗೆ ತರಬೇತಿ ನೀಡಿದ್ದರು. ಕಾಡು ಹಣ್ಣುಗಳ ಸವಿಯನ್ನು ತೋರಿಸಲಾಗಿತ್ತು. ಸೇಬು, ದ್ರಾಕ್ಷಿಗೆ ಒಗ್ಗಿಹೋದ ಮನಸ್ಸುಗಳು ಕಾಡುಹಣ್ಣುಗಳನ್ನು ತಿನ್ನಲು ಮುಗಿಬೀಳುವ ದೃಶ್ಯ - ಜ್ಞಾಪಿಸಿಕೊಳ್ಳುತ್ತಾರೆ ಕಳವೆ.
                ಕೆರೆಯ ನೀರು, ಝರಿ, ಹಳ್ಳಗಳನ್ನು ತೋರಿಸಿ ಈಜಲು ಮಕ್ಕಳಿಗೆ ಪ್ರೋತ್ಸಾಹ. ರಾತ್ರಿ ವಿದ್ಯುಚ್ಛಕ್ತಿ ಇದ್ದರೂ ಕ್ಯಾಂಡಲ್ ಬೆಳಕಿನಲ್ಲಿ ಭೋಜನ, ಪರಿಸರ ನಾಟಕಗಳು, ನರ್ಸರಿ ಬ್ಯಾಗ್ಗಳಿಗೆ ಮಣ್ಣು ತುಂಬುವುದು, ಕಸಿ ಕಟ್ಟುವ ಬಗೆ, ಚಿತ್ರ ಸಹಿತ ಕಾಡಿನ ಕತೆಗಳು, ನಿಸರ್ಗ ವಿಸ್ಮಯತೆ, ಸಸ್ಯಗಳನ್ನು ಗುರುತು ಹಿಡಿಯುವ ಕಾರ್ಯಹೂರಣ. ಇರುವೆ ಸಾಲನ್ನು ಅಧ್ಯಯನ ಮಾಡುವ ಶಿಸ್ತಿನ ಪಾಠ, ಮರದ ವಯಸ್ಸನ್ನು ಕಂಡು ಹಿಡಿಯುವ ಬಗೆ, ಕೆಂಪಿರುವ ಗೂಡು ಕಟ್ಟುವ ಜಾಣ್ಮೆ, ಗೆದ್ದಲಿನ ಗೂಡು, ಮುಳ್ಳುಕಂಟಿಯ ಮಹತ್ವ, ವಿವಿಧ ಎಲೆಗಳನ್ನು ತಿನ್ನಿಸಿ ರುಚಿ ಪರಿಚಯ. ತಂಬುಳಿ, ಕಷಾಯ, ಚಟ್ನಿಗಳನ್ನು ತಯಾರಿಸುವ ಅಡುಗೆ ಸೆಶನ್ ಮಕ್ಕಳಿಗೆ ಹೆಚ್ಚು ಆಪ್ತ. ಒಗ್ಗರಣೆಗೆ ಬಳಸುವ ಪರಿಕರಗಳು, ತಯಾರಿ ವಿಧಾನಗಳನ್ನು ಕಾಗದಕ್ಕಿಳಿಸಿಕೊಂಡರು.
              ನೈಸರ್ಗಿಕ ನೀರಿನ ಸಂಪನ್ಮೂಲಗಳನ್ನು ನೋಡಿದ ಚಿಣ್ಣರಲ್ಲಿ ಕಾತರಗಳಿದ್ದುವು. ಇಲ್ಲೆಲ್ಲೂ ಬೋರ್ವೆಲ್ ಇಲ್ಲಾರಿ? ಸೊಳ್ಳೆಗಳೇ ಯಾಕಿಲ್ಲಾರಿ? ವಾಹನಗಳು ಬರೋದೇ ಇಲ್ಲ, ಇಲ್ಲಿ ಹೇಂಗಿರ್ತೀರಿ?.. ಇವೇ ಮೊದಲಾದ ಪ್ರಶ್ನೆಗಳು ಹಳ್ಳಿಯ ಸಂಪರ್ಕವಿರದ ಮಕ್ಕಳಲ್ಲಿತ್ತು. ಮೂರು ದಿವಸ ಪರಿಸರದ ಮಧ್ಯದ ಬದುಕಿನ ನಂತರ ಈ ಪ್ರಶ್ನೆಗಳಿಗೆ ಸ್ವತಃ ಉತ್ತರ ಕಂಡುಕೊಂಡರು. ಬಹುತೇಕ ಮಕ್ಕಳ ಪಾಲಕರೂ ಶಿಬಿರದಲ್ಲಿರುತ್ತಿದ್ದರು. ಅವರಿಗೂ ಪರೋಕ್ಷವಾಗಿ ಪರಿಸರದ ಪಾಠ.
                ಕಾಡನ್ನು ಪ್ರತ್ಯಕ್ಷವಾಗಿ ನೋಡಿಲ್ಲ. ನಡೆದು ಅಭ್ಯಾಸವಿಲ್ಲ. ಆದರೆ ಪರಿಸರವನ್ನು ಕಲಿಯುವ ಕುತೂಹಲವಿದ್ದುವು. ಬೆಳ್ಳಂಬೆಳಿಗ್ಗೆಯಿಂದ ರಾತ್ರಿ ತನಕ ಕಲಿಯುವ ಮಕ್ಕಳು ಆಕಳಿಸಿದ್ದು ತೀರಾ ತೀರಾ ಕಡಿಮೆ. ಬಯಲು ಸೀಮೆಯ ಚಿಣ್ಣರು ತುಂಬಾ ಖುಷಿ ಪಟ್ಟರು. ಕಳವೆಯ ಶ್ರೀಧರ ಭಟ್ಟರ ಮನೆಯಲ್ಲಿನ  ಜಿಂಕೆ ಸಂಸಾರದೊಂದಿಗೆ ಚಿಣ್ಣರ ಗಡಣ ಮಿಳಿತವಾದ ಕ್ಷಣ ಶಿಬಿರದ ಹೈಲೈಟ್. ಚಿತ್ರ, ಟಿವಿಗಳಲ್ಲಿ ಮಾತ್ರ ವೀಕ್ಷಿಸಿದವರಿಗೆ ಜಿಂಕೆಯನ್ನು ಮುಟ್ಟುವ, ಆಟವಾಡುವ ಅವಕಾಶವು ಯಾವ ಶಿಬಿರದಲ್ಲಿ ಸಿಗುತ್ತೆ ಹೇಳಿ?
                "ವಿಜ್ಞಾನವನ್ನು ಬದಿಗಿಟ್ಟು ಪರಿಸರದ ಸಂಗತಿಗಳನ್ನು ಹೇಳುತ್ತೇವೆ. ನಿತ್ಯ ಬದುಕಿನಿಂದ ಮರೆಯಾದ ಸೂಕ್ಷ್ಮ ಅನುಭವ ವೇದ್ಯ ವಿಚಾರಗಳನ್ನು ಪ್ರಸ್ತುತ ಪಡಿಸುತ್ತೇವೆ. ಪರಿಸರದ ಸೂಕ್ಷ್ಮ ಭಾಷೆಗೆ ಮಾತನ್ನು ಕೊಡುವ ಯತ್ನ ಮಾಡುತ್ತೇವೆ. ಪಠ್ಯದಲ್ಲಿ ಸಿಗದ ಅದೆಷ್ಟೋ ಹೊಸ ಸಂಗತಿಗಳನ್ನು ಮಕ್ಕಳು ಕಲಿಯುತ್ತಾರೆ. ವಿಚಾರದ ಮೂಟೆಯನ್ನು ಹೊತ್ತೊಯ್ಯುತ್ತಾರೆ. ಹೆತ್ತವರಿಗೆ ತಾನು ಕಂಡ, ಕಲಿತುದನ್ನು ಮನದಟ್ಟು ಮಾಡುತ್ತಾರೆ. ಇದರಿಂದಾಗಿ ಕೊನೇಪಕ್ಷ ಮಕ್ಕಳೊಳಗೆ ಕಾಡಿನ ಬದುಕೊಂದು ಸುಪ್ತಾವಸ್ಥೆಯಲ್ಲಿ ಜೀವಂತವಾಗಿರುತ್ತದೆ. ಶಿಬಿರಕ್ಕೆ ಬಂದ ಒಂದೊಂದು ವಿದ್ಯಾರ್ಥಿಯೂ ಕಾನ್ಮನೆಯ ರಾಯಭಾರಿಗಳು," ಒಟ್ಟೂ ಶಿಬಿರದ ಫಲಿತಾಂಶವನ್ನು ಶಿವಾನಂದ ಕಟ್ಟಿಕೊಡುತ್ತಾರೆ.
                ಮಕ್ಕಳ ಮನಸ್ಸು ಖಾಲಿಯಾದ ಚೀಲ. ತುಂಬಿದಷ್ಟು ತುಂಬಿಸಿಕೊಳ್ಳುವ ಕುತೂಹಲ. ತುಂಬುವಂತಹ ವಿಚಾರಗಳಲ್ಲಿ ಬದುಕಿನ ಸ್ಪರ್ಶವಿದ್ದರೆ ಶಿಬಿರಗಳು ಸಾರ್ಥಕ. ಶೈಕ್ಷಣಿಕ ಅವಧಿಯಲ್ಲಿ ಪರಿಸರ, ಕೃಷಿ, ಜೀವವೈವಿಧ್ಯ ಕಲಿಕೆಗಳಿಂದ ವಂಚಿತರಾಗುವ ಮಕ್ಕಳಿಗೆ ಕಾನ್ಮನೆ ಪರಿಸರ ಪಾಠದ ಮನೆ. ಶಿವಾನಂದ ಕಳವೆಯವರ ಸಂಪನ್ಮೂಲ ತಂಡ ಮಕ್ಕಳೊಂದಿಗೆ ಮಕ್ಕಳಾಗಿ ಶಿಬಿರವನ್ನು ನಡೆಸಿಕೊಟ್ಟಿತ್ತು.
               ಕಾನ್ಮನೆಗೀಗ ವಾರ್ಶಿಕೋತ್ಸವದ ಸಡಗರ. ಒಂದು ವರುಷದಲ್ಲಿ ಚಟುವಟಿಕೆಯ ಗೂಡಾದ ಕಾನ್ಮನೆಯು ಇನ್ನೂ ಆರ್ಥಿಕ ಸದೃಢತೆಯತ್ತ ಹಜ್ಜೆಯಿರಿಸಬೇಕಷ್ಟೇ. ಸಶಕ್ತವಾಗಿ ತನ್ನ ಕಾಲ ಮೇಲೆ ನಿಲ್ಲುವಂತಾಗಲು ಪ್ರೋತ್ಸಾಹದ ಸಹಕಾರದತ್ತ ನೋಡುತ್ತಿದೆ. ಇದಕ್ಕಾಗಿ ಒಂದು ಹೆಗಲು ಹತ್ತಾಗಬೇಕು, ನೂರಾಗಬೇಕು.

0 comments:

Post a Comment