Monday, May 18, 2015

ಅಳಿಯುತ್ತಿರುವ ಕಾಡು ಮಾವಿನ ತಳಿಗಳಿಗೆ ಮರುಹುಟ್ಟು ನೀಡಬೇಕು - ಡಾ.ಡಿ.ಸಿ.ಚೌಟ

(ವೇದಿಕೆಯಲ್ಲಿ - ಸುಶೀಲ ಭಟ್ ಪಾತನಡ್ಕ, ಸೇಡಿಯಾಪು ಜನಾರ್ದನ ಭಟ್, ಡಾ.ಡಿ.ಸಿ.ಚೌಟ, ಮುಳಿಯ ವೆಂಕಟಕೃಷ್ಣ ಶರ್ಮ, ಅಮ್ಮಂಕಲ್ಲು ಕೇಶವ ಭಟ್)
 (ಕಾಡುಮಾವಿನ ಹಣ್ಣನ್ನು ಗಣ್ಯರಿಗೆ ನೀಡುವ ಮೂಲಕ ಸೇಡಿಯಾಪು ಜನಾರ್ದನ ಭಟ್ಟರಿಂದ ಶುಭಚಾಲನೆ)
 (ಪಾತನಡ್ಕ ಸುಶೀಲ ಭಟ್ ಬರೆದ ಕಾಡು ಮಾವಿನ ಮೆಲುಕು ಖಾದ್ಯಗಳ ಪುಸ್ತಕ ಬಿಡುಗಡೆ)
 (ಡಾ.ಡಿ.ಸಿ.ಚೌಟರಿಂದ ಅಧ್ಯಕ್ಷೀಯ ಮಾತುಗಳು)
 (ಕಡಂಬಿಲ ಕೃಷ್ಣಪ್ರಸಾದರಿಂದ ಸ್ಮರಣಿಕೆ ಪ್ರದಾನ)
   (ಡಾ.ಮೋಹನ ತಲಕಾಲುಕೊಪ್ಪ ಇವರಿಂದ ತಳಿಸಂರಕ್ಷಣೆ ಗೋಷ್ಠಿ ಆರಂಭ)
 (ಡಾ.ಎಂ.ಆರ್.ದಿನೇಶರಿಂದ ತಳಿಸಂರಕ್ಷಣೆ ವಿಚಾರ ಪ್ರಸ್ತುತಿ)
 (ಪುಣೆಯ ಬಸವಂತ್ ಝಮಾನೆ ಇವರಿಂದ ವಿಚಾರ ಪ್ರಸ್ತುತಿ)
 (ಕೃಷಿಕ ಮಾಪಲ್ತೋಟ ಸುಬ್ರಾಯ ಭಟ್ಟರಿಂದ ಗೋಷ್ಠಿಯ ಸಮಾಪನ)
(ವಿವಿಧ ತಳಿಗಳ ಮಾವುಗಳ ಪ್ರದರ್ಶನ)

               "ಜೀವನವನ್ನು ಎಷ್ಟು ಪ್ರೀತಿಸುತ್ತೇವೋ ಅಷ್ಟೇ ಪ್ರೀತಿ ಕಾಡುಮಾವಿನಲ್ಲಿತ್ತು. ಹೈಬ್ರಿಡ್ ಧಾವಂತದಲ್ಲಿ ಸ್ಥಳೀಯ ಮಾವಿನ ರುಚಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಮಾವವನ್ನು ಆಘ್ರಾಣಿಸಲು ಕೂಡಾ ಸಿಗದಷ್ಟು ವಿರಳವಾಗಿದೆ. ಗುಣಮಟ್ಟದ ಮಾವಿನ ಮರಗಳು ಕಾಣಿಸುತ್ತಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಶತಮಾನ ಬಾಳಿದ ಮರಗಳು ಧರೆಗುರುಳಿವೆ. ಮತ್ತೊಮ್ಮೆ ಅವಕ್ಕೆ ಮರುಹುಟ್ಟು ಕೊಡಬೇಕಾಗಿದೆ. ಕಾಡು ಮಾವು ಬೆಳೆಯಲು ಪ್ರತಿಯೊಬ್ಬ ಕೃಷಿಕರೂ ಮನಮಾಡಬೇಕು," ಎಂದು ಮೀಯಪದವಿನ ಕೃಷಿಕ ಡಾ.ಚಂದ್ರಶೇಖರ ಚೌಟ ಹೇಳಿದರು.
               ಅವರು ಮೇ 17ರಂದು ಬಂಟ್ವಾಳ ತಾಲೂಕು (ದ.ಕ.) ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ಜರುಗಿದ 'ಕಾಡು ಮಾವಿನ ಮೆಲುಕು' (Mango Fest - Kadu mavina meluku) ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, "ಒಂದೇ ಕಾಂಡದಲ್ಲಿ ಮೂರು ದೋಣಿ ಮಾಡುವಷ್ಟು ದೊಡ್ಡದಾದ ಮರಗಳಿದ್ದುವು. ಈಗ ನಾಶವಾಗಿವೆ. ಖಾಸಗಿ ನೆಲೆಯಲ್ಲಿಂದು ತಳಿ ಸಂರಕ್ಷಣೆಯ ಕಾರ್ಯ ಆಗುತ್ತಿರುವುದು ಸಮಾಧಾನಕರ ವಿಚಾರ ಎಂದರು". ಪುತ್ತೂರಿನ ಕೃಷಿಕ ಸೇಡಿಯಾಪು ಜನಾರ್ದನ ಭಟ್ ವೇದಿಕೆಯ ಗಣ್ಯರಿಗೆ ಕಾಡು ಮಾವಿನ ಹಣ್ಣನ್ನು ವಿತರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ, "ಎತ್ತರದ ಪ್ರದೇಶದಲ್ಲಿ ಕಾಡು ಮಾವನ್ನು ಬೆಳೆಸಬೇಡಿ. ತಪ್ಪಲು ಪ್ರದೇಶದಲ್ಲಿರಲಿ," ಎಂದರು.
              ಕಾಸರಗೋಡಿನ ಕೃಷಿಕ ಅಮ್ಮಂಕಲ್ಲು ಕೇಶವ ಭಟ್ಟರು, ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್ ಅವರಿಗೆ ಗಿಡವನ್ನು ಹಸ್ತಾಂತರಿಸುವ ಮೂಲಕ ಕಾಡು ಮಾವಿನ ತಳಿ ಬಿಡುಗಡೆ ಮಾಡಿದರು. ಸುಶೀಲಾ ಯಸ್.ಎನ್.ಭಟ್ ಅನುಭವದ ಪಾಕೇತನಗಳ  'ಕಾಡು ಮಾವಿನ ಮೆಲುಕು' ಪುಸ್ತಕವನ್ನು ಡಾ.ಡಿ.ಸಿ.ಚೌಟರು ಬಿಡುಗಡೆಗೊಳಿಸಿದರು. ಕೇಪು-ಉಬರು 'ಹಲಸು ಸ್ನೇಹಿ ಕೂಟ' ಕಾರ್ಯಕ್ರಮವನ್ನು ಆಯೋಜಿಸಿತ್ತು. ಅಡಿಕೆ ಪತ್ರಿಕೆ, ಬಂಟ್ವಾಳದ ಹಲಸು ಪ್ರೇಮಿ ಕೂಟವು ಕೈಜೋಡಿಸಿತ್ತು. ವೇದಿಕೆಯಲ್ಲಿ ಮುಳಿಯ ವೆಂಕಟಕೃಷ್ಣ ಶರ್ಮ ಉಪಸ್ಥಿತರಿದ್ದರು.
              ಪೆರ್ಲದ ವರ್ಮುುಡಿ ಶಿವಪ್ರಸಾದ್ ಪ್ರಸ್ತಾವನೆ ಮೂಲಕ ಹಲಸು ಸ್ನೇಹಿ ಕೂಟದ ಚಟುವಟಕೆಗಳನ್ನು ಸೂಕ್ಷ್ಮವಾಗಿ ಪರಿಚಯಿಸಿದರು. ಕಡಂಬಿಲ ಕೃಷ್ಣಪ್ರಸಾದ್, ಉಬರು ರಾಜಗೋಪಾಲ ಭಟ್, ಶಿರಂಕಲ್ಲು ನಾರಾಯಣ ಭಟ್, ಮಲ್ಯ ಶಂಕರನಾರಾಯಣ ಭಟ್, ಬೈಂಕ್ರೋಡು ವೆಂಕಟಕೃಷ್ಣ, ಬೈಂಕ್ರೋಡು ಮಹೇಶ, ಅಶೋಕ ಅಜಕ್ಕಳ.. ಇವರಿಗೆ ವಿವಿಧ ಜವಾಬ್ದಾರಿಗಳು. ನಾ. ಕಾರಂತ ಪೆರಾಜೆ ನಿರ್ವಹಣೆ.
                ತಳಿಸಂರಕ್ಷಣೆ-ವೈವಿಧ್ಯ ಮಾತುಕತೆ : ಬೆಂಗಳೂರು ಐಐಹೆಚ್ಆರ್ ಸಂಸ್ಥೆಯ ಹಣ್ಣಿನ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ದಿನೇಶರಿಂದ ಮತ್ತು ಪುಣೆಯ ಪರಿಸರ ಶಿಕ್ಷಣ ಕೇಂದ್ರದ ಅಭಿಜಿತ್ ಕಾಂಬ್ಳೆ, ಬಸವಂತ್ ಝಮಾನೆ ಇವರಿಂದ ತಳಿಸಂರಕ್ಷಣೆ ಕುರಿತು ಪವರ್ ಪಾಯಿಂಟ್ ಪ್ರಸ್ತುತಿ. ಪುತ್ತೂರು ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಮೋಹನ್ ತಲಕಾಲುಕೊಪ್ಪ ಮಾತುಕತೆಯ ಸಮನ್ವಯಕಾರರಾಗಿದ್ದರು. ಅಧ್ಯಕ್ಷತೆಯನ್ನು ಸುಳ್ಯ ಮರ್ಕಂಜದ ಮಾಪಲ್ತೋಟ ಸುಬ್ರಾಯ ಭಟ್ ವಹಿಸಿದ್ದರು.
            ವಿವಿಧ ತಳಿಗಳು : ’ಕಾಡು ಮಾವಿನ ಮೆಲುಕ” ಕಾರ್ಯಕ್ರಮಕ್ಕಾಗಿಯೇ ಅಭಿವೃದ್ಧಿ ಗೊಳಿಸಿದ ಮಾವಿನ ಗಿಡಗಳು ಮಧ್ಯಾಹ್ನದೊಳಗೆ ಖಾಲಿ ಖಾಲಿ! ಎಡ್ಡೆಕುಕ್ಕು, ಬೊಳ್ಳೆಕುಕ್ಕು, ಸಾರ್ಯ ಮಠ ಜೀರಿಗೆ, ತುಳಸಿಮೂಲೆ ಮಿಡಿ, ಜೀರಿಗೆ ಮಾವು, ಬಳಂಜ ಜೀರಿಗೆ, ವರದಾ, ಮೃತ್ಯುಂಜಯ, ಬಳೆಂಜ ಹಣ್ಣು, ನಡುಮನೆ ಜೀರಿಗೆ, ಅಕಾಲ ಮಾವು, ಕರಿಯಾಲ ಅಪ್ಪೆ, ಬರಿಮಾರು ಹೊಳೆಬದಿ ಮಾವು.. ಹೆಸರಿನ ತಳಿಗಳನ್ನು ಮಣಿಪಾಲ ಅತ್ರಾಡಿಯ ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯರು ಕಸಿ ಕಟ್ಟಿ ಅಭಿವೃದ್ಧಿಪಡಿಸಿದ್ದರು.
          ಮಳಿಗೆಗಳು: ವಿಟ್ಲದ ವಿಶಾಲ್ ಐಸ್ಕ್ರೀಂನ ಸಿ.ಎಫ್.ಸಿಕ್ವೇರಾ ಅವರು ಕಾಡು ಮಾವಿನ ಹಣ್ಣಿನ ಐಸ್ಕ್ರೀಂ, ಪುತ್ತೂರು ಮರಿಕೆಯ ಸುಹಾಸ್ ಎ.ಪಿ.ಇವರ ಜ್ಯೂಸ್-ಕ್ಯಾಂಡಿ, ಸವಿತಾ ಎಸ್.ಭಟ್ ಅಡ್ವಾಯಿಯವರ ಖಾದ್ಯಗಳು, ಬಗೆಬಗೆಯ ಉಪ್ಪಿನಕಾಯಿಗಳು, ಕಿನಿಲ ಅಶೋಕ್ ಅವರ ಮಂಗಗಳನ್ನು ಓಡಿಸುವ ಕೆಣಿ, ಫಿಲಿಪ್ ಅವರ ಸಿಂಪಡಣಾ ಸಲಕರಣೆ, ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಗಳಲ್ಲಿ ರಶ್.

(ಚಿತ್ರಗಳು - ರಾಧಾ ಮುಳಿಯ, ವಿಟ್ಲ)

0 comments:

Post a Comment