Thursday, May 21, 2015

ಕೃಷಿಕರೇ ಮಾಡಿದ 'ತಳಿಆಯ್ಕೆ'

            

                  "ಕಾಡುಮಾವಿನ ಸಸಿಗಳಿಗೆ ಇಷ್ಟೊಂದು ಬೇಡಿಕೆ ಬರಬಹುದೆಂದು ಊಹಿಸಿರಲಿಲ್ಲ," ಕಸಿತಜ್ಞ ಗುರುರಾಜ ಬಾಳ್ತಿಲ್ಲಾಯರು ಖುಷಿಯನ್ನು ಹಂಚಿಕೊಂಡಾಗ, ಮುಳಿಯ ಶರ್ಮರು, "ಮಧ್ಯಾಹ್ನದೊಳಗೆ ಒಂದು ಸಾವಿರಕ್ಕೂ ಮಿಕ್ಕಿ ಮಾವಿನ ಸಸಿಗಳು ಮಾರಾಟವಾದುವು," ಥಟ್ಟನೆ ಅಂಕಿಅಂಶ ನೀಡಿದರು.
                  ಬಂಟ್ವಾಳ ತಾಲೂಕಿನ ವಿಟ್ಲ-ಅಳಿಕೆ ಸನಿಹದ ಮುಳಿಯ ಶಾಲೆಯಲ್ಲಿ ಜರುಗಿದ 'ಕಾಡು ಮಾವಿನ ಮೆಲುಕು' ಕಾರ್ಯಾಗಾರ ಜರುಗಿತು. 'ಹಲಸು ಸ್ನೇಹಿ ಕೂಟ'ದ ಆಯೋಜನೆ. ಕಾಡುಮಾವಿನ ಸಸಿಗಳಿಗೆ ಬೇಡಿಕೆ. ಪ್ರಕೃತಿಸಹಜವಾಗಿ ಬೆಳೆದು ಮಿಡಿ, ಹಣ್ಣನ್ನು ಕೊಡುತ್ತಿದ್ದ ಮರಗಳು ಅಜ್ಞಾತವಾದಾಗ ನೆಟ್ಟು ಬೆಳೆಸುವ ಮನಃಸ್ಥಿತಿ ಬಂದಿರುವುದು ಶ್ಲಾಘನೀಯ.
                   ಹಲಸು ಸ್ನೇಹಿ ಕೂಟದ ವಿ.ಕೆ.ಶರ್ಮ ಮತ್ತು ಸಂಗಡಿಗರು ಐದಾರು ತಿಂಗಳಿನಿಂದಲೇ ಕಾಡು ಮಾವಿನ ಸೊನೆಯನ್ನು ಅಂಟಿಸಿಕೊಂಡಿದ್ದರು! ಕಾರ್ಯಾಾಗಾರದ ಜತೆಗೆ ಕೃಷಿಕರಿಗೆ ಉತ್ತಮ ಮಾವಿನ ಗಿಡಗಳನ್ನು ನೀಡಬೇಕೆಂಬ ಆಶಯ. ಅದಕ್ಕಾಗಿ ಹುಡುಕಾಟ. ಕೆಲವೊಂದು ಮಾನದಂಡಗಳನ್ನು ಹಾಕಿಕೊಂಡು ತಳಿ ಆಯ್ಕೆ. ಅದರ ಗುಣ, ಬೆಳೆಯುವ ಕಾಲ, ಮಿಡಿಗೋ ಹಣ್ಣಿಗೋ ಎನ್ನುವ ನಿರ್ಧಾಾರ. ತಳಿಗಳನ್ನು ಗುರುತಿಸಲು ಪ್ರಾದೇಶಿಕ ಸೊಗಸಿನ ಹೆಸರಿನ ಹೊಸೆತ. ಸುಮಾರು ಹದಿನೈದು ತರಹದ ಕಾಡು ಮಾವಿನ ತಳಿಗಳನ್ನು ಆಯ್ಕೆ ಮಾಡಿ ಕಸಿ ಕಟ್ಟಿ ಅಭಿವೃದ್ದಿ. ಸಾವಿರಕ್ಕೂ ಮಿಕ್ಕಿದ ಗಿಡಗಳು ಕಾರ್ಯಾಗಾರದಂದು ಸಿದ್ಧವಾಗಿದ್ದುವು.
                    ಕೆಲವು ತಳಿಗಳ ಗುಣಧರ್ಮಗಳು ಹೀಗಿವೆ  - ಎಡ್ಡೆಕುಕ್ಕು : ಉತ್ತಮ ಮಾವು ಎಂದರ್ಥ. ವರ್ಷ, ಎರಡು ವರುಷಕ್ಕೊಮ್ಮೆ ಉತ್ತಮ ಫಸಲು. ಉಪ್ಪಿನಕಾಯಿಗೆ ಮಿಡಿ ಓಕೆ. ಹಣ್ಣು ರುಚಿ. ಮಾಂಬಳ, ರಸಾಯನಕ್ಕೆ ಬಳಸಬಹುದು. ಬೊಳ್ಳೆಕುಕ್ಕು : ಹಣ್ಣಾದಾಗ ಬಿಳಿವರ್ಣ. ತಿರುಳು ಬಿಳಿ. ನೀರು ಮಾವಿನಕಾಯಿಗೆ ಉತ್ತಮ. ಸಾರ್ಯಮಠ ಜೀರಿಗೆ : ಇದರ ಕಾಯಿಗೆ ಜೀರಿಗೆ ಪರಿಮಳ. ಎರಡು ವರುಷಕ್ಕೊಮ್ಮೆ ಇಳುವರಿ. ಹಣ್ಣಿನ ಗಾತ್ರ ದೊಡ್ಡದು. ತುಳಸಿಮೂಲೆ ಮಿಡಿ : ಮಿಡಿ ಉಪ್ಪಿನಕಾಯಿಗೆ ಉತ್ತಮ. ಹಣ್ಣಿನ ಗಾತ್ರ ಹದ. ನೀರು ಮಾವಿನಕಾಯಿ ಹಾಕಲು ಮತ್ತು ಎಲ್ಲಾ ವಿಧದ ಅಡುಗೆಗೂ ಉಪಯೋಗಿ. ವರದಾ : ಹಣ್ಣು ಗಟ್ಟಿ. ಹಳದಿ ವರ್ಣ. ಹತ್ತು ದಿನ ತಾಳಿಕೆ. ಮೃತ್ಯುಂಜಯ : ಹಣ್ಣಿನ ಗಾತ್ರ ಚಿಕ್ಕದು. ಹೆಚ್ಚು ಗುಳ. ದುಂಡನೆ ಗಾತ್ರ. ಉಪ್ಪಿನಕಾಯಿಗೆ ಶ್ರೇಷ್ಠ. ಅಕಾಲ ಮಾವು : ವರುಷಪೂರ್ತಿ ಇಳುವರಿ. ಸಿಪ್ಪೆ ತೆಳು. ಚಿಕ್ಕ ಗೊರಟು. ಇದರ ಕೆತ್ತೆಯ ಉಪ್ಪಿನಕಾಯಿ ರುಚಿ. ಬರಿಮಾರು ಹೊಳೆಬದಿ ಮಾವು : ಮಧ್ಯಮಗಾತ್ರದ ಹಣ್ಣು. ಅರಶಿನ ವರ್ಣ. ಗಾಢ ಪರಿಮಳ. ಎರಡು ವರುಷಕ್ಕೊಮ್ಮೆ ಫಸಲು. ಸಣ್ಣ ಗೊರಟು. ಗುಳದಲ್ಲಿ ನಾರಿನಂಶ ಕಡಿಮೆ. ಗಣ್ಣು ತಿನ್ನಲು ರುಚಿ.
                    ಪ್ರತಿಯೊಂದು ತಳಿಗಳಿಗೂ ಆಯಾಯ ಗುಣಗಳ ಫಲಕ ಅಂಟಿಸಿರುವುದರಿಂದ ಆಯ್ಕೆ ಮಾಡಿಕೊಳ್ಳಲು ಕೃಷಿಕರಿಗೆ ಅನುಕೂಲವಾಗಿತ್ತು. ಹಣ್ಣಿಗಿಂತಲೂ ಉತ್ತಮ ಮಿಡಿ ತಳಿಯ ಗಿಡಗಳಿಗೆ ಬಹು ಬೇಡಿಕೆ. ಗಿಡವನ್ನು ಒಯ್ಯಲೆಂದೇ ಆಗಮಿಸಿದ ಕೃಷಿಕರು ಅಧಿಕ. ಕೃಷಿಕರ ಸಂಶಯ, ಚೋದ್ಯಗಳಿಗೆ ಸ್ಥಳದಲ್ಲೇ ಕಸಿತಜ್ಞರ ಉತ್ತರ. "ಸ್ಥಳೀಯ ಮಟ್ಟದಲ್ಲಿ ಇಂತಹ ಕೆಲಸಗಳು ಆಗಬೇಕು. ಪ್ರತೀ ಗ್ರಾಮದಲ್ಲಿಯೂ ಉತ್ಕೃಷ್ಟವಾದ ಮಾವಿನ ಮರಗಳಿಗೆ. ಅಳಿದುಳಿದ ಮರಗಳ ಸಂರಕ್ಷಣೆಯೊಂದಿಗೆ, ಅವುಗಳ ಅಭಿವೃದ್ಧಿಯೂ ಮಾಡಬೇಕಿದೆ. ಎಲ್ಲದಕ್ಕೂ ಇಲಾಖೆಯನ್ನು ಕಾಯಬೇಕಾಗಿಲ್ಲ. ಕೃಷಿ ಸಂಸ್ಥೆಗಳು, ಸಮಾನ ಆಸಕ್ತರು ಜತೆ ಸೇರಿ ತಳಿ ಆಯ್ಕೆಯಂತಹ ಕಾರ್ಯವನ್ನು ಮಾಡಬಹುದು," ಎಂಬ ಆಶಯ ವ್ಯಕ್ತಪಡಿಸುತ್ತಾರೆ ಮೀಯಪದವಿನ ಕೃಷಿಕ ಡಾ.ಡಿ.ಸಿ.ಚೌಟ.
                  ಹಲಸು ಸ್ನೇಹಿ ಕೂಟವು ನಾಲ್ಕು ವರುಷದ ಹಿಂದೆ 'ರುಚಿ ನೋಡಿ ತಳಿ ಆಯ್ಕೆ' ಎನ್ನುವ ಪ್ರಕ್ರಿಯೆ ಶುರು ಮಾಡಿತ್ತು. ಅಳಿಕೆ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೂವತ್ತಕ್ಕೂ ಅಧಿಕ ತಳಿಗಳನ್ನು ಅಭಿವೃದ್ಧಿ ಮಾಡಲಾಗಿತ್ತು. ಸಾವಿರಾರು ಗಿಡಗಳಿಂದು ಕೃಷಿಕರ ತೋಟದಲ್ಲಿ ಬೆಳೆಯುತ್ತಿವೆ. ಕೆಲವರು ಹಲಸಿನ ತೋಟಗಳನ್ನು ಎಬ್ಬಿಸಿದ್ದಾರೆ.
                   ಕಾಡು ಮಾವಿನ ಮೆಲುಕು ಕಾರ್ಯಗಾರದಲ್ಲಿ ಬೆಂಗಳೂರು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಐವತ್ತಕ್ಕೂ ಮಿಕ್ಕಿ ಮಾವಿನ ವೈವಿಧ್ಯವನ್ನು ಪ್ರದರ್ಶನಕ್ಕೆ ತಂದಿದ್ದರು. ಇಲ್ಲಿನ ಮುಖ್ಯಸ್ಥ ಡಾ.ದಿನೇಶ್ ಅವರ ಮಾವಿನ ಕಥನಕ್ಕೆ ಕಿವಿಯಾದವರು ನೂರಾರು ಮಂದಿ. ಇನ್ನೂರಕ್ಕೂ ಮಿಕ್ಕಿ ಕಾಡುಹಣ್ಣುಗಳನ್ನು ಪತ್ತೆ ಮಾಡಿ ಅಭಿವೃದ್ಧಿ ಪಡಿಸಿದ ಪುಣೆಯ ಪರಿಸರ ಶಿಕ್ಷಣ ಕೇಂದ್ರದ ಯಶೋಗಾಥೆ ಕುತೂಹಲ ಮೂಡಿಸಿತು.
                 ಕಳೆದ ನಾಲ್ಕು ದಶಕಗಳಿಂದ ಮಾವು-ಹಲಸಿಗೆ ಮಾತನ್ನು ಕೊಡುತ್ತಿರುವ ಸುಳ್ಯ ಮರ್ಕಂಜದ ಕೃಷಿಕ ಮಾಪಲ್ತೋಟ ಸುಬ್ರಾಯ ಭಟ್ಟರ ತೋಟದ ಎಪ್ಪತ್ತಕ್ಕೂ ಮಿಕ್ಕಿ ಹಣ್ಣುಗಳು ಗಮನ ಸೆಳೆದುವು. ಅಲ್ಲದೆ ಕಡಂಬಿಲ, ಪೆರ್ಲದ ವರ್ಮುಡಿ  ... ವಿವಿಧ ಪ್ರದೇಶದ ಹಣ್ಣುಗಳು ಪ್ರದರ್ಶನಕ್ಕಿದ್ದುವು. ವಿಟ್ಲದ ವಿಶಾಲ್ ಐಸ್ಕ್ರೀಮ್ನವರ ಕಾಡುಮಾವಿನ ಸ್ವಾದದ ಐಸ್ಕ್ರೀಮ್ ಬಾಯಿಸಿಹಿ ಮಾಡಿತು. ಪುತ್ತೂರು ಸನಿಹದ ಮರಿಕೆಯ ಯುವ ಕೃಷಿಕ ಎ.ಪಿ.ಸುಹಾಸ್ ಅವರ ಕಾಡುಮಾವಿನ ರಸದ ಲಾಲಿ ಮತ್ತು ಜ್ಯೂಸ್ ಮಳಿಗೆಯಲ್ಲಿ ರಶ್. ಉಪ್ಪಿನಕಾಯಿ, ಮಾವಿನ ಖಾದ್ಯಗಳ ಮಳಿಗೆಗಳಿದ್ದುವು.
             ಹಲಸು, ಮಾವು, ಸಿರಿಧಾನ್ಯ, ತರಕಾರಿ, ಗೆಡ್ಡೆಗೆಣಸು... ಮೊದಲಾದ ಕಾರ್ಯಾಗಾರಗಳನ್ನು ಏರ್ಪಡಿಸಿದ ಹಲಸು ಸ್ನೇಹಿ ಕೂಟದ ಮಕುಟಕ್ಕೆ ಈಗ ಕಾಡು ಮಾವಿನ ಗರಿ.


0 comments:

Post a Comment