Sunday, May 3, 2015

ಚೊಚ್ಚಲ ಸಂತೆಗೆ ಹಲಸು ಪ್ರಿಯರ ಮಹಾಪೂರ

 ರುಚಿ ನೋಡಿ ತಳಿ ಆಯ್ಕೆಟ ಪ್ರಕ್ರಿಯೆ - ಮುಳಿಯ ವೆಂಕಟಕೃಷ್ಣ ಶರ್ಮ, ಉಮಾನಾಥ, ಗೇಬ್ರಿಯಲ್ ವೇಗಸ್
 ಮೌನೀಶ್ ಮಲ್ಯರು ಸೊಳೆಯ ರುಚಿ ಅನುಭವಿಸುತ್ತಿರುವುದನ್ನು ನೋಡಿ.....
 ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳು
 ಹಲಸಿನ ಕಬಾಬ್
ಹಲಸಿನ ಹಣ್ಣಿನ ಮಂದಸಾಋ (ಸ್ಕ್ವಾಷ್)

                 ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆಯುವ 'ಹಲಸು ಸಂತೆ' ರಾಜ್ಯದಲ್ಲಿ ಖ್ಯಾತಿ. ಕೋಟಿಗೂ ಮಿಕ್ಕಿದ ವ್ಯವಹಾರ. ಎಪ್ರಿಲ್-ಮೇ ತಿಂಗಳಿನಲ್ಲಿ ವಾರಕ್ಕೆರಡು ದಿವಸ ಸಂತೆ ನಡೆಯುತ್ತದೆ. ಹಲಸು ಲಾರಿಯೇರಿ ಸಾಗುವ ಸೊಬಗನ್ನು ನೋಡಿಯೇ ಅನುಭವಿಸಬೇಕು.
                 ಹಲಸು ಋತುವಿನಲ್ಲಿ ಅಲ್ಲಿಲ್ಲಿ ಹಲಸಿಗೆ ಮಾನ ಕೊಡುವ ಯತ್ನಗಳು ನಡೆಯುತ್ತಿವೆ. ಸೊಳೆ ಮಾರಾಟದಿಂದ ಮೌಲ್ಯವರ್ಧನೆ ತನಕ ಹಲಸು ಮಾನ ವರ್ಧಿಸಿಕೊಳ್ಳುತ್ತಿದೆ. ಕೇರಳವಂತೂ ರಾಷ್ಟೀಯ ಮಟ್ಟದ ಸಮ್ಮೇಳನವನ್ನು ನಡೆಸಿದೆ. ರಾಷ್ಟ್ರ ಮಟ್ಟದಲ್ಲಿ ಸಂಪರ್ಕ ಕೊಂಡಿಗಳ ಜಾಲಗಳನ್ನು ಹೆಣೆದಿದೆ. ಉತ್ತರ ಭಾರತಕ್ಕೆ ತರಕಾರಿಯಾಗಿ ಕೇರಳದ ಹಲಸು ಲೋಡ್ಗಟ್ಟಲೆ ಸಾಗುತ್ತಿದೆ. 
                 ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಲ್ಲಿ ೨೦೧೫ ಎಪ್ರಿಲ್ 26ರಂದು 'ಹಲಸು ಸಂತೆ' ಜರುಗಿತು. ಹಲಸು ಪ್ರಿಯ ಮೌನೀಶ್ ಮಲ್ಯರ ಸಾರಥ್ಯದ 'ಹಲಸು ಪ್ರೇಮಿ ಕೂಟ'ದ ಆಯೋಜನೆಯಲ್ಲಿ ಸಂತೆ ಸಂಪನ್ನಗೊಂಡಿತ್ತು. ಸಾವಿರಾರು ಮಂದಿಯನ್ನು ಸೆಳೆದಿತ್ತು. ಸ್ಥಳೀಯವಾಗಿ ಹಲಸಿನ ಉತ್ಪನ್ನಗಳಿಗೆ ಮಾರುಕಟ್ಟೆ ರೂಪಿಸುವುದು ಸಂತೆಯ ಆಶಯ.
                   ಈ ಬಾರಿ ಪ್ರಾಕೃತಿಕವಾಗಿ ಹಲಸಿನ ಇಳುವರಿಯ ಋತು ಮುಂದೆ ಹೋಗಿದೆ. ಸುಮಾರಾಗಿ ಮೇ ಕೊನೆಗೆ ಕಾಯಿ ಬಲಿತು ಹಣ್ಣಾಗಬಹುದಷ್ಟೇ. ಮೇ ತಿಂಗಳು ಸಹಜವಾಗಿ ಮಳೆಯ ಸಮಯ. ಆಗ ಸಂತೆಯನ್ನು ಏರ್ಪಡಿಸುವುದು ತ್ರಾಸ. ಮಲ್ಯರು ಪ್ರಾಯೋಗಿಕವಾಗಿ ಮೊದಲೇ ಕಾರ್ಯಕ್ರಮವನ್ನು ನಿಗದಿ ಮಾಡಿದ್ದರು. ಸಂತೆಯಲ್ಲಿ ಹಲಸಿನ ಕಾಯಿ, ಹಣ್ಣುಗಳ ಧಾಂಗುಡಿ ಕಡಿಮೆಯಿತ್ತು. ಅಪೇಕ್ಷಕರ ಪಟ್ಟಿ ದೊಡ್ಡದಿತ್ತು. ಹಲಸಿನ ಹಣ್ಣು ಒಯ್ಯಲೆಂದೇ ಆಗಮಸಿದ ಅಮ್ಮಂದಿನ ಸಂಖ್ಯೆ ಕಡಿಮೆಯಲ್ಲ!
                'ತಳಿ ಆಯ್ಕೆ' ಸಂತೆಯ ಮುಖ್ಯ ಕಲಾಪ. ಕೃಷಿಕರೇ ಮಾನದಂಡಗಳನ್ನು ಗೊತ್ತು ಮಾಡಿ ಹತ್ತು ತಳಿಗಳಲ್ಲಿ ಮೂರನ್ನು ಉತ್ತಮ ಎಂದು ಆಯ್ಕೆ ಮಾಡಿದ್ದರು. ಬಣ್ಣ, ರುಚಿ, ಸ್ವಾದ, ಸೊಳೆಯ ಗಾತ್ರ, ಪರಿಮಳ, ಹಣ್ಣಾಗುವ ಕಾಲ...ಗಳನ್ನು ಪರೀಕ್ಷಿಸಿ ಅಂಕಗಳನ್ನು ನೀಡಿದ್ದರು. ಆಯ್ಕೆಯಾದ ತಳಿಗಳನ್ನು ಕಸಿ ಕಟ್ಟುವುದರ ಮೂಲಕ ಅಭಿವೃದ್ಧಿ ಪಡಿಸುವುದು ಭವಿಷ್ಯದ ಯೋಜನೆ. ಆಯ್ಕೆಗೊಂಡ ತಳಿಗಳು ಈಗಾಗಲೇ ಜನಪ್ರಿಯವಾದವುಗಳು. ಹುಡುಕಾಡಿದರೆ ಸಾಕಷ್ಟು ಉತ್ತಮ ಹಲಸನ್ನು ಆಯ್ಕೆ ಮಾಡಬಹುದು. ಮುಂದಿನ ಸಂತೆಯಲ್ಲಿ ಈ ವಿಚಾರದಲ್ಲಿ ಹೆಚ್ಚು ಗಮನ ಕೊಡುತ್ತೇವೆ, ಎನ್ನುತ್ತಾರೆ ಮಲ್ಯರು.
                ಮಲ್ಯರು ತಮ್ಮ 'ನವರಂಗ್' ಗೃಹದ ಆವರಣದಲ್ಲಿ ಸಂತೆಯನ್ನು ಏರ್ಪಡಿಸಿದ್ದರು. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆ ಮಾಡುವುದು ಕನಸು. ಮನೆಯ ಮಹಡಿಯನ್ನೇ ಉತ್ಪಾದನಾ ಕೇಂದ್ರವನ್ನಾಗಿ ಬದಲಿಸಿದ್ದಾರೆ. ಹಲಸಿನ ಹಪ್ಪಳ, ಚಿಪ್ಸ್, ಸಾಟ್, ಹಲ್ವ, ಉಪ್ಪುಸೊಳೆ.. ಹೀಗೆ ಉತ್ಪನ್ನಗಳನ್ನು ಸಿದ್ಧಪಡಿಸಲಿದ್ದಾರೆ. ಪ್ರಾಯೋಗಿಕವಾಗಿ ಉತ್ಪನ್ನಗಳನ್ನು ತಯಾರಿಸಿ, ಆಸಕ್ತರಿಗೆ ರುಚಿ ಹಿಡಿಸಿ ಗೆದ್ದಿದ್ದಾರೆ. ಹಲಸಿನ ರುಚಿ ಗೊತ್ತಿದ್ದ ಗ್ರಾಹಕರು ಇದ್ದಾರೆ. ಹಳ್ಳಿ ಮೂಲದ ಪಟ್ಟಣಿಗರಿಗೆ ಹಲಸಿನ ರುಚಿ ಹೊಸದಲ್ಲ. ಹಾಗಾಗಿ ಅವರಿಗೆ ಸರ್ವ್ ಮಾಡಲು ಬೇಕಾದ ಅಡಿಗಟ್ಟನ್ನು ಹಾಕಿಕೊಂಡಿದ್ದೇನೆ, ಎನ್ನುತ್ತಾರೆ ಮೌನೀಶ್.
               ಜರುಗಿದ ಸಂತೆಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳಿದ್ದುವು. ಹಲಸಿನ ಹಪ್ಪಳ, ಹಲ್ವ, ಬಾರ್, ವೈನ್, ಹೆಚ್ಚು ದಿನ ತಾಳಿಕೆಯ ಎಳೆ ಗುಜ್ಜೆಯ 'ರೆಡಿ ಟು ಕುಕ್' ಉತ್ಪನ್ನ, ಉಪ್ಪಿನಕಾಯಿ, ಸ್ಕ್ವಾಷ್. ಹೀಗೆ ಒಂದೇ ಎರಡೇ. ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ಸರಿತಾ ಹೆಗಡೆ ತಮ್ಮ ತಂಡದೊಂದಿಗೆ ಆಗಮಿಸಿ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ವಿಜಯಕುಮಾರ್ ದಂಪತಿಗಳ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ ವೈನ್ ಮತ್ತು ಹಲಸಿನ ಮಂದಸಾರ(ಸ್ಕ್ವಾಷ್)ಗಳು ಗಮನೀಯ. ಜ್ಯಾಕ್ ಅನಿಲ್ ಮತ್ತು ವಾರಣಾಶಿ ಸಂಶೋಧನಾ ಕೇಂದ್ರದ ವಿವಿಧ ಹಲಸಿನ ತಳಿಗಳ ಕಸಿ ಗಿಡಗಳ ಪ್ರದರ್ಶನ ಮತ್ತು ಮಾರಾಟವಿತ್ತು.
                ಸಂತೆಗೆ ಆಗಮಿಸುವ ಹಲಸು ಪ್ರಿಯರಿಗಾಗಿಯೇ ಮಹಾರಾಷ್ಟ್ರದ ದಾಪೋಲಿಯಿಂದ ತರಿಸಿದ  ಹಲಸಿನ ಹಣ್ಣಿನ ಚಾಕೋಲೇಟ್ ಬಾಯಿ ಸಿಹಿ ಮಾಡಿತು. ಇದು ಕೊಂಕಣ್ ಪ್ರದೇಶದಲ್ಲಿ ಜನಪ್ರಿಯತೆಯ ಮೆಟ್ಟಿಲೇರುತ್ತಿರುವ ಉತ್ಪನ್ನ. ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಅಂಗವಾಗಿ ಹಲಸಿನ ಹಲ್ವ, ಪಲ್ಪ್... ಗಳನ್ನು ಸಿದ್ಧಪಡಿಸುವ ಯಂತ್ರದ ಯತ್ನ ಶ್ಲಾಘನೀಯ. ವಿದ್ಯಾರ್ಥಿಗಳಾದ ಮೊಹಮ್ಮದ್ ನಸೀರ್, ಆಶಿಕ್ ಜಿ., ಲಿಯೋನ್ ಕಿಪ್ಟನ್ ಡಿ'ಸೋಜ, ಮಹಮ್ಮದ್ ಝಾಹಿಕ್ ಕೆ.ಎ. ಇವರುಗಳನ್ನು ಅಭಿನಂದಿಸಲಾಯಿತು. ಕಳೆದ ನಾಲ್ಕು ದಶಕಗಳಿಂದ ವೈವಿಧ್ಯಮಯ ಹಲಸಿನ ತಳಿಗಳನ್ನು ನೆಟ್ಟು ಪೋಶಿಸುತ್ತಿರುವ ಕೃಷಿಕ ನರಿಕೊಂಬು ಪುಂಡಳೀಕ ನಾಯಕ್-ರಾಧಾ ನಾಯಕರನ್ನು ಗೌರವಿಸಲಾಗಿತ್ತು.    'ಇದು ಆರಂಭ ಅಷ್ಟೇ. ಹಲಸು, ಚಿಪ್ಸ್, ತಿನ್ನಲು ಹೊಂದುವಂತಹ ತಳಿಗಳನ್ನು ಆಯ್ಕೆ ಮಾಡಿ, ಅವುಗಳನ್ನು ಅಭಿವೃದ್ಧಿ ಪಡಿಸಿ, ನೆಟ್ಟು ಬೆಳೆಸುವುದು ಆಗಬೇಕಾದ ಕೆಲಸ,' ಎನ್ನುತ್ತಾರೆ ನಿವೃತ್ತ ಅರಣ್ಯಾಧಿಕಾರಿ ಗೇಬ್ರಿಯಲ್ ವೇಗಸ್. 
                ಬಂಟ್ವಾಳ ತಾಲೂಕಿನ ಕೇಪು- ಉಬರು 'ಹಲಸು ಸ್ನೇಹಿ ಕೂಟ'ವು ಐದು ವರುಷದ ಹಿಂದೆ ಆರಂಭಿಸಿದ ತಳಿ ಆಯ್ಕೆ ಪ್ರಕ್ರಿಯೆಯು ವಿಸ್ತಾರಗೊಳ್ಳುತ್ತಿದೆ. ಕೂಟವು ಏನಿಲ್ಲವೆಂದರೂ ಇಪ್ಪತ್ತೈದಕ್ಕೂ ಮಿಕ್ಕಿದ ತಳಿಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಿದೆ. ಹಲಸಿನ ತೋಟವನ್ನೇ ಎಬ್ಬಿಸಿದ ಕೃಷಿಕರಿದ್ದಾರೆ. ಅಡುಗೆ ಮನೆಗಳಲ್ಲಿ ಹಲಸಿನ ಖಾದ್ಯಗಳ ಸವಿ ಮತ್ತೆ ಮರಳಿದೆ.
ಹಲಸು ಸ್ನೇಹಿ ಕೂಟವು ತರಕಾರಿ, ಗೆಡ್ಡೆ, ಮಾವು, ಹಲಸು, ಸಿರಿಧಾನ್ಯಗಳ ಕುರಿತು ಒಂದೊಂದು ದಿವಸಗಳ ಮೇಳ, ಕಾರ್ಯಾಗಾರಗಳನ್ನು ಏರ್ಪಡಿಸಿತ್ತು. ನಿರ್ವಿಷ ಆಹಾರದಿಂದ ಮುಕ್ತವಾಗುವ ಚಿಂತನೆಯನ್ನು ಹೊಂದಿದ ಸ್ನೇಹಿ ಕೂಟದ ಆಶಯದ ಮುಂದುವರಿಕೆಯಾಗಿ ಬಂಟ್ವಾಳದಲ್ಲಿ 'ಹಲಸು ಪ್ರೇಮಿ ಕೂಟ' ಉದಯವಾಗಿದೆ.

0 comments:

Post a Comment