Monday, January 26, 2015

ಕೃಷಿ ಯಂತ್ರ ಮೇಳ - 'ಕಾಡುಪ್ರಾಣಿ ನಿಯಂತ್ರಣ' - ಗೋಷ್ಠಿ 3 - 26-1-2015

                                      ಹೊನ್ನಾವರದ ಪಿ.ಎಸ್.ಭಟ್ ಉಪ್ಪೋಣಿಯವರಿಂದ ಸ್ವಾನುಭವ

                 "ಕೃಷಿ ಉತ್ಪನ್ನಗಳನ್ನು ನಾಶ ಮಾಡುವ ಹಕ್ಕಿ-ಪ್ರಾಣಿಗಳ ಗಡಿಪಾರಿಗೆ ಆಯಾಯ ಪ್ರಾಣಿಗಳ ಆರ್ತನಾದ ಬಳಸಿ, ಅವುಗಳನ್ನು ಓಡಿಸಿದ-ನಿಯಂತ್ರಿಸಿದ ಯತ್ನ ಬಹುತೇಕ ಯಶ ಕಾಣುತ್ತಿದೆ,"  ಬೆಂಗಳೂರಿನ ಸಿ.ಇ.ಓ., ಗುರು ಇಕೋಸೈಯನ್ಸಸ್  ಸಂಸ್ಥೆಯ ಮುಖ್ಯಸ್ಥ ಮಹೇಶ್ ಅಯ್ಯರ್ ಹೇಳಿದರು. ಅವರು ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಕೃಷಿ ಯಂತ್ರಮೇಳದಲ್ಲಿ 'ಕಾಡು ಪ್ರಾಣಿಗಳ ನಿಯಂತ್ರಣ' ವಿಚಾರಗೋಷ್ಠಿಯಲ್ಲಿ ತಮ್ಮ ಪ್ರಯೋಗಗಳನ್ನು ವಿವರಿಸಿದರು. ಒಂಭತ್ತು ವಿವಿಧ ಪ್ರಾಣಿಗಳ ಶಬ್ದಗಳನ್ನು ತಾಂತ್ರಿಕವಾಗಿ ಅಭಿವೃದ್ಧಿಗೊಳಿಸಿದ ಮಹೇಶ್ ,ಆಯಾ ಪ್ರದೇಶಗಳ ವಿದ್ಯಮಾನ, ವಿಶ್ಲೇಷಣೆ ಮಾಡಿಕೊಂಡು, ಧ್ವನಿಮಾತ್ರದಿಂದ ಕಪಿಬಾಧೆಯನ್ನು ತಡೆಯಬಹುದು.' ಎಂದರು.
                ಶಿವಮೊಗ್ಗದ ಮಿಲ್ಕ್-ಸಿ ಟೆಕ್ನೋಲಜಿಸ್, ಮೇಕರ್ಸ್ ಆಫ್ ಆಗ್ರೋ ಬರ್ಗ್ ಲರ್ ಸೈರನ್ಸ್ ಸಂಸ್ಥೆಯ ಭರತ್ ಕುಮಾರ್ ಶೆಟ್ಟಿ, ಪ್ರಾಣಿ, ಪಕ್ಷಿಗಳ ಕೂಗನ್ನು ತಂತ್ರಜ್ಞಾನಕ್ಕೆ ಅಳವಡಿಸಿದ ಸಂಶೋಧಕ. ತೋಟಗಳಲ್ಲಿ ಧ್ವನಿಪೆಟ್ಟಿಗೆಗಳನ್ನು ಅಳವಡಿಸಿ ವಿವಿಧ ಪ್ರಾಣಿಗಳ ಕೂಗನ್ನು ಅವುಗಳಲ್ಲಿ ಮಾರ್ದನಿಸುವ ವ್ಯವಸ್ಥೆಯು ಕೃಷಿಕ ಸ್ವೀಕೃತಿ ಪಡೆದಿದೆ. ಕೃಷಿಗೆ ರಾತ್ರಿ ಹೊತ್ತಲ್ಲಿ ಬಾಧೆ ಕೊಡುವ ಪ್ರಾಣಿಗಳು ಇಂತಹ ವ್ಯವಸ್ಥೆಯಿಂದ ಪೂರ್ತಿ ನಿಯಂತ್ರಣವಾಗಿದೆ.
                 ಮಂಗಗಳು ಬಹಳ ಸೂಕ್ಷ್ಮ ಪ್ರಾಣಿ. ಬರಬಹುದಾದಂತಹ ಆಪತ್ತನ್ನು ಮೊದಲೇ ಗ್ರಹಿಸುತ್ತವೆ. ಆನೆ, ಕಾಡುಹಂದಿಗಳು ಮನುಷ್ಯರಿಂದ ಬರಬಹುದಾದ ಆಪತ್ತನ್ನು ಮೊದಲೇ ಸೂಕ್ಷ್ಮಗ್ರಾಹಿಯಾಗಿ ಅರಿಯುತ್ತದೆ, ಎನ್ನುವ ಭರತ್, ಭವಿಷ್ಯದಲ್ಲಿ 'ಮಂಕಿ ಫಿರಂಗಿ' ಮತ್ತು 'ಹಾರಾಡುವ ಚಕ್ರ'ವನ್ನು ಅನುಶೋಧಿಸುವ ಸುಳಿವು ನೀಡಿದರು.
                 ಉಪ್ಪೋಣಿಯ ಕೃಷಿಕ ಪಿ.ಎಸ್.ಭಟ್ ಧ್ವನಿಗಳನ್ನು ಬಳಸಿ ಕಾಡುಪ್ರಾಣಿಗಳನ್ನು ನಿಯಂತ್ರಿಸಿದ ಸ್ವಾನುಭವ ಹಂಚಿಕೊಳ್ಳುತ್ತಾ, "ನ್ನಾವರದ ಒಂದು ತಾಲೂಕಿನಲ್ಲಿ ವರುಷಕ್ಕೆ ಒಂದೂವರೆ ಕೋಟಿ ರೂಪಾಯಿಗೂ ಮಿಕ್ಕಿ ಕೃಷಿ ಉತ್ಪನ್ನಗಳು ಕಾಡುಪ್ರಾಣಿಗಳಿಂದ ನಷ್ಟವಾಗುತ್ತಿದೆ. ಮೂವತ್ತು ಸಾವಿರ ತೆಂಗಿನಕಾಯಿಗಳು ಹಿಡಿಯುವ ನನ್ನ ತೋಟದಲ್ಲಿ ಮಂಗಗಳ ಬಾಧೆಯಿಂದಾಗಿ ಐದು ಸಾವಿರ ಕಾಯಿಗಳು ಸಿಗುವುದೂ ತ್ರಾಸವಾಗಿತ್ತು. ತೋಟಗಳಲ್ಲಿ ಧ್ವನಿಪೆಟ್ಟಿಗೆಗಳನ್ನು ಸ್ಥಾಪಿಸಿ, ಅವುಗಳ ಮೂಲಕ ವಿವಿಧ ಧ್ವನಿಗಳನ್ನು ಪ್ರಸರಿಸುವುದರಿಂದ ಮುಖ್ಯವಾಗಿ ಮಂಗಗಳ ಕಾಟ ನಿಯಂತ್ರಣವಾಗಿದೆ. ಈ ವಿಚಾರದಲ್ಲಿ ಕೃಷಿಕನೇ ಸಂಶೋಧಕನಾಗಬೇಕು," ಎಂದರು.
                  ಕಾಡುಪ್ರಾಣಿಗಳು ಆಹಾರವನ್ನು ಹುಡುಕಿ ನಾಡಿಗೆ ಬರುತ್ತವೆ. ಅವುಗಳಿಗೆ ಬೇಕಾದ ಅತ್ತಿ, ಆಲ, ಮತ್ತಿ, ಮುರುಗಲು.. ಮೊದಲಾದ ಹಣ್ಣು, ಕಾಯಿಗಳ ಮರಗಳು ಕಾಡಿನಲ್ಲಿ ಅಜ್ಞಾತವಾಗಿದೆ. ನಮ್ಮ ಅರಣ್ಯ ಇಲಾಖೆಗಳಿಗೆ ಇಂತಹ ಸಮಸ್ಯೆಗಳು ಗೋಚರವಾಗುವುದಿಲ್ಲ. ಕಾಡುಪ್ರಾಣಿ, ಪಕ್ಷಿಗಳಿಗೆ ಆಹಾರವಾಗಬಹುದಾದ ಕಾಡು ಗಿಡಗಳನ್ನು ಬೆಳೆಸಿ, ಆರೈಕೆ ಮಾಡಿ ಬೆಳೆಸುವ ಯೋಜನೆಗಳು ಭವಿಷ್ಯದಲ್ಲಿ ಸಮಸ್ಯೆಯನ್ನು ಹಗುರ ಮಾಡಬಲ್ಲವು -  ಎನ್ನುವ ಅಭಿಪ್ರಾಯ ಪಿ.ಎಸ್. ಭಟ್ಟರದು.
                    ಬೆಂಗಳೂರು ಪೆಸ್ಟ್ ಕಂಟ್ರೋಲ್ ಸಂಸ್ಥೆಯ ಡಾ.ಪ್ರಭಾಕರ್ ತಮ್ಮ ಸಸ್ಯಾಧಾರಿತ 'ನೀಲ್ಬೋ' ದ್ರಾವಣ ಸಿಂಪಡಣೆಯಿಂದ ಕಾಡುಪ್ರಾಣಿಗಳ ನಿಯಂತ್ರಿಸುವ ವಿಧಾನ, ಗೋವಾದ ಅಡಿಕೆ ಕೃಷಿಕ ನೀಲೇಶ್ ಪ್ರಭು ವೆಲ್ಗಾಂವ್ಕರ್ ಕೃತಕವಾಗಿ ತಯಾರಿಸಿದ ವಿವಿಧ ತರಂಗಾಂತರಗಳ ಶಬ್ದಗಳ ಮೂಲಕ ಪ್ರಾಣಿ, ಪಕ್ಷಿಗಳ ಉಪಟಳಕ್ಕೆ ಪರಿಹಾರ ಕಂಡುಕೊಂಡ ಪ್ರಯೋಗವನ್ನು ವಿವರಿಸಿದರು.
                         ಪ್ರಸ್ತುತ ದಿನಗಳಲ್ಲಿ ಕೃಷಿಕರು ಕಾಡುಪ್ರಾಣಿಗಳ ಉಪಟಳವನ್ನು ಅನುಭವಿಸುತ್ತಿದ್ದಾರೆ. ಪರಿಹಾರ ಕಾಣದೆ ನಾಶನಷ್ಟವನ್ನು ಅನುಭವಿಸುತ್ತಿದ್ದಾರೆ.  ಇವುಗಳ ಪರಿಹಾರಕ್ಕೆ ಚಿಕ್ಕ ಎಳೆ ಸಿಗಬಹುದೆನ್ನುವ ನಿರೀಕ್ಷೆಯಿಂದ ಆಗಮಿಸಿದ ಕೃಷಿಕರಿಗೆ ವಿಚಾರಗೋಷ್ಠಿಯ ಮಾಹಿತಿ ಮತ್ತು ವಿವಿಧ ಪ್ರಾಣಿ-ಶಬ್ದಗಳ ಸ್ವರಗಳ ಪ್ರಾತ್ಯಕ್ಷಿಕೆಗಳು ಪ್ರಯೋಜನವಾದುವು. ಅಡಿಕೆ ಪತ್ರಿಕೆಯ ಸಂಪಾದಕ ಶ್ರೀ ಪಡ್ರೆಯವರು ಗೋಷ್ಠಿಯ ಸಮನ್ವಯಕಾರರಾಗಿದ್ದರು. ದೇಶಮಟ್ಟದಲ್ಲಿ ಆಗುತ್ತಿರುವ ಕಾಡುಪ್ರಾಣಿಗಳ ನಿಯಂತ್ರಣಗಳ ಯತ್ನಗಳು, ಅದರಲ್ಲಿ ಯಶಸ್ಸಾದ ಯಶೋಗಾಥೆಗಳನ್ನು ಸೂಕ್ಷ್ಮವಾಗಿ ವಿವರಿಸಿದರು. ಡಾ.ನಿರುಪಮಾ ಸ್ವಾಗತಿಸಿದರು. ಡಾ.ಕೆ.ಕೆ.ಮಹೇಶ್ ವಂದಿಸಿದರು.

ಮಂಗಗಳು ಯಾಕೆ ಸಾಕುಪ್ರಾಣಿಯಾಗಬಾರದು? -
ನಾಡಿಗೆ ಬಂದ ಕಾಡುಕೋಳಿಯನ್ನು ಕೊಂದರೆ ಅಪರಾಧ. ಸಾಕುಪ್ರಾಣಿಗಳಾದ ಕೋಳಿ, ಹಂದಿಯನ್ನು ಕೊಂದು ತಿನ್ನಬಹುದು. ಮಂಗನನ್ನು ಕೂಡ ಸಾಕು ಪ್ರಾಣಿ ಎಂದು ಪರಿಗಣಿಸಬೇಕು! ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಗಳನ್ನು ತಿನ್ನುವ ವರ್ಗಗಳನ್ನು ಕಾಣುತ್ತೇವೆ. ಅವುಗಳ ರಕ್ತ, ಮಾಂಸಗಳಲ್ಲಿರುವ ಪೌಷ್ಟಿಕತೆಯನ್ನು ವೈಜ್ಞಾನಿಕ ಅಧ್ಯಯನ ಮಾಡಿ, ಅವುಗಳ ಔಷಧೀಯ, ಆಹಾರ ಗುಣಗಳನ್ನು  ತಿಳಿಸುವ ಕೆಲಸಗಳನ್ನು ಸಂಶೋಧನಾ ಸಂಸ್ಥೆಗಳು ಮಾಡವು ಕಾಲ ಸನ್ನಿಹಿತವಾಗಿದೆ.
                                                                                                                     - ಪಿ.ಎಸ್.ಭಟ್ ಉಪ್ಪೋಣಿ

ಮಂಕಿ ಫಿರಂಗಿ-ಹಾರಾಡುವ ತಟ್ಟೆ
ತೋಟದ ವಿವಿದೆಡೆ ಕೋವಿಗಳನ್ನು ಸ್ಥಾಪಿಸಿ, ಅವುಗಳ ನಳಿಗೆಗಳಲ್ಲಿ ಗನ್ ಪೌಡರ್ ಇಟ್ಟು, ಅವುಗಳನ್ನು ನಿರ್ದಿಷ್ಟ ಸಮಯದಲ್ಲಿ ಸಿಡಿಯುವಂತೆ ಟೈಮರ್ ಅಳವಡಿಸಿದ ತಂತ್ರಜ್ಞಾನವು ಭವಿಷ್ಯದ ಯೋಜನೆ. ತೋಟದಲ್ಲಿ ಯಾಂತ್ರಿಕವಾಗಿ 'ಹಾರಾಡುವ ತಟ್ಟೆ'ಯೊಂದನ್ನು ವ್ಯವಸ್ಥೆ ಮಾಡಿಕೊಂಡು, ಅವುಗಳ ಮೂಲಕ ತೋಟಗಳ ಮರಗಳಲ್ಲಿ ಅವಿತ ಮಂಗಗಳನ್ನು ಕುಳಿತಲ್ಲೇ ಪತ್ತೆ ಮಾಡುವ ವ್ಯವಸ್ಥೆ - 'ಹಾರಾಡುವ ತಟ್ಟೆ'. ಇವೆರಡು ನಿಕಟ ಭವಿಷ್ಯದ ಯೋಜನೆಗಳು.
                                                                                                                          -     ಭರತ್ ಕುಮಾರ್ ಶೆಟ್ಟಿ.

'ರಾಷ್ಟ್ರೀಯ ಕಾಡು ಪ್ರಾಣಿ ನಿಯಂತ್ರಣ ಸಮಿತಿ' ಬೇಕು!
ದೇಶದಲ್ಲಿ ಕೋತಿಯಿಂದಾಗಿ ಗರಿಷ್ಠ ನಾಶ-ನಷ್ಟಗಳಾಗುವ ರಾಜ್ಯ ಹಿಮಾಚಲ ಪ್ರದೇಶ.  ಒಂದು ಅಂಕಿಅಂಶದ ಪ್ರಕಾರ ಪ್ರತಿವರುಷ ಎರಡು ಸಾವಿರ ಕೋಟಿ ರೂಪಾಯಿಗಳ ಬೆಳೆ ಅಲ್ಲಿ ನಾಶವಾಗುತ್ತಿದೆ. ಒಂದು ರಾಜ್ಯದಲ್ಲೇ ಇಷ್ಟಾಯಿತೆಂದರೆ ದೇಶಮಟ್ಟದ ಎಷ್ಟಾಗಬಹುದು? ನಮ್ಮ ವಿಮಾನಯಾನ ಸಚಿವಾಲಯ 'ರಾಷ್ಟ್ರೀಯ ಹಕ್ಕಿ ನಿಯಂತ್ರಣ ಸಮಿತಿ'ಯ ಒಂದು ಲೆಕ್ಕಾಚಾರದಂತೆ ವಿಮಾನಕ್ಕೆ ಢಿಕ್ಕಿಯಾಗಿ ಪ್ರತಿವರುಷ ನಮ್ಮಲ್ಲಿ 3,300 ಕೋಟಿ ರೂಪಾಯಿಗಳ ನಷ್ಟ ಆಗುತ್ತಿದೆಯಂತೆ. ಈ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರಕ್ಕೆ 'ರಾಷ್ಟ್ರೀಯ ಕಾಡು ಪ್ರಾಣಿ ನಿಯಂತ್ರಣ ಸಮಸಿತಿ' ಬೇಕಾಗಿದೆ.
                                                                                                                                     - ಶ್ರೀ ಪಡ್ರೆ


0 comments:

Post a Comment