Monday, January 26, 2015

ಕೃಷಿ ಯಂತ್ರ ಮೇಳಕ್ಕೆ ಶುಭ ಚಾಲನೆ

 ಕೃಷಿ ಮೇಳದ ಉದ್ಘಾಟನೆ
 ಮಳಿಗೆಗಳ ಉದ್ಘಾಟನೆ
ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷ ಕೀರ್ತಿಶೇಷ ವಾರಣಾಶಿ ಸುಬ್ರಾಯ ಭಟ್ಟರ ಭಾವಚಿತ್ರವಿರುವ ಅಂಚೆ ಲಕೋಟೆ ಬಿಡುಗಡೆ


      ಡಾ.ವೀರೇಂದ್ರ ಹೆಗ್ಗಡೆಯವರಿಂದ ಅಧ್ಯಕ್ಷೀಯ ಮಾತುಗಳು   

      "ಕಳೆದ ಕೆಲವು ಸಮಯಗಳಿಂದ ಅಡಿಕೆಯ ಬಗ್ಗೆ ಅಪಪ್ರಚಾರ ನಡೆಯುತ್ತಿದೆ.ಇದನ್ನು  ಅಡಿಕೆ ಹಾನಿಕಾರಕ ಎಂದು ಬಿಂಬಿಸಿ ಅಡಿಕೆ ಮೇಲೆಯೇ ಪ್ರಹಾರ ನಡೆಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ಯಾವುದೇ ಕಾರಣಕ್ಕೂ ಈ ಒತ್ತಡಕ್ಕೆ ಮಣಿಯದೆ ಅಪಪ್ರಚಾರದಿಂದ ತಪ್ಪಿಸುತ್ತದೆ" ಎಂದು  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್ ಹೇಳಿದರು.
           ಅವರು  ಶನಿವಾರ ಕ್ಯಾಂಪ್ಕೋ ವತಿಯಿಂದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ವಿವೇಕಾನಂದ ಪಾಲಿಟೆಕ್ನಿಕ್ ಸಹಯೋಗದೊಂದಿಗೆ ಮೂರನೇ ಕೃಷಿ ಯಂತ್ರಮೇಳ ಉದ್ಘಾಟಿಸಿ ಮಾತನಾಡಿದರು. "ಈ ಹಿಂದೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು  ಸುಪ್ರೀಂಕೋರ್ಟಿ್ಗೆ ಅಫಿಡವಿಟ್ ಸಲ್ಲಿಸಿತ್ತು. ಇದರಿಂದಾಗಿ ಅಡಿಕೆ ಬೆಳೆಗಾರಿರಿಗೆ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.ಆದರೆ ಈಗ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ನಿಷೇಧಕ್ಕೆ ಬಿಡುವುದಿಲ್ಲ. ಈಗಾಗಲೇ ಸಚಿವರ ಸಭೆ ನಡೆಸಿದೆ, ಅಡಿಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂಬುದು ಸಾಬೀತಾಗಿದೆ. ಶತಮಾನಗಳಿಂದ ಅಡಿಕೆ ಬಳಕೆ ಮಾಡಲಾಗುತ್ತಿದೆ ಎಂಬುದನ್ನೂ ಮನವರಿಕೆ ಮಾಡಲಾಗಿದೆ. ಸುಪ್ರೀಂಕೋರ್ಟಿಗೆ ಮತ್ತೆ ಅಫಿಡವಿಟ್ ಸಲ್ಲಿಸಲು ನಿರ್ಧರಿಸಿದೆ" ಎಂದರು.
          ಧ್ವಜಾರೋಹಣ ಮಾಡಿದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಸಿದ್ದೇಶ್ವರ್ ಮಾತನಾಡಿ, "ಅಡಿಕೆ ನಿಷೇಧಕ್ಕೆ ಸರ್ಕಾರವು  ಎಂದೂ ಬಿಡುವುದಿಲ್ಲ. ಅಡಿಕೆ ಧಾರಣೆ ಸ್ಥಿರತೆ ಕಡೆಗೆ ಹೆಚ್ಚು ಗಮನ ಹರಿಸಬೇಕಿದೆ. ಈ ಮೂಲಕ ಕೃಷಿಕರಿಗೆ ಹಾಗೂ ವ್ಯಾಪಾರಿಗಳಿಗೆ ಸಹಕಾರ ಮಾಡಬೇಕಿದೆ. ಅಡಿಕೆಯು ಗುಟ್ಕಾ, ಪಾನ್ಮಸಾಲವಾಗಿ ದೇಶದೆಲ್ಲೆಡೆ ಇಂದಿಗೂ ಬೇಕಾದ ವಸ್ತುವಾಗಿದೆ. .ಇದಕ್ಕಾಗಿ ಆಮದು ಅಡಿಕೆ ನಿಷೇಧಕ್ಕೆ ಈಗಾಗಲೇ ಸರ್ಕಾರ ಕ್ರಮಕೈಗೊಂಡಿದೆ" ಎಂದರು. ಸಂಸದ ನಳಿನ್ ಕುಮಾರ್ ಕಟೀಲು ಉಪಸ್ಥಿತರಿದ್ದರು.
          ಸಭೆಯ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, "ಇಂದು ಕೃಷಿ ಲಾಭದಾಯಕವಲ್ಲ ಎಂಬ ಕಾರಣದಿಂದ ಯುವಕರು ಕೃಷಿಯಿಂದ ದೂರ ನಿಲ್ಲುವಂತಾಗಿದೆ. ಆದರೆ ಲಾಭದಾಯಕ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಯಂತ್ರಗಳು ಹಾಗೂ ತಂತ್ರಜ್ಞಾನಗಳ ಬಳಕೆ ಮೂಲಕ ಕೃಷಿಯನ್ನು ಮತ್ತೆ ಪುನಶ್ಚೇತನ ಮಾಡಬೇಕು. ಇಂದು ಯಂತ್ರಗಳು ಶ್ರೀಮಂತ ವರ್ಗಕ್ಕೆ ಮಾತ್ರವೇ ಸೀಮಿತವಾಗಿದೆ. ಆದರೆ ಯಂತ್ರಗಳ ಬೆಲೆಯೂ ಕಡಿಮೆಯಾಗಿ, ಉಪಯೋಗವೂ ಹೆಚ್ಚಾದಾಗ ಸಾಮಾನ್ಯ ಜನರಿಗೂ ಯಂತ್ರಗಳ ಬಳಕೆ ಸಾದ್ಯವಿದೆ. ಹೀಗಾಗಿ ಕೃಷಿ ಯಂತ್ರ ಮೇಳಕ್ಕೆ ಆಗಮಿಸಿ  ಯಂತ್ರಗಳ ವೀಕ್ಷಣೆ ಮಾಡುವ ಕೆಲಸ ಕೃಷಿಕರು ಮಾಡಬೇಕು"  ಎಂದರು.
         ಇದೇ ಸಂದರ್ಭದಲ್ಲಿ  ವಾರಣಾಸಿ ಸುಬ್ರಾಯ ಭಟ ಭಾವಚಿತ್ರದ ವಿಶೇಷ ಅಂಚೆ ಲಕೋಟೆಯನ್ನು ಮತ್ತು ಅಡಿಕೆ ಪತ್ರಿಕೆಯ ವಿಶೇಷ ಸಂಚಿಕೆಯನ್ನು  ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಸೌತ್ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಐಂದ್ರಿಯಾ ಅನುರಾಗ್ , ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಇ,, ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಉಪಸ್ಥಿತರಿದ್ದರು.
               ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಸ್ವಾಗತಿಸಿದರು. ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಧ್ಯಕ್ಷ ಬಲರಾಮ ಆಚಾರ್ಯ ವಂದಿಸಿದರು

0 comments:

Post a Comment